ಬೆಂಗಳೂರು: ಐಪಿಎಲ್ 2026 ಟೂರ್ನಿಯಲ್ಲಿ ಲಖನೌ ಸೂಪರ್ ಜಯಂಟ್ಸ್ (LSG) ತಂಡದ ನಿರಾಶಾದಾಯಕ ಪ್ರದರ್ಶನ ತೀವ್ರ ಟೀಕೆಗೆ ಗುರಿಯಾಗಿದೆ. ತಂಡ ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಜಾರುತ್ತಿರುವ ಹಿನ್ನೆಲೆ, ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಂಡ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಖನೌ ಸೂಪರ್ ಜಯಂಟ್ಸ್ ಸೀಸನ್: ನಿರೀಕ್ಷೆಯಿಂದ ನಿರಾಶೆಗೆ
ಈ ಸೀಸನ್ ಲಖನೋ ತಂಡಕ್ಕೆ ಮರೆತೇಬಿಡಬೇಕಾದಂತಾಗಿದೆ. ಎಂಟು ಪಂದ್ಯಗಳಲ್ಲಿ ಕೇವಲ ಎರಡು ಜಯಗಳೊಂದಿಗೆ ತಂಡ ಅಂಕಪಟ್ಟಿಯಲ್ಲಿ ತಳದಲ್ಲೇ ಉಳಿದಿದೆ. ಆರಂಭದಲ್ಲಿ ಉತ್ತಮ ನಿರೀಕ್ಷೆ ಮೂಡಿಸಿದ್ದರೂ, ಬ್ಯಾಟಿಂಗ್ ವಿಭಾಗದ ಭಾರಿ ವೈಫಲ್ಯದಿಂದ ತಂಡದ ಪಯಣ ಕುಸಿತ ಕಂಡಿದೆ. ವಿಶೇಷವಾಗಿ ನಿಕೋಲಸ್ ಪೂರನ್ ಅವರ ಪ್ರದರ್ಶನ ಕುಸಿತ ಗಮನಸೆಳೆಯುತ್ತಿದೆ. ಕಳೆದ ಸೀಸನ್ನಲ್ಲಿ ಸುಮಾರು 200 ಸ್ಟ್ರೈಕ್ರೇಟ್ ಹೊಂದಿದ್ದ ಅವರು, ಈ ಬಾರಿ 81.19ಕ್ಕೆ ಇಳಿದಿದ್ದು ಮಧ್ಯಕ್ರಮದ ಮೇಲೆ ಪರಿಣಾಮ ಬೀರಿದೆ.
ಅದೇ ರೀತಿ ₹27 ಕೋಟಿ ಮೊತ್ತಕ್ಕೆ ತಂಡ ಸೇರಿದ್ದ ನಾಯಕ ರಿಷಭ್ ಪಂತ್ ಕೂಡ ನಿರಂತರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಟಾಪ್ಆರ್ಡರ್ ಬೇಗ ಕುಸಿಯುವುದು, ಮಧ್ಯಕ್ರಮದಲ್ಲಿ ಸ್ಥಿರತೆ ಇಲ್ಲದಿರುವುದು ತಂಡದ ದೊಡ್ಡ ಸಮಸ್ಯೆಯಾಗಿದೆ. ಇದಲ್ಲದೆ ಓಪನಿಂಗ್ ಕಾಂಬಿನೇಷನ್ನಲ್ಲಿ ನಿರಂತರ ಬದಲಾವಣೆಗಳು ಮತ್ತು ಪ್ರಮುಖ ಆಲ್ರೌಂಡರ್ ವಾನಿಂದು ಹಸರಂಗ ಅನುಪಸ್ಥಿತಿ ತಂಡದ ಸಮತೋಲನವನ್ನು ಹಾಳು ಮಾಡಿದೆ. -1.106 ರ ನೆಗೆಟಿವ್ ನೆಟ್ ರನ್ರೇಟ್ ಮತ್ತು ಸ್ವಗೃಹ ಮೈದಾನದಲ್ಲಿಯೇ ಸೋಲುಗಳು ತಂಡದ ಪ್ಲೇಆಫ್ ಕನಸನ್ನು ಬಹುತೇಕ ಅಂತ್ಯಗೊಳಿಸಿವೆ.
ಎಲ್ಎಸ್ಜಿ ಮಾಡಿದ 'ಸೂಪರ್' ಎಡವಟ್ಟನ್ನು ತೆರೆದಿಟ್ಟ ಡೇಲ್ ಸ್ಟೇನ್!
