Narendra Modi: ತಹವ್ವೂರ್ ರಾಣಾ ಭಾರತಕ್ಕೆ ಹಸ್ತಾಂತರ; 14 ವರ್ಷಗಳ ಹಿಂದೆ ಮೋದಿ ಮಾಡಿದ್ದ ಟ್ವೀಟ್ ವೈರಲ್
ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಪ್ರಮುಖ ಆರೋಪಿಯಾದ ತಹವ್ವೂರ್ ರಾಣಾನನ್ನು ಅಮೆರಿಕದಿಂದ ಗಡಿಪಾರು ಮಾಡಿದ ಬಳಿಕ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ರಾಣಾ ಹಸ್ತಾಂತರದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು 14 ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ಇದೀಗ ವೈರಲ್ ಆಗಿದೆ.


ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಪ್ರಮುಖ ಆರೋಪಿಯಾದ ತಹವ್ವೂರ್ ರಾಣಾನನ್ನು (Tahawwur Rana) ಅಮೆರಿಕದಿಂದ ಗಡಿಪಾರು ಮಾಡಿದ ಬಳಿಕ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಕೋರ್ಟ್ ಆತನನ್ನು 18 ದಿನಗಳ ಕಸ್ಟಡಿಗೆ ತೆಗೆದುಕೊಳ್ಳಲು ಅನುಮತಿ ಸೂಚಿಸಿದೆ. ಮುಂಬೈ ದಾಳಿಯಲ್ಲಿ ಪ್ರಮುಖ ಸಂಚುಕೋರ ಎಂದು ನಂಬಲಾದ ರಾಣಾನನ್ನು ಅಮೆರಿಕದಿಂದ ಗಡೀಪಾರು ಮಾಡಿದ ಒಂದು ದಿನದ ನಂತರ ಪಟಿಯಾಲ ಹೌಸ್ನಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ರಾಣಾ ಹಸ್ತಾಂತರದ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 14 ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ಇದೀಗ ವೈರಲ್ ಆಗಿದೆ.
2011 ರಲ್ಲಿ ಮೋದಿ ರಾಣಾ ಕುರಿತು ಟ್ವೀಟ್ ಮಾಡಿದ್ದರು. ರಾಣಾನನ್ನು ಮಗ್ಧ ಎಂದು ಘೋಷಿಸುವ ಮೂಲಕ ಅಮೆರಿಕ ಭಾರತದ ಸಾರ್ವಭೌಮತ್ವವನ್ನು ಅವಮಾನಿಸಿದ ನಂತರ ಮೋದಿ ಅವರು ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿದ್ದರು. 2011 ರಲ್ಲಿ, ಅಮೆರಿಕದ ನ್ಯಾಯಾಲಯವು 166 ಜನರ ಸಾವಿಗೆ ಕಾರಣವಾದ ದಾಳಿಯ ಸಂಚು ರೂಪಿಸುವಲ್ಲಿ ರಾಣಾನ ನೇರ ಪಾತ್ರವಿಲ್ಲ ಎಂದು ಘೋಷಿಸಿತ್ತು. ಆದರೆ ಭಯೋತ್ಪಾದಕ ಗುಂಪನ್ನು ಬೆಂಬಲಿಸಿದ್ದಕ್ಕಾಗಿ ಆತನನ್ನು ದೋಷಿ ಎಂದು ಘೋಷಿಸಿತ್ತು.
US declaring Tahawwur Rana innocent in Mumbai attack has disgraced the sovereignty of India & it is a “major foreign policy setback”
— Narendra Modi (@narendramodi) June 10, 2011
ಮುಂಬೈ ದಾಳಿಯಲ್ಲಿ ತಹವ್ವೂರ್ ರಾಣಾನನ್ನು ನಿರಪರಾಧಿ ಎಂದು ಅಮೆರಿಕ ಘೋಷಿಸಿರುವುದು ಭಾರತದ ಸಾರ್ವಭೌಮತ್ವಕ್ಕೆ ಅವಮಾನ ಮಾಡಿದೆ ಮತ್ತು ಇದು "ಪ್ರಮುಖ ವಿದೇಶಾಂಗ ನೀತಿ ಹಿನ್ನಡೆ"" ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದರು. ಇದೀಗ 14 ವರ್ಷಗಳ ಬಳಿಕ ಆ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ರಾಣಾನನ್ನು ಭಾರತಕ್ಕೆ ಕರೆತಂದ ನಿಮಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Tahawwur Rana: 17 ವರ್ಷಗಳ ಶ್ರಮಕ್ಕೆ ಕೊನೆಗೂ ಫಲ; ಭಾರತಕ್ಕೆ ಬಂದಿಳಿದ ತಹಾವ್ವುರ್ ರಾಣಾ
ಅನೇಕ ಬಳಕೆದಾರರು ಕಮೆಂಟ್ ಮಾಡಿ ಪ್ರಧಾನಿ ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂದು ಬರೆದಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ , ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ದೃಢಪಡಿಸಿದ್ದರು. ರಾಣಾ ಭಾರತದ ಕೈವಶವಾದ ಮೇಲೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ರಾಣಾ ತಮ್ಮ ದೇಶದ ಪ್ರಜೆಯಲ್ಲ ಎಂದು ಹೇಳಿಕೆ ನೀಡಿದೆ. ತಹವ್ವೂರ್ ರಾಣಾ ಕಳೆದ ಎರಡು ದಶಕಗಳಲ್ಲಿ ತನ್ನ ಪಾಕಿಸ್ತಾನಿ ದಾಖಲೆಗಳನ್ನು ನವೀಕರಿಸಿಲ್ಲ. ಕೆನಡಾದ ರಾಷ್ಟ್ರೀಯತೆ ಬಹಳ ಸ್ಪಷ್ಟವಾಗಿದೆ" ಎಂದು ವಿದೇಶಾಂಗ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ರಾಣಾ ಈ ಮೊದಲು ಪಾಕಿಸ್ತಾನ ಸೇನೆಯಲ್ಲಿ ವೈದ್ಯನಾಗಿದ್ದ ಎನ್ನಲಾಗಿದೆ. ನಂತರ ಆತ ಕೆನಡಾಗೆ ತೆರಳಿದ್ದ.