ಗಂಟಲಿಗೆ ಪೆನ್ಸಿಲ್ ಚುಚ್ಚಿ ಯುಕೆಜಿ ವಿದ್ಯಾರ್ಥಿ ಸಾವು; ತೆಲಂಗಾಣದಲ್ಲಿ ಹೃದಯ ವಿದ್ರಾವಕ ಘಟನೆ
ಯುಕೆಜಿ ವಿದ್ಯಾರ್ಥಿಯು ಪೆನ್ಸಿಲ್ನಿಂದ ಅಕಾಲಿಕ ಮರಣ ಹೊಂದಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಕುಸುಮಂಚಿ ಮಂಡಲದ ನಾಯಕಂಗುಡೆಮ್ನಲ್ಲಿರುವ ಖಾಸಗಿ ಶಾಲೆಯಲ್ಲಿ ನಡೆದಿದೆ. ಭವಿಷ್ಯದ ಕನಸು ಕಂಡು ಹೆತ್ತವರ ಕಣ್ಣೆದುರು ಬಾಳಿ ಬದುಕ ಬೇಕಿದ್ದ ಈ ಬಾಲಕನ ಸಾವು ಶಾಲಾ ಆಡಳಿತ ಮಂಡಳಿಗೆ, ಪೋಷಕರಿಗೆ ಆಘಾತ ತಂದಿದೆ.
ಸಾಂದರ್ಭಿಕ ಚಿತ್ರ. -
ಹೈದರಾಬಾದ್, ಡಿ. 25: ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಸಲಹುವ ಬಹುತೇಕ ಪೋಷಕರು ಅವರ ಲಾಲನೆ ಪಾಲನೆಗೆ ಆದ್ಯತೆ ನೀಡುತ್ತಾರೆ. ಮಕ್ಕಳ ಭವಿಷ್ಯ ಚೆನ್ನಾಗಿರಬೇಕು ಎಂಬ ದೃಷ್ಟಿಯಿಂದ ಅವರಿಗೆ ಉತ್ತಮ ಶಿಕ್ಷಣ ನೀಡುತ್ತಾರೆ. ಹೀಗಾಗಿ ಕಲಿಕೆಗೆ ಬೇಕಾದ ವಸ್ತುಗಳು ಅದೆಷ್ಟೇ ದುಬಾರಿಯಾದರೂ ಖರೀದಿಸುತ್ತಾರೆ. ಇಲ್ಲೊಬ್ಬ ಯುಕೆಜಿ ವಿದ್ಯಾರ್ಥಿಯು ಪೆನ್ಸಿಲ್ನಿಂದ ಅಕಾಲಿಕ ಮರಣ ಹೊಂದಿದ್ದ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಕುಸುಮಂಚಿ ಮಂಡಲದ ನಾಯಕಂಗುಡೆಮ್ನಲ್ಲಿರುವ ಖಾಸಗಿ ಶಾಲೆಯಲ್ಲಿ ನಡೆದಿದೆ. ಭವಿಷ್ಯದ ಕನಸು ಕಂಡು ಹೆತ್ತವರ ಕಣ್ಣೆದುರು ಬಾಳಿ ಬದುಕ ಬೇಕಿದ್ದ ಈ ಬಾಲಕನ ಸಾವು ಶಾಲಾ ಆಡಳಿತ ಮಂಡಳಿಗೆ, ಪೋಷಕರಿಗೆ ಆಘಾತ ತಂದಂತಾಗಿದೆ.
ಖಮ್ಮಂ ಜಿಲ್ಲೆಯ ಕುಸುಮಂಚಿ ಮಂಡಲದ ನಾಯಕಂಗುಡೆಮ್ನಲ್ಲಿರುವ ಖಾಸಗಿ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದ 6 ವರ್ಷದ ವಿದ್ಯಾರ್ಥಿ ಮೇದರಪೌ ವಿಹಾರ್ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾನೆ. ಡಿಸೆಂಬರ್ 24ರಂದು ಅಪರಾಹ್ನ 3 ಗಂಟೆ ಸುಮಾರಿಗೆ ವಿಹಾರ್ ಮಧ್ಯಾಹ್ನದ ಊಟದ ವಿರಾಮದ ಸಮಯದಲ್ಲಿ ಶೌಚಾಲಯಕ್ಕೆ ತೆರಳಿದ್ದಾನೆ. ಬಳಿಕ ಅಲ್ಲಿಂದ ತರಗತಿಗೆ ಓಡಿಕೊಂಡು ಬಂದಿದ್ದಾನೆ. ಪರಿಣಾಮ ಓಟದ ರಭಸಕ್ಕೆ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದ್ದು ಕೈಯಲ್ಲಿದ್ದ ಪೆನ್ಸಿಲ್ ಗಂಟಲಿಗೆ ಹೊಕ್ಕಿದೆ. ಈ ಘಟನೆಯ ಬಳಿಕ ಶಾಲೆಯ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಮೇದರಪೌ ವಿಹಾರ್ ಆಕಸ್ಮಿಕವಾಗಿ ಕೆಳಗೆ ಬಿದ್ದಾಗ ಅವರ ಕೈಯಲ್ಲಿದ್ದ ಪೆನ್ಸಿಲ್ ನೇರವಾಗಿ ಆತನ ಗಂಟಲಿಗೆ ಹೊಕ್ಕಿದೆ. ಪರಿಣಾಮ ವಿದ್ಯಾರ್ಥಿಗೆ ಗಾಯವಾಗಿದ್ದು ತೀವ್ರ ರಕ್ತ ಸ್ರಾವವಾಗಿದೆ. ತತ್ಕ್ಷಣ ಶಾಲಾ ಸಿಬ್ಬಂದಿ ಆತನನ್ನು 108 ಆಂಬ್ಯುಲೆನ್ಸ್ ಮೂಲಕ ಖಮ್ಮಮ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ದುರದೃಷ್ಟವಶಾತ್ ವಿಹಾರ್ ಸಾವನ್ನಪ್ಪಿದ್ದಾನೆ. ಪೆನ್ಸಿಲ್ ಆತನ ಶ್ವಾಸನಾಳಕ್ಕೆ ಚುಚ್ಚಿದ್ದ ಕಾರಣ ರಕ್ತಸ್ರಾವವಾಗಿದೆ. ಜತೆಗೆ ಉಸಿರಾಟಕ್ಕೆ ಕೂಡ ಅಡ್ಡಿಯಾಗಿದೆ. ಇದರಿಂದಾಗಿ ಅವರ ಜೀವ ಉಳಿಸಲಾಗಲಿಲ್ಲ ಎಂದಿ ಚಿಕಿತ್ಸೆ ನೀಡಿದ ವೈದ್ಯರು ಹೇಳಿಕೆ ನೀಡಿದ್ದಾರೆ.
ಜಸ್ಟ್ 20 ನಿಮಿಷಕ್ಕೆ ಮುರಿದು ಬಿತ್ತು ಮದುವೆ!
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲೆಯ ಭದ್ರತಾ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯ, ಲೋಪವಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಘಟನೆಯು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.
ಮಕ್ಕಳನ್ನು ಶಾಲೆಯಲ್ಲಿ ಸರಿಯಾಗಿ ನೋಡಿಕೊಳ್ಳುವುದು ಶಾಲೆಯವರ ಜವಾಬ್ದಾರಿ ಆಗಿದೆ. ಎಳೆ ಮಕ್ಕಳು ತುಂಟಾಟ ಮಾಡುತ್ತಾರೆ ಎಂದು ತಿಳಿದ ಮೇಲೂ ಅವರ ಬಗ್ಗೆ ಶಾಲಾ ಸಿಬ್ಬಂದಿ ಹೆಚ್ಚಿನ ಕಾಳಜಿ ವಹಿಸಬೇಕಿತ್ತು. ಈ ಬಗ್ಗೆ ಪೊಲೀಸರು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ನೆಟ್ಟಿಗರೊಬ್ಬರು ಆಗ್ರಹಿಸಿದ್ದಾರೆ.