ಎಚ್ಎಂಟಿ ಕೈಗಡಿಯಾರಗಳ ಇಂಡಿಪೆಂಡೆನ್ಸ್ ಡೇ ಸೇಲ್; ಎರಡೂವರೆ ಕಿಲೋ ಮೀಟರ್ ಕ್ಯೂ ನಿಂತು ಮುಗಿಬಿದ್ದು ಖರೀದಿಸಿದ ಜೆನ್ ಝೀಗಳು; ಒಂದೇ ದಿನ 35 ಲಕ್ಷ ರುಪಾಯಿ ವಹಿವಾಟು!
HD Kumaraswamy: ಎಚ್ಎಂಟಿ ಕೈಗಡಿಯಾರಗಳ ಬಗ್ಗೆ ಜನರಲ್ಲಿ ಇವತ್ತಿಗೂ ಅಭಿಮಾನ ಗೌರವ ಇದೆ. ಹಿಂದೆ ಎಚ್ಎಂಟಿ ಗಡಿಯಾರ ಕಟ್ಟುವುದು ಎಂದರೆ ಹೆಮ್ಮೆ ಮತ್ತು ಪ್ರತಿಷ್ಠೆಯ ಸಂಗತಿಯಾಗಿತ್ತು. ಆ ವೈಭವವನ್ನು ಮರಳಿ ತರುವುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ) -
ಹಾಸನ, ಆ.17: ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಎಚ್ಎಂಟಿ ಕೈಗಡಿಯಾರಗಳ ಮಾರಾಟ ದಾಖಲೆಯ ಪ್ರಮಾಣದಲ್ಲಿ ಆಗಿದ್ದು ಒಂದೇ ದಿನ ಸುಮಾರು 35 ಲಕ್ಷ ರುಪಾಯಿಗೂ ಹೆಚ್ಚು ವಹಿವಾಟು ನಡೆದಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಿಳಿಸಿದರು. ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸ್ವಾತಂತ್ರ್ಯ ದಿನದ ಪ್ರಯುಕ್ತ ಎಚ್ಎಂಟಿ ಕಂಪನಿಯು ವಿಶೇಷ ಆವೃತ್ತಿಯ ಕೆಲ ಅಪರೂಪದ ಕೈಗಡಿಯಾರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಅಂದು ವಾಚ್ಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು ಸುಮಾರು ಎರಡೂವರೆ ಕಿಲೋ ಮೀಟರ್ಗೂ ಹೆಚ್ಚು ದೂರ ಸಾಲಿನಲ್ಲಿ ನಿಂತು ಖರೀದಿ ಮಾಡಿದರು. ಇದನ್ನು ಕಂಡು ನಾನು ಆಶ್ಚರ್ಯಚಕಿತನಾಗಿದ್ದೆ ಎಂದರು.
ಅಂದು ನಮ್ಮ ಕಡೆಯಿಂದ ಸಾವಿರಾರು ಕೈ ಗಡಿಯಾರಗಳು ಮಾರಾಟವಾಗಿದ್ದು, ಒಂದೇ ದಿನ 35 ಲಕ್ಷ ರುಪಾಯಿ ವಹಿವಾಟು ನಡೆದಿರುವುದು ಕಂಪನಿಯನ್ನು ಪುನಶ್ಚೇತನಗೊಳಿಸುವ ನಮ್ಮ ಉದ್ದೇಶಕ್ಕೆ ಮತ್ತಷ್ಟು ಬಲ ನೀಡಿದೆ ಎಂದರು.
ಎಚ್ಎಂಟಿ ಗಡಿಯಾರಗಳ ಬಗ್ಗೆ ಜನರಲ್ಲಿ ಇವತ್ತಿಗೂ ಅಭಿಮಾನ ಗೌರವ ಇದೆ. ಹಿಂದೆ ಎಚ್ಎಂಟಿ ಗಡಿಯಾರ ಕಟ್ಟುವುದು ಎಂದರೆ ಹೆಮ್ಮೆ ಮತ್ತು ಪ್ರತಿಷ್ಠೆಯ ಸಂಗತಿಯಾಗಿತ್ತು. ಆ ವೈಭವವನ್ನು ಮರಳಿ ತರುವುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಖಾನೆಗೆ ಮರುಜೀವ ನೀಡುವ ನಿಟ್ಟಿನಲ್ಲಿ ಎರಡು ವರ್ಷಗಳಿಂದ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಈ ಕುರಿತು ಯೋಜನಾ ಆಯೋಗದ ಸದಸ್ಯ ವಿ.ಕೆ. ಸಾರಸ್ವತ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಠದ ಸಮಿತಿಯನ್ನು ರಚಿಸಲಾಗಿತ್ತು. ಈಗಾಗಲೇ ಸಮಿತಿ ವರದಿಯನ್ನು ನೀಡಿ ಕೆಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ. ಅದರಂತೆಯೇ ಕಾರ್ಖಾನೆಗೆ ಮರುಜೀವ ನೀಡಲು ಈಗಾಗಲೇ ಕೇಂದ್ರದ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರೊಂದಿಗೂ ಕೂಡ ಮತಕತೆ ನಡೆಸಿದ್ದೇನೆ ಎಂದು ಸಚಿವರು ಮಾಹಿತಿ ನೀಡಿದರು.
ನೈಸ್ ಯೋಜನೆಯನ್ನು ಟೇಕ್ ಓವರ್ ಮಾಡಲು ಸಂಚು ನಡೆಯುತ್ತಿದೆ: ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
ಯುವಕರಿಗೆ ಕೃತಜ್ಞತೆ ಸಲ್ಲಿಸಿದ ಸಚಿವರು
ದೊಡ್ಡ ಪ್ರಮಾಣದಲ್ಲಿ ಯುವಕರು ಸ್ವಾತಂತ್ರ್ಯ ದಿನದಂದು ವಾಚ್ಗಳನ್ನು ಖರೀದಿ ಮಾಡಿದ್ದಾರೆ. ವಯಸ್ಸಿನ ಹಂಗಿಲ್ಲದೆ ಹಿರಿಯರು, ಕಿರಿಯರು, ಮಕ್ಕಳು ಕೂಡ ಸಾಲಿನಲ್ಲಿ ನಿಂತು ಗಡಿಯಾರಗಳನ್ನು ಖರೀದಿ ಮಾಡಿದ್ದಾರೆ. ಎಚ್ಎಂಟಿಯ ಮೇಲೆ ಅವರೆಲ್ಲರೂ ಇರಿಸಿರುವ ಅಭಿಮಾನಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಮುಖ್ಯವಾಗಿ ಯುವಜನತೆ ನಮ್ಮ ಗಡಿಯಾರಗಳಿಗೆ ಅತಿ ಹೆಚ್ಚು ಅಭಿಮಾನ ತೋರುತ್ತಿದ್ದಾರೆ, ಅವರ ಬೆಂಬಲ ಹೀಗೆಯೇ ಇರಲಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೋರಿದರು.