ಕೊಲಂಬೊ, ಫೆ.16: 2026ರ ಟಿ20 ವಿಶ್ವಕಪ್ನಲ್ಲಿ ನಮೀಬಿಯಾ ವಿರುದ್ಧ ಬುಧವಾರ ನಡೆಯಲಿರುವ ಪಂದ್ಯಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡವು ಮಾಜಿ ನಾಯಕರಾದ ಬಾಬರ್ ಅಜಮ್ ಮತ್ತು ಶಾಹೀನ್ ಅಫ್ರಿದಿ ಅವರನ್ನು ಕೈಬಿಡಲಿದೆ ಎಂದು ವರದಿಯಾಗಿದೆ. ಜಿಯೋ ನ್ಯೂಸ್ ಪ್ರಕಾರ, ಇಬ್ಬರು ಹಿರಿಯ ಆಟಗಾರರ ನೀರಸ ಪ್ರದರ್ಶನದಿಂದ ತಂಡದ ಆಡಳಿತ ಮಂಡಳಿ ನಿರಾಶೆಗೊಂಡಿದೆ ಎನ್ನಲಾಗಿದೆ.
ಭಾನುವಾರ ಭಾರತ ವಿರುದ್ಧ ನಡೆದಿದ್ದ (ಫೆಬ್ರವರಿ 15) ಪಂದ್ಯದಲ್ಲಿ ಪಾಕಿಸ್ತಾನ ತಂಡ 61 ರನ್ಗಳ ಸೋಲು ಕಂಡಿತ್ತು. ಪಾಕಿಸ್ತಾನ ತಂಡ ಸೂಪರ್-8 ಹಂತಕ್ಕೆ ಪ್ರವೇಶಿಸಬೇಕಿದ್ದರೆ ನಮೀಬಿಯಾ ವಿರುದ್ಧ ಗೆಲ್ಲಲೇ ಬೇಕು. ಇದೇ ಕಾರಣದಿಂದ ಕಳಪೆ ಪ್ರದರ್ಶನ ತೋರುತ್ತಿರುವ ಅಜಂ ಮತ್ತು ಅಫ್ರೀದಿ ಅವರನ್ನು ತಂಡದಿಂದ ಕೈಬಿಡುವ ಚಿಂತನೆ ನಡೆದಿದೆ ಎನ್ನಲಾಗಿದೆ.
ಕಳಪೆ ಪಾರ್ಮ್ನಲ್ಲಿದ್ದರೂ ಈ ಆಟಗಾರರಿಗೆ ಪ್ರತಿ ಪಂದ್ಯದಲ್ಲಿ ಅವಕಾಶ ನೀಡುತ್ತಿರುವ ಕುರಿತು ಪಾಕ್ ಮಾಜಿ ಆಟಗಾರರು ಮತ್ತು ಅಭಿಮಾನಿಗಳು ಈಗಾಗಲೇ ಕ್ರಿಕೆಟ್ ಮಂಡಳಿ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಬಾಬರ್ ಅಜಂ ಭಾರತ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದು ಏಳು ಎಸೆತಗಳಲ್ಲಿ ಕೇವಲ ಐದು ರನ್ ಗಳಿಸಿದರು. ಬೌಲಿಂಗ್ನಲ್ಲಿ ಅಫ್ರೀದಿ ಯಾವುದೇ ಕಮಾಲ್ ಮಾಡಲಿಲ್ಲ. ತಮ್ಮ ಎರಡು ಓವರ್ಗಳಲ್ಲಿ 15.50 ಎಕಾನಮಿ ದರದಲ್ಲಿ 31 ರನ್ಗಳನ್ನು ಬಿಟ್ಟುಕೊಟ್ಟು ಅತ್ಯಂತ ದುಬಾರಿಯಾದರು.
ಪಾಕಿಸ್ತಾನವು ಬಾಬರ್ ಮತ್ತು ಶಾಹೀನ್ ಅವರನ್ನು ಕೈಬಿಟ್ಟರೆ, ತಂಡ ಫಖಾರ್ ಜಮಾನ್ ಮತ್ತು ವೇಗಿ ನಸೀಮ್ ಶಾ ಅವರನ್ನು ಆಯ್ಕೆ ಮಾಡಿಕೊಳ್ಳಬಹುದು. ನಮೀಬಿಯಾ ವಿರುದ್ಧದ ಪಂದ್ಯವು ಪಾಕ್ಗೆ ನಿರ್ಣಾಯಕ ಪಂದ್ಯವಾಗಿದೆ. ಸೋತರೆ ತಂಡ ಲೀಗ್ ಹಂತದಲ್ಲೇ ಹೊರಬೇಳಲಿದೆ.
IND vs PAK: ಪಾಕಿಸ್ತಾನ ವಿರುದ್ಧ ವಿಶೇಷ ದಾಖಲೆ ಬರೆದ ಭಾರತ
ಪಂದ್ಯದ ಬಳಿಕ ಮಾತನಾಡಿದ ತಂಡದ ಕೋಚ್ ಮೈಕ್ ಹೆಸ್ಸನ್ ತಮ್ಮ ಆಟಗಾರರು ಒತ್ತಡದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಹೆಚ್ಚಿನ ಶ್ರಮ ಬೇಕಾಗುತ್ತದೆ ಎಂದು ಸೂಚಿಸಿದ್ದರು.
"ಒಬ್ಬ ವ್ಯಕ್ತಿ ನಿಮ್ಮ ಮೇಲೆ ಒತ್ತಡ ಹೇರುವುದು ತುಂಬಾ ಕಷ್ಟ. ನೀವು ನಿಮ್ಮ ಮೂಲಭೂತ ವಿಷಯಗಳಿಗೆ ಅಂಟಿಕೊಳ್ಳುತ್ತೀರಾ ಅಥವಾ ಅದರಿಂದ ದೂರ ಹೋಗುತ್ತೀರಾ? ಮತ್ತು ಅದು ನಿಜವಾದ ಸವಾಲಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಪಂದ್ಯಾವಳಿ ಮುಂದುವರೆದಂತೆ, ನಾವು ಮತ್ತೆ ಒತ್ತಡಕ್ಕೆ ಒಳಗಾಗುತ್ತೇವೆ" ಎಂದು ಮೈಕ್ ಹೆಸ್ಸೆನ್ ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
"ನಾವು ಒತ್ತಡದಲ್ಲಿರುವಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯ. ಇವರೆಲ್ಲರೂ ಅಂತರರಾಷ್ಟ್ರೀಯ ಆಟಗಾರರು, ಅವರೆಲ್ಲರೂ ಉತ್ತಮ ಆಟಗಾರರು, ಆದರೆ ಒತ್ತಡ ಬಂದಾಗ, ಅವರು ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ನಂಬುತ್ತಾರೆಯೇ ಅಥವಾ ಅವರು ಬಹುಶಃ ಅದಕ್ಕಿಂತ ಹೊರಗೆ ಹೋಗುತ್ತಾರೆಯೇ? ಅದು ನಾವು ಉತ್ತಮಗೊಳ್ಳಬೇಕಾದ ವಿಷಯ" ಎಂದು ಹೆಸ್ಸನ್ ಹೇಳಿದರು.