“ಗರ್ಭಿಣಿಯರು ಹಾಡುತ್ತಾ, ಕುಣಿಯುತ್ತಾ ಬಂದವರಲ್ಲ”: ಮಹಿಳೆಯರ ಕುರಿತು ನಾಲಿಗೆ ಹರಿಬಿಟ್ಟ ಆರೋಗ್ಯ ಸಚಿವ!
Pregnant women deaths: ಗಂಭೀರ ಸ್ಥಿತಿಯಲ್ಲಿ ದಾಖಲಾಗಿರುವ ಗರ್ಭಿಣಿಯರು ಹಾಡುತ್ತಾ, ಕುಣಿಯುತ್ತಾ ಬಂದವರಲ್ಲ ಎಂಬ ರಾಜಸ್ಥಾನ ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಖಿಮ್ಸರ್ ಅವರ ಹೇಳಿಕೆ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ. ವಿವಾದ ಭುಗಿಲೆದ್ದ ನಂತರ ಆರೋಗ್ಯ ಸಚಿವ ಖಿಮ್ಸರ್ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.
ಮಹಿಳೆಯರು ಜೀವನ್ಮರಣ ಹೋರಾಟ ನಡೆಸುತ್ತಿದ್ದರೆ ಆರೋಗ್ಯ ಸಚಿವರು ನೀಡಿದ್ದು ಇಂಥ ಹೇಳಿಕೆ! -
ಜೈಪುರ, ಜೂ. 12: ಗರ್ಭಿಣಿಯರು ಆರೋಗ್ಯ ಪರಿಸ್ಥಿತಿಯೊಂದಿಗೆ ಹೋರಾಡುತ್ತಿದ್ದರೆ, ರಾಜಸ್ಥಾನ (Rajasthan) ದ ಸಚಿವರು ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಬಿಕನೇರ್ನ ಪಿಬಿಎಂ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ದಾಖಲಾಗಿರುವ ಗರ್ಭಿಣಿಯರು ಹಾಡುತ್ತಾ, ಕುಣಿಯುತ್ತಾ ಬಂದವರಲ್ಲ ಎಂಬ ರಾಜಸ್ಥಾನ ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಖಿಮ್ಸರ್ (Gajendra Singh Khimsar) ಅವರ ಹೇಳಿಕೆ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ. ಈ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್, ಆಡಳಿತಾರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
“ಕೋಟಾದಲ್ಲಿ ಗರ್ಭಿಣಿಯರ ಸಾವು ಸಂಭವಿಸಿದೆ. ಇದರ ಬೆನ್ನಲ್ಲೇ ಬಿಕಾನೇರ್ನಲ್ಲಿ ಮಹಿಳೆಯರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂಬ ವರದಿಗಳು ಬಂದಿವೆ. ಆರೋಗ್ಯ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಈಗ ಆಸ್ಪತ್ರೆಗಳಿಗೆ ಹೋಗಲು ಭಯಪಡುತ್ತಿರುವ ಮಹಿಳೆಯರಲ್ಲಿ ವಿಶ್ವಾಸ ಮೂಡಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಸೋಂಕು ಮತ್ತು ಕಳಪೆ ಗುಣಮಟ್ಟದ ಔಷಧಿಗಳ ಬಗ್ಗೆ ದೂರುಗಳು ಬರುತ್ತಿವೆ” ಎಂದು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಈ ವಿಷಯದ ಬಗ್ಗೆ ತನಿಖೆ ನಡೆಸಿ ರೋಗಿಗಳಿಗೆ ಧೈರ್ಯ ತುಂಬುವಂತೆ ಗೆಹ್ಲೋಟ್ ಸರ್ಕಾರವನ್ನು ಒತ್ತಾಯಿಸಿದರು. ವಿವಾದ ಭುಗಿಲೆದ್ದ ನಂತರ ಆರೋಗ್ಯ ಸಚಿವ ಖಿಮ್ಸರ್ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.
ಖಿಮ್ಸರ್, ಐದು ಗರ್ಭಿಣಿ ಮಹಿಳೆಯರ ಆರೋಗ್ಯವನ್ನು ಪರಿಶೀಲಿಸಲು ಬಿಕಾನೇರ್ಗೆ ಭೇಟಿ ನೀಡಿದ್ದರು. ಅವರು ಪ್ರತಿಯೊಬ್ಬ ಮಹಿಳೆಯನ್ನು ಭೇಟಿ ಮಾಡಿ, ಅವರ ವೈಯಕ್ತಿಕ ವೈದ್ಯಕೀಯ ವರದಿಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದರು. ಈ ವೇಳೆ, ಆ ಮಹಿಳೆಯರು ಆಸ್ಪತ್ರೆಗೆ ಬಂದಾಗಲೇ ಗಂಭೀರ ಸ್ಥಿತಿಯಲ್ಲಿದ್ದರು. ಹಾಡುತ್ತಾ-ಕುಣಿಯುತ್ತಾ ಬಂದವರಲ್ಲ ಎಂದು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.
“ಖಿಮ್ಸರ್ ಅವರಿಗೆ ಯಾವುದೇ ದುರುದ್ದೇಶಪೂರಿತ ಉದ್ದೇಶವಿರಲಿಲ್ಲ. ಮಹಿಳಾ ರೋಗಿಗಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ಚಿಕಿತ್ಸೆ ನೀಡಲಾಗಿದೆ. ಬಿಕಾನೆರ್ನಲ್ಲಿ ಇಡೀ ಸಮಸ್ಯೆಯ ಕುರಿತು ವರದಿಯನ್ನು ಸಿದ್ಧಪಡಿಸಿದ್ದಾರೆ” ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಅವಿನಾಶ್ ಗೆಹ್ಲೋಟ್ ಹೇಳಿದ್ದಾರೆ.
ಆದರೆ ನಗರಾಭಿವೃದ್ಧಿ ಸಚಿವ ಜಬರ್ ಸಿಂಗ್ ಖರ್ರಾ ಅವರು ಸಾರ್ವಜನಿಕ ಜೀವನದಲ್ಲಿ ಮಾತನಾಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಹೇಳಿದರು. ಆದರೆ ಈ ವಿಷಯದ ಬಗ್ಗೆ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರ ಅವರು ಆರೋಗ್ಯ ಸಚಿವರ ಮೇಲೆ ವಾಗ್ದಾಳಿ ನಡೆಸಿದರು. “ಆರೋಗ್ಯ ಇಲಾಖೆಯನ್ನು ಸರಿಯಾಗಿ ನಿರ್ವಹಿಸದಿದ್ದರೆ, ರಾಜಸ್ಥಾನದ ಜನರಿಗೆ ಆರೋಗ್ಯ ಸೇವೆ ಹೇಗೆ ಸಿಗುತ್ತದೆ? ಸಚಿವರು ಊಳಿಗಮಾನ್ಯ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕೋಟಾದಲ್ಲಿ, ತಾಯಂದಿರ ಸಾವುಗಳು ಸಂಭವಿಸಿವೆ. ಪುಟ್ಟ ಮಗುವನ್ನು ಬಿಟ್ಟು ತಾಯಿಯೊಬ್ಬರು ಮೃತಪಟ್ಟಿದ್ದಾರೆ. ಸಚಿವರು ಅಲ್ಲಿಗೆ ಹೋಗಿಲ್ಲ. ಇಲ್ಲಿಯವರೆಗೆ, ಆ ಪ್ರಕರಣದ ತನಿಖಾ ವರದಿಯನ್ನು ಸಾರ್ವಜನಿಕಗೊಳಿಸಲಾಗಿಲ್ಲ. ಈಗ ನಾವು ಬಿಕಾನೇರ್ನ ಪಿಬಿಎಂ ಆಸ್ಪತ್ರೆಯಲ್ಲಿ ಇದೇ ರೀತಿಯ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ” ಎಂದು ಹೇಳಿದರು.
ಏಪ್ರಿಲ್ನಲ್ಲಿ ಕೋಟಾದಲ್ಲಿ, ಒಂದು ತಿಂಗಳ ಅವಧಿಯಲ್ಲಿ ಐದು ಮಹಿಳೆಯರು ಮೃತಪಟ್ಟರು. ಈ ಪೈಕಿ ನಾಲ್ವರು ಸಿಸೇರಿಯನ್ ಮೂಲಕ ಹೆರಿಗೆಯಾಯಿತು. ಶಸ್ತ್ರಚಿಕಿತ್ಸೆಯ ನಂತರ ಅವರ ಸ್ಥಿತಿ ಹದಗೆಟ್ಟಿತು. ಆದರೆ ಒಬ್ಬ ಮಹಿಳೆ ಐದು ತಿಂಗಳ ಗರ್ಭಿಣಿಯಾಗಿದ್ದಾಗ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟರು.
ಬಿಕಾನೆರ್ನಲ್ಲಿ, ಪಿಬಿಎಂ ಆಸ್ಪತ್ರೆಯಲ್ಲಿ ಹೆರಿಗೆಯ ನಂತರ ಆರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ ಎಂಬ ಮಾಧ್ಯಮ ವರದಿಗಳು ಎಚ್ಚರಿಕೆಯ ಗಂಟೆಗಳನ್ನು ಬಾರಿಸಿದವು. ಇದು ಸರ್ಕಾರವು ತನಿಖೆಗೆ ಆದೇಶಿಸಲು ಮತ್ತು ಸಚಿವರು ಆಸ್ಪತ್ರೆಗೆ ಭೇಟಿ ನೀಡಲು ಕಾರಣವಾಯಿತು.