ಕೆಎಸ್ಸಿಎ ಚುನಾವಣೆ: ಚಿನ್ನಸ್ವಾಮಿ ಕ್ರೀಡಾಂಗಣದ 'ಗತವೈಭವ' ಮರಳಿ ತರಲು ಬದ್ಧ; ವೆಂಕಟೇಶ್ ಪ್ರಸಾದ್
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 50 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಪ್ರತಿಷ್ಠಿತ ಅಂತರರಾಷ್ಟ್ರೀಯ ಕ್ರೀಡಾಂಗಣ ಇದಾಗಿದೆ. ನಮ್ಮ ತಂಡ ಅಧಿಕಾರಕ್ಕೆ ಬಂದರೆ ಕ್ರೀಡಾಂಗಣದ ವೈಭವ ಮರುಳಿಸುತ್ತೇವೆ. ಇಲ್ಲಿ ಮತ್ತೆ ಬಿಸಿಸಿಐ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುವಂತೆ ಮಾಡಲು ಬದ್ಧರಾಗಿದ್ದೇವೆ ಎಂದು ವೆಂಟಕೇಶ್ ಪ್ರಸಾದ್ ಘೋಷಣೆ ಮಾಡಿದರು.


ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಗತವೈಭವವನ್ನು ಮರಳಿ ತರಲು ತಾವು ಬದ್ಧರಾಗಿರುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಆಡಳಿತ ಸಮಿತಿಯ ಚುನಾವಣೆಯಲ್ಲಿ(KSCA Election) ಸ್ಪರ್ಧಿಸಲಿರುವ, ವೆಂಕಟೇಶ್ ಪ್ರಸಾದ್(Venkatesh Prasad) ಮತ್ತು ತಂಡವು ಪ್ರಣಾಳಿಕೆಯಲ್ಲಿ ಘೋಷಿಸಿದೆ. ಚುನಾವಣೆ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿದೆ. ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್, ಕೆಎಸ್ಸಿಎ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಸೇರಿ 16 ಮಂದಿಯ ತಂಡ ಕಣಕ್ಕಿಳಿಯಲಿದೆ.
ವೆಂಟಕೇಶ್ ಹಾಗೂ ವಿನಯ್ ತಮ್ಮ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಚುನಾವಣೆಯಲ್ಲಿ ತಮ್ಮ ಸ್ಪರ್ಧೆಗೆ ದಿಗ್ಗಜ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್ ಬೆಂಬಲ ಇದೆ ಎಂದು ವೆಂಕಟೇಶ್ ತಿಳಿಸಿದರು. ಭಾರತದ ಮಾಜಿ ಆಟಗಾರ್ತಿ ಶಾಂತಾ ರಂಗಸ್ವಾಮಿ ಕೂಡಾ ಪ್ರಣಾಳಿಕೆ ಬಿಡುಗಡೆಯಲ್ಲಿ ಪಾಲ್ಗೊಂಡು ತಂಡವನ್ನು ಬೆಂಬಲಿಸಿದರು. ಆದರೆ ತಂಡದಲ್ಲಿರುವ ಇತರರು ಯಾರು, ಯಾವ ಹುದ್ದೆಗೆ ಸ್ಪರ್ಧೆ ಎಂಬುದನ್ನು ಬಹಿರಂಗಪಡಿಸಿಲ್ಲ.
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 50 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಪ್ರತಿಷ್ಠಿತ ಅಂತರರಾಷ್ಟ್ರೀಯ ಕ್ರೀಡಾಂಗಣ ಇದಾಗಿದೆ. ನಮ್ಮ ತಂಡ ಅಧಿಕಾರಕ್ಕೆ ಬಂದರೆ ಕ್ರೀಡಾಂಗಣದ ವೈಭವ ಮರುಳಿಸುತ್ತೇವೆ. ಇಲ್ಲಿ ಮತ್ತೆ ಬಿಸಿಸಿಐ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುವಂತೆ ಮಾಡಲು ಬದ್ಧರಾಗಿದ್ದೇವೆ ಎಂದು ವೆಂಟಕೇಶ್ ಪ್ರಸಾದ್ ಘೋಷಣೆ ಮಾಡಿದರು.
56 ವರ್ಷದ ವೆಂಕಟೇಶ್ ಈ ಹಿಂದೆ 2010ರಿಂದ 2013ರ ವರೆಗೆ ಕೆಎಸ್ಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆಗ ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದರು. ಜಾವಗಲ್ ಶ್ರೀನಾಥ್ ಕಾರ್ಯದರ್ಶಿಯಾಗಿದ್ದರು. 12 ವರ್ಷ ಬಳಿಕ ವೆಂಕಟೇಶ್ ಮತ್ತೆ ಕೆಎಸ್ಸಿಎಗೆ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ. ಕೆಎಸ್ಸಿಎ ಆಡಳಿತ ಸಮಿತಿ ಸದಸ್ಯ, ವಕ್ತಾರರಾಗಿದ್ದ ವಿನಯ್ ಮೃತ್ಯುಂಜಯ 2019ರಿಂದ 2022ರ ವರೆಗೆ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಬಿಸಿಸಿಐ ಆರ್ಥಿಕ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ, ಕ್ಲಬ್ ಸದಸ್ಯರು, ಇತರ ಸದಸ್ಯರು ಸೇರಿ ಒಟ್ಟು 16 ಸ್ಥಾನಗಳಿಗೆ ಅಕ್ಟೋಬರ್-ನವೆಂಬರ್ನಲ್ಲಿ ಚುನಾವಣೆ ನಡೆಯಲಿದೆ. ಕೆಎಸ್ಸಿಎನಲ್ಲಿ ಚುನಾವಣಾ ಸದಸ್ಯರು, ಚುನಾವಣೇತರ ಸದಸ್ಯರಿದ್ದಾರೆ. ಈ ಪೈಕಿ 1900ರಷ್ಟು ಇರುವ ಚುನಾವಣಾ ಸದಸ್ಯರು ಮತ ಚಲಾಯಿಸಿ, 16 ಮಂದಿಯನ್ನು ಆಯ್ಕೆ ಮಾಡಲಿದ್ದಾರೆ. ಸಮಿತಿಯ ಅಧಿಕಾರಾವಧಿ 3 ವರ್ಷ ಇರಲಿದೆ.
ಇದನ್ನೂ ಓದಿ Chinnaswamy Stadium: ಚಿನ್ನಸ್ವಾಮಿ ಕ್ರೀಡಾಂಗಣ ಸ್ಟ್ಯಾಂಡ್ಗಳಿಗೆ ದಿಗ್ಗಜರ ನಾಮಫಲಕ ಅನಾವರಣ