ದಕ್ಷಿಣ ಆಫ್ರಿಕಾ ಕೋಚ್ ವಿವಾದಾತ್ಮಕ ಹೇಳಿಕೆಗೆ ತಿರುಗೇಟು ಕೊಟ್ಟ ಕುಂಬ್ಳೆ
IND vs SA: ಪಂದ್ಯದ ಅಂತಿಮ ದಿನವಾದ ಬುಧವಾರ 534 ರನ್ಗಳ ಹಿನ್ನಡೆಯೊಂದಿಗೆ ದಿನದಾಟ ಆರಂಭಿಸಿದ ಭಾರತ ತಂಡ ಮತ್ತೆ ಬ್ಯಾಟಿಂಗ್ ವೈಫಲ್ಯ ಕಂಡಿತು. ಹಾರ್ಮರ್ ಅವರ ಸ್ಪಿನ್ ಬಲೆಗೆ ಬಿದ್ದ ಭಾರತೀಯ ಬ್ಯಾಟರ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಮಂಗಳವಾರ 2 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಸಾಯಿ ಸುದರ್ಶನ್(14) ಮತ್ತು ಕುಲ್ದೀಪ್ ಯಾದವ್ (5) ರನ್ಗೆ ವಿಕೆಟ್ ಕಳೆದುಕೊಂಡರು.
ದಕ್ಷಿಣ ಆಫ್ರಿಕಾ ಕೋಚ್ ಶುಕ್ರಿ ಕಾನ್ರಾಡ್ -
ಗುಹವಾಟಿ, ನ.26: ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಶುಕ್ರಿ ಕಾನ್ರಾಡ್(Shukri Conrad) ಅವರ ವಿವಾದಾತ್ಮಕ ಹೇಳಿಕೆಗೆ ಟೀಮ್ ಇಂಡಿಯಾ ಮಾಜಿ ಆಟಗಾರ ಅನಿಲ್ ಕುಂಬ್ಳೆ(Anil Kumble) ತಿರುಗೇಟು ನೀಡಿದ್ದು, ಗೆಲ್ಲುವ ಪರಿಸ್ಥಿತಿಯಲ್ಲಿದ್ದಾಗ ಅಹಂಕಾರವಿರಬಾರದು ಎಂದು ಹೇಳಿದ್ದಾರೆ.
ಇಲ್ಲಿನ ಬರ್ಸಪರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದ(IND vs SA) ನಾಲ್ಕನೇ ದಿನದಾಟದ ಮುಕ್ತಾಯದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶುಕ್ರಿ ಕಾನ್ರಾಡ್, ದಕ್ಷಿಣ ಆಫ್ರಿಕಾ ತಂಡವು ತಮ್ಮ ಎರಡನೇ ಇನಿಂಗ್ಸ್ನಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಸಮಯ ಬ್ಯಾಟ್ ಮಾಡಿ ಭಾರತದ ನಿದ್ದೆಗೆಡಿಸಿದೆ. ಭಾರತ ತಂಡವು ಹೆಚ್ಚು ಕಾಲ ಮೈದಾನದಲ್ಲಿ ಸಮಯ ಕಳೆಯಬೇಕೆಂದು ನಾವು ಬಯಸಿದ್ದೇವು ಎಂದು ಹೇಳಿದ್ದರು. ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
ಈ ಕುರಿತು ಮಾತನಾಡಿರುವ ಅನಿಲ್ ಕುಂಬ್ಳೆ, "ಇದಕ್ಕೆ ಒಂದು ಇತಿಹಾಸವಿದೆ. ಇಂಗ್ಲೆಂಡ್ ನಾಯಕರೊಬ್ಬರು ವೆಸ್ಟ್ ಇಂಡೀಸ್ ತಂಡದ ವಿರುದ್ಧ ಇದೇ ರೀತಿ ಮಾತನಾಡಿದ್ದರು. ನಂತರ ಏನಾಯಿತೆಂದು ನಮಗೆಲ್ಲರಿಗೂ ತಿಳಿದಿದೆ. ದಕ್ಷಿಣ ಆಫ್ರಿಕಾ ಸರಣಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ನೀವು ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದ್ದಾಗ ನಿಮ್ಮ ಹೇಳಿಕೆಗಳು ತುಂಬಾ ಮುಖ್ಯ. ನಾನು ಇದನ್ನು ಕೋಚ್ ಅಥವಾ ಸಹಾಯಕ ಸಿಬ್ಬಂದಿಯಿಂದ ನಿರೀಕ್ಷಿಸಿರಲಿಲ್ಲ. ಗೆಲ್ಲುವ ಪರಿಸ್ಥಿತಿಯಲ್ಲಿದ್ದಾಗ ಅಹಂಕಾರವಿರಬಾರದು" ಎಂದು ಹೇಳಿದರು.
ಇದನ್ನೂ ಓದಿ ಭಾರತ ಒಡಿಐ ತಂಡದಲ್ಲಿ ಸಂಜು ಸ್ಯಾಮ್ಸನ್ಗೆ ಅವಕಾಶ ನೀಡದ ಬಗ್ಗೆ ಅನಿಲ್ ಕುಂಬ್ಳೆ ಬೇಸರ!
"ಎದುರಾಳಿ ತಂಡ ಸೋಲಿನ ಭೀತಿಯಲ್ಲಿದ್ದರೂ ನೋವುಂಟು ಮಾಡುವ ಮಾತುಗಳನ್ನಾಡಬಾರದು. ಈ ರೀತಿಯಾದ ಹೇಳಿಕೆಗಳಿಂದ ಡ್ರೆಸಿಂಗ್ ರೂಮ್ ವಾತಾವರಣ ಉತ್ತಮವಾಗಿರುವುದಿಲ್ಲ. ಇದಕ್ಕೆ ಉತ್ತರಿಸುವ ಮಾರ್ಗವೆಂದರೆ ಉತ್ತಮ ಬ್ಯಾಟಿಂಗ್ ಮತ್ತು ಅದ್ಭುತ ಜೊತೆಯಾಟವಾಡುವುದು. ನಮ್ಮ ಪ್ರತಿಕ್ರಿಯೆ ಏನಿದ್ದರೂ ಮಾತುಗಳಿಂದಲ್ಲ, ಬ್ಯಾಟ್ ಮತ್ತು ಬೌಲ್ನಿಂದ ಬರಬೇಕು" ಎಂದು ಅನಿಲ್ ಕುಂಬ್ಳೆ ಹೇಳಿದರು.
ಎರಡನೇ ಇನಿಂಗ್ಸ್ನಲ್ಲೂ ಮುಗ್ಗರಿಸಿದ ಭಾರತ!
ಪಂದ್ಯದ ಅಂತಿಮ ದಿನವಾದ ಬುಧವಾರ 534 ರನ್ಗಳ ಹಿನ್ನಡೆಯೊಂದಿಗೆ ದಿನದಾಟ ಆರಂಭಿಸಿದ ಭಾರತ ತಂಡ ಮತ್ತೆ ಬ್ಯಾಟಿಂಗ್ ವೈಫಲ್ಯ ಕಂಡಿತು. ಹಾರ್ಮರ್ ಅವರ ಸ್ಪಿನ್ ಬಲೆಗೆ ಬಿದ್ದ ಭಾರತೀಯ ಬ್ಯಾಟರ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಮಂಗಳವಾರ 2 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಸಾಯಿ ಸುದರ್ಶನ್(14) ಮತ್ತು ಕುಲ್ದೀಪ್ ಯಾದವ್ (5) ರನ್ಗೆ ವಿಕೆಟ್ ಕಳೆದುಕೊಂಡರು.
ಧ್ರುವ್ ಜುರೆಲ್ (2) ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆ ನಡೆದರು. ಹಂಗಾಮಿ ನಾಯಕ ರಿಷಭ್ ಪಂತ್ ಬೀಸಾಟ ನಡೆಸಲು ಹೋಗಿ 13ರನ್ಗೆ ವಿಕೆಟ್ ಕಳೆದುಕೊಂಡರು. ದಕ್ಷಿಣ ಆಫ್ರಿಕಾ ತಂಡಕ್ಕೆ ಐತಿಹಾಸಿಕ ಗೆಲುವು ಸಾಧಿಸಲು 4 ವಿಕೆಟ್ ಅಗತ್ಯವಿದೆ.