IND vs BAN: ಇಂದಿನ ಪಂದ್ಯಕ್ಕೆ ಭಾರತ ಆಡುವ ಬಳಗ ಹೇಗಿದೆ?
IND vs BAN: ಭಾರತ ತಂಡ ಸಮತೋಲಿತವಾಗಿದ್ದರೂ ಪ್ರಧಾನ ವೇಗಿ ಬುಮ್ರಾರ ಅನುಪಸ್ಥಿತಿ ತಂಡದ ಆತ್ಮವಿಶ್ವಾಸಕ್ಕೆ ಬಹಳ ದೊಡ್ಡ ಪೆಟ್ಟು ನೀಡಿರುವುದು ಸತ್ಯ. ಅವರ ಅಲಭ್ಯತೆ ತಂಡದ ಪ್ರದರ್ಶನದ ಮೇಲೆ ದುಷ್ಪರಿಣಾಮ ಬೀರದಂತೆ ನೋಡಿಕೊಂಡು ಟ್ರೋಫಿ ಗೆಲ್ಲುವುದೇ ಟೀಂ ಇಂಡಿಯಾ ಮುಂದಿರುವ ಪ್ರಮುಖ ಸವಾಲು.


ದುಬೈ: ಭಾರತ ತಂಡ ಇಂದು(ಗುರುವಾರ) ತನ್ನ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಆರಂಭಿಸಲಿದೆ. ದುಬಾೖಯಲ್ಲಿ ನಡೆಯುವ ಮುಖಾಮುಖಿಯಲ್ಲಿ ನೆರೆಯ ತಂಡವಾದ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ. ಪಂದ್ಯಕ್ಕೆ ಮಳೆ ಭೀತಿ ಕೂಡ ಇದೆ. ಈ ಪಂದ್ಯಕ್ಕೆ ಭಾರತ ಆಡುವ ಬಳಗ ಹೇಗಿರಲಿದೆ ಎಂದ ಮಾಹಿತಿ ಇಲ್ಲಿದೆ. ಪಂತ್ ಮತ್ತು ರಾಹುಲ್ ನಡುವೆ ತೀವ್ರ ಪೈಪೋಟಿ ಇದ್ದರೂ ಕೂಡ ಕೋಚ್ ಗಂಭೀರ್ ರಾಹುಲ್ ಅವರನ್ನೇ ಮೊದಲ ಆಯ್ಕೆಯ ಕೀಪರ್ ಆಗಿ ಪರಿಗಣಿಸುವ ಸಾಧ್ಯತೆ ಇದೆ.
ಈ ಹಿಂದೆ ದುಬಾೖಯಲ್ಲಿ ಬಾಂಗ್ಲಾದೇಶ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿತ್ತು. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠ ಎನ್ನಲಡ್ಡಿಯಿಲ್ಲ. ಆದರೂ ಅಪಾಯಕಾರಿ ತಂಡವಾಗಿರುವ ಬಾಂಗ್ಲಾದೇಶವನ್ನು ಹಗುರವಾಗಿ ಕಾಣುವಂತಿಲ್ಲ. ಏಷ್ಯಾಕಪ್ ಫೈನಲ್, 2015ರ ಏಕದಿನ ವಿಶ್ವಕಪ್ ಕ್ವಾರ್ಟರ್ ಫೈನಲ್ಗೇರಿದ್ದ ತಂಡವನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಮಹ್ಮೂದುಲ್ಲಾ, ಮುಷ್ಫಿಕುರ್ ರಹೀಂ ಸೇರಿದಂತೆ ಹಲವು ಹಿರಿಯ ಆಟಗಾರರು ತಂಡದಲ್ಲಿದ್ದಾರೆ.
ಪಂದ್ಯಾವಳಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುತ್ತಿರುವ ಕಾರಣ ಸೆಮಿಫೈನಲ್ ಪ್ರವೇಶಿಸಲು ತಂಡವೊಂದಕ್ಕೆ ಕನಿಷ್ಠ 2 ಗೇಲುವು ಅತ್ಯಗತ್ಯ. ಜತೆಗೆ ರನ್ ರೇಟ್ ಕೂಡ ಬೇಕು. ಈಗಾಗಲೇ 'ಎ' ಗುಂಪಿನಿಂದ ನ್ಯೂಜಿಲ್ಯಾಂಡ್ ಗೆಲುವಿನ ಖಾತೆ ತೆರೆದಿದೆ. ಹೀಗಾಗಿ ಭಾರತ ಇಂದಿನ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಬೇಕಿದೆ.
ಭಾರತ ತಂಡ ಸಮತೋಲಿತವಾಗಿದ್ದರೂ ಪ್ರಧಾನ ವೇಗಿ ಬುಮ್ರಾರ ಅನುಪಸ್ಥಿತಿ ತಂಡದ ಆತ್ಮವಿಶ್ವಾಸಕ್ಕೆ ಬಹಳ ದೊಡ್ಡ ಪೆಟ್ಟು ನೀಡಿರುವುದು ಸತ್ಯ. ಅವರ ಅಲಭ್ಯತೆ ತಂಡದ ಪ್ರದರ್ಶನದ ಮೇಲೆ ದುಷ್ಪರಿಣಾಮ ಬೀರದಂತೆ ನೋಡಿಕೊಂಡು ಟ್ರೋಫಿ ಗೆಲ್ಲುವುದೇ ಟೀಂ ಇಂಡಿಯಾ ಮುಂದಿರುವ ಪ್ರಮುಖ ಸವಾಲು.
ಇದನ್ನೂ ಓದಿ ಚಾಂಪಿಯನ್ಸ್ ಟ್ರೋಫಿಗೆ ಐವರು ಸ್ಪಿನ್ನರ್ಗಳೇಕೆ? ಟೀಕಾಕಾರರಿಗೆ ರೋಹಿತ್ ಶರ್ಮಾ ತಿರುಗೇಟು!
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.
ಬಾಂಗ್ಲಾದೇಶ: ತಂಝಿದ್ ಹಸನ್, ಸೌಮ್ಯ ಸರ್ಕಾರ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ತೌಹಿದ್ ಹೃದಯ್, ಮೆಹಿದಿ ಹಸನ್ ಮಿರಾಜ್, ನಜ್ಮುಲ್ ಹೊಸೈನ್ ಶಾಂಟೋ, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ನಸುಮ್ ಅಹ್ಮದ್, ರಿಶಾದ್ ಹೊಸೈನ್.