TTD: ತಿರುಮಲ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ: ಟಿಟಿಡಿ ಆಡಳಿತದ ವಿರುದ್ಧ ಭೂಮನ ಕರುಣಾಕರ್ ರೆಡ್ಡಿ ಆಕ್ರೋಶ
Bhumana Karunakar Reddy: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪಾವಿತ್ರ್ಯತೆ ಮತ್ತು ಸಂಪ್ರದಾಯಗಳಿಗೆ ಧಕ್ಕೆಯಾಗುವಂತೆ ಟಿಟಿಡಿ ಆಡಳಿತ ಮಂಡಳಿ ವರ್ತಿಸುತ್ತಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಗಳ ಮಾಜಿ ಅಧ್ಯಕ್ಷ ಮತ್ತು ವೈಎಸ್ಆರ್ಸಿಪಿ ಹಿರಿಯ ನಾಯಕ ಭೂಮನ ಕರುಣಾಕರ್ ರೆಡ್ಡಿ ಆರೋಪಿಸಸಿದ್ದಾರೆ.


ತಿರುಪತಿ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ (Sri Venkateswara Swamy Temple) ಪಾವಿತ್ರ್ಯತೆ ಮತ್ತು ಸಂಪ್ರದಾಯಗಳಿಗೆ ಧಕ್ಕೆಯಾಗುವಂತೆ ವರ್ತಿಸುತ್ತಿರುವ ಟಿಟಿಡಿ ಆಡಳಿತ ಮತ್ತು ಆಡಳಿತದ ಎನ್ಡಿಎ ಸರ್ಕಾರದ (NDA Government) ವಿರುದ್ಧ ತಿರುಮಲ ತಿರುಪತಿ ದೇವಸ್ಥಾನಗಳ (TTD) ಮಾಜಿ ಅಧ್ಯಕ್ಷ ಮತ್ತು ವೈಎಸ್ಆರ್ಸಿಪಿ ಹಿರಿಯ ನಾಯಕ ಭೂಮನ ಕರುಣಾಕರ್ ರೆಡ್ಡಿ (Bhumana Karunakar Reddy) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿರುಪತಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ರೆಡ್ಡಿ, ಶ್ರೀವಾರಿ ದೇವಸ್ಥಾನದಲ್ಲಿ ವೈದಿಕ ಮಂತ್ರೋಚ್ಚಾರಣೆ ಅನಗತ್ಯವೆಂದು ಹೇಳಿ ಅದನ್ನು ನಿಲ್ಲಿಸಬೇಕೆಂದು ಸೂಚಿಸಿದ ಟಿಟಿಡಿ ಅಧಿಕಾರಿಯ ಹೇಳಿಕೆಯನ್ನು ಖಂಡಿಸಿದರು. ಈ ಹೇಳಿಕೆಗಳನ್ನು “ಪವಿತ್ರತೆಗೆ ಅಪಚಾರ” ಮತ್ತು “ಗರ್ವಿಷ್ಠ” ಎಂದು ಬಣ್ಣಿಸಿದ ರೆಡ್ಡಿ, ದೇವಸ್ಥಾನದಲ್ಲಿ ನಾಲ್ಕು ವೇದಗಳನ್ನು ನಿರಂತರವಾಗಿ ಪಠಿಸಲಾಗುತ್ತಿದೆ ಎಂದು ಒತ್ತಿ ಹೇಳಿದರು. ಜತೆಗೆ ಈ ಪುರಾತನ ಗ್ರಂಥಗಳನ್ನು ಉತ್ತೇಜಿಸಲು ಟಿಟಿಡಿಯು ಆರು ವೈದಿಕ ಶಾಲೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ಈ ಸುದ್ದಯನ್ನೂ ಓದಿ: Tirupati Temple: ತಿರುಪತಿ ತಿರುಮಲ ದೇವಾಲಯದಲ್ಲಿರುವ ಚಿನ್ನ ಎಷ್ಟು ಗೊತ್ತಾ? ಈಗಿನ ಮೌಲ್ಯ ಕೇಳಿದ್ರೆ ಶಾಕ್ ಆಗ್ತೀರಾ !
ಹಲವಾರು ಧಾರ್ಮಿಕ ಮುಖಂಡರು ಈ ವಿಷಯಗಳ ಬಗ್ಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಗವತ್ ಅವರಿಗೆ ದೂರು ನೀಡಿದ್ದರಿಂದ ಟಿಟಿಡಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಳ್ಳಲಾಯಿತು ಎಂದು ರೆಡ್ಡಿ ಉಲ್ಲೇಖಿಸಿದರು. ಆದರೆ ಟಿಟಿಡಿಯು ರೆಡ್ಡಿಯ ಆರೋಪಗಳನ್ನು ತಿರಸ್ಕರಿಸಿದೆ. ಈ ಆರೋಪಗಳು ಆಧಾರರಹಿತ, ರಾಜಕೀಯ ಪ್ರೇರಿತ ಮತ್ತು ಸಂಸ್ಥೆಯ ಜಾಗತಿಕ ಖ್ಯಾತಿಗೆ ಹಾನಿಕಾರಕ ಎಂದು ಟಿಟಿಡಿ ಆಡಳಿತ ಹೇಳಿದೆ.
ಟಿಟಿಡಿಯಿಂದ ಸ್ಪಷ್ಟನೆ
ಟಿಟಿಡಿಯ ಅಧಿಕೃತ ಹೇಳಿಕೆಯಲ್ಲಿ, ವೈದಿಕ ಮಂತ್ರೋಚ್ಚಾರಣೆಯ ಸಮಯವನ್ನು ಹೆಚ್ಚಿಸಲಾಗಿದೆ ಮತ್ತು ‘ಓಂ ನಮೋ ವೆಂಕಟೇಶಾಯ’ ದಿವ್ಯ ಮಂತ್ರವು ಈಗ ದೇವಸ್ಥಾನದ ಆವರಣದಾದ್ಯಂತ, ಸರತಿಯ ಸಾಲುಗಳು, ಅನ್ನಪ್ರಸಾದ ಭವನಗಳು ಮತ್ತು ಪಾದಚಾರಿ ಮಾರ್ಗಗಳಲ್ಲಿ ಪ್ರತಿಧ್ವನಿಸುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ. ಭಕ್ತರಿಗೆ ಸೇವೆಯನ್ನು ಸುಧಾರಿಸಲು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಸುಧಾರಣೆಗಳನ್ನು ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.