Narendra Modi: ʼʼಹೃದಯ ವಿದ್ರಾವಕʼʼ; ಅಹಮದಾಬಾದ್ ದುರಂತ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ: ಬದುಕುಳಿದ ಏಕೈಕ ಪ್ರಯಾಣಿಕನಿಗೆ ಸಾಂತ್ವನ
Ahmedabad plane crash: ಜೂ. 12ರಂದು ದೇಶದಲ್ಲೇ 2ನೇ ಅತೋ ದೊಡ್ಡ ವಿಮಾನ ದುರಂತ ಅಹಮದಾಬಾದ್ನಲ್ಲಿ ನಡೆದು ಸುಮಾರು 250ಕ್ಕೂ ಹೆಚ್ಚುಮಂದಿಯನ್ನು ಬಲಿ ಪಡೆದಿದೆ. 230 ಪ್ರಯಾಣಿಕರು, 12 ಸಿಬ್ಬಂದಿಯನ್ನು ಹೊತ್ತು ಲಂಡನ್ಗೆ ಹಾರಿದ್ದ ಏರ್ ಇಂಡಿಯಾ ವಿಮಾನ ಟೇಕ್ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನವಾಗಿದೆ. ವಿಮಾನದಲ್ಲಿದ್ದ 241 ಮಂದಿ ಮೃತಪಟ್ಟಿದ್ದು, ಓರ್ವ ಬದುಕುಳಿದಿದ್ದಾನೆ. ಶುಕ್ರವಾರ (ಜೂ. 13) ನರೇಂದ್ರ ಮೋದಿ ದುರಂತ ನಡೆದ ಸ್ಥಳ ಪರಿಶೀಲಿಸಿದರು. ಜತೆಗೆ ಬದುಕುಳಿದ ಏಕೈಕ ಪ್ರಯಾಣಿಕ ರಮೇಶ್ ವಿಶ್ವಕುಮಾರ್ಗೆ ಸಾಂತ್ವನ ಹೇಳಿದರು.



ಸ್ಥಳ ಪರಿಶೀಲಿಸಿದ ಮೋದಿ
ದಿಲ್ಲಿಯಿಂದ ಬಂದ ಏರ್ ಇಂಡಿಯಾ ವಿಮಾನ-171 ಗುಜರಾತ್ನ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯ್ ವಿಮಾನ ನಿಲ್ದಾಣದಿಂದ ಟೇಕ್ಆಫ್ ಆಗಿ 5 ನಿಮಿಷಗಳಲ್ಲಿ ಪತನವಾಗಿತ್ತು. ವಿಮಾನವು ಏರ್ಪೋರ್ಟ್ನಿಂದ ಸ್ವಲ್ವ ದೂರದಲ್ಲಿರುವ ಮೇಧಿನಿ ನಗರದ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಸಮುಚ್ಚಯದ ಮೇಲೆ ಬಿದ್ದಿತ್ತು. ಈ ಸ್ಥಳಗಳನ್ನೆಲ್ಲ ಪ್ರಧಾನಿ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

ಕಟ್ಟಡಗಳು ಛಿದ್ರ ಛಿದ್ರ
ಜನ ವಸತಿ ಪ್ರದೇಶದ ಮೇಲೆ ವಿಮಾನ ಪತನವಾಗಿದ್ದು, ಬಿಜೆ ಹಾಸ್ಟೆಲ್ ಸೇರಿ ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ʼʼವಿಮಾನ ಪತನವಾದ ಅಹಮದಾಬಾದ್ಗೆ ಭೇಟಿ ನೀಡಿದೆ. ವಿನಾಶದ ದೃಶ್ಯವು ಹೃದಯ ವಿದ್ರಾವಕವಾಗಿದೆ. ನಿರಂತರವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತು ರಕ್ಷಣಾ ತಂಡದ ಸದಸ್ಯರನ್ನು ಭೇಟಿ ಮಾಡಿದೆʼʼ ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ತಿಳಿಸಿದ್ದಾರೆ. ಜತೆಗೆ ದುರಂತ ಸ್ಥಳದ ಭೀಕರ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ವಿವಿಧ ದೇಶಗಳ ಪ್ರಜೆಗಳು
ಅಪಘಾತಕ್ಕೀಡಾದ ವಿಮಾನದಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, ಒಬ್ಬರು ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳು ಇದ್ದರು. ವಿಮಾನ ಸುಮಾರು 800 ಅಡಿಯಿಂದ ಪತನವಾಗಿ, ಬೆಂಕಿ ಉಂಡೆಯಂತೆ ಕಟ್ಟಡಕ್ಕೆ ನೆಲಕ್ಕೆ ಅಪ್ಪಳಿಸಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಧಿಕಾರಿಗಳೊಂದಿಗೆ ಸಭೆ
ಅಹಮದಾಬಾದ್ಗೆ ಭೇಟಿ ನೀಡಿದ ನರೇಂದ್ರ ಮೋದಿ ದುರಂತ ಸ್ಥಳವನ್ನು ವೀಕ್ಷಿಸಿದ ಬಳಿಕ ಉನ್ನತ ಮಟ್ಟದ ಸಭೆ ನಡೆಸಿದರು. ಇದರಲ್ಲಿ ಅಹಮದಾಬಾದ್ ಏರ್ಪೋರ್ಟ್ನ ಅಧಿಕಾರಿಗಳು ಭಾಗವಹಿಸಿದ್ದರು. ಅವರಿಂದ ಮೋದಿ ಮಾಹಿತಿ ಕಲೆ ಹಾಕಿದರು. ಜತೆಗೆ ಚಿಕಿತ್ಸೆ ಪಡೆಯುತ್ತಿರುವ ರಮೇಶ್ನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು.

ವಿಜಯ್ ರೂಪಾನಿ ಕುಟುಂಬಸ್ಥರ ಭೇಟಿ
ಇನ್ನು ಈ ವಿಮಾನ ಅಪಘಾತದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ವಿಜಯ್ ರೂಪಾನಿ ಅವರೂ ಮೃತಪಟ್ಟಿದ್ದಾರೆ. ಅವರ ಕುಟುಂಬ ಸದಸ್ಯರನ್ನೂ ಮೋದಿ ಭೇಟಿ ಮಾಡಿದರು. ʼʼವಿಜಯ್ ಭಾಯ್ ರೂಪಾನಿ ಅವರ ಕುಟುಂಬವನ್ನು ಭೇಟಿಯಾದೆ. ವಿಜಯ್ ಭಾಯ್ ನಮ್ಮ ನಡುವೆ ಇಲ್ಲ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ನಾನು ಅವರನ್ನು ದಶಕಗಳಿಂದ ಬಲ್ಲೆ. ನಾವು ಅತ್ಯಂತ ಸವಾಲಿನ ಸಮಯಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ವಿಜಯ್ ಪರಿಶ್ರಮಿಯಾಗಿದ್ದರು, ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿದ್ದರು. ಗುಜರಾತ್ ಮುಖ್ಯಮಂತ್ರಿಯಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದರುʼʼ ಎಂದು ಮೋದಿ ಬರೆದುಕೊಂಡಿದ್ದಾರೆ.