ಕಾಂಗ್ರೆಸ್ ನಾಯಕ ನಾನಾ ಪಟೋಲೆ ಪಾದಪೂಜೆ ಮಾಡಿದ ಕಾರ್ಯಕರ್ತರು: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ; ವಿಡಿಯೊ ವೈರಲ್
Congress Leader Nana Patole: ಗುರು ಪೂರ್ಣಿಮೆಯ ಸಂದರ್ಭದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ನಾನಾ ಪಟೋಲೆ ಅವರ ಪಾದಗಳನ್ನು ಇಬ್ಬರು ಕಾರ್ಯಕರ್ತರು ತೊಳೆದು ಪೂಜೆ ಸಲ್ಲಿಸಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ಇದನ್ನು ಕಾಂಗ್ರೆಸ್ ಸಂಸ್ಕೃತಿಯ ಪ್ರತಿಬಿಂಬ ಎಂದು ಆರೋಪಿಸಿದೆ. ಪಟೋಲೆ ಈ ಬಗ್ಗೆ ಸ್ಪಷ್ಟನೆ ನೀಡಿ ಪಾದಪೂಜೆ ಮಾಡಿದವರು ತಮ್ಮ ಕುಟುಂಬದ ಸದಸ್ಯರು ಹಾಗೂ ಗುರು ಪೂರ್ಣಿಮೆಯ ಅಂಗವಾಗಿ ಗೌರವ ಸೂಚಕವಾಗಿ ಈ ಆಚರಣೆ ನಡೆಸಿದ್ದಾರೆ ಎಂದಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರ ಪಾದ ಪೂಜೆ -
ಮುಂಬೈ, ಆ. 3: ಗುರು ಪೂರ್ಣಿಮೆಯ (Guru Purnima) ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಹಾರಾಷ್ಟ್ರ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ನಾನಾ ಪಟೋಲೆ (Nana Patole) ಅವರ ಪಾದಗಳನ್ನು ಇಬ್ಬರು ವ್ಯಕ್ತಿಗಳು ತೊಳೆದು ಪೂಜೆ ಸಲ್ಲಿಸಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.
ವೈರಲ್ ವಿಡಿಯೊದಲ್ಲಿ ಪಟೋಲೆ ಸೋಫಾದ ಮೇಲೆ ಕುಳಿತಿರುವಾಗ ಇಬ್ಬರು ಅವರ ಪಾದಗಳನ್ನು ನೀರಿನಿಂದ ತೊಳೆದು ಹೂವುಗಳನ್ನು ಅರ್ಪಿಸುತ್ತಿರುವುದು ಕಾಣಿಸುತ್ತದೆ. ಪಾದಗಳ ಬಳಿ ಹಣ್ಣುಗಳನ್ನು ಇಟ್ಟು ಪೂಜೆ ಸಲ್ಲಿಸಿರುವ ದೃಶ್ಯವೂ ವಿಡಿಯೊದಲ್ಲಿದೆ. ಈ ವಿಡಿಯೊ ವೈರಲ್ ಆದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.
ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರ ಪಾದಪೂಜೆ ನಡೆಯಿತು:
Nagpur A controversial video of former Maharashtra Congr president Nana Patole has gone viral on social media, showing him washing feet with milk.The clip has triggered a wave of anger against Patole, The video has sparked widespread discussion and debate online. pic.twitter.com/jrmV2KcZwT
— Chetna Raja (@ChetnaRaja) August 2, 2026
ಈ ಘಟನೆಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರದ ಸಚಿವ ಹಾಗೂ ಬಿಜೆಪಿ ನಾಯಕ ಚಂದ್ರಶೇಖರ್ ಬಾವಂಕುಲೆ, ʼʼಇದು ಕಾಂಗ್ರೆಸ್ ನಾಯಕರ ಸಂಸ್ಕೃತಿಯನ್ನು ತೋರಿಸುತ್ತದೆ" ಎಂದು ಟೀಕಿಸಿದರು. ಇಂತಹ ನಡೆಗಳಿಂದ ಸಾರ್ವಜನಿಕರಿಗೆ ನಕಾರಾತ್ಮಕ ಸಂದೇಶ ಹೋಗುತ್ತದೆ ಮತ್ತು ಟೀಕೆ ಮಾತ್ರ ಎದುರಾಗುತ್ತದೆ ಎಂದು ಅವರು ಹೇಳಿದರು.
ಗೋಕರ್ಣದಲ್ಲಿ ರಾಘವೇಶ್ವರ ಭಾರತೀ ಶ್ರೀಗಳ ʼಅನ್ನಬ್ರಹ್ಮ ಚಾತುರ್ಮಾಸ್ಯʼ ವ್ರತಾರಂಭ
ವಿವಾದದ ಕುರಿತು ಪ್ರತಿಕ್ರಿಯಿಸಿದ ನಾನಾ ಪಟೋಲೆ, ತಾವು ಯಾರನ್ನೂ ಪಾದಪೂಜೆ ಮಾಡಲು ಹೇಳಿಲ್ಲ ಅಥವಾ ಒತ್ತಾಯಿಸಿಲ್ಲ ಎಂದು ಸ್ಪಷ್ಟಪಡಿಸಿದರು.
"ಅಂದು ಗುರು ಪೂರ್ಣಿಮೆ ಇತ್ತು. ನನ್ನ ಕುಟುಂಬದ ಇಬ್ಬರು ಕಿರಿಯ ಸದಸ್ಯರು ನನ್ನನ್ನು ತಮ್ಮ ಗುರು ಎಂದು ಭಾವಿಸಿ ಗೌರವ ಸೂಚಕವಾಗಿ ಪಾದಪೂಜೆ ಮಾಡಲು ಒತ್ತಾಯಿಸಿದರು. ಅದು ಅವರ ವೈಯಕ್ತಿಕ ಭಾವನೆ, ಇದರಲ್ಲಿ ಯಾವುದೇ ವಿವಾದವಿಲ್ಲ" ಎಂದು ಹೇಳಿದರು.
ಬಿಜೆಪಿಯ ಟೀಕೆಗೆ ತಿರುಗೇಟು ನೀಡಿದ ಅವರು, "ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ನಮಗೆ ಪಾಠ ಹೇಳುವ ಹಕ್ಕು ಬಿಜೆಪಿಗೆ ಇಲ್ಲ" ಎಂದರು. ದೇವಾಲಯಗಳ ಕಾಣಿಕೆ ಹಣದ ದುರ್ಬಳಕೆ ಕುರಿತು ಪರೋಕ್ಷವಾಗಿ ಉಲ್ಲೇಖಿಸಿ, ಅಂತಹ ಆರೋಪಗಳನ್ನು ಎದುರಿಸುತ್ತಿರುವವರು ನಮಗೆ ಸಂಸ್ಕೃತಿ ಬೋಧಿಸಬಾರದು ಎಂದು ವಾಗ್ದಾಳಿ ನಡೆಸಿದರು.
ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.