ಜು.15ರ ಸಭೆ ಬಳಿಕ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್
Cauvery Water Dispute : ಜು.15ರಂದು ಕಾವೇರಿ ಮಂಡಳಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ನಮ್ಮ ರಾಜ್ಯದ ವಾದ ಮಂಡಿಸುತ್ತೇವೆ. ನಂತರ ತೀರ್ಮಾನವನ್ನು ತಿಳಿಸುತ್ತೇವೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -
ಬೆಂಗಳೂರು, ಜು.13: ಕಾವೇರಿ ವಿಚಾರದಲ್ಲಿ ನಾವು ರೈತರನ್ನು ಬದುಕಿಸಬೇಕು. ಕುಡಿಯುವ ನೀರನ್ನು ಪೂರೈಸಬೇಕು, ತಮಿಳುನಾಡು ಪಾಲಿನ ನೀರು ಹರಿಸುವ ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು. 15ರಂದು ಕಾವೇರಿ ಮಂಡಳಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ನಮ್ಮ ರಾಜ್ಯದ ವಾದ ಮಂಡಿಸುತ್ತೇವೆ. ನಂತರ ತೀರ್ಮಾನವನ್ನು ತಿಳಿಸುತ್ತೇವೆ ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ತಿಳಿಸಿದರು. ಸಿಎಂ ಗೃಹ ಕಚೇರಿ ಕೃಷ್ಣಾ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಅವರು ಪ್ರತಿಕ್ರಿಯೆ ನೀಡಿದರು.
ಮಂಡ್ಯ ಶಾಸಕರು ಕಾವೇರಿ ನೀರು ಬಿಡುವಂತೆ ಮನವಿ ಮಾಡಿರುವ ಬಗ್ಗೆ ಕೇಳಿದಾಗ, ʼಮಂಡ್ಯದವರು, ಶ್ರೀರಂಗಪಟ್ಟಣದವರು, ಜಿಲ್ಲಾ ಸಚಿವರು ಬಂದು ಭೇಟಿ ಮಾಡಿದ್ದರು. ಸಭೆ ಬಳಿಕ ತೀರ್ಮಾನ ತಿಳಿಸುತ್ತೇವೆʼ ಎಂದು ಹೇಳಿದರು.
ಕೆಪಿಎಸ್ ಸಿ ಅಧ್ಯಕ್ಷರ ಅಮಾನತ್ತಿನ ಬಗ್ಗೆ ಕೇಳಿದಾಗ, ʼರಾಜ್ಯಪಾಲರು ಈ ಆದೇಶ ಮಾಡಿದ್ದಾರೆ. ಅವರ ನಂತರ ಯಾರು ಹಿರಿಯರು ಇದ್ದಾರೋ ಅವರಿಗೆ ಜವಾಬ್ದಾರಿ ನೀಡುವಂತೆ ನಿರ್ದೇಶನ ನೀಡಿದ್ದೇನೆʼ ಎಂದರು.
ತಿರುಪತಿಯಲ್ಲಿ ಆಗುವ ಮೊದಲ ಆರತಿ ರಾಜ್ಯದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ
ತಿರುಪತಿಯಲ್ಲಿ ಮೊದಲ ಆರತಿ ಕರ್ನಾಟಕ ರಾಜ್ಯದವರಿಗೆ ಎಂಬ ತೀರ್ಮಾನದ ಬಗ್ಗೆ ಕೇಳಿದಾಗ, ʼತಿರುಪತಿಯಲ್ಲಿ ಮಹಾರಾಜರ ಕಾಲದಿಂದಲೂ ಮೊದಲ ಆರತಿ ಕರ್ನಾಟಕದ್ದಾಗಿದೆ. ಅಲ್ಲಿ ಪ್ರತಿದಿನ ಅಧಿಕಾರಿಯೊಬ್ಬರು ಆರತಿ ಪಡೆಯುತ್ತಾರೆ. ಆ ಅಧಿಕಾರಿ ಬದಲಿಗೆ ಇಲ್ಲಿಂದ ದರ್ಶನಕ್ಕೆ ಹೋಗುವ ಜನಪ್ರತಿನಿಧಿಗಳು, ನ್ಯಾಯಾಧೀಶರು, ಅಧಿಕಾರಿಗಳಿಗೆ, ಸಂಸದರು, ಮೇಯರ್, ತಹಶೀಲ್ದಾರ್ ಸೇರಿದಂತೆ ನಮ್ಮ ರಾಜ್ಯದವರಿಗೆ ಅವಕಾಶ ನೀಡಲಾಗುವುದು. ಇದು ನಿರ್ದಿಷ್ಟ ಪಕ್ಷಕ್ಕೆ ಎಂದು ಸೀಮಿತವಲ್ಲ. ಯಾವುದೇ ಪಕ್ಷದ ಜನಪ್ರತಿನಿಧಿಗಳು ಹೋದರು ಈ ಅವಕಾಶ ಅವರಿಗೆ ಸಿಗಬೇಕು. ಇದಕ್ಕೆ ನಿರ್ದಿಷ್ಟ ಮಾರ್ಗಸೂಚಿಗಳಿದ್ದು, ಅದರಂತೆಯೇ ಈ ಅವಕಾಶ ನೀಡಲಾಗುವುದು. ನಮ್ಮ ತೀರ್ಮಾನ ಕೇವಲ ಆರತಿ ವಿಚಾರಕ್ಕೆ ಮಾತ್ರ. ಉಳಿದಂತೆ ಎಲ್ಲಾ ಮಾರ್ಗಸೂಚಿಗಳು ತಿರುಪತಿ ಆಡಳಿತ ಮಂಡಳಿಯಂತೆ ಇರಲಿದೆ. ಅವರ ಮಾರ್ಗಸೂಚಿಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲʼ ಎಂದು ತಿಳಿಸಿದರು.
ಆಗಸ್ಟ್ 6ರಿಂದ ಮುಂಗಾರು ಅಧಿವೇಶನ
ಸಚಿವ ಸಂಪುಟ ಸಭೆ ಯಾವಾಗ, ದೆಹಲಿಗೆ ಹೋಗುವುದು ಯಾವಾಗ ಎಂದು ಕೇಳಿದಾಗ, ʼಆಗಸ್ಟ್ 6ರಿಂದ ಅಧಿವೇಶನ ಕರೆಯಲು ತೀರ್ಮಾನಿಸಲಾಗಿದೆ. ನಾನು ಒಂದು ದಿನ ಕೆಲಸದ ಮೇಲೆ ದೆಹಲಿಗೆ ಹೋಗಿ ಬರುತ್ತೇನೆ. ನಂತರ ನಮ್ಮ ನಾಯಕರು ಮೂರ್ನಾಲ್ಕು ದಿನಗಳಲ್ಲಿ ದಿನಾಂಕ ನಿಗದಿ ಮಾಡುತ್ತಾರೆ. ನಂತರ ನಾನು ದೆಹಲಿಗೆ ಹೋಗುವೆʼ ಎಂದು ಮಾಹಿತಿ ನೀಡಿದರು.
ಜನರ ಮನೆ ಬಾಗಿಲಿಗೆ ಸರ್ಕಾರ ಕೊಂಡೊಯ್ಯಲು ಪ್ರಜಾಸೇವೆ ಇಲಾಖೆ: ಸಿಎಂ
ಮಾಜಿ ಸಂಸದರಾದ ಎಚ್. ಹನುಮಂತಪ್ಪ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದಿ. ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿದ್ದರು. ರೈಲ್ವೇ ಆಯೋಗಕ್ಕೆ ಅಧ್ಯಕ್ಷರಾಗಿದ್ದರು. 45 ವರ್ಷಗಳಿಂದ ನನಗೆ ಆತ್ಮೀಯರಾಗಿದ್ದರು. ನಮ್ಮ ಪಕ್ಷದ ಉಪಾಧ್ಯಕ್ಷರಾಗಿ, ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ನಾನು, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್, ಡಿಸಿಎಂ ಪರಮೇಶ್ವರ್, ಸಚಿವರಾದ ಮುನಿಯಪ್ಪ ಅವರು, ಮಾಜಿ ಸಂಸದರಾದ ಎಚ್. ಹನುಮಂತಪ್ಪ ಅವರಿಗೆ ಅಂತಿಮ ನಮನ ಸಲ್ಲಿಸಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ರಾಜ್ಯ ಹಾಗೂ ರಾಷ್ಟ್ರದ ಸಮಸ್ಯೆಗಳಿಗೆ ಮಾರ್ಗದರ್ಶನ ಕೊಟ್ಟ ಹಿರಿಯ ನಾಯಕರು. ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯʼ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.