ಆಪರೇಷನ್​ ಸಿಂಧೂರ ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kaayarga Column: ಆಡಳಿತ ಸೇವೆ, ಆಡಳಿತದಲ್ಲಿ ಇರುವವರ ಸೇವೆ ಅಲ್ಲ !

ಮದ್ಯ ಕಂಪನಿಯ ಹೆಸರಿನ ಕೊನೆಯಲ್ಲಿ ಬೆಂಗಳೂರು ಸೇರಿಕೊಂಡಿದೆ ಎಂಬ ಕಾರಣಕ್ಕೆ ಕನ್ನಡಿಗ ರೆಲ್ಲರೂ ಆರ್‌ಸಿಬಿ ಎಂಬ ತಂಡವನ್ನು ಎದೆಯಲ್ಲಿರಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ 18 ವರ್ಷಗಳ ಬಳಿಕ ಬಂದ ಗೆಲುವನ್ನು ಸಂಭ್ರಮಿಸಿದ್ದಾರೆ. ಸರಕಾರ ಜನರ ಸಂಭ್ರಮದಲ್ಲಿ ಭಾಗಿಯಾಗಿ ಅಭಿನಂದನೆ ಸಲ್ಲಿಸಿದ್ದರೆ ಸಾಕಿತ್ತು. ಹೆಚ್ಚೆಂದರೆ ಆಟಗಾರರನ್ನು ರಾಜಭವನ ಇಲ್ಲವೇ, ಸಿಎಂ ನಿವಾಸಕ್ಕೆ ಕರೆದು ಸನ್ಮಾನಿಸಬಹುದಿತ್ತು. ಆದರೆ ಅಭಿಮಾನಿಗಳಂತೆ ಸರಕಾರವೂ ಅತಿರೇಕದ ನಡೆ ಇಟ್ಟಿದ್ದು ಈ ದುರಂತದ ಮೂಲ. ಯಾವ ಪೂರ್ವ ಸಿದ್ಧತೆಯೂ ಇಲ್ಲದೆ ಅವಸರದಲ್ಲಿ ಕಾರ್ಯಕ್ರಮ ಆಯೋಜಿಸುವುದರಿಂದ ಕಾನೂನು ಸುವ್ಯವಸ್ಥೆ ಏರುಪೇರಾಗುವ ಸಾಧ್ಯತೆಯನ್ನು ಐಎಎಸ್, ಐಪಿಎಸ್ ಅಧಿಕಾರಿಗಳು ಒಟ್ಟಾಗಿ ನಾಯಕರಿಗೆ ಮನದಟ್ಟು ಮಾಡಿಕೊಟ್ಟಿದ್ದರೆ ಈ ಅನಾಹುತ ನಡೆಯುತ್ತಿರಲ್ಲಿಲ್ಲ. ರಾಜಕೀಯ ನಾಯಕರ ಅಡಿಯಾಳುಗಳಾದ ಅಧಿಕಾರಿಗಳು ಮತ್ತು ಪೊಲೀಸರು ಗಟ್ಟಿ ಧ್ವನಿಯಲ್ಲಿ ಏನನ್ನೂ ಹೇಳಲಾಗದ ಅಸಹಾಯಕತೆ 11 ಅಮಾಯಕರ ಜೀವಕ್ಕೆರವಾಗಿದೆ.

ಆಡಳಿತ ಸೇವೆ, ಆಡಳಿತದಲ್ಲಿ ಇರುವವರ ಸೇವೆ ಅಲ್ಲ !

ಲೋಕಮತ

kaayarga@gmail.com

18 ವರ್ಷಗಳ ಬಳಿಕ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದ ಖುಷಿ ಕೇವಲ 18 ಗಂಟೆಗಳಲ್ಲಿ ಕೊನೆ ಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಟ್ರೋಫಿ ಗೆದ್ದ ಮರುದಿನವೇ ಬೆಂಗಳೂರಿನಲ್ಲಿ ಆಯೋಜಿಸಲಾದ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಜನರು ಬಲಿಯಾಗಿ 45 ಮಂದಿ ಗಾಯಗೊಂಡ ಘಟನೆ ಈಗ ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ. ಮೊನ್ನೆಯವರೆಗೂ ‘ಕಪ್ ನಮ್ಮದೇ’ ಎನ್ನುತ್ತಿದ್ದವರು ಈಗ ‘ತಪ್ಪು ಯಾರದು’ ಎಂದು ಕೇಳತೊಡಗಿದ್ದಾರೆ. ಆದರೆ ಯಾರೊ ಬ್ಬರೂ ‘ ನಮ್ಮದೇ ತಪ್ಪು’ ಎಂದು ಹೇಳಲು ಸಿದ್ಧರಿಲ್ಲ. ರಾಜ್ಯ ಸರಕಾರ, ಅಧಿಕಾರಿಗಳು, ಪೊಲೀಸರು, ಆರ್‌ಸಿಬಿ ಆಡಳಿತ ಮಂಡಳಿ, ಕರ್ನಾಟಕ ರಾಜ್ಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ ಮತ್ತು ಕಾರ್ಯಕ್ರಮ ಆಯೋಜನೆಯ ಉಸ್ತುವಾರಿ ವಹಿಸಿದ ಡಿಎನ್‌ಎ ಇವೆಂಟ್ಸ್‌ ಮ್ಯಾನೇಜ್‌ಮೆಂಟ್ ಸಂಸ್ಥೆ ತಮ್ಮದೇ ದಾಟಿಯಲ್ಲಿ ವಾದ ಮುಂದಿಡುತ್ತಿದ್ದು, ಘಟನೆಯ ಹೊಣೆ ಹೊರಲು ಯಾರೂ ಸಿದ್ದರಿಲ್ಲ. ಅಂತಿಮ ವಾಗಿ ಅಭಿಮಾನಿಗಳ ಅತಿರೇಕದ ಸಂಭ್ರಮವೇ ಈ ಸಾವಿಗೆ ಮೂಲ ಕಾರಣ ಎಂದು ವ್ಯಾಖ್ಯಾನಿಸ ಲಾಗುತ್ತಿದೆ.

ಕ್ರಿಕೆಟ್ ಈ ದೇಶದ ‘ ಸರ್ವ ಧರ್ಮ’. ಆದರೆ ಈ ಕ್ರೀಡೆಯ ಆಯೋಜನೆಯಲ್ಲಿ ಸರಕಾರದ ಪಾತ್ರ ಕಾನೂನು, ಸುವ್ಯವಸ್ಥೆಗೆ ಸೀಮಿತ. ಬಿಸಿಸಿಐ ಎಂಬ ಸರಕಾರೇತರ ಸಂಸ್ಥೆ ಭಾರತ ಮಾತ್ರವಲ್ಲ ವಿಶ್ವದ ಕ್ರಿಕೆಟನ್ನೂ ನಿಯಂತ್ರಿಸುತ್ತಿದೆ. ಇದರ ಅಂಗ ಸಂಸ್ಥೆ ಐಪಿಎಲ್ ಆಯೋಜಿಸುತ್ತಿರುವ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮಾತ್ರವಲ್ಲ ವಿದೇಶಿ ಆಟಗಾರರೂ ಆಡುತ್ತಾರೆ. ಅದರಲ್ಲೂ ಆರ್‌ಸಿಬಿ ತಂಡದಲ್ಲಿ ಇದ್ದಿದ್ದು ಕರ್ನಾಟಕದ ಒಬ್ಬಿಬ್ಬರು ಆಟಗಾರರು ಮಾತ್ರ. ಇಷ್ಟಾದರೂ ಮದ್ಯ ಕಂಪನಿಯ ಹೆಸರಿನ ಕೊನೆಯಲ್ಲಿ ಬೆಂಗಳೂರು ಸೇರಿಕೊಂಡಿದೆ ಎಂಬ ಕಾರಣಕ್ಕೆ ಕನ್ನಡಿಗರೆಲ್ಲರೂ ಆರ್‌ಸಿಬಿ ಎಂಬ ತಂಡವನ್ನು ಎದೆಯಲ್ಲಿರಿಸಿಕೊಂಡಿದ