ವೈಟ್ಫೀಲ್ಡ್ನಲ್ಲಿ ವಿಶ್ವ ದರ್ಜೆಯ ಬಹುಪಯೋಗಿ ವಸ್ತು ಪ್ರದರ್ಶನ ಸಭಾಂಗಣ, ಕನ್ವೆನ್ಷನ್ ಸೆಂಟರ್ ಅಭಿವೃದ್ಧಿ: ಎಂ.ಬಿ.ಪಾಟೀಲ್
MB Patil: ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಕರ್ನಾಟಕ ವ್ಯಾಪಾರ ಉತ್ತೇಜನಾ ಸಂಸ್ಥೆ (ಕೆಟಿಪಿಒ) ಹೊಂದಿರುವ 48.35 ಎಕರೆ ಪ್ರದೇಶದಲ್ಲಿ ವಿಶ್ವ ದರ್ಜೆಯ ಕನ್ವೆನ್ಷನ್ ಸೆಂಟರ್, ಸಭಾಂಗಣ, ಪ್ರದರ್ಶನಾಂಗಣ ಇತ್ಯಾದಿಗಳಿರುವ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
-
ಬೆಂಗಳೂರು, ಸೆ.15: ರಾಜಧಾನಿಯ ಪ್ರತಿಷ್ಠಿತ ಕೈಗಾರಿಕಾ ನಗರಗಳಲ್ಲಿ ಒಂದಾಗಿರುವ ವೈಟ್ಫೀಲ್ಡ್ನಲ್ಲಿ ಕರ್ನಾಟಕ ವ್ಯಾಪಾರ ಉತ್ತೇಜನಾ ಸಂಸ್ಥೆ (ಕೆಟಿಪಿಒ) ಹೊಂದಿರುವ 48.35 ಎಕರೆ ಪ್ರದೇಶದಲ್ಲಿ ವಿಶ್ವ ದರ್ಜೆಯ ಕನ್ವೆನ್ಷನ್ ಸೆಂಟರ್, ಸಭಾಂಗಣ, ಪ್ರದರ್ಶನಾಂಗಣ ಇತ್ಯಾದಿಗಳಿರುವ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ. ಇದರಿಂದ ನಗರದಲ್ಲಿ ವಾಣಿಜ್ಯ ಮತ್ತು ವ್ಯಾಪಾರ ವಹಿವಾಟುಗಳಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (MB Patil) ಹೇಳಿದ್ದಾರೆ.
ಮಂಗಳವಾರ ಕೇಂದ್ರ ಸರ್ಕಾರದ ಭಾರತೀಯ ವ್ಯಾಪಾರ ಉತ್ತೇಜನಾ ಸಂಸ್ಥೆ (ಐಟಿಪಿಒ) ಅಧ್ಯಕ್ಷ ಜಾವೆದ್ ಅಶ್ರಫ್ ಅವರ ಜತೆ ಕೆಟಿಪಿಒ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿ ಹಾಲಿ ಇರುವ ವ್ಯವಸ್ಥೆಯ ಪರಿಶೀಲನೆ ಮತ್ತು ಖಾಲಿ ಇರುವ ಜಾಗದಲ್ಲಿ ಮಾಡಬಹುದಾದ ಹೊಸ ವ್ಯವಸ್ಥೆಗಳ ಸಾಧ್ಯತೆ ಕುರಿತು ಮಹತ್ವದ ಚರ್ಚೆ ನಡೆಸಿದರು.
ಕೆಟಿಪಿಒದಲ್ಲಿ ಶೇ. 51ರಷ್ಟು ಷೇರು ಐಟಿಪಿಒ ಹೊಂದಿದೆ. ರಾಜ್ಯ ಸರ್ಕಾರ ಶೇ.49ರಷ್ಟು ಷೇರು ಹೊಂದಿದ್ದು ಏನೇ ಅಭಿವೃದ್ಧಿಪಡಿಸಬೇಕೆಂದರೂ ಸಮನ್ವಯದಿಂದ ಕೆಲಸ ಮಾಡಬೇಕಾಗುತ್ತದೆ. ಈ ಕಾರಣಕ್ಕೆ ಇಂದು ಮಹತ್ವದ ಸಭೆ ನಡೆಯಿತು.
BESCOM Online Services: ಸಾಫ್ಟ್ವೇರ್ ಅಳವಡಿಕೆ: ಬೆಸ್ಕಾಂನ 20 ಪಟ್ಟಣಗಳಲ್ಲಿ ಸೆ.17ರವರೆಗೆ ಆನ್ಲೈನ್ ಸೇವೆ ಅಲಭ್ಯ
ಈ ಬಗ್ಗೆ ಮಾತನಾಡಿದ ಸಚಿವರು, 'ಇದೊಂದು ವಿವಿಧೋದ್ದೇಶ ಯೋಜನೆಯಾಗಿದೆ. ಇಲ್ಲಿ ಕೆಟಿಪಿಒ 50 ಎಕರೆ ಭೂಮಿ ಹೊಂದಿತ್ತು. ಮೆಟ್ರೋ ರೈಲು ನಿಗಮಕ್ಕೆ 1.65 ಎಕರೆ ಹೋದ ಮೇಲೆ 48.35 ಎಕರೆ ಉಳಿದಿದೆ. ಇಲ್ಲಿ ಖಾಲಿ ಇರುವ ಜಾಗದಲ್ಲಿ ವಿವಿಧ ಉದ್ದೇಶಗಳಿಗೆ ಬಳಸಬಹುದಾದ ಭವಿಷ್ಯದ ಆಧುನಿಕ ಪ್ರದರ್ಶನ ಸಭಾಂಗಣಗಳು, ಮೆಗಾ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಅನುಕೂಲ ಆಗುವ ಸಭಾಂಗಣಗಳು, ವಾಹನ ನಿಲುಗಡೆ ಸೇರಿದಂತೆ ಇತರ ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದಿದ್ದಾರೆ.
ಕೆಟಿಪಿಒದಲ್ಲಿ ಖಾಲಿ ಇರುವ ಜಾಗದ ಪೈಕಿ 5 ಎಕರೆ ವಿಸ್ತೀರ್ಣದಲ್ಲಿ ಉದ್ದೇಶಿತ ಜಾಗತಿಕ ಮಟ್ಟದ ವ್ಯಾಪಾರ, ಪ್ರದರ್ಶನ ಮತ್ತು ಸಮಾವೇಶ ತಾಣ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಆರ್.ಎಸ್.ಪಿ. ಕಂಪನಿ ವಿನ್ಯಾಸ ಸಿದ್ಧಪಡಿಸಿದೆ. ನಮ್ಮ ಯೋಜನೆಯು ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ಗಿಂತ ಚೆನ್ನಾಗಿರಬೇಕು. ಹೀಗಾಗಿ ಆರ್.ಎಸ್.ಪಿ. ಕಂಪನಿಗೆ ಭೇಟಿ ನೀಡಿ, ಇಡೀ ಯೋಜನೆಯನ್ನು ಮರುವಿನ್ಯಾಸ ಮಾಡುವಂತೆ ಸೂಚಿಸಲಾಗಿದೆ. ಜತೆಗೆ ದೆಹಲಿಯ ಭಾರತ ಮಂಟಪಂ ಮತ್ತು ಯಶೋಭೂಮಿ ಯೋಜನೆಗಳಲ್ಲಿ ಇರುವ ದೋಷಗಳ ಕಡೆಗೆ ಗಮನಹರಿಸಿ, ಅದು ನಮ್ಮಲ್ಲಿ ಮರುಕಳಿಸದಂತೆ ನೋಡಿಕೊಳ್ಳಲು ಹೇಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಈ ಜಾಗದಲ್ಲಿ 2002ರಲ್ಲಿ ಕಟ್ಟಿರುವ ಒಂದು ವಸ್ತು ಪ್ರದರ್ಶನ ಸಭಾಂಗಣ ಮತ್ತು 2024ರಲ್ಲಿ ನಿರ್ಮಿಸಿರುವ ಇನ್ನೊಂದು ವಸ್ತು ಪ್ರದರ್ಶನ ಸಭಾಂಗಣವಿದೆ. ಆದರೆ ಇವು ಇಂದಿನ ಅಗತ್ಯಗಳಿಗೆ ಸಾಲುತ್ತಿಲ್ಲ. ಆದ್ದರಿಂದ ನೆಲಮಹಡಿ ಮತ್ತು ಮೇಲ್ಮಹಡಿಯಲ್ಲಿ ತಲಾ 10 ಸಾವಿರ ಚದರ ಮೀಟರ್ ವಿಸ್ತೀರ್ಣದ (ಒಟ್ಟು 20 ಸಾವಿರ ಚದರ ಮೀಟರ್) ಅತ್ಯಾಧುನಿಕ ವಸ್ತು ಪ್ರದರ್ಶನಾಲಯ ಮತ್ತು ಕನ್ವೆನ್ಷನ್ ಸೆಂಟರ್ ಹಾಗೂ ಸಭಾಂಗಣಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಇಲ್ಲಿ 500 ಕಾರುಗಳ ನಿಲುಗಡೆಗೆ ವ್ಯವಸ್ಥೆ ಇರಲಿದೆ ಎಂದು ಅವರು ಹೇಳಿದ್ದಾರೆ.
ಐದು ಎಕರೆ ಜಾಗದಲ್ಲಿ ಮೈದಾಳಲಿರುವ ಉದ್ದೇಶಿತ ಸಭಾಂಗಣದಲ್ಲಿ ಸಮಾವೇಶ, ಉತ್ಪನ್ನಗಳ ಬಿಡುಗಡೆ, ಸಭಾಂಗಣಗಳು, ವಾಣಿಜ್ಯ ಪ್ರದರ್ಶನ, ವ್ಯಾಪಾರ ಸಂಬಂಧಿ ಕಾರ್ಯಕ್ರಮಗಳು, ಮೆಗಾ ಸಂಗೀತ ಕಛೇರಿಗಳಿಗೆ ಅವಕಾಶ ಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಮಾಸ್ಟರ್ ಪ್ಲ್ಯಾನ್ ಕುರಿತೂ ಚರ್ಚಿಸಲಾಯಿತು. ಜತೆಗೆ ಹಾಲಿ ಇರುವ ಎರಡು ಸಭಾಂಗಣಗಳಲ್ಲಿ ಒಂದು ಹಳೆಯದಾಗಿದೆ. ಇದನ್ನು ಹಾಗೆಯೇ ಉಳಿಸಿಕೊಳ್ಳಬೇಕೇ ಅಥವಾ ಬೇರೇನು ಮಾಡಬೇಕು ಎನ್ನುವ ಚಿಂತನೆಯೂ ಇದೆ. ಒಟ್ಟಿನಲ್ಲಿ ಈ ಸ್ಥಳದಲ್ಲಿ ಜಿಯೋಗಿಂತ ಒಳ್ಳೆಯ ಸೌಕರ್ಯ ಬರಬೇಕು ಎನ್ನುವುದು ಸರ್ಕಾರದ ಬಯಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ ಕುಂದಲಹಳ್ಳಿ ಮೆಟ್ರೋ ನಿಲ್ದಾಣ ಹಾಗೂ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ 14 ಎಕರೆ ಖಾಲಿ ಜಾಗವನ್ನು ಮಾನಿಟೈಸ್ ಮಾಡುವ ಬಗ್ಗೆಯೂ ಚರ್ಚಿಸಲಾಯಿತು. ಈ ಸಂಬಂಧ ಸೂಕ್ತ ಸಲಹೆ ನೀಡಲು ವಹಿವಾಟು ಸಲಹೆಗಾರರನ್ನು ನೇಮಿಸಲು ತೀರ್ಮಾನಿಸಲಾಯಿತು.
ಪಿಎಫ್ ಖಾತೆದಾರರಿಗೆ ಗುಡ್ನ್ಯೂಸ್; ಇನ್ಮುಂದೆ ವಾಟ್ಸ್ಆ್ಯಪ್ನಲ್ಲೇ ಮಾಹಿತಿ: ಅಧಿಕೃತ ಚಾನೆಲ್ ಆರಂಭಿಸಿದ ಇಪಿಎಫ್ಒ
ಸಭೆಯಲ್ಲಿ ಐಟಿಪಿಒ ಅಧ್ಯಕ್ಷ ಜಾವೆದ್ ಅಶ್ರಫ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಐಟಿಪಿಒ ವ್ಯವಸ್ಥಾಪಕ ನಿರ್ದೇಶಕ ನೀರಜ್ ಕರ್ವಾಲ್ , ಕೆಟಿಪಿಒ ವ್ಯವಸ್ಥಾಪಕ ನಿರ್ದೇಶಕ ಬಿ ಕೆ ಶಿವಕುಮಾರ್ ಭಾಗವಹಿಸಿದ್ದರು.