ತಪ್ಪು ನಿರ್ಧಾರಗಳೇ ಕಾರಣ: ಸೆಹ್ವಾಗ್ ಟೀಕೆ
ಈ ನಿರಾಶಾದಾಯಕ ಸ್ಥಿತಿಗೆ, ತಂಡ ತೆಗೆದುಕೊಂಡ ನಿರ್ಧಾರಗಳನ್ನು ಸೆಹ್ವಾಗ್ ಪ್ರಶ್ನಿಸಿದ್ದಾರೆ. ತಂಡದಲ್ಲಿ ಕೇನ್ ವಿಲಿಯಮ್ಸನ್, ಜಸ್ಟಿನ್ ಲ್ಯಾಂಗರ್ ಮತ್ತು ಟಾಮ್ ಮೂಡಿ ಇದ್ದರೂ, ಸರಿಯಾದ ನಿರ್ಧಾರಗಳು ತೆಗೆದುಕೊಳ್ಳದೇ ಇರುವುದರ ಬಗ್ಗೆ ಸೆಹ್ವಾಗ್ ಮಾತನಾಡಿದ್ದಾರೆ.
ಸೆಹ್ವಾಗ್ ಪ್ರಕಾರ, ತಂಡವು ಟಾಸ್ ಗೆದ್ದಾಗಲೂ ನಿರಂತರವಾಗಿ ರನ್ ಚೇಸ್ ಮಾಡಲು ಮುಂದಾಗಿರುವುದು ಕೂಡ ದೊಡ್ಡ ತಪ್ಪು. ತಂಡದ ಬ್ಯಾಟರ್ಸ್ ಒತ್ತಡದಲ್ಲಿ ಬ್ಯಾಟ್ ಮಾಡಲು ಸಾಧ್ಯವಾಗುತ್ತಿಲ್ಲವೆಂಬುದು ಸ್ಪಷ್ಟವಾಗಿದ್ದರೂ, ಅದೇ ತಂತ್ರ ಮುಂದುವರಿಸುವುದು ಅರ್ಥವಿಲ್ಲ ಎಂದು ಅವರು ಟೀಕಿಸಿದ್ದಾರೆ.
IPL 2025: ʻದಿಗ್ವೇಶ್ ರಾಠಿಯನ್ನು ಬ್ಯಾನ್ ಮಾಡಬಾರದಿತ್ತುʼ-ಎಲ್ಎಸ್ಜಿ ಬೌಲರ್ಗೆ ಸೆಹ್ವಾಗ್ ಬೆಂಬಲ!
ಎಲ್ಎಸ್ಜಿ ಮುಂದೆ ಏನು ಮಾಡಬೇಕು?
ಈಗ ಪ್ಲೇಆಫ್ ಅವಕಾಶಗಳು ಕೇವಲ ಆಶೆಯಷ್ಟೇ ಉಳಿದಿರುವ ಹಿನ್ನೆಲೆಯಲ್ಲಿ, ಎಲ್ಎಸ್ಜಿ ತಂಡ ಕನಿಷ್ಠ ಗೌರವ ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕಾಗಿದೆ. ಬ್ಯಾಟಿಂಗ್ ಕ್ರಮವನ್ನು ಸ್ಥಿರಗೊಳಿಸುವುದು, ವಿಶೇಷವಾಗಿ ಪಂತ್ಗೆ ನಿಗದಿತ ಸ್ಥಾನ ನೀಡುವುದು ಮುಖ್ಯ. ತವರು ಮೈದಾನ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮತ್ತೆ ಪ್ರಾಬಲ್ಯ ಸಾಧಿಸುವುದು ಅಗತ್ಯ. ಜೊತೆಗೆ ಪವರ್ಪ್ಲೇನಲ್ಲಿ ಆಕ್ರಮಣಕಾರಿ ಆಟಗಾರರನ್ನು ಬಳಸುವುದರಿಂದ ಮಧ್ಯಕ್ರಮದ ಒತ್ತಡ ಕಡಿಮೆಯಾಗಬಹುದು.
ಒಟ್ಟಾರೆ, ಅನುಭವಿ ಆಟಗಾರರು ಮತ್ತು ಕೋಚ್ಗಳಿದ್ದರೂ, ಸರಿಯಾದ ಪ್ಲಾನಿಂಗ್ ಮತ್ತು ಡಿಸಿಷನ್ ಕೊರತೆಯಿಂದ ಲಖನೌ ಸೂಪರ್ ಜಯಂಟ್ಸ್ ತಂಡ ಐಪಿಎಲ್ 2026ರಲ್ಲಿ ಹಿನ್ನಡೆ ಅನುಭವಿಸಿದೆ. ಮುಂದಿನ ಪಂದ್ಯಗಳಲ್ಲಿ ತಂಡ ತನ್ನ ತಪ್ಪುಗಳನ್ನು ಸರಿಪಡಿಸದಿದ್ದರೆ, ಈ ಸೀಸನ್ ಸಂಪೂರ್ಣ ನಿರಾಶೆಯಾಗಿ ಉಳಿಯುವ ಸಾಧ್ಯತೆ ಇದೆ.