ಹೈದರಾಬಾದ್, ಫೆ. 2: ಡೆನ್ಮಾರ್ಕ್ನ ದಂಪತಿ (Denmark couple) ಲೂಯಿಸ್ ಮತ್ತು ರಾಸ್ಮಸ್ ತಮ್ಮ ದತ್ತುಪುತ್ರ ಅರ್ಜುನ್ (ಡ್ಯಾನಿಶ್)ಗೆ ಜನ್ಮಕೊಟ್ಟ ತಾಯಿಯನ್ನು ಹುಡುಕುತ್ತ ಸಾವಿರಾರು ಮೈಲುಗಳಷ್ಟು ದೂರ ಪ್ರಯಾಣಿಸಿ ಭಾರತಕ್ಕೆ ಬಂದಿದ್ದಾರೆ. ತೆಲಂಗಾಣದ (Telangana) ಆದಿಲಾಬಾದ್ ಜಿಲ್ಲೆಗೆ ಈ ದಂಪತಿ ಭೇಟಿ ನೀಡಿದ್ದಾರೆ. ಈ ದಂಪತಿ ತಮ್ಮ ಮಗನ ನಿಜವಾದ ತಾಯಿಯನ್ನು ಪತ್ತೆ ಹಚ್ಚಲು ಚಿಲ್ಲಟಿಗುಡ, ಟೆಕಿಡಿಗುಡ, ಚೋರ್ಗಾಂವ್, ಸುಂಗಾಪುರ್ ಮತ್ತು ಇತರ ಪ್ರದೇಶಗಳ ಬುಡಕಟ್ಟು ಗ್ರಾಮಗಳಿಗೆ ಭೇಟಿ ನೀಡಿದ್ದಾರೆ.
ದಂಪತಿ ಹೋದಲ್ಲೆಲ್ಲ ಗ್ರಾಮಸ್ಥರು ಡ್ರಮ್ಸ್ ಬಾರಿಸಿ ಶಾಲುಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸುತ್ತಿದ್ದಾರೆ. ದಂಪತಿಯ ಜತೆ ಗ್ರಾಮಸ್ಥರು ಅಪರಿಚಿತರಂತೆ ಅಲ್ಲ, ಬದಲಾಗಿ ಕುಟುಂಬದವರಂತೆ ನಡೆದುಕೊಂಡಿದ್ದಾರೆ
ಅಂದಹಾಗೆ ಅರ್ಜುನ್ ಮಗುವಾಗಿದ್ದಾಗ 2016ರಲ್ಲಿ ಆದಿಲಾಬಾದ್ನ ರಿಮ್ಸ್ ಆಸ್ಪತ್ರೆಯಲ್ಲಿ ಪೋಷಕರು ಬಿಟ್ಟು ಹೋಗಿದ್ದರು. ಅವನು ಹುಟ್ಟಿದಾಗ ಬೆರಳುಗಳು ವಿರೂಪಗೊಂಡಿದ್ದವು. ಹೀಗಾಗಿ ಅವನ ಹೆತ್ತವರು ಅಸಹಾಯಕ ಮತ್ತು ಭಯಭೀತರಾಗಿ ಅವನನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ನಂತರ ಅವನನ್ನು ಅನಾಥಾಶ್ರಮಕ್ಕೆ ಸ್ಥಳಾಂತರಿಸಲಾಯಿತು.
ಮಗುವನ್ನು ಎದೆಗೆ ಕಟ್ಟಿಕೊಂಡು ಮ್ಯಾರಾಥಾನ್ ಓಡಿದ ತಂದೆ: ನೆಟ್ಟಿಗರಿಂದ ಆಕ್ರೋಶ
ಭಾರತದ ಕಾನೂನುಬದ್ಧ ದತ್ತು ವ್ಯವಸ್ಥೆಯ ಮೂಲಕ, ಲೂಯಿಸ್ ಮತ್ತು ರಾಸ್ಮಸ್ ದಂಪತಿ ಅರ್ಜುನ್ ಎರಡು ವರ್ಷದವನಿದ್ದಾಗ ಅವನನ್ನು ದತ್ತು ಪಡೆದರು. ಅಂದಿನಿಂದ, ಅವನು ಡೆನ್ಮಾರ್ಕ್ನಲ್ಲಿ ವಾಸಿಸುತ್ತಿದ್ದಾನೆ. ಆದರೆ ಅರ್ಜುನ್ ದೊಡ್ಡವನಾದಂತೆ, ನನ್ನ ತಾಯಿ ಯಾರು? ಎಂದು ಕೇಳಲು ಪ್ರಾರಂಭಿಸಿದನು.
ತನ್ನ ದತ್ತು ಪಡೆದ ಪೋಷಕರೊಂದಿಗೆ ತನ್ನ ಜನ್ಮದಾತರನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿಯಾಗಬೇಕೆಂಬ ಬಯಕೆಯ ಬಗ್ಗೆ ಅವನು ಆಗಾಗ ಹೇಳುತ್ತಿದ್ದ. ಇದನ್ನು ಕೇಳಿದ ಲೂಯಿಸ್ ಮತ್ತು ರಾಸ್ಮಸ್ ಅವನ ಭಾವನೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದರು. ಹೀಗಾಗಿ ಅವನ ಮೂಲ ಬೇರುಗಳನ್ನು ಕಂಡುಹಿಡಿಯಲು ನಿರ್ಧರಿಸಿದರು.
ದತ್ತು ಪಡೆದ ಅನೇಕ ಮಕ್ಕಳನ್ನು ಅವರ ಕುಟುಂಬಗಳೊಂದಿಗೆ ಮತ್ತೆ ಒಂದುಗೂಡಿಸಿದ ಸ್ವಯಂಸೇವಾ ಸಂಸ್ಥೆಯಾದ ಅಡಾಪ್ಟ್ ರೈಟ್ ಕೌನ್ಸಿಲ್ನ ಬೆಂಬಲದೊಂದಿಗೆ, ದಂಪತಿ ತಮ್ಮ ಹುಡುಕಾಟವನ್ನು ಪ್ರಾರಂಭಿಸಿದರು. ಕೌನ್ಸಿಲ್ ನಿರ್ದೇಶಕಿ ವಕೀಲೆ ಅಂಜಲಿ ಪವಾರ್ ಮಾತನಾಡಿ, ʼʼಅರ್ಜುನ್ನನ್ನು ದತ್ತು ಪಡೆದ ಪೋಷಕರಿಂದ ದೂರ ಮಾಡುವುದು ಇದರ ಉದ್ದೇಶವಲ್ಲ. ಅವನು ಅವರೊಂದಿಗೆ ವಾಸಿಸುವುದನ್ನು ಮುಂದುವರಿಸುತ್ತಾನೆ. ಅವನು ಎಲ್ಲಿಂದ ಬಂದಿದ್ದಾನೆಂದು ಅವನಿಗೆ ತಿಳಿಸುವುದು ಮಾತ್ರ ಉದ್ದೇಶʼʼ ಎಂದು ಹೇಳಿದರು.
ಅವಹೇಳನ ಮೆಟ್ಟಿ ನಿಂತು ಯಶಸ್ಸು ಕಂಡ ಸಿಲೇಂದ್ರನ್ ಅರುಣಗಿರಿ: ಜೀವನದ ಗುಟ್ಟು ಹೇಳಿದ ಐಐಎಂ ಪದವೀಧರ
ದಂಪತಿ ಒಂದು ವಾರ ಆದಿಲಾಬಾದ್ನಲ್ಲಿ ಉಳಿದುಕೊಂಡು ಗ್ರಾಮಸ್ಥರನ್ನು ಭೇಟಿಯಾಗಿ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಎಲ್ಲ ವಿವರಗಳನ್ನು ಖಾಸಗಿಯಾಗಿ ಮತ್ತು ಗೌರವಯುತವಾಗಿ ಇಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಅರ್ಜುನ್ನ ತಾಯಿ ಸಿಕ್ಕರೆ, ಅವರಿಗೆ ಆರ್ಥಿಕವಾಗಿ ಬೆಂಬಲ ನೀಡುತ್ತೇವೆ ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರುತ್ತೇವೆ ಎಂದು ಲೂಯಿಸ್ ಮತ್ತು ರಾಸ್ಮಸ್ ಹೇಳಿದರು. ಎರಡು ದೇಶಗಳ ನಡುವೆ ನಂಬಿಕೆ ಮತ್ತು ಪ್ರೀತಿಯ ಸೇತುವೆಯನ್ನು ನಿರ್ಮಿಸಲು ಅವರು ಬಯಸುತ್ತಾರೆ. ಸದ್ಯಕ್ಕೆ, ಹುಡುಕಾಟ ಮುಂದುವರಿದಿದೆ.