Viral Video: ಸಂಕಷ್ಟದಲ್ಲೂ ಹೃದಯವೈಶಾಲ್ಯತೆ ಮೆರೆದ ದೇವತಾ ಮನುಷ್ಯ! ಹೃದಯ ಮಿಡಿಯೋ ಈ ವಿಡಿಯೊ ನೋಡಿ
Man is serving tea to the volunteers: ಪಂಜಾಬ್ ರಾಜ್ಯವು ಕಂಡೂ ಕೇಳರಿಯದ ಭೀಕರ ಪ್ರವಾಹಕ್ಕೆ ತುತ್ತಾಗಿವೆ. ಲಕ್ಷಾಂತರ ಮಂದಿ ತಮ್ಮ ಮನೆ, ಜಮೀನು ಕಳೆದುಕೊಂಡಿದ್ದಾರೆ. ಈ ಬಿಕ್ಕಟ್ಟಿನ ನಡುವೆಯೂ, ವ್ಯಕ್ತಿಯೊಬ್ಬರು ಸ್ವಯಂಸೇವಕರಿಗೆ ಚಹಾ ವಿತರಿಸುತ್ತಿರುವ ಹೃದಯಸ್ಪರ್ಶಿ ವಿಡಿಯೊ ವೈರಲ್ ಆಗುತ್ತಿದೆ.

-

ಅಮೃತಸರ: ಪಂಜಾಬ್ (Punjab) ರಾಜ್ಯವು 40 ವರ್ಷಗಳ ನಂತರ ಕಂಡೂ ಕೇಳರಿಯದ ಭೀಕರ ಪ್ರವಾಹವನ್ನು ಎದುರಿಸುತ್ತಿದೆ. ಲಕ್ಷಾಂತರ ಜನರು ತಮ್ಮ ಜಮೀನುಗಳು ಮತ್ತು ಮನೆಗಳು ನೀರಿನಲ್ಲಿ ಮುಳುಗಿ ಸಂಕಷ್ಟದಲ್ಲಿದ್ದಾರೆ. ಈ ಬಿಕ್ಕಟ್ಟಿನ ನಡುವೆಯೂ, ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ಬಂದ ಸ್ವಯಂಸೇವಕರಿಗೆ ವ್ಯಕ್ತಿಯೊಬ್ಬರು ಚಹಾ ವಿತರಿಸುತ್ತಿರುವ ಹೃದಯಸ್ಪರ್ಶಿ ವಿಡಿಯೊ ವೈರಲ್ (Viral Video) ಆಗುತ್ತಿದೆ.
ಪ್ರವಾಹದಲ್ಲಿ ಎಲ್ಲವನ್ನೂ ಕಳೆದುಕೊಂಡ ವ್ಯಕ್ತಿಯೊಬ್ಬ ಫ್ಲಾಸ್ಕ್ ಹಿಡಿದುಕೊಂಡು ಮುಳುಗಡೆಯಾಗಿರುವ ಪ್ರದೇಶದ ಮೂಲಕ ನಡೆದುಕೊಂಡು ಹೋಗಿ ಸ್ವಯಂಸೇವಕರಿಗೆ ಚಹಾ ಕೊಟ್ಟಿದ್ದಾನೆ. ಈ ವಿಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡ ಖ್ಯಾತ ಕ್ರಿಕೆಟಿಗ ಮತ್ತು ರಾಜ್ಯಸಭಾ ಸದಸ್ಯ ಹರ್ಭಜನ್ ಸಿಂಗ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.
ಸ್ವಯಂಸೇವಕರು ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ಹೋದಾಗ, ಪ್ರವಾಹ ಪೀಡಿತ ಕುಟುಂಬವು ಬಹುತೇಕ ಎಲ್ಲವನ್ನೂ ಕಳೆದುಕೊಂಡಿದ್ದರೂ ಸಹ, ಚಹಾವನ್ನು ತಯಾರಿಸಿ ಪ್ರತಿಯಾಗಿ ಸ್ವಯಂಸೇವಕರಿಗೆ ಬಡಿಸಿದ್ದಾರೆ. ಅದಕ್ಕಾಗಿ ಅವರನ್ನು ದೇವರ ಮಕ್ಕಳು ಎಂದು ಕರೆಯಲಾಗಿದೆ.
ವಿಡಿಯೊ ವೀಕ್ಷಿಸಿ:
When volunteers went to deliver relief materials, the flood-affected family despite having lost almost everything prepared tea and served it to the volunteers in return. That’s the spirit of Panjab. Rab de bande. #Punjab #PunjabFloods pic.twitter.com/EVdCuHlKuP
— Harbhajan Turbanator (@harbhajan_singh) September 3, 2025
ಅಂದಹಾಗೆ, ಪಂಜಾಬ್ನಲ್ಲಿ ಸಂಭವಿಸಿದ ಭಾರಿ ಪ್ರವಾಹವು 23 ಜಿಲ್ಲೆಗಳಲ್ಲಿ ಹಾನಿಯನ್ನುಂಟುಮಾಡಿದೆ. 1400 ಹಳ್ಳಿಗಳು ಮತ್ತು 3.5 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. ಅಂಕಿಅಂಶಗಳ ಪ್ರಕಾರ, ಪಠಾಣ್ಕೋಟ್ನಲ್ಲಿ ಅತಿ ಹೆಚ್ಚು ಅಂದರೆ 6 ಸಾವುಗಳು ಸಂಭವಿಸಿವೆ. ಲುಧಿಯಾನದಲ್ಲಿ ನಾಲ್ಕು ಸಾವುಗಳು ಸಂಭವಿಸಿವೆ.
ಗುರುದಾಸ್ಪುರವು ಅತಿಹೆಚ್ಚು ಹಾನಿಗೊಳಗಾಗಿದ್ದು, 324 ಗ್ರಾಮಗಳು ಸಂಕಷ್ಟಕ್ಕೀಡಾಗಿದೆ. ಅಮೃತಸರದ 135 ಗ್ರಾಮಗಳು ಮತ್ತು ಹೋಶಿಯಾರ್ಪುರದ 119 ಗ್ರಾಮಗಳು ಹಾನಿಗೊಳಗಾಗಿವೆ. ರಾಜ್ಯದಲ್ಲಿ ಕೃಷಿ ವಲಯದ ಮೇಲೆ ತೀವ್ರ ಪರಿಣಾಮ ಬೀರಿದ್ದು, 1,48,590 ಹೆಕ್ಟೇರ್ ಬೆಳೆಗಳು ಹಾನಿಗೊಳಗಾಗಿವೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ 19,597 ಜನರನ್ನು ಸ್ಥಳಾಂತರಿಸಲಾಗಿದೆ.
ಗುರುದಾಸ್ಪುರದಲ್ಲಿ 5,581 ಜನರನ್ನು ಸ್ಥಳಾಂತರಿಸಲಾಗಿದ್ದರೆ, ಫಿರೋಜ್ಪುರದಲ್ಲಿ 3,432 ಹಾಗೂ ಅಮೃತಸರದಲ್ಲಿ 2,734 ಜನರನ್ನು ಸ್ಥಳಾಂತರಿಸಲಾಗಿದೆ. ಬರ್ನಾಲಾದಲ್ಲಿ 29, ಅಮೃತಸರದಲ್ಲಿ 16 ಮತ್ತು ಪಠಾಣ್ಕೋಟ್ನಲ್ಲಿ 14 ಸೇರಿದಂತೆ ಒಟ್ಟು 174 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಪ್ರಸ್ತುತ 74 ಶಿಬಿರಗಳು ಸಕ್ರಿಯವಾಗಿವೆ. ಇನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಜಿಲ್ಲೆಗಳಾದ್ಯಂತ 23 ತಂಡಗಳನ್ನು ನಿಯೋಜಿಸಿದ್ದು, ಗುರುದಾಸ್ಪುರ ಮತ್ತು ಅಮೃತಸರದಲ್ಲಿ ತಲಾ 6 ತಂಡಗಳು ಮತ್ತು ಫಿರೋಜ್ಪುರ ಮತ್ತು ಫಜಿಲ್ಕಾದಲ್ಲಿ ತಲಾ ಮೂರು ತಂಡಗಳನ್ನು ನಿಯೋಜಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ವಿದ್ಯಾರ್ಥಿನಿಯ ಜೀವ ಉಳಿಸಿದ ಇನ್ಸ್ಟಾಗ್ರಾಮ್! ಹೇಗೆ ಅಂತೀರಾ?