ತಿರುವನಂತಪುರ, ಜ, 26: 77ನೇ ಗಣರಾಜ್ಯೋತ್ಸವದ (Republic Day) ಭಾಷಣ ಮಾಡಿದ ನಂತರ ಕೇರಳದ ಸಚಿವ ಕಡನ್ನಪಳ್ಳಿ ರಾಮಚಂದ್ರನ್ (Kadannappalli Ramachandran) ಕುಸಿದು ಬಿದ್ದಿರುವ ಘಟನೆ ಕಣ್ಣೂರಿನ ಕಲೆಕ್ಟರೇಟ್ ಮೈದಾನದಲ್ಲಿ ನಡೆದಿದೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು (Minister collapses). ಕಡನ್ನಪಳ್ಳಿ ರಾಮಚಂದ್ರನ್ ಬಂದರು, ಸಂಗ್ರಹಾಲಯಗಳು ಮತ್ತು ಪುರಾತತ್ವ ಇಲಾಖೆಗಳ ಸಚಿವರು.
ಗಣರಾಜ್ಯೋತ್ಸವ ಭಾಷಣ ಮಾಡುತ್ತಿದ್ದ ಸಚಿವರು ಸ್ವಲ್ಪ ಹೊತ್ತು ನಿಲ್ಲಿಸಿದರು. ಈ ವೇಳೆ ಏಕಾಏಕಿ ಹಿಂದಕ್ಕೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಪೊಲೀಸ್ ಅಧಿಕಾರಿಗಳು ಮತ್ತು ಇತರರು ಹಿಡಿದುಕೊಂಡರು. ಅಲ್ಲೇ ನಿಲ್ಲಿಸಲಾಗಿದ್ದ ಆಂಬ್ಯುಲೆನ್ಸ್ನಲ್ಲಿ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕುಸಿದು ಬಿದ್ದಿರಲು ಏನು ಕಾರಣವಿರಬಹುದು ಎಂಬುದು ಇದುವರೆಗೂ ತಿಳಿದುಬಂದಿಲ್ಲ.
ಎಲ್ಲರ ಗಮನಸೆಳೆದ ಪ್ರಧಾನಿ ಮೋದಿ ಧರಿಸಿದ ಪೇಟ, ಇದರ ವಿಶೇಷತೆ ಏನು ಗೊತ್ತಾ?
ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಣೆ
ಸೋಮವಾರ ನಡೆದ 77ನೇ ಗಣರಾಜ್ಯೋತ್ಸವದ ವೇಳೆ ಭಾರತ ತನ್ನ ಅಭಿವೃದ್ಧಿ ಪಯಣ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಿತು. ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲಲಿ ಬಳಸಲಾದ, ಹೊಸದಾಗಿ ರೂಪುಗೊಂಡ ಮಿಲಿಟರಿ ಘಟಕಗಳು ಮತ್ತು ಪ್ರಮುಖ ಶಸ್ತ್ರಾಸ್ತ್ರ ವ್ಯವಸ್ಥೆಗಳ ಮಾದರಿಗಳನ್ನು ಸಹ ಪ್ರದರ್ಶಿಸಲಾಯಿತು. ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ದೆಹಲಿಯಲ್ಲಿ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಲು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮುಖ್ಯ ಅತಿಥಿಗಳು ಅಂಗರಕ್ಷಕರ ಬೆಂಗಾವಲಿನೊಂದಿಗೆ ಸಾಂಪ್ರದಾಯಿಕ ವಾಹನದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸಿದರು. ಆಪರೇಷನ್ ಸಿಂದೂರ್ನಲ್ಲಿ ಭಾರತೀಯ ಸೇನೆ ಬಳಸಿದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪ್ರದರ್ಶನವು ಈ ಬಾರಿಯ ಪ್ರಮುಖ ಆಕರ್ಷಣೆ ಎನಿಸಿಕೊಂಡಿತು.
ಇನ್ನು ಈ ವರ್ಷದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಹಲವು ರಾಜ್ಯಗಳ ಮತ್ತು ಸಚಿವಾಲಯಗಳ ಆಕರ್ಷಕ ಸ್ತಬ್ಧಚಿತ್ರಗಳು ದೇಶದ ಸಾಂಸ್ಕೃತಿಕ ವೈವಿಧ್ಯತೆ, ಸಂಪ್ರದಾಯಗಳು ಮತ್ತು ಅಭಿವೃದ್ಧಿಯನ್ನು ಪ್ರದರ್ಶಿಸಿದವು.
ಮಣಿಪುರ, ಛತ್ತೀಸ್ಗಢ, ಒಡಿಶಾ, ಮಧ್ಯ ಪ್ರದೇಶ, ಪುದುಚೇರಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಕೇರಳ, ಪಂಜಾಬ್, ನಾಗಾಲ್ಯಾಂಡ್, ತಮಿಳುನಾಡು, ಗುಜರಾತ್ ಮತ್ತು ಅಸ್ಸಾಂನ ಸ್ತಬ್ಧಚಿತ್ರಗಳು ಗಮನ ಸೆಳೇದವು. ಗೃಹ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಕೇಂದ್ರ ಲೋಕೋಪಯೋಗಿ ಇಲಾಖೆ ಸೇರಿದಂತೆ ಹಲವು ಸಚಿವಾಲಯಗಳ ಸ್ತಬ್ಧಚಿತ್ರಗಳು ಸಹ ಮೆರವಣಿಗೆಯಲ್ಲಿ ಭಾಗವಹಿಸಿದವು.
ದೆಹಲಿಯ ಕರ್ತವ್ಯ ಪಥದಲ್ಲಿ ರಾಷ್ಟ್ರಗೀತೆಯೊಂದಿಗೆ 77ನೇ ಗಣರಾಜ್ಯೋತ್ಸವದ ಮೆರವಣಿಗೆ ಸಮಾರಂಭವು ಮುಕ್ತಾಯಗೊಂಡಿತು. ನಂತರ ಬಲೂನ್ಗಳನ್ನು ಹಾರಿಸಲಾಯಿತು ಮತ್ತು 'ವಂದೇ ಮಾತರಂ' ಪದಗಳನ್ನು ಹೊಂದಿರುವ ಬ್ಯಾನರ್ಗಳನ್ನು ಪ್ರದರ್ಶಿಸಲಾಯಿತು.