100 ಜನರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಹೊರಟ ಅರವಿಂದ್ ಕೇಜ್ರಿವಾಲ್ಗೆ ದೆಹಲಿ ಪೊಲೀಸರಿಂದ ಬ್ರೇಕ್; ʼʼನಾವೇನು ಉಗ್ರರಲ್ಲʼʼ ಎಂದ ಆಪ್ ನಾಯಕರು
ಪೆಟ್ರೋಲ್ ಗೆ ಎಥೆನಾಲ್ ಮಿಶ್ರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಚರ್ಚೆ ನಡಸಲು ಸುಮಾರು 100 ಜನರೊಂದಿಗೆ ಮೆರವಣಿಗೆ ಹೊರಟಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು ಮಂಗಳವಾರ ದೆಹಲಿ ಪೊಲೀಸರು ತಡೆದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಭಯೋತ್ಪಾದಕರಲ್ಲ. ಅವರನ್ನು ಭೇಟಿ ಮಾಡಲು ಸಮಯ ಕೇಳಿ ಕಳುಹಿಸಿದ್ದ ಪತ್ರಕ್ಕೆ ಪ್ರತಿಕ್ರಿಯೆ ಸಿಗದ ಕಾರಣ ಮೆರವಣಿಗೆಯಲ್ಲಿ ಬರಬೇಕಾಯಿತು ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಭೇಟಿ ಮಾಡಲು ಸುಮಾರು 100 ಜನರೊಂದಿಗೆ ಮೆರವಣಿಗೆ ಹೊರಟಿದ್ದ ದೆಹಲಿಯ (Delhi) ಮಾಜಿ ಮುಖ್ಯಮಂತ್ರಿ, ಆಪ್ ನಾಯಕ (Aap leader) ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಮಂಗಳವಾರ ದೆಹಲಿ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಮಾತನಾಡಿದ ಅವರ, ನಾವು ಭಯೋತ್ಪಾದಕರಲ್ಲ. ಪೆಟ್ರೋಲ್ ಗೆ ಎಥೆನಾಲ್ (E20) ಮಿಶ್ರಣದಿಂದ ಉಂಟಾಗುವ ಸಮಸ್ಯೆಗೆ ಸಂಬಂಧಿಸಿದಂತೆ ಅವರನ್ನು ಭೇಟಿ ಮಾಡಲು ಬಂದಿದ್ದೇವೆ ಎಂದು ಅವರಿಗೆ ತಿಳಿಸಿ ಎಂದು ಹೇಳಿದರು.
ಎಥೆನಾಲ್ ಮಿಶ್ರಣದ ಪೆಟ್ರೋಲ್ ವಿರುದ್ಧ ಲಕ್ಷಾಂತರ ಅರ್ಜಿಗಳನ್ನು ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಕೋರಿ ಕಳುಹಿಸಿರುವ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ ಅರ್ಜಿಗಳನ್ನು ವೈಯಕ್ತಿಕವಾಗಿ ಅವರಿಗೆ ಹಸ್ತಾಂತರಿಸಲು ಬಂದಿರುವುದಾಗಿ ಹೇಳಿದ ಅರವಿಂದ್ ಕೇಜ್ರಿವಾಲ್, ಇ 20 ಇಂಧನ ಸಮಸ್ಯೆಗೆ ಸಂಬಂಧಿಸಿದಂತೆ ನಾವು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಬಯಸುತ್ತೇವೆ. ದಯವಿಟ್ಟು ಅವರಿಗೆ ತಿಳಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿದರು.
ಆಪ್ ದೆಹಲಿ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ಮಾತನಾಡಿ, ಕೇಜ್ರಿವಾಲ್ ಅವರು ಲಕ್ಷಾಂತರ ಅರ್ಜಿಗಳೊಂದಿಗೆ ಬಂದಿದ್ದಾರೆ. ಅವರು ಪ್ರಧಾನಿಯವರೊಂದಿಗೆ ಎಥೆನಾಲ್ ಕುರಿತು ಚರ್ಚೆ ಮಾಡಲು ಬಯಸುತ್ತಾರೆ. ಈ ಬಗ್ಗೆ ನಾವು ಪತ್ರಿಕಾಗೋಷ್ಠಿಗಳಲ್ಲಿ ಪ್ರಧಾನಿಗೆ ಪದೇ ಪದೇ ಹೇಳಿದ್ದೇವೆ ಎಂದರು.
AAP National Convenor Arvind Kejriwal leads a march to the PM's residence against mandatory E20 fuel, demanding consumer choice and lower fuel prices.#E20HataoVehicleBachao #ArvindKejriwal #AAP #PetrolPrice
— Yogendra Singh Rajput (@yogirajput12) August 4, 2026
VC:ANI pic.twitter.com/q6pejfsiHH
ಪ್ರಧಾನಿ ನಿವಾಸದ ಬಳಿ ಇತ್ತೀಚೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಕೋರಿ ಪ್ರತಿಭಟನೆ ನಡೆಸಿದ್ದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿ ಪೊಲೀಸರು ಕೆಲವು ಗಂಟೆಗಳ ಕಾಲ ಬಂಧಿಸಿದ್ದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅರವಿಂದ ಕೇಜ್ರಿವಾಲ್, 100 ಜನರೊಂದಿಗೆ ಮಂಗಳವಾರ ಪ್ರಧಾನಿಯವರ ನಿವಾಸಕ್ಕೆ ಹೋಗಿ ಸಾರ್ವಜನಿಕರು ಸಹಿ ಮಾಡಿದ ಅರ್ಜಿಗಳನ್ನು ವೈಯಕ್ತಿಕವಾಗಿ ಹಸ್ತಾಂತರಿಸುತ್ತೇನೆ ಎಂದು ಹೇಳಿದ್ದರು.
ಅವರೊಂದಿಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಿದ್ದೇನೆ. ಜನರು ತಮ್ಮ ವಾಹನಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಇದೆಲ್ಲದರ ಹೊರತಾಗಿಯೂ ಸರ್ಕಾರ ಇದನ್ನು ಮುಂದುವರಿಸುತ್ತಿದೆ. ಇದರ ಹಿಂದೆ ಯಾವುದೋ ಗುಪ್ತ ಕಾರ್ಯಸೂಚಿ ಇದೆ ಎಂದು ಆರೋಪಿಸಿದರು.
ಇ20 ಪೆಟ್ರೋಲ್ ಬಗ್ಗೆ ಕಳವಳಗಳ ಕುರಿತು ಚರ್ಚಿಸಲು ಹಲವು ಬಾರಿ ಪ್ರಧಾನಿಯವರ ಅಪಾಯಿಂಟ್ಮೆಂಟ್ ಕೋರಿ ಪತ್ರ ಕಳುಹಿಸಲಾಗಿದೆ. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ವೈಯಕ್ತಿಕವಾಗಿ ಅರ್ಜಿಗಳನ್ನು ಹಸ್ತಾಂತರಿಸಲು ಹೋಗುವುದಾಗಿ ತಿಳಿಸಿದರು.
ಎಥೆನಾಲ್ ಮಿಶ್ರಿತ ಪೆಟ್ರೋಲ್ ವಿರುದ್ಧ ನಾವು ನಡೆಸಿರುವ ಮನವಿ ಅಭಿಯಾನದಲ್ಲಿ ಅರ್ಜಿಗೆ 2 ಲಕ್ಷಕ್ಕೂ ಹೆಚ್ಚು ಜನರು ಸಹಿ ಹಾಕಿದ್ದಾರೆ. ಕಳೆದ ವಾರ ಆಪ್ ಆಯೋಜಿಸಿದ್ದ ವರ್ಚುವಲ್ ಸಭೆಯಲ್ಲಿ ಹೆಚ್ಚಿನ ಜನರು ಭಾಗವಹಿಸಿದ್ದು ಒಂದು ದಾಖಲೆಯಾಗಿದೆ ಎಂದರು.
ಆಪ್ ಮೆರವಣಿಗೆ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಬಿಜೆಪಿ ಅಧ್ಯಕ್ಷ ಹರ್ಷ್ ಮಲ್ಹೋತ್ರಾ ಅವರು ಪ್ರತಿಕ್ರಿಯಿಸಿ ಕೇಜ್ರಿವಾಲ್ ಅವರು ಪ್ರಧಾನಿ ನಿವಾಸಕ್ಕೆ ಮೆರವಣಿಗೆ ಹೊರಟಿರುವುದು ಅವರು ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ಸ್ಪರ್ಧೆಯ ಭಾಗವಾಗಿದೆ. ಮೊದಲು ಅವ್ಯವಸ್ಥೆ ಸೃಷ್ಟಿಸಿ ಅನಂತರ ಬಲಿಪಶುವಿನಂತೆ ಆಡುವುದು ಕೇಜ್ರಿವಾಲ್ ಅವರ ರಾಜಕೀಯ ಶೈಲಿಯಾಗಿದೆ. ಅವರಿಗೆ ಗೊತ್ತಿದೆ ಅನುಮತಿ ಇಲ್ಲದೆ ಪ್ರಧಾನಿ ನಿವಾಸಕ್ಕೆ ಹೋದರೆ ಅಲ್ಲಿ ಪೊಲೀಸರು ಅವರನ್ನು ತಡೆಯುತ್ತಾರೆ ಎಂಬುದು. ಬಳಿಕ ಅವರು ಸರ್ಕಾರ ಅವರೊಂದಿಗೆ ಮಾತುಕತೆ ನಡೆಸಲು ನಿರಾಕರಿಸಿದೆ ಎಂದು ಹೇಳಿಕೊಳ್ಳುತ್ತಾರೆ ಎಂದರು.
Priyanka Chopra: ಮಗಳಿಗೆ 'ಸರ್ವ ಮಂಗಲ ಮಾಂಗಲ್ಯೇʼ ಶ್ಲೋಕ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ; ನೆಟ್ಟಿಗರಿಂದ ಮೆಚ್ಚುಗೆ
ಬಿಜೆಪಿ ಸಂಸದ ತರುಣ್ ಚುಗ್ ಅವರು ಮಾತನಾಡಿ, ಇದೊಂದು ಅರ್ಥಹೀನ ಮೆರವಣಿಗೆ. ಅವರ ನಡವಳಿಕೆ ಭಾರತದ ರೈತರ ವಿರುದ್ಧವಾಗಿದೆ. ಎಥೆನಾಲ್ ಎಂದರೆ ರೈತರಿಗೆ ರಕ್ಷಣೆಯಾಗಿದೆ ಎಂದರು. ಅರವಿಂದ್ ಕೇಜ್ರಿವಾಲ್ ಅಥವಾ ಅವರ ಪಕ್ಷದ ಕಡೆಯಿಂದ ಮೆರವಣಿಗೆಗೆ ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.