ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ವಾಜಪೇಯಿ, ನರೇಂದ್ರ ಮೋದಿ ಕಾಲಘಟ್ಟದಲ್ಲಿ ಡಾ.ಅಂಬೇಡ್ಕರ್‌ ಅವರಿಗೆ ಅತ್ಯುನ್ನತ ಗೌರವ ಅರ್ಪಿಸಲಾಗಿದೆ: ಜೋಶಿ

Pralhad Joshi: ಸ್ವಾತಂತ್ರ್ಯ ಪೂರ್ವದಿಂದಲೂ ಡಾ.ಅಂಬೇಡ್ಕರ್ ಅವರು ಅಧಿಕಾರಸ್ಥರಿಂದ ಅವಮಾನಕ್ಕೆ ಒಳಗಾಗುತ್ತಲೇ ಬಂದರು. ವಾಜಪೇಯಿ ಮತ್ತು ನರೇಂದ್ರ ಮೋದಿ ಅವರ ಕಾಲಘಟ್ಟದಲ್ಲಿ ಅವರಿಗೆ ಅತ್ಯುನ್ನತ ಗೌರವ ಅರ್ಪಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್ ಅವರಿಗೆ ಎನ್‌ಡಿಎ ಸರ್ಕಾರದಿಂದಲೇ ಗೌರವ: ಜೋಶಿ

Profile Siddalinga Swamy Apr 14, 2025 6:38 PM

ಹುಬ್ಬಳ್ಳಿ: ಸ್ವಾತಂತ್ರ್ಯ ಪೂರ್ವದಿಂದಲೂ ಆಡಳಿತಾರೂಢರಿಂದ ಅವಗಣನೆಗೆ ಒಳಗಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಎನ್‌ಡಿಎ ಸರ್ಕಾರವೇ ಹೆಚ್ಚಿನ ಗೌರವ ಸಮರ್ಪಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದರು. ಹುಬ್ಬಳ್ಳಿಯಲ್ಲಿ ಇಂದು ಅಂಬೇಡ್ಕರ್ ಜಯಂತಿ ಪ್ರಯುಕ್ತ ವಿವಿಧೆಡೆ ಸಂವಿಧಾನ ಶಿಲ್ಪಿಯ ಪ್ರತಿಮೆ, ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದಲೂ ಅಂಬೇಡ್ಕರ್, ಅಧಿಕಾರಸ್ಥರಿಂದ ಅವಮಾನಕ್ಕೆ ಒಳಗಾಗುತ್ತಲೇ ಬಂದರು. ವಾಜಪೇಯಿ ಮತ್ತು ನರೇಂದ್ರ ಮೋದಿ ಅವರ ಕಾಲಘಟ್ಟದಲ್ಲಿ ಅವರಿಗೆ ಅತ್ಯುನ್ನತ ಗೌರವ ಅರ್ಪಿಸಲಾಗಿದೆ ಎಂದರು.

ವಾಜಪೇಯಿ ಅವರು ವಿಪಿ ಸಿಂಗ್ ಸರ್ಕಾರದ ಮೇಲೆ ಒತ್ತಡ ಹೇರಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ಗೌರವ ಪುರಸ್ಕಾರ ಘೋಷಿಸಿಸುವಲ್ಲಿ ಸಫಲರಾದರು. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಲೇ 2015ರಲ್ಲಿ ನವೆಂಬರ್‌ 26ರಂದು ʼಸಂವಿಧಾನ ದಿವಸ್‌ʼ ಆಗಿ ಆಚರಣೆಗೆ ತಂದು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಸಿತು ಎಂದು ಪ್ರತಿಪಾದಿಸಿದರು.

1949ರ ನವೆಂಬರ್‌ 26ರಂದು ಭಾರತದ ಸಂವಿಧಾನ ಸಭೆಯಲ್ಲಿ ಡಾ.ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಮತ್ತು ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಸಲೆಂದು ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ 2015ರಲ್ಲಿ ನ.26ರ ದಿನವನ್ನು ʼಸಂವಿಧಾನ ದಿನ-ರಾಷ್ಟ್ರೀಯ ಕಾನೂನು ದಿನವಾಗಿʼ ಆಚರಣೆಗೆ ತಂದರು ಎಂದು ಸಚಿವ ಜೋಶಿ ಸ್ಮರಿಸಿದರು.

ದೇಶದಲ್ಲಿ ಸರ್ವರ ರಕ್ಷಣೆ, ಸಮಾನತೆ, ಸರ್ವತೋಮುಖ ಏಳಿಗೆಗೆ ಸಂವಿಧಾನದ ಮೂಲಕ ಅಡಿಪಾಯ ಹಾಕಿಕೊಟ್ಟ ಅಂಬೇಡ್ಕರ್‌ ಅವರಿಗೆ ಬಿಜೆಪಿ ಯಾವತ್ತೂ ಅತ್ಯುನ್ನತ ಗೌರವ ಸಲ್ಲಿಸುತ್ತ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಅಂಬೇಡ್ಕರ್ ಅವರ ಐದು ಪವಿತ್ರ ಸ್ಥಳಗಳನ್ನು ಪಂಚತೀರ್ಥಗಳನ್ನಾಗಿ ಅಭಿವೃದ್ಧಿಪಡಿಸಿದರು ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಪರಿಶಿಷ್ಟ ಸಮುದಾಯದ ಸುಮಾರು 8.4 ಕೋಟಿ ವಿದ್ಯಾರ್ಥಿಗಳಿಗೆ ₹44700 ಕೋಟಿಗೂ ಹೆಚ್ಚು ವಿದ್ಯಾರ್ಥಿ ವೇತನ ಒದಗಿಸಿದ್ದಾರೆ. ಮುದ್ರಾ ಯೋಜನೆಯಡಿ ₹34.6 ಲಕ್ಷ ಕೋಟಿಗೂ ಅಧಿಕ ಸಾಲ ಸೌಲಭ್ಯ ಕಲ್ಪಿಸಿದ್ದಾರೆ. ವಿವಿಧ ಯೋಜನೆಗಳಡಿ 1.5 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. 3 ಕೋಟಿಗೂ ಅಧಿಕ ಪರಿಶಿಷ್ಟ ಫಲಾನುಭವಿಗಳಿಗೆ ಉಜ್ವಲ ಗ್ಯಾಸ್‌ ವಿತರಿಸಿದ್ದಾರೆ. ಪರಿಶಿಷ್ಟ ಸಮುದಾಯದ ಪರ ಹೀಗೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಸಾಕಾರಗೊಳಿಸಿದ್ದಾರೆ ಎಂದು ತಿಳಿಸಿದರು.

ಮೇರು ನಾಯಕನ ಆದರ್ಶ ಅಳವಡಿಸಿಕೊಳ್ಳೋಣ

ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದು, ಅವರ ಬದುಕು, ತತ್ವಾದರ್ಶಗಳು, ಚಿಂತನೆಗಳು ಹಾಗೂ ಸಾಮಾಜಿಕ ಅಸಮಾನತೆಯ ವಿರುದ್ಧದ ಹೋರಾಟ ನಮಗೆ ಸದಾ ಪ್ರೇರಣೆ ಎಂದು ಬಣ್ಣಿಸಿದ ಸಚಿವರು, ಪ್ರಗತಿ, ಸಮಾನತೆಯ ಕನಸು ಕಂಡ ಈ ಮೇರು ನಾಯಕನ ಜನ್ಮದಿನದ ಶುಭ ಸಂದರ್ಭದಲ್ಲಿ ಅವರ ಜೀವನದ ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.

ಜಯಂತಿ ಅರ್ಥಪೂರ್ಣ ಆಚರಣೆ

ಅಂಬೇಡ್ಕರ್‌ ಜಯಂತಿ ದಿನವಾದ ಇಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಚಲವಾದಿ ಮಹಾಸಭಾದವರೊಂದಿಗೆ ಸೇರಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ-ಬ್ಯಾಗ್‌ ಹಾಗೂ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಉಪಹಾರ ವಿತರಿಸುವ ಮೂಲಕ ಅರ್ಥಪೂರ್ಣ ಆಚರಣೆಗೆ ಸಾಕ್ಷಿಯಾದರು.

400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬ್ಯಾಗ್ -ಬುಕ್ ವಿತರಣೆ

ಸಂವಿಧಾನ ಶಿಲ್ಪಿಯ ಆಶಯಕ್ಕೆ ಬದ್ಧತೆ ತೋರುವಂತೆ ಹುಬ್ಬಳ್ಳಿಯ ಆನಂದನಗರದ ಅಂಬೇಡ್ಕರ್‌ ವೃತ್ತದಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಠ್ಯ-ಪುಸ್ತಕ ಮತ್ತು ಬ್ಯಾಗ್‌ ಸಹ ವಿತರಿಸಿದರು. ಬಳಿಕ ಕಿಮ್ಸ್‌ ಸಂಶೋಧನಾ ಸಂಸ್ಥೆ ಆವರಣದಲ್ಲಿ ದಲಿತ ಮುಖಂಡರೊಂದಿಗೆ ಸೇರಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.

ಈ ಸುದ್ದಿಯನ್ನೂ ಓದಿ | RRB Recruitment 2025: ಎಸ್‌ಎಸ್‌ಎಲ್‌ಸಿ, ಐಟಿಐ ಪಾಸಾದವರಿಗೆ ಗುಡ್‌ನ್ಯೂಸ್‌; ರೈಲ್ವೆಯಲ್ಲಿದೆ ಬರೋಬ್ಬರಿ 9,970 ಹುದ್ದೆ

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಇಮ್ರಾನ್‌ ಎಲಿಗಾರ, ದಲಿತ ಮುಖಂಡ ಶ್ರೀಧರ ಕಂದಗಲ್‌, ಬಿಜೆಪಿ ಮಂಡಳ ಅಧ್ಯಕ್ಷ ಮಂಜುನಾಥ ಕಾಟಕರ, ಮಹೇಶ ಘಾಟಗೆ, ರಾಜು ಕಾಳೆ, ಅನುಪ ಬಿಜವಾಡ, ವೆಂಕಟೇಶ ಕಾಟವೇ, ಸಮಗಾರ ಹರಳಯ್ಯ ಸಮಾಜ ಸುಧಾರಣಾ ಸಮಿತಿ ಅಧ್ಯಕ್ಷ ರವಿ ಸಾಮೋಜಿ ಹಾಗೂ ದಲಿತ ಮುಖಂಡರು, ಚಿಂತಕರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.