ಶಿಮ್ಲಾ, ಜ. 27: ಪ್ರಾಣಿಗಳಿಗೆ ಪ್ರೀತಿ ತೋರಿಸಿದರೆ ಅವು ಪ್ರಾಣವನ್ನೂ ಲೆಕ್ಕಿಸದೆ ಮಾಲಕನನ್ನು ರಕ್ಷಿಸಿದ ಅನೇಕ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಪ್ರಾಣಿಗಳು ಮನುಷ್ಯರಿಗಿಂತಲೂ ಹೆಚ್ಚಾಗಿ ಪ್ರೀತಿ ಮತ್ತು ನಿಷ್ಠೆಯನ್ನು ಹೊಂದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೌರ್ನಲ್ಲಿ ಹೃದಯಸ್ಪರ್ಶಿ ಘಟನೆಯೊಂದು ಕಂಡು ಬಂದಿದೆ. ನಾಯಿಯೊಂದು ಮತ್ತೊಮ್ಮೆ ತನ್ನ ಮಾಲಕನ ಜತೆ ನಿಷ್ಠೆಯನ್ನು ಸಾಬೀತುಪಡಿಸಿದೆ. ನಿಷ್ಠಾವಂತ ಪಿಟ್ಬುಲ್ ಶ್ವಾನವೊಂದು ತನ್ನ ಮೃತ ಮಾಲಕನ ಪಕ್ಕದಲ್ಲಿ ನಾಲ್ಕು ದಿನಗಳ ಕಾಲ ಬಿಟ್ಟು ಕದಲದ ವಿಡಿಯೊವೊಂದು (Viral Video) ನೋಡುಗರನ್ನು ಮೂಕರನ್ನಾಗಿಸಿದೆ.
ಭರ್ಮೌರ್ನ ಭರ್ಮಣಿ ದೇವಸ್ಥಾನದ ಬಳಿ ವಿಕ್ಷಿತ್ ರಾಣಾ ಮತ್ತು ಪಿಯೂಷ್ ಎಂಬ ಇಬ್ಬರು ಯುವಕರು ಕಾಣೆಯಾಗಿದ್ದು, ನಂತರ ಅವರು ಹವಾಮಾನ ವೈಪರೀತ್ಯದ ನಡುವೆ ಹಿಮದಲ್ಲಿ ಸಿಲುಕಿಕೊಂಡು ಸಾವನ್ನಪ್ಪಿರುವುದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ರಕ್ಷಣಾ ತಂಡಗಳು ಮತ್ತು ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ತಲುಪಿದಾಗ ಹೃದಯ ವಿದ್ರಾವಕ ದೃಶ್ಯ ಕಂಡು ಬಂದಿದೆ. ಮೈ ಕೊರೆಯುವ ಚಳಿಯಲ್ಲೂ ಕೂಡ ನಾಯಿ ತನ್ನ ಮೃತ ಯಜಮಾನನನ್ನು ಬಿಟ್ಟು ಕದಲದೆ ಅಲ್ಲೇ ಪಕ್ಕದಲ್ಲಿ ಕುಳಿತುಕೊಂಡಿದೆ.
ವಿಡಿಯೊ ನೋಡಿ:
ಆ ಯುವಕನ ಶವ ಹಿಮದ ಪದರಗಳ ಸಿಲುಕಿಕೊಂಡಿತ್ತು. ಆದರೆ ಆತನ ಸಾಕು ನಾಯಿ ಮೃತದೇಹದ ಪಕ್ಕದಿಂದ ಕದಲಲೇ ಇಲ್ಲ. ಸತತ 4 ದಿನಗಳ ಕಾಲ ಆಹಾರ, ನೀರಿಲ್ಲದೆ ಆ ಶ್ವಾನ ಅಲ್ಲಿಯೇ ಇತ್ತು. ಕೊರೆಯುವ ಚಳಿ ಮತ್ತು ಬೃಹತ್ ಗಾಳಿಯೊಂದಿಗೆ ಹೋರಾಡುತ್ತ, ನಾಯಿ ಕಾವಲು ಕಾಯುತ್ತಾ ಕಾಡು ಪ್ರಾಣಿಗಳಿಂದ ತನ್ನ ಮಾಲಕನ ದೇಹವನ್ನು ರಕ್ಷಿಸಿದೆ.
ಶ್ರವಣ ಸಮಸ್ಯೆಯುಳ್ಳ ವ್ಯಕ್ತಿಗೆ ವಿಮಾನ ಪ್ರಯಾಣದ ಮಾರ್ಗದರ್ಶನ ನೀಡಿದ ಇಂಡಿಗೋ ಸಿಬಂದಿ
ರಕ್ಷಣಾ ತಂಡ ಮೃತದೇಹವನ್ನು ಕೊಂಡೊಯ್ಯಲು ಬಂದಾಗ ತನ್ನ ಯಜಮಾನನನ್ನು ಯಾರೋ ಎತ್ತಿ ಕೊಂಡು ಹೋಗುತ್ತಿದ್ದಾರೆ ಎಂದು ಭಾವಿಸಿ ನಾಯಿ ಬೊಗಳತೊಡಗಿದೆ. ನಂತರ ರಕ್ಷಣಾ ಸಿಬ್ಬಂದಿ ನಾಯಿಯನ್ನು ಪ್ರೀತಿಯಿಂದ ಸವರಿ ಸಮಾಧಾನ ಪಡಿಸಿದ್ದಾರೆ. ಆ ಬಳಿಕವಷ್ಟೇ ಮೃತದೇಹವನ್ನು ಅಲ್ಲಿಂದ ಸ್ಥಳಾಂತರಿಸಲು ಶ್ವಾನ ಅವಕಾಶ ನೀಡಿತು. ಈ ಹೃದಯಸ್ಪರ್ಶಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಶ್ವಾನದ ನಿಷ್ಠೆಗೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಷ್ಠಾವಂತ ಸಾಕುಪ್ರಾಣಿಯ ವರ್ತನೆ ಅನೇಕರ ಹೃದಯ ಮುಟ್ಟಿದೆ. ಒಬ್ಬರು ಪುರುಷರ ಆತ್ಮೀಯ ಸ್ನೇಹಿತ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಮನುಷ್ಯರಿಗಿಂತ ಪ್ರಾಣಿಗಳು ಮೇಲು ಎಂದು ಬರೆದುಕೊಂಡಿದ್ದಾರೆ