ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬದಲಾಗುತ್ತಿದೆ ಜಮ್ಮು ಮತ್ತು ಕಾಶ್ಮೀರ: 2025ರಲ್ಲಿ ಒಂದೇ ಒಂದು ಕಲ್ಲು ತೂರಾಟದ ಘಟನೆಯಿಲ್ಲ, ಇಲ್ಲಿದೆ ವರದಿ

Jammu and Kashmir Is Changing: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ನಿರಂತರ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು, ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆ ಮತ್ತು ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು ಅಲ್ಲಿನ ಭದ್ರತಾ ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದಿವೆ.

ಸಾಂದರ್ಭಿಕ ಚಿತ್ರ

ಜಮ್ಮು, ಸೆ.17: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭದ್ರತಾ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. 2025ರಲ್ಲಿ ಕಲ್ಲು ತೂರಾಟದ (Stone-Pelting) ಒಂದೇ ಒಂದು ಘಟನೆ ವರದಿಯಾಗಿಲ್ಲ ಎಂದು ರಕ್ಷಣಾ ಸಚಿವಾಲಯದ 2025-26ರ ವಾರ್ಷಿಕ ವರದಿ ತಿಳಿಸಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ 2025ರಲ್ಲಿ ಶೂನ್ಯ ಕಲ್ಲು ತೂರಾಟದ ಘಟನೆಗಳು ವರದಿಯಾಗಿದ್ದು, ಸ್ಥಳೀಯ ಯುವಕರ ಭಯೋತ್ಪಾದಕ ಸಂಘಟನೆಗಳಿಗೆ ಸೇರ್ಪಡೆಯ ಪ್ರಮಾಣವೂ ಗಣನೀಯವಾಗಿ ಇಳಿಕೆಯಾಗಿದೆ. 2025ರಲ್ಲಿ ಕೇವಲ ಒಬ್ಬ ಮಾತ್ರ ನೇಮಕಗೊಂಡಿದ್ದು, ಇದುವರೆಗಿನ ಅತ್ಯಂತ ಕನಿಷ್ಠ ಮಟ್ಟವಾಗಿದೆ. ಈ ಹಿಂದೆ 2021 ರಲ್ಲಿ 146 ಮತ್ತು 2022 ರಲ್ಲಿ 121ರಷ್ಟಿದ್ದ ನೇಮಕಾತಿ ಸಂಖ್ಯೆಗೆ ಹೋಲಿಸಿದರೆ ಭಾರಿ ಇಳಿಕೆ ಕಂಡಿದೆ.

ನಿರಂತರ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು, ಗಡಿ ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆ ಮತ್ತು ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು ಅಲ್ಲಿನ ಭದ್ರತಾ ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದಿವೆ. ಆದರೂ, ಈ ಪ್ರದೇಶವು ಅನಿರೀಕ್ಷಿತ ಸವಾಲುಗಳಿಂದ ಕೂಡಿದೆ ಎಂದು ಎಚ್ಚರಿಸಲಾಗಿದೆ. 2025ರ ಮೇ 10 ಮತ್ತು 12 ರಂದು ಭಾರತ ಮತ್ತು ಪಾಕಿಸ್ತಾನದ ನಡುವಿನ ಡಿಜಿಎಂಒ ಮಟ್ಟದ ಮಾತುಕತೆಯ ನಂತರ ಸ್ಥಿರತೆ ಮತ್ತಷ್ಟು ಸುಧಾರಿಸಿದೆ.

ಇದು ಅತ್ಯಂತ ಮಹತ್ವದ ಸಕಾರಾತ್ಮಕ ಬದಲಾವಣೆಯ ಸೂಚಕ ಎಂದು ರಕ್ಷಣಾ ಸಚಿವಾಲಯವು ಕರೆದಿದೆ. ಜಮ್ಮು-ಕಾಶ್ಮೀರದ ಸ್ಥಳೀಯ ಯುವಕರು ಹಿಂಸಾಚಾರದ ಮಾರ್ಗವನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದು, ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.

ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಯಿಂದ ಉಗ್ರನ ಎನ್‌ಕೌಂಟರ್‌; AK-47 ಜಪ್ತಿ

ಸ್ಥಳೀಯ ಯುವಕರು ಭಯೋತ್ಪಾದಕ ಜಾಲಕ್ಕೆ ಸೇರ್ಪಡೆಯಾಗುವ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. 2021 ರಲ್ಲಿ 146, 2022 ರಲ್ಲಿ 121, 2023 ರಲ್ಲಿ 19, 2024 ರಲ್ಲಿ 4 ಮತ್ತು 2025 ರಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಸೇರ್ಪಡೆಗೊಂಡಿದ್ದಾನೆ.

2025 ರಲ್ಲಿ ಆರು ಒಳನುಸುಳುವಿಕೆ ಪ್ರಯತ್ನಗಳು ವರದಿಯಾಗಿವೆ. ಅವೆಲ್ಲವನ್ನೂ ಭದ್ರತಾ ಪಡೆಗಳು ವಿಫಲಗೊಳಿಸಿವೆ. ಕಾರ್ಯಾಚರಣೆಯಲ್ಲಿ 12 ಮಂದಿ ಪಾಕಿಸ್ತಾನಿ ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು. ಇದು 2023 ರಲ್ಲಿ 18 ಪ್ರಯತ್ನಗಳು ಮತ್ತು 2024 ರಲ್ಲಿ 10 ಪ್ರಯತ್ನಗಳಿಗೆ ಹೋಲಿಸಿದರೆ ಗಣನೀಯ ಇಳಿಕೆಯನ್ನು ತೋರಿಸುತ್ತದೆ.

ಆದರೆ, ಈ ವರದಿಯು ಪಾಕಿಸ್ತಾನ ಬೆಂಬಲಿತ ಉಗ್ರಗಾಮಿ ಸಂಘಟನೆಗಳ ಯುದ್ಧತಂತ್ರದ ಬದಲಾವಣೆಯನ್ನು ಎತ್ತಿ ತೋರಿಸಿದೆ. ಉಗ್ರರು ಈಗ ನುಸುಳುವಿಕೆಗಾಗಿ ಹಾಗೂ ಮಾದಕ ದ್ರವ್ಯಗಳು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಗಾಗಿ ಅಂತಾರಾಷ್ಟ್ರೀಯ ಗಡಿ ವಲಯಗಳನ್ನು ಹೆಚ್ಚೆಚ್ಚು ಬಳಸಿಕೊಳ್ಳುತ್ತಿದ್ದಾರೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದ ಒಳನಾಡಿನಲ್ಲಿ ಅತ್ಯಂತ ತೀವ್ರಗತಿಯ ಕಾರ್ಯಾಚರಣೆಗಳನ್ನು ಮುಂದುವರಿಸಿದ್ದು, ವರ್ಷದಲ್ಲಿ 19 ಭಯೋತ್ಪಾದಕರನ್ನು ಹೊಡೆದುರುಳಿಸಿವೆ. ಇವರಲ್ಲಿ ಎಂಟು ಮಂದಿ ಪಾಕಿಸ್ತಾನಿ ಪ್ರಜೆಗಳಾಗಿದ್ದಾರೆ. ಇದು ಒಟ್ಟು ಹತರಾದ ಉಗ್ರರ ಸುಮಾರು ಶೇಕಡಾ 40ರಷ್ಟಾಗಿದ್ದು, ಗಡಿಯುದ್ದಕ್ಕೂ ಭಯೋತ್ಪಾದನೆಯನ್ನು ಪ್ರಚೋದಿಸುವಲ್ಲಿ ಪಾಕಿಸ್ತಾನದ ನಿರಂತರ ಪಾತ್ರಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಲಷ್ಕರ್-ಎ-ತೊಯ್ಬಾ ಬೆಂಬಲಿತ ಭಯೋತ್ಪಾದನಾ ಮಾಡ್ಯೂಲ್ ಮೇಲೆ ದಾಳಿ: ಮೂವರ ಬಂಧನ

ಮೂರು ವರ್ಷಗಳ ಬಹುತೇಕ ಸಂಪೂರ್ಣ ಶಾಂತತೆಯ ನಂತರ, 2025 ರಲ್ಲಿ 163 ಕದನ ವಿರಾಮ ಉಲ್ಲಂಘನೆಗಳಿಗೆ ಎಲ್‌ಒಸಿ ಸಾಕ್ಷಿಯಾಗಿದೆ. 2024 ರಲ್ಲಿ ಕೇವಲ ಎರಡು, 2023 ರಲ್ಲಿ ಶೂನ್ಯ ಮತ್ತು 2022 ರಲ್ಲಿ ಒಂದು ದಾಖಲಾಗಿದೆ. ವರದಿಯ ಪ್ರಕಾರ, ಆಪರೇಷನ್ ಸಿಂಧೂರ್ ಸಮಯದಲ್ಲಿ 124 ಉಲ್ಲಂಘನೆಗಳು ನಡೆದಿವೆ. ಆದರೆ, ಈ ಅಂಕಿ ಅಂಶವು 2019 (3,223) ಮತ್ತು 2020 (4,645) ರಲ್ಲಿ ಕಂಡುಬಂದ ಮಟ್ಟಕ್ಕಿಂತ ಬಹಳ ಕಡಿಮೆಯಾಗಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ, 2025 ರಲ್ಲಿ ಜಮ್ಮು ಮತ್ತು ಕಾಶ್ಮೀರ ದಾಖಲೆಯ 2.3 ಕೋಟಿ ಪ್ರವಾಸಿಗರನ್ನು ಆಕರ್ಷಿಸಿತು. ಇದರಲ್ಲಿ 4.13 ಲಕ್ಷ ಅಮರನಾಥ ಯಾತ್ರಿಕರು ಸೇರಿದ್ದಾರೆ.