BSY Abhimanotsava: ʼಬಿಎಸ್ವೈ ಅಭಿಮಾನೋತ್ಸವʼ ಒಂದು ಐತಿಹಾಸಿಕ ಕಾರ್ಯಕ್ರಮ: ಬಿ.ವೈ. ರಾಘವೇಂದ್ರ
BSY Abhimanotsava: ಚಿತ್ರದುರ್ಗದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವವು ಒಂದು ಐತಿಹಾಸಿಕ ಕಾರ್ಯಕ್ರಮ ಎಂದು ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು. -
ಚಿತ್ರದುರ್ಗ, ಮೇ 9: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವವು ಒಂದು ಐತಿಹಾಸಿಕ ಕಾರ್ಯಕ್ರಮ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ (BSY Abhimanotsava) ಸ್ವಾಗತ ಭಾಷಣ ಮಾಡಿ ಮಾತನಾಡಿದ ಅವರು, ದೇಶದಲ್ಲಿ ಮೊದಲು ಕೃಷಿ ಬಜೆಟ್ ನೀಡಿದ ನಾಯಕ, ಭವ್ಯ ರಾಮಮಂದಿರಕ್ಕೆ ಕರಸೇವಕರಾಗಿದ್ದ ಧೀಮಂತ ನಾಯಕ ಅವರು ಈ ಕಾರ್ಯಕ್ರಮದ ಕೇಂದ್ರ ಬಿಂದು ಎಂದು ತಿಳಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಅತ್ಯಂತ ಅದ್ಭುತವಾಗಿ ಕಾರ್ಯಕ್ರಮ ನಡೆಯುತ್ತಿದೆ. ಮದಕರಿ ನಾಯಕ, ಒನಕೆ ಓಬವ್ವನ ನಾಡಿದು. ಪ್ರಾಸ್ತಾವಿಕ ನುಡಿ ನನ್ನ ಜೀವನದ ಸಾರ್ಥಕ ಕ್ಷಣ ಎಂದು ಹೇಳಿದರು.

ಆರೆಸ್ಸೆಸ್ ಪ್ರಚಾರಕರಾಗಿ ಶಿಕಾರಿಪುರಕ್ಕೆ ಹೆಜ್ಜೆ ಹಾಕಿದ ಯಡಿಯೂರಪ್ಪ ಅವರು ಒಬ್ಬ ಮಹಾನ್ ಸಾಧಕ ಎಂದು ಬಣ್ಣಿಸಿದರು. ಯಡಿಯೂರಪ್ಪ ಅವರ ದೃಷ್ಟಿಯಲ್ಲಿ ರಾಜಕಾರಣ ಎಂದರೆ ಜನಸಾಮಾನ್ಯರ ಪರ ಹೋರಾಟದ ಅಂಗಳ ಎಂದು ತಿಳಿಸಿದರು. ಜೀತಪದ್ಧತಿ ವಿರೋಧಿಸಿದವರು. ವಿಧಾನಸೌಧದಲ್ಲಿ ಇದೇ ವಿಚಾರದಲ್ಲಿ ಗುಡುಗಿದವರು ಎಂದು ನೆನಪಿಸಿದರು. ಲಕ್ಷಾಂತರ ರೈತರ ಹೋರಾಟಕ್ಕೆ ನಿರಂತರ ಸಾಥ್ ಕೊಟ್ಟವರು ಎಂದರು.

ಬಡವರು, ದುರ್ಬಲರು ಮತ್ತು ಹಿಂದುಳಿದ ಸಮಾಜದ ಬಗ್ಗೆ ಸದಾ ಜನಪರವಾಗಿ ನಡೆದುಕೊಂಡಿದ್ದರು. ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ನೀಡಿದ್ದರು. 15 ಲಕ್ಷ ಬಡವರ ಮಕ್ಕಳಿಗೆ ಸೈಕಲ್ ನೀಡಿದ್ದರು. ಮೋದಿಜೀ, ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ನಮ್ಮ ಸಂಘಟನೆಯ ಅಶ್ವಮೇಧವನ್ನು ಬಿಡುತ್ತಿದ್ದೇವೆ. ಅದನ್ನು ತಡೆಯುವ ಶಕ್ತಿ ಯಾರಿಗೂ ಇರಲಾರದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
BSY Abhimanotsava: ಬಗರ್ ಹುಕುಂ ಹೋರಾಟದ ಮೂಲಕ ಬಡವರಿಗೆ ನ್ಯಾಯ ಕೊಡಿಸಿದ ರಾಜಾಹುಲಿ ಬಿಎಸ್ವೈ: ಜೋಶಿ

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವರಾದ ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ್ ಅಗ್ರವಾಲ್, ಸಹ ಉಸ್ತುವಾರಿ ಸುಧಾಕರ ರೆಡ್ಡಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ್ ಕೋರೆ, ಕೇಂದ್ರದ ಮಾಜಿ ಸಚಿವರಾದ ಜಿ.ಎಂ.ಸಿದ್ಧೇಶ್ವರ್, ಎ.ನಾರಾಯಣಸ್ವಾಮಿ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಸಿ.ಟಿ.ರವಿ, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಶಾಸಕರು, ಜನಪ್ರತಿನಿಧಿಗಳು, ವಿವಿಧ ಶ್ರೀ ಮಠಗಳ ಮಠಾಧೀಶರು ಮತ್ತು ಗಣ್ಯ ಮಾನ್ಯರು ಉಪಸ್ಥಿತರಿದ್ದರು. ಲಕ್ಷಾಂತರ ಜನರು ಭಾಗವಹಿಸಿದ್ದರು.