ಮುಂಬೈ: ಸೈಫ್ ಆಲಿಖಾನ್(Saif Ali Khan) ಪತ್ನಿ ನಟಿ ಕರೀನಾ ಕಪೂರ್(Kareena Kapoor) ಕೊನೆಗೂ ಹಲ್ಲೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಹೇಳಿಕೆ ನೀಡಿದ್ದಾರೆ. ಊಹಾಪೋಹಗಳನ್ನು ನಂಬದೆ ನಮ್ಮ ಸದ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಿ ಎಂದಿದ್ದು, ಕೆಲ ದಿನಗಳು ನಮಗೂ ವಿರಾಮ ಕೊಡಿ ಎಂದು ಮನವಿ ಮಾಡಿದ್ದಾರೆ.
ಬಾಲಿವುಡ್ನ ಖ್ಯಾತ ನಟ ಸೈಫ್ ಆಲಿಖಾನ್ ಇಂದು ಮುಂಜಾನೆ ತಮ್ಮ ನಿವಾಸದಲ್ಲಿ ದುಷ್ಕರ್ಮಿಗಳಿಂದ ಚಾಕುವಿನಿಂದ ಇರಿತಕ್ಕೊಳಗಾದರು. ಶಸ್ತ್ರ ಚಿಕಿತ್ಸೆಯ ನಂತರ ಮುಂಬೈನ ಲೀಲಾವತಿ ಆಸ್ಪತ್ರೆಯ ಐಸಿಯುನಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಬೆನ್ನು, ಕುತ್ತಿಗೆ, ಕೈ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಇದೀಗ ಸೈಫ್ ಪತ್ನಿ ಕರೀನಾ ಕಪೂರ್ ಘಟನೆಯ ಕುರಿತು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರಿಯಾಕ್ಟ್ ಮಾಡಿದ್ದಾರೆ.
ನಟಿ ಕರೀನಾ ಕಪೂರ್ ಕೊನೆಗೂ ಮೌನ ಮುರಿದಿದ್ದಾರೆ. ‘ಇದು ನಮ್ಮ ಕುಟುಂಬದ ಪಾಲಿಗೆ ಸವಾಲಿನ ವಿಷಯವಾಗಿದೆ. ನಾವು ಈ ಆತಂಕದ ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ. ಆಘಾತದಿಂದ ಹೊರಬಂದು ಪ್ರತಿಕ್ರಿಯೆ ನೀಡಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಕುಟುಂಬದ ಈ ಕಷ್ಟದ ಸಮಯದಲ್ಲಿ ಮಾಧ್ಯಮಗಳು ಊಹಾಪೋಹ ಸುದ್ದಿ ಹರಡುವುದನ್ನು ನಿಲ್ಲಿಸಬೇಕು ಎಂದು ಕರೀನಾ ವಿನಂತಿಸಿಕೊಂಡಿದ್ದಾರೆ.
ಇಂಥ ಕಷ್ಟದ ಸಂದರ್ಭದಲ್ಲಿ ನಮ್ಮ ಕುಟುಂಬ ಮೇಲೆ ನೀವು ತೋರಿರುವ ಕಾಳಜಿ ಮತ್ತು ನೀಡಿರುವ ಬೆಂಬಲಕ್ಕೆ ಧನ್ಯವಾದಗಳು. ಸುದ್ದಿಯ ನಿರಂತರ ಪ್ರಸಾರದಿಂದ ನಮ್ಮ ಭದ್ರತೆಗೆ ತೊಂದರೆಯಾಗುವ ಸಾಧ್ಯತೆ ಇದೆ. ಈ ಘಟನೆಯಿಂದ ಹೊರಬಂದು ಕುಟುಂಬ ಸುಧಾರಿಸಿಕೊಳ್ಳಬೇಕಿದೆ. ನಮಗೆ ಸ್ವಲ್ಪ ಸಮಯದ ಅಗತ್ಯವಿದೆ. ನೀವು ನಮ್ಮ ಗೌಪ್ಯತೆಯನ್ನು ಗೌರವಿಸಿ ಎಂದು ವಿನಂತಿಸುತ್ತೇನೆ’ ಎಂದು ಕರೀನಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Raichur News: ಲಿಂಗಸುಗೂರಿನಲ್ಲಿ ಯುವಕ ಅನುಮಾನಾಸ್ಪದ ಸಾವು; ಕೊಲೆ ಶಂಕೆ
ಎನ್ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್!
ಬಾಲಿವುಡ್ನ ಖ್ಯಾತ ನಟ ಸೈಫ್ ಆಲಿ ಖಾನ್(Saif Ali Khan) ಮೇಲೆ ನಡೆದ ಹಲ್ಲೆಯಿಂದಾಗಿ ಇಡೀ ಮುಂಬೈ ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಏಕಾಏಕಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ನಟನಿಗೆ ಚಾಕುವಿನಿಂದ ಇರಿದಿದ್ದು, ನಟನನ್ನು ಚಿಕಿತ್ಸೆಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಸೈಫ್ ಮನೆಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಮುಂಬೈನ ಎನ್ಕೌಂಟರ್ ಸ್ಪೆಷಲಿಸ್ಟ್ ಪೊಲೀಸ್ ದಯಾ ನಾಯಕ್ ಕೂಡ ಸೈಫ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ ಮೂಲದ ಎನ್ಕೌಂಟರ್ ಸ್ಪೆಷಲಿಸ್ಟ್!
ಪೊಲೀಸ್ ಅಧಿಕಾರಿ ಇಂದು ನಟ ಸೈಫ್ ಆಲಿಖಾನ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲವರಲ್ಲಿ ದಯಾನಾಯಕ್ ಯಾರು? ಎಂಬ ಕುತೂಹಲ ಮೂಡಿದೆ. ಎನ್ಕೌಂಟರ್ ಸ್ಪೆಷಲಿಸ್ಟ್’ ಎಂದು ಪ್ರಸಿದ್ಧಿ ಪಡೆದಿರುವ ಅವರು ಕರ್ನಾಟಕ ಮೂಲದವರಾಗಿದ್ದಾರೆ. ದಯಾ ನಾಯಕ್ ಮಹಾರಾಷ್ಟ್ರದಲ್ಲಿ ದಕ್ಷ ಪೊಲೀಸ್ ಅಧಿಕಾರಿ ಅನ್ನಿಸಿಕೊಂಡಿದ್ದಾರೆ. ಅವರು 1990ರ ದಶಕದಲ್ಲಿ 80ಕ್ಕೂ ಹೆಚ್ಚು ಮುಂಬೈ ಭೂಗತ ದರೋಡೆಕೋರರನ್ನು ಹೊಡೆದುರುಳಿಸಿದ್ದರು. ದಯಾ ನಾಯಕ್ ಅವರು ಕರ್ನಾಟಕದ ಉಡುಪಿಯವರಾಗಿದ್ದು, ಕೊಂಕಣಿ ಅವರ ಮಾತೃ ಭಾಷೆಯಾಗಿದೆ. ಬಡ್ಡ ಮತ್ತು ರಾಧಾ ನಾಯಕ್ ಇವರ ತಂದೆ-ತಾಯಿ.
1995ರಲ್ಲಿ ಅವರು ಪೊಲೀಸ್ ಅಕಾಡೆಮಿಯಿಂದ ತರಬೇತಿ ಪಡೆದರು. ನಂತರ ಜುಹು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಆಗಿ ನೇಮಕಗೊಂಡರು. ಆ ಕಾಲದಲ್ಲಿ ಮುಂಬೈನ ಭೂಗತ ಜಗತ್ತಿನ ಪಾತಕಿಗಳು ಅಟ್ಟಹಾಸ ಮೆರೆಯುತ್ತಿದ್ದರು. ವೃತ್ತಿಯ ಆರಂಭದ ದಿನಗಳಲ್ಲೇ ದಯಾನಾಯಕ್ ಭೂಗತ ಲೋಕವನ್ನು ಬೆಚ್ಚಿ ಬೀಳಿಸಿದರು.1996 ರಲ್ಲಿ ಮುಂಬೈನ ಜುಹುದಲ್ಲಿ ಇಬ್ಬರು ಛೋಟಾ ರಾಜನ್ ಗ್ಯಾಂಗ್ ನ ದರೋಡೆಕೋರರನ್ನು ಎನ್ಕೌಂಟರ್ ಮಾಡಿದರು ಅಂದಿನಿಂದ ಮುಂಬೈನಲ್ಲಿ ಪೊಲೀಸ್ ದಯಾ ನಾಯಕ್ ಎನ್ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾದರು.