ಒಮಾನ್ ಸುಲ್ತಾನ, ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜತೆ ಪ್ರಧಾನಿ ಮೋದಿ ಮಾತುಕತೆ: ಮಧ್ಯಪ್ರಾಚ್ಯ ಯುದ್ಧ, ಹೊರ್ಮುಜ್ ಜಲಸಂಧಿ ಬಿಕ್ಕಟ್ಟಿನ ಬಗ್ಗೆ ಚರ್ಚೆ
PM Narendra Modi: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ (ಮಾರ್ಚ್ 19) ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಒಮಾನ್ನ ಸುಲ್ತಾನ್ ಹೈತಮ್ ಬಿನ್ ತಾರಿಕ್ ಮತ್ತು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಸೇರಿ ಜಾಗತಿಕ ನಾಯಕರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದರು. ಒಮಾನ್ ಜನರಿಗೆ ಮುಂಚಿತವಾಗಿ ಈದ್ ಶುಭಾಶಯಗಳನ್ನು ಕೋರಿದರು.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್-ಪಿಎಂ ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ನವದೆಹಲಿ, ಮಾ.19: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷ (Middle East Crisis) ಮತ್ತು ಹೊರ್ಮುಜ್ ಜಲಸಂಧಿ (Strait of Hormuz crisis) ಸುತ್ತಲಿನ ಉದ್ವಿಗ್ನತೆ ನಡುವೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಗುರುವಾರ (ಮಾ.19) ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಒಮಾನ್ನ ಸುಲ್ತಾನ್ ಹೈತಮ್ ಬಿನ್ ತಾರಿಕ್ ಮತ್ತು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಸೇರಿದಂತೆ ಜಾಗತಿಕ ನಾಯಕರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದರು.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಇರಾನ್ ಜತೆ ಅಮೆರಿಕ ಮತ್ತು ಇಸ್ರೇಲ್ ತೀವ್ರ ಸಂಘರ್ಷದಲ್ಲಿ ತೊಡಗಿದ್ದು, ಮಿಲಿಟರಿ ಮತ್ತು ನಾಗರಿಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿ ಜಾಗತಿಕ ತೈಲ ವ್ಯಾಪಾರ ಮತ್ತು ಇತರ ಅಗತ್ಯ ಸರಬರಾಜುಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದರು.
ʼʼಪಶ್ಚಿಮ ಏಷ್ಯಾದ ಪರಿಸ್ಥಿತಿ ಹಾಗೂ ತಕ್ಷಣದ ಉದ್ವಿಗ್ನತೆ ತಗ್ಗಿಸುವ ಅಗತ್ಯ, ಜತೆಗೆ ಸಂವಾದ ಮತ್ತು ರಾಜತಾಂತ್ರಿಕತೆಯತ್ತ ಮರಳುವ ಬಗ್ಗೆ ನನ್ನ ಆತ್ಮೀಯ ಸ್ನೇಹಿತನೊಂದಿಗೆ ಮಾತನಾಡಿದ್ದೇನೆʼʼ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಸಂಘರ್ಷ ನಡೆಯುತ್ತಿರುವ ಪ್ರದೇಶ ಮತ್ತು ಅದರಾಚೆಗೆ ಶಾಂತಿ ಮತ್ತು ಸ್ಥಿರತೆಯನ್ನು ಮುನ್ನಡೆಸಲು ಎರಡೂ ರಾಷ್ಟ್ರಗಳು ನಿಕಟ ಸಮನ್ವಯವನ್ನು ಮುಂದುವರಿಸುತ್ತವೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರ ಎಕ್ಸ್ ಪೋಸ್ಟ್:
J’ai échangé avec mon cher ami, le Président Emmanuel Macron, sur la situation en Asie de l’Ouest et sur la nécessité urgente d’une désescalade, ainsi que d’un retour au dialogue et à la diplomatie.
— Narendra Modi (@narendramodi) March 19, 2026
Nous nous réjouissons de poursuivre notre étroite coordination afin de…
ಇರಾನ್ ಮತ್ತು ಅಮೆರಿಕ ಹಾಗೂ ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಹೊರ್ಮುಜ್ ಜಲಸಂಧಿಯು ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಿದೆ. ಅತ್ಯಂತ ಬಿಗಿಯಾದ ಸ್ಥಳದಲ್ಲಿ ಸುಮಾರು 50 ಕಿ.ಮೀ. ಅಗಲವಿರುವ ಈ ಕಿರಿದಾದ ಜಲಮಾರ್ಗವು ಪ್ರತಿದಿನ ಸುಮಾರು 20 ಮಿಲಿಯನ್ ಬ್ಯಾರೆಲ್ ತೈಲ ಮತ್ತು ಎಲ್ಎನ್ಜಿಯನ್ನು ಸಾಗಿಸುತ್ತದೆ. ಇದು ಜಾಗತಿಕ ತೈಲ ವ್ಯಾಪಾರದ ಸುಮಾರು ಐದನೇ ಒಂದು ಭಾಗಕ್ಕೆ ಸಮಾನವಾಗಿದ್ದು, ವಿಶ್ವದ ಇಂಧನ ಪೂರೈಕೆ ಮತ್ತು ಮಾರುಕಟ್ಟೆಗಳಿಗೆ ಅತ್ಯಂತ ಪ್ರಮುಖ ಮಾರ್ಗವಾಗಿಸಿದೆ.
ಒಮಾನ್ನ ಸುಲ್ತಾನರೊಂದಿಗೆ ಮಾತನಾಡಿದ ನಂತರ ಎಕ್ಸ್ನಲ್ಲಿ ಮತ್ತೊಂದು ಪೋಸ್ಟ್ ಹಂಚಿಕೊಂಡ ಮೋದಿ, ʼʼನನ್ನ ಸಹೋದರ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರೊಂದಿಗೆ ಫಲಪ್ರದ ಸಂಭಾಷಣೆ ನಡೆಸಿದೆ. ಈ ವೇಳೆ ಒಮಾನ್ ಜನರಿಗೆ ಮುಂಚಿತವಾಗಿ ಈದ್ ಶುಭಾಶಯಗಳನ್ನು ತಿಳಿಸಿದೆʼʼ ಎಂದು ಹೇಳಿದರು.
ಸಂಘರ್ಷ ವಾತಾವರಣದ ನಡುವೆಯೇ ತೈಲ ರಫ್ತು ಆರಂಭಿಸಿದ ಇರಾಕ್
ʼʼಸಂಘರ್ಷವನ್ನು ಶಮನಗೊಳಿಸಲು ಮತ್ತು ಶಾಂತಿ ಹಾಗೂ ಸ್ಥಿರತೆಯನ್ನು ಪುನಃಸ್ಥಾಪಿಸಲು ಸಂವಾದ ಮತ್ತು ರಾಜತಾಂತ್ರಿಕತೆಗೆ ಆದ್ಯತೆ ನೀಡುವ ಅಗತ್ಯವನ್ನು ನಾವು ಒಪ್ಪಿಕೊಂಡಿದ್ದೇವೆʼʼ ಎಂದು ಅವರು ತಿಳಿಸಿದರು.
ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಕಳವಳಗಳ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಮೋದಿ ಭಾರತದ ನಿಲುವನ್ನು ಒತ್ತಿ ಹೇಳಿದರು. ʼʼಒಮಾನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯನ್ನು ಭಾರತ ಖಂಡಿಸುತ್ತದೆ ಮತ್ತು ಭಾರತೀಯ ಪ್ರಜೆಗಳು ಸೇರಿದಂತೆ ಸಾವಿರಾರು ಜನರ ಸುರಕ್ಷಿತ ಮರಳುವಿಕೆಯನ್ನು ಸುಗಮಗೊಳಿಸುವ ಒಮಾನ್ನ ಪ್ರಯತ್ನಗಳನ್ನು ಶ್ಲಾಘಿಸುತ್ತದೆʼʼ ಎಂದು ಹೇಳಿದರು.
80,886 ಮೆಟ್ರಿಕ್ ಟನ್ ಕಚ್ಚಾ ತೈಲದೊಂದಿಗೆ ಗುಜರಾತ್ ತಲುಪಿದ ಜಗ್ಲಡ್ಕಿ ಹಡಗು
ಇರಾನ್ ಆಕ್ರಮಣ ಮತ್ತು ಈ ಪ್ರದೇಶದಲ್ಲಿನ ಅಮೆರಿಕದ ಸೌಲಭ್ಯಗಳ ಮೇಲಿನ ದಾಳಿಯಿಂದ ಬಳಲುತ್ತಿದ್ದ ಗಲ್ಫ್ ರಾಷ್ಟ್ರಗಳಲ್ಲಿ ಒಮಾನ್ ಕೂಡ ಸೇರಿತ್ತು. ಭಾರತ ಮತ್ತು ಒಮಾನ್ ಹೊರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಮತ್ತು ಮುಕ್ತ ಸಂಚರಣೆಗೆ ಬೆಂಬಲ ನೀಡುತ್ತವೆ ಎಂದು ಹೇಳಿದ ಅವರು, ಸಾಗರದ ಭದ್ರತೆಯ ಮಹತ್ವವನ್ನು ಮತ್ತಷ್ಟು ಒತ್ತಿ ಹೇಳಿದರು.
ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಪ್ರತ್ಯೇಕ ಸಂಭಾಷಣೆ ನಡೆಸಿದ ಮೋದಿ, ಬಿಕ್ಕಟ್ಟಿನ ಬಗ್ಗೆ ಚರ್ಚಿಸುತ್ತಾ ಈದ್ ಶುಭಾಶಯಗಳನ್ನು ತಿಳಿಸಿದರು. ʼʼಪಶ್ಚಿಮ ಏಷ್ಯಾದಲ್ಲಿನ ಆಳವಾದ ಆತಂಕಕಾರಿ ಪರಿಸ್ಥಿತಿಯ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ಉದ್ವಿಗ್ನತೆಯನ್ನು ಶಮನಗೊಳಿಸಲು ಮತ್ತು ಸಂವಾದ ಹಾಗೂ ರಾಜತಾಂತ್ರಿಕತೆಯ ಮೂಲಕ ಶಾಂತಿ, ಸ್ಥಿರತೆಯನ್ನು ಶೀಘ್ರವಾಗಿ ಪುನಃಸ್ಥಾಪಿಸಲು ನಮ್ಮ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆʼʼ ಎಂದು ಅವರು ಹೇಳಿದರು.
ʼʼಭಾರತದ ಶೇ. 85ಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಹೆಚ್ಚಿನ ಭಾಗವು ಮಧ್ಯಪ್ರಾಚ್ಯದಿಂದ ಈ ಮಾರ್ಗದ ಮೂಲಕವೇ ಬರುತ್ತದೆ. ಭಾರತದ ತೈಲ ಮತ್ತು ಎಲ್ಎನ್ಜಿ ಪೂರೈಕೆಯ ಸುಮಾರು ಶೇ. 50–55 ಈ ಜಲಸಂಧಿಯ ಮೂಲಕವೇ ಹಾದು ಹೋಗುತ್ತದೆʼʼ ಎಂದರು.