ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪೊಲೀಸ್ ಸಿಬ್ಬಂದಿ ಆರೋಗ್ಯ, ಕ್ಷೇಮಾಭಿವೃದ್ಧಿಗೆ ‘ಪ್ರಾಜೆಕ್ಟ್ ಖುಷಿʼ: ಪ್ರಿಯಾಂಕ್ ಖರ್ಗೆ ಮಾಹಿತಿ

Priyank Kharge: ಪೊಲೀಸ್ ಸಿಬ್ಬಂದಿಯ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಕ್ಷೇಮ, ಉತ್ತಮ ಜೀವನಶೈಲಿ ಹಾಗೂ ಒತ್ತಡ ನಿರ್ವಹಣೆಯಂತಹ ಅಂಶಗಳಿಗೂ ಆದ್ಯತೆ ನೀಡುವ ಅಗತ್ಯವಿದೆ. ‘ಪ್ರಾಜೆಕ್ಟ್ ಖುಷಿʼಯಂತಹ ಉಪಕ್ರಮಗಳು ನಮ್ಮ ಪೊಲೀಸ್ ಪಡೆಯನ್ನು ಇನ್ನಷ್ಟು ಸದೃಢ, ಆರೋಗ್ಯಕರ ಹಾಗೂ ಸವಾಲುಗಳನ್ನು ಎದುರಿಸುವಲ್ಲಿ ಸ್ಥಿತಿಸ್ಥಾಪಕವಾಗಿಸಲು ಸಹಕಾರಿಯಾಗಲಿವೆʼ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ಆರೋಗ್ಯ, ಕ್ಷೇಮಾಭಿವೃದ್ಧಿಗೆ ‘ಪ್ರಾಜೆಕ್ಟ್ ಖುಷಿʼ

ಗೃಹ ಸಚಿವ ಪ್ರಿಯಾಂಕ್ ಖರ್ಗೆ (ಸಂಗ್ರಹ ಚಿತ್ರ) -

Profile
Siddalinga Swamy Sep 8, 2026 6:39 PM

ಬೆಂಗಳೂರು, ಸೆ.08: ಬೆಂಗಳೂರು ನಗರ ಪೊಲೀಸರು ತಮ್ಮ ಸಿಬ್ಬಂದಿಯ ದೀರ್ಘಕಾಲೀನ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಯನ್ನು ಬೆಂಬಲಿಸುವ ಉದ್ದೇಶದಿಂದ ‘ಪ್ರಾಜೆಕ್ಟ್ ಖುಷಿʼ ಎಂಬ ವ್ಯವಸ್ಥಿತ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ ಎಂದು ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.

ಈ ಕಾರ್ಯಕ್ರಮದ ಮೊದಲ ಹಂತವನ್ನು ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ವಿಭಾಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಒಟ್ಟು 600 ಪೊಲೀಸ್ ಸಿಬ್ಬಂದಿಯನ್ನು ಇದರ ವ್ಯಾಪ್ತಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ. ಪ್ರತಿ ಬ್ಯಾಚ್‌ಗೆ ಮೂರು ತಿಂಗಳ ಅವಧಿಯ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಆರೋಗ್ಯ ತಪಾಸಣೆ, ತಜ್ಞರಿಂದ ಮಾರ್ಗದರ್ಶನದ ಅವಧಿಗಳು ಹಾಗೂ ಡಿಜಿಟಲ್ ತೊಡಗಿಸಿಕೊಳ್ಳುವಿಕೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಪೊಲೀಸ್ ಸಿಬ್ಬಂದಿಯ ಮುಂಜಾಗ್ರತಾ ಆರೋಗ್ಯ ಆರೈಕೆ, ಪೌಷ್ಟಿಕಾಂಶ, ದೈಹಿಕ ಚಟುವಟಿಕೆ, ಉತ್ತಮ ನಿದ್ರೆ ಹಾಗೂ ಒತ್ತಡ ನಿರ್ವಹಣೆ ಸೇರಿದಂತೆ ದೀರ್ಘಕಾಲೀನ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಗೆ ಅಗತ್ಯವಾದ ಜೀವನಶೈಲಿಯ ವಿವಿಧ ಅಂಶಗಳ ಕುರಿತು ಕಾರ್ಯಕ್ರಮದಲ್ಲಿ ಗಮನಹರಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಉತ್ತಮ ಫಲಿತಾಂಶ

ʼಪ್ರಾಜೆಕ್ಟ್ ಖುಷಿʼಯ ಭಾಗವಾಗಿ ಈ ಹಿಂದೆ ನಡೆದ ಪ್ರಾಯೋಗಿಕ ಕಾರ್ಯಕ್ರಮವು ಉತ್ತೇಜನಕಾರಿ ಫಲಿತಾಂಶಗಳನ್ನು ನೀಡಿದೆ. ಭಾಗವಹಿಸಿದವರಲ್ಲಿ 61%ರಷ್ಟು ಮಂದಿಯಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, 70%ರಷ್ಟು ಮಂದಿ ವಿಟಮಿನ್ B12 ಕೊರತೆಯನ್ನು ಸರಿಪಡಿಸಿಕೊಂಡಿದ್ದಾರೆ. ಅದೇ ರೀತಿ 59%ರಷ್ಟು ಮಂದಿ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಈ ಫಲಿತಾಂಶಗಳು ಪೊಲೀಸ್ ಸಿಬ್ಬಂದಿಯ ಆರೋಗ್ಯದ ಬಗ್ಗೆ ನಿರಂತರ ಹಾಗೂ ವೈಜ್ಞಾನಿಕವಾಗಿ ರೂಪಿಸಿದ ಕಾಳಜಿ ಕಾರ್ಯಕ್ರಮಗಳು ಉತ್ತಮ ಪರಿಣಾಮ ಬೀರಬಲ್ಲವು ಎಂಬುದನ್ನು ತೋರಿಸಿವೆ ಎಂದು ಸಚಿವರು ತಿಳಿಸಿದ್ದಾರೆ.

ಸಹಭಾಗಿತ್ವ ಸಂಸ್ಥೆಗಳಿಗೆ ಧನ್ಯವಾದ

ಈ ಮಹತ್ವದ ಉಪಕ್ರಮದಲ್ಲಿ ಬೆಂಗಳೂರು ನಗರ ಪೊಲೀಸರೊಂದಿಗೆ ಸಹಭಾಗಿತ್ವ ಹೊಂದಿರುವ ಹ್ಯಾಪಿಯೆಸ್ಟ್ ಹೆಲ್ತ್, ಟೈಟಾನ್ ಕಂಪನಿ ಲಿಮಿಟೆಡ್ ಹಾಗೂ ಬೆಂಗಳೂರು ಇಂದಿರಾನಗರ ರೋಟರಿ ಟ್ರಸ್ಟ್ ಸಂಸ್ಥೆಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ʼನಮ್ಮ ಪೊಲೀಸ್ ಸಿಬ್ಬಂದಿ ಪ್ರತಿದಿನವೂ ನಮ್ಮ ಸಮುದಾಯಗಳ ಸುರಕ್ಷತೆಗಾಗಿ ಸವಾಲಿನ ಹಾಗೂ ಒತ್ತಡದ ಪರಿಸ್ಥಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಯ ಬಗ್ಗೆ ನಿರಂತರ ಗಮನ ನೀಡುವುದು ಅತ್ಯಂತ ಅಗತ್ಯ. ಆರೋಗ್ಯವಂತ ಪೊಲೀಸ್ ಸಿಬ್ಬಂದಿಯೇ ಪರಿಣಾಮಕಾರಿ ಮತ್ತು ಸದೃಢ ಪೊಲೀಸ್ ವ್ಯವಸ್ಥೆಯ ಬೆನ್ನೆಲುಬುʼ ಎಂದು ಗೃಹ ಸಚಿವರು ಹೇಳಿದ್ದಾರೆ.‌

ಕಲ್ಯಾಣ ಕರ್ನಾಟಕದ ಬೇಳೆಕಾಳುಗಳಿಂದ ಪೌಷ್ಟಿಕಾಂಶ ತಿಂಡಿಗಳ ಅಭಿವೃದ್ಧಿ ಮಾಡಿದ ರಾಜ್ಯ ಸರ್ಕಾರ; 6 ವಿಧದ ಎನರ್ಜಿ ಬಾರ್‌ ತಯಾರಿಕೆ

ʼಪೊಲೀಸ್ ಸಿಬ್ಬಂದಿಯ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಕ್ಷೇಮ, ಉತ್ತಮ ಜೀವನಶೈಲಿ ಹಾಗೂ ಒತ್ತಡ ನಿರ್ವಹಣೆಯಂತಹ ಅಂಶಗಳಿಗೂ ಆದ್ಯತೆ ನೀಡುವ ಅಗತ್ಯವಿದೆ. ‘ಪ್ರಾಜೆಕ್ಟ್ ಖುಷಿʼಯಂತಹ ಉಪಕ್ರಮಗಳು ನಮ್ಮ ಪೊಲೀಸ್ ಪಡೆಯನ್ನು ಇನ್ನಷ್ಟು ಸದೃಢ, ಆರೋಗ್ಯಕರ ಹಾಗೂ ಸವಾಲುಗಳನ್ನು ಎದುರಿಸುವಲ್ಲಿ ಸ್ಥಿತಿಸ್ಥಾಪಕವಾಗಿಸಲು ಸಹಕಾರಿಯಾಗಲಿವೆʼ ಎಂದು ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.