ಹೈದರಾಬಾದ್: ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ತಂಡಕ್ಕೆ ಹಂಗಾಮಿ ನಾಯಕನ್ನಾಗಿ ಇಶಾನ್ ಕಿಶನ್ (Ishan Kishan) ಅವರನ್ನು ನೇಮಿಸಲಾಗಿದೆ. ಕೆಳ ಬೆನ್ನು ನೋವಿನಿಂದ ಗುಣಮುಖರಾಗುತ್ತಿರುವ ಪ್ಯಾಟ್ ಕಮಿನ್ಸ್ ಅವರು ಟೂರ್ನಿಯ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಡಗೈ ಬ್ಯಾಟ್ಸ್ಮನ್ಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ಎಡಗೈ ಆರಂಭಿಕ ಅಭಿಷೇಕ್ ಶರ್ಮ ಅವರನ್ನು ಉಪ ನಾಯಕನ್ನಾಗಿ ನೇಮಿಸಲಾಗಿದೆ.
ಇತ್ತೀಚೆಗೆ ಅಂತ್ಯವಾದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಶಾನ್ ಕಿಶನ್ ಭಾರತ ತಂಡದ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು 193ರ ಸ್ಟ್ರೈಕ್ ರೇಟ್ನಲ್ಲಿ 317 ರನ್ಗಳನ್ನು ಬಾರಿಸಿದ್ದರು. ಆ ಮೂಲಕ ಭಾರತದ ಪರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಎರಡನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು. 321 ರನ್ಗಳ ಮೂಲಕ ಸಂಜು ಸ್ಯಾಮ್ಸನ್ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಅಂದ ಹಾಗೆ ಇಶಾನ್ ಕಿಶನ್, ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಎಸ್ಆರ್ಎಚ್ ತಂಡದ ಜೊತೆಗಾರ ಅಭಿಷೇಕ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.
IPL 2026: ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೆಎಲ್ ರಾಹುಲ್ ಅಸಮಾಧಾನ? ಎಚ್ ಬದ್ರಿನಾಥ್ ಹೇಳಿದ್ದಿದು!
2026ರ ಐಪಿಎಲ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದೊಂದಿಗೆ ಇಶಾನ್ ಕಿಶನ್ ಪಾಲಿಗೆ ಇದು ಎರಡನೇ ವರ್ಷ. ಆದರೂ ಟೀಮ್ ಮ್ಯಾನೇಜ್ಮೆಂಟ್ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಿದೆ. ಈ ನಿರ್ಧಾರಕ್ಕೆ ಪ್ರಮುಖ ಕಾರಣ ಅವರ ಇತ್ತೀಚಿನ ನಾಯಕತ್ವ ಸಾಧನೆ. ಜಾರ್ಖಂಡ್ ತಂಡವನ್ನು ಅವರು ಕಳೆದ ಸೀಸನ್ನಲ್ಲಿ ಪ್ರಶಸ್ತಿಗೆ ಮುನ್ನಡೆಸಿದ್ದರು.
ಇದು ಕಿಶನ್ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವಾಗಿದೆ. 2022ರ ಅಂತ್ಯದ ವೇಳೆಗೆ ಅವರು ಭಾರತ ತಂಡದಲ್ಲಿ ತಮ್ಮ ಸ್ಥಾನ ಕಳೆದುಕೊಂಡಿದ್ದರು. ದೇಶಿ ಕ್ರಿಕೆಟ್ನಿಂದ ಕೆಲಕಾಲ ದೂರ ಉಳಿದ ಕಾರಣ, ಅವರನ್ನು ಕೇಂದ್ರ ಒಪ್ಪಂದದಿಂದಲೂ ಕೈಬಿಡಲಾಗಿತ್ತು. ಆದರೆ ಈಗ, ತಮ್ಮ ಪರಿಶ್ರಮ ಮತ್ತು ನಾಯಕತ್ವ ಸಾಮರ್ಥ್ಯದ ಮೂಲಕ ಕಿಶನ್ ಮತ್ತೆ ಪ್ರಾಮುಖ್ಯತೆ ಗಳಿಸಿಕೊಂಡಿದ್ದು, ತಂಡದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕ್ರಿಕೆಟ್ನಿಂದ ಕೆಲಕಾಲ ದೂರ ಉಳಿದಿದ್ದರೂ, ಇಶಾನ್ ಕಿಶನ್ ತಮ್ಮ ಪ್ರಗತಿಯನ್ನು ನಿಲ್ಲಿಸದೆ ಅದನ್ನು ಇನ್ನಷ್ಟು ವೃದ್ಧಿಸಿಕೊಂಡಿದ್ದಾರೆ. ವಿಕೆಟ್ಕೀಪರ್-ಬ್ಯಾಟರ್ ಆಗಿರುವ ಅವರು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಗಮನಾರ್ಹ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅವರ ನಾಯಕತ್ವದಲ್ಲಿ ಜಾರ್ಖಂಡ್ ತಂಡ, 2025ರಲ್ಲಿ ತಮ್ಮ ಮೊದಲ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದಿತು. ಈ ಟೂರ್ನಿಯಲ್ಲಿ ಕಿಶನ್ ಅದ್ಭುತ ಪ್ರದರ್ಶನ ನೀಡಿ ಕೇವಲ 10 ಪಂದ್ಯಗಳಲ್ಲಿ 517 ರನ್ಗಳನ್ನು ಸಿಡಿಸಿ, 197ರ ಸ್ಟ್ರೈಕ್ ರೇಟ್ ದಾಖಲಿಸಿದ್ದರು. ಈ ಟೂರ್ನಿಯ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ ಅವರು, ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿ, ಭವಿಷ್ಯದ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
IPL 2026: ಆರ್ಸಿಬಿಯ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನೇ ಮುಂದುವರಿಯಬೇಕೆಂದ ಅಭಿನವ್ ಮುಕುಂದ್!
ಇಶಾನ್ ಕಿಶನ್ ಫೈನಲ್ ಪಂದ್ಯದಲ್ಲೂ ನಾಯಕನಾಗಿ ಮುಂಚೂಣಿಯಲ್ಲಿ ನಿಂತು ಅದ್ಭುತ ಪ್ರದರ್ಶನ ನೀಡಿದ್ದಾರೆ. ಹರಿಯಾಣ ತಂಡದ ವಿರುದ್ಧ ನಡೆದಿದ್ದ ಫೈನಲ್ ಪಂದ್ಯದಲ್ಲಿ ಅವರು ಓಪನರ್ ಆಗಿ ಕಣಕ್ಕಿಳಿದು ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಸ್ಫೋಟಕ ಇನಿಂಗ್ಸ್ ತಂಡಕ್ಕೆ ಭರ್ಜರಿ ಮುನ್ನಡೆ ನೀಡಿದ್ದು, ಅಂತಿಮವಾಗಿ ಜಾರ್ಖಂಡ್ ತಂಡಕ್ಕೆ 69 ರನ್ಗಳ ಭರ್ಜರಿ ಜಯ ಸಾಧಿಸಲು ನೆರವಾಯಿತು. ವಿಕೆಟ್ಕೀಪರ್ ಆಗಿರುವ ತಮ್ಮ ಪಾತ್ರದಾಚೆಗೆ ಹೋಗಿ, ತಂಡದ ನಾಯಕ ಹಾಗೂ ಪ್ರಮುಖ ಬ್ಯಾಟರ್ ಆಗಿಯೂ ಕಿಶನ್ ತನ್ನ ಮೌಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.