Vishwavani Editorial: ಕೆನಡಾ ಸಂಬಂಧ ಸುಧಾರಣೆ
ಉಭಯ ದೇಶಗಳು ಹೊಸ ಹೈಕಮಿಷನರ್ಗಳನ್ನು ನೇಮಿಸಲು ಒಪ್ಪಿಕೊಂಡಿವೆ. ಇದರಿಂದ ಕೆನಡಾಕ್ಕೆ ಭೇಟಿ ನೀಡುವ ಲಕ್ಷಾಂತರ ಭಾರತೀಯರ ವೀಸಾ ಮತ್ತಿತರ ಸೇವೆ ಸುಗಮವಾಗಲಿದೆ. ದ್ವಿಪಕ್ಷೀಯ ಸಂಬಂಧ ಸುಧಾರಣೆ ದೃಷ್ಟಿಯಿಂದ ಇದು ಮಹತ್ವದ ಬೆಳವಣಿಗೆ. ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ಗಳ ಚಟುವಟಿಕೆ ನಿಲ್ಲಿಸುವಲ್ಲೂ ಭಾರತ ಒತ್ತಡ ಹೇರಬೇಕಾಗಿದೆ.


ಅಮೆರಿಕ ನೆರೆ ರಾಜ್ಯ ಕೆನಡಾ ವಿಸ್ತೀರ್ಣದಲ್ಲಿ ರಷ್ಯಾ ಬಿಟ್ಟರೆ ಅತಿ ದೊಡ್ಡ ದೇಶ. ಆದರೆ ಇಲ್ಲಿ ಜನಸಂಖ್ಯೆ ಇನ್ನೂ 5 ಕೋಟಿಗಿಂತಲೂ ಕಡಿಮೆ ಇದೆ. ಇದರಲ್ಲಿ ಸುಮಾರು 19 ಲಕ್ಷ ಭಾರತೀಯ ರಿದ್ದು, ಮಾಹಿತಿ ತಂತ್ರಜ್ಞಾನ, ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಸೇವಾ ಕ್ಷೇತ್ರಗಳಲ್ಲಿ ಸಕ್ರಿಯ ವಾಗಿ ತೊಡಗಿಸಿಕೊಂಡಿದ್ದು ಪ್ರಭಾವಿ ಸಮುದಾಯ ಎನಿಸಿಕೊಂಡಿದ್ದಾರೆ.
ದಶಕಗಳಿಂದಲೂ ಈ ದೇಶ ಭಾರತೀಯರಿಗೆ ಅತ್ಯಾಪ್ತ ರಾಷ್ಟ್ರವಾಗಿತ್ತು. ಆದರೆ ಖಲಿಸ್ತಾನಿ ಶಕ್ತಿಗಳು ಈ ದೇಶದಲ್ಲಿ ಬೇರು ಬಿಟ್ಟು ಭಾರತ ವಿರೋಧಿ ಚಟುವಟಿಕೆಗಳನ್ನು ಆರಂಭಿಸಿದ ಬಳಿಕ ಎರಡೂ ರಾಷ್ಟ್ರಗಳ ಸಂಬಂಧ ಹದಗೆಡಲಾರಂಭಿಸಿತು. ಇದು ಸಾಲದೆಂಬಂತೆ ಖಲಿಸ್ತಾನಿ ತೀವ್ರವಾದಿಗಳು ಪಾಕ್ ಐಎಸ್ಐ ಜತೆ ಸೇರಿಕೊಂಡು ಪಂಜಾಬ್ನಲ್ಲಿ ಮತ್ತೆ ಪ್ರತ್ಯೇಕ ಖಲಿಸ್ತಾನಿ ರಾಷ್ಟ್ರದ ಹೋರಾ ಟಕ್ಕೆ ಕುಮ್ಮಕ್ಕು ನೀಡುತ್ತಿದ್ದರು. ಈ ನಡುವೆ ಖಲಿಸ್ತಾನಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ನನ್ನು 2023ರ ಜೂನ್ನಲ್ಲಿ ವ್ಯಾಂಕೋವರ್ನ ಆತನ ಮನೆಯ ಸಮೀಪ ಪಾರ್ಕಿಂಗ್ ಸ್ಥಳದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.
ಇದನ್ನೂ ಓದಿ: Vishwavani Editorial: ಇದು ನಿರ್ಲಕ್ಷಿಸುವ ಸಂಗತಿಯಲ್ಲ
ಕೆನಡಾದ ಹಿಂದಿನ ಪ್ರಧಾನಿ ಜಸ್ಟಿನ್ ಟ್ರುಡೊ, ಈ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆಯೆಂದು ಆರೋಪಿಸಿದ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿತ್ತು. ಪ್ರಕರಣದಲ್ಲಿ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳನ್ನೂ ಆರೋಪಿಗಳನ್ನಾಗಿ ಮಾಡಲಾಗಿತ್ತು. ಆದರೆ ಇದುವರೆಗೂ ಪ್ರಕರಣ ಸಂಬಂಧ ಸೂಕ್ತ ಸಾಕ್ಷ್ಯಾಧಾರಗಳನ್ನು ಮುಂದಿಡಲು ಕೆನಡಾ ವಿಫಲ ವಾಗಿದೆ.
ಕೆನಡಾ ಸರಕಾರದ ನಡೆಯಿಂದ ಆಕ್ರೋಶಗೊಂಡ ಭಾರತ ತನ್ನ ಹೈಕಮಿಷನರ್ ರನ್ನು ವಾಪಸ್ ಕರೆಸಿಕೊಂಡಿತ್ತು. ಜಸ್ಟಿನ್ ರಾಜೀನಾಮೆ ಬಳಿಕ ಅಧಿಕಾರ ಸೂತ್ರ ಹಿಡಿದಿರುವ ಪ್ರಧಾನಿ ಮಾರ್ಕ್ ಕಾರ್ನಿ ಸಂಬಂಧ ಸುಧಾರಣೆಗೆ ಆದ್ಯತೆ ನೀಡಿದ್ದಾರೆ. ಅವರ ಆಹ್ವಾನದ ಮೇರೆಗೆ ಜಿ-7 ಶೃಂಗ ಸಭೆ ಯಲ್ಲಿ ಭಾಗವಹಿಸಲು ತೆರಳಿದ ಪ್ರಧಾನಿ ನರೇಂದ್ರ ಮೋದಿ ಫಲಪ್ರದ ಮಾತುಕತೆ ನಡೆಸಿದ್ದಾರೆ.
ಉಭಯ ದೇಶಗಳು ಹೊಸ ಹೈಕಮಿಷನರ್ಗಳನ್ನು ನೇಮಿಸಲು ಒಪ್ಪಿಕೊಂಡಿವೆ. ಇದರಿಂದ ಕೆನಡಾಕ್ಕೆ ಭೇಟಿ ನೀಡುವ ಲಕ್ಷಾಂತರ ಭಾರತೀಯರ ವೀಸಾ ಮತ್ತಿತರ ಸೇವೆ ಸುಗಮವಾಗಲಿದೆ. ದ್ವಿಪಕ್ಷೀಯ ಸಂಬಂಧ ಸುಧಾರಣೆ ದೃಷ್ಟಿಯಿಂದ ಇದು ಮಹತ್ವದ ಬೆಳವಣಿಗೆ. ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿಗಳ ಚಟುವಟಿಕೆ ನಿಲ್ಲಿಸುವಲ್ಲೂ ಭಾರತ ಒತ್ತಡ ಹೇರಬೇಕಾಗಿದೆ.