ಭೋಪಾಲ್: ಕಳ್ಳರನ್ನು ಹಿಡಿಯಬೇಕಾದ ಪೊಲೀಸರೇ ಕಳ್ಳತನ ಮಾಡಿದರೆ ಏನು ಮಾಡುವುದು? ಇದೀಗ ಇಂಥದ್ದೇ ಒಂದು ಘಟನೆ ನಡೆದಿದೆ. ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸ್ನೇಹಿತೆಯ ಮನೆಯಿಂದ 2 ಲಕ್ಷ ರೂಪಾಯಿ ನಗದು ಮತ್ತು ಮೊಬೈಲ್ ಫೋನ್ (mobile phone) ಅನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ (Bhopal) ಈ ಘಟನೆ ನಡೆದಿದೆ. ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಕಲ್ಪನಾ ರಘುವಂಶಿ ಈ ಕೃತ್ಯವೆಸಗಿದವರು. ಘಟನೆ ಬೆಳಕಿಗೆ ಬಂದ ನಂತರ ಅವರು ನಾಪತ್ತೆಯಾಗಿದ್ದಾರೆ. ಆಕೆಯ ವಿರುದ್ಧ ಕಳ್ಳತನದ ಪ್ರಕರಣ ದಾಖಲಾಗಿದೆ. ಭೋಪಾಲ್ನ ಜಹಾಂಗೀರಾಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದೂರಿನ ಪ್ರಕಾರ, ಕಳ್ಳತನವೆಸಗಿದ ಪೊಲೀಸ್ ಅಧಿಕಾರಿಯ ಸ್ನೇಹಿತೆಯು ಸ್ನಾನಕ್ಕೆ ಹೋಗುವ ಮೊದಲು ತನ್ನ ಮೊಬೈಲ್ ಫೋನ್ ಅನ್ನು ಚಾರ್ಜ್ನಲ್ಲಿಟ್ಟು ಹೋಗಿದ್ದರು ಎಂದು ತಿಳಿದಿಬಂದಿದೆ.
ಸಮಯ ಕಾದು ಮನೆಗೆ ನುಗ್ಗಿದ ಕಳ್ಳಿ ಪೊಲೀಸ್, ಸ್ನೇಹಿತೆಯ ಬ್ಯಾಗ್ನಿಂದ 2 ಲಕ್ಷ ರೂಪಾಯಿ ನಗದು ಮತ್ತು ಇನ್ನೊಂದು ಮೊಬೈಲ್ ಫೋನ್ ಅನ್ನು ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ದೂರುದಾರರು ಕಾಣೆಯಾದ ವಸ್ತುಗಳನ್ನು ಗಮನಿಸಿದಾಗ, ಅವರು ತಮ್ಮ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ವಿಡಿಯೊದಲ್ಲಿ ಡಿಎಸ್ಪಿ ರಘುವಂಶಿ ಮನೆಯೊಳಗೆ ಪ್ರವೇಶಿಸಿ ನಿರ್ಗಮಿಸುತ್ತಿರುವುದನ್ನು ಮತ್ತು ಆವರಣದಿಂದ ಹೊರಡುವಾಗ ನಗದು ಬಂಡಲ್ನಂತೆ ಕಾಣುವ ಹಣವನ್ನು ಹಿಡಿದುಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಹಿಳೆಯು ತಕ್ಷಣ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ನಂತರ ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ. ದೂರುದಾರರ ಮೊಬೈಲ್ ಫೋನ್ ಅನ್ನು ನಂತರ ಆರೋಪಿ ಅಧಿಕಾರಿಯ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದೃಢಪಡಿಸಿದರು. ದೂರುದಾರರ ಮೊಬೈಲ್ ಫೋನ್ ಅನ್ನು ಆರೋಪಿಯ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆಕೆಯನ್ನು ಕಾಣಬಹುದು ಎಂದು ಅವರು ಹೇಳಿದರು.
ವಿಡಿಯೊ ವೀಕ್ಷಿಸಿ:
ಪೊಲೀಸರು ಹಲವು ಬಾರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ಅಧಿಕಾರಿ ತಲೆಮರೆಸಿಕೊಂಡಿದ್ದಾನೆ. ಕದ್ದ ನಗದು ಇನ್ನೂ ಪತ್ತೆಯಾಗಿಲ್ಲ. ಮಧ್ಯಪ್ರದೇಶ ಪೊಲೀಸ್ ಪ್ರಧಾನ ಕಚೇರಿಯು ರಘುವಂಶಿ ವಿರುದ್ಧ ಇಲಾಖಾ ನೋಟಿಸ್ ಜಾರಿ ಮಾಡಿದ್ದು, ಶಿಸ್ತು ಕ್ರಮಗಳನ್ನು ಆರಂಭಿಸಿದೆ.
ಇದನ್ನೂ ಓದಿ: Bangladesh National Anthem: ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದ ರಾಷ್ಟ್ರಗೀತೆ: ಬಿಜೆಪಿಯಿಂದ ತರಾಟೆ
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇರಳ ಸಚಿವನ ಮೇಲೆ ಆರೋಪ
ಇನ್ನು ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ ಸಂಬಂಧ, ಇದರಲ್ಲಿ ಕೇರಳದ ದೇವಸ್ವಂ ಸಚಿವ ವಿ.ಎನ್. ವಾಸವನ್ ಅವರು ಭಾಗಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ ಕೇಂದ್ರ ತನಿಖಾ ಸಂಸ್ಥೆಯಿಂದ ಈ ಪ್ರಕರಣದ ತನಿಖೆ ನಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಇನ್ನು ಈ ಪ್ರಕರಣವನ್ನು ತನಿಖೆ ಮಾಡುತ್ತಿರುವ ವಿಶೇಷ ತನಿಖಾ ತಂಡ (SIT) ಇದುವರೆಗೆ ಕಳುವಾದ ಸುಮಾರು 400 ಗ್ರಾಂ ಚಿನ್ನವನ್ನು ಕರ್ನಾಟಕದ ಬಳ್ಳಾರಿಯ ಒಬ್ಬ ಆಭರಣ ವ್ಯಾಪಾರಿಯಿಂದ ವಶಪಡಿಸಿಕೊಂಡಿದೆ ಎಂದು ತಿಳಿಸಿದೆ.