ಲಕ್ನೋ, ಡಿ. 27: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನಾಚರಣೆ ಯನ್ನು ದೇಶಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಅವರ ಜನ್ಮದಿನದ ಸ್ಮರಣಾರ್ಥ ವಾಗಿ ಲಕ್ನೋದಲ್ಲಿ ರಾಷ್ಟ್ರೀಯ ಪ್ರೇರಣಾ ಸ್ಥಳವನ್ನು ಮಾಡಲಾಗಿದ್ದು ಅಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆ ಕೂಡ ನಿರ್ಮಿಸಲಾಗಿದೆ. ಒಂದು ಕಾಲದಲ್ಲಿ ಕಸ ಹಾಕುತಿದ್ದ ಸ್ಥಳ ಈಗ ಸಂಪೂರ್ಣ ಬದಲಾಗಿದ್ದು ಉದ್ಯಾನವನ ಸೇರಿದಂತೆ ವಿವಿಧ ನೈಸರ್ಗಿಕ ಸಂಪನ್ಮೂಲಗಳ ಮಹತ್ವ ಸಾರುವ ಸ್ಥಳವಾಗಿ ಈ ಸ್ಥಳ ರೂಪುಗೊಂಡಿದೆ. ಈ ರಾಷ್ಟ್ರೀಯ ಪ್ರೇರಣಾ ಸ್ಥಳವನ್ನು ಉದ್ಘಾಟಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಲಕ್ನೋಗೆ ಭೇಟಿ ನೀಡಿದ್ದರು. ಈ ಭೇಟಿಯಲ್ಲಿ ರಾಷ್ಟ್ರೀಯ ಸ್ಮಾರಕದ ಉದ್ಘಾಟನೆ ಮತ್ತು ಪ್ರಜೆಗಳನ್ನು ಉದ್ದೇಶಿಸಿ ಭಾಷಣ ಸೇರಿದಂತೆ ಹಲವು ಕಾರ್ಯಕ್ರಮ ಕೂಡ ನಡೆದಿದೆ. ಇದೇ ಕಾರ್ಯಕ್ರಮಕ್ಕಾಗಿ ಉತ್ತರ ಪ್ರದೇಶದ ರಾಜಧಾನಿಗೆ ದೊಡ್ಡ ಜನಸಮೂಹವೇ ಬಂದಿದ್ದು ಬಂದವರಿಗೆ ಉಪಾಹಾರ ವ್ಯವಸ್ಥೆ ಕೂಡ ಮಾಡಲಾಗಿದೆ. ಆದರೆ ಕೆಲವು ಜನರಿಗೆ ಉಪಾಹಾರ ಸಿಗದೆ ಅವ್ಯವಸ್ಥೆ ಆಗಿದ್ದು ಸಮೋಸಕ್ಕಾಗಿ ಕಿತ್ತಾಡಿದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ.
ಡಿಸೆಂಬರ್ 25 ರಂದು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾ ಚರಣೆಯ ಅಂಗವಾಗಿ ಅವರ ಜೀವನ ಮತ್ತು ಆದರ್ಶಗಳನ್ನು ಗೌರವಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜನಸಮೂಹವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಅವರು ಭಾಷಣ ಕೂಡ ಮಾಡಿದ್ದರು. ವೇದಿಕೆಯಲ್ಲಿ ಅವರು ಭಾಷಣ ಮಾಡುತ್ತಿದ್ದಾಗಲೇ ಸಭಿಕರು ಕುಳಿತಿದ್ದ ಸ್ಥಳದಲ್ಲಿ ಅವ್ಯವಸ್ಥೆ ಉಂಟಾಗಿದೆ. ಕೆಲವು ಜನರು ತಮಗೆ ಸಮೋಸಾಗಳನ್ನು ನೀಡ ಲಾಗಿಲ್ಲ ಎಂಬ ಕಾರಣಕ್ಕೆ ತಕರಾರು ಎತ್ತಿದ್ದಾರೆ. ಮೂವರು ವ್ಯಕ್ತಿಗಳು ತಿಂಡಿಗಾಗಿ ಹೊಡೆದಾಡಿ ಕೊಳ್ಳುತ್ತಿರುವ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ವ್ಯಕ್ತಿಯೊಬ್ಬ ಸೆರೆಹಿಡಿದಿದ್ದಾನೆ.
ವಿಡಿಯೋ ನೋಡಿ:
ವೈರಲ್ ಆದ ವಿಡಿಯೋದಲ್ಲಿ ಪುರುಷರು ಪದೇ ಪದೇ ಹೊಡೆದಾಡುತ್ತಿರುವುದು, ಕುರ್ಚಿಗಳನ್ನು ಎಸೆಯುವುದು, ನಿಂದಿಸುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು. ಕೆಲವು ಕ್ಷಣಗಳ ಕಾಲ ಗಲಾಟೆ ಹೀಗೆ ಮುಂದುವರಿದಿದ್ದು ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಧ್ವನಿ ಮೈಕ್ ನಲ್ಲಿ ಕೇಳಿಬರುವುದು ಕೂಡ ವಿಡಿಯೋದಲ್ಲಿದೆ. ಈ ವಿಡಿಯೋವನ್ನು ಟ್ವಿಟ್ಟರ್ ಎಕ್ಸ್ ನಲ್ಲಿ ಹಂಚಿ ಕೊಳ್ಳಲಾಗಿದೆ. ಲಕ್ನೋ ಕಾರ್ಯಕ್ರಮದಲ್ಲಿ ಸಮೋಸಾಕ್ಕಾಗಿ ಜನರು ಗಲಾಟೆ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಈ ವೀಡಿಯೊ ಆನ್ಲೈನ್ನಲ್ಲಿ ತರತರನಾಗಿ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಜನರಿಗೆ ಮನೆಯಲ್ಲಿ ಎಷ್ಟೇ ತಿಂಡಿ ತಿನಿಸು ಇದ್ದರೂ ಫ್ರೀ ಆಗಿ ಕೊಡುವ ತಿಂಡಿ ಮೇಲೆ ವಿಶೇಷ ವ್ಯಾಮೋಹ ಇರುತ್ತದೆ. ಹಾಗಿದ್ದ ಮೇಲೆ ಸಿಗದಿದ್ದರೆ ಬೇಜಾರಂತೂ ಖಂಡಿತಾ ಆಗುತ್ತದೆ ಎಂದು ಬಳಕೆದಾರ ರೊಬ್ಬರು ಕಾಮೆಂಟ್ ಮಾಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮ ಎಂದ ಮೇಲೆ ಇಂತಹ ಉಪಾಹಾರ ವ್ಯವಸ್ಥೆ ಆಚೆ ಈಚೆ ಆಗುವುದು ಸಾಮಾನ್ಯ ಆದರೆ ಜನರು ಅದನ್ನು ಅರ್ಥ ಮಾಡಿಕೊಂಡು ಪ್ರಜ್ಞಾವಂತರಂತೆ ವರ್ತಿಸಬೇಕು ಎಂದು ಮತ್ತೊಬ್ಬ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಇದೇ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಇನ್ನೊಂದು ವಿಡಿಯೋ ಕೂಡ ವೈರಲ್ ಆಗಿತ್ತು. ಪ್ರಧಾನ ಮಂತ್ರಿ ಅವರ ಸ್ವಾಗತಕ್ಕಾಗಿ ರಸ್ತೆ ಬದಿಯಲ್ಲಿ ಸಾಲಾಗಿ ಜೋಡಿಸಿದ್ದ ಸಾವಿರಾರು ಹೂವಿನ ಕುಂಡಗಳನ್ನು ಸ್ಥಳೀಯರು ಕೊಂಡೊಯ್ಯುತ್ತಿರುವುದನ್ನು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾಗಿತ್ತು. ಪ್ರಧಾನಿ ಅವರು ಕಾರ್ಯಕ್ರಮ ಮುಗಿಸಿ ನಿರ್ಗಮಿಸುತ್ತಿದ್ದಂತೆಯೇ ಅಲ್ಲಿನ ಸ್ಥಳೀಯರು ಈ ದುವರ್ತನೆ ತೋರಿದ್ದಾರೆ. ಈ ಮೂಲಕ ಅಲ್ಲಿನ ಆಡಳಿತ ವ್ಯವಸ್ಥೆ ವಿಫಲತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ಕೂಡ ವ್ಯಕ್ತವಾಗುತ್ತಿದೆ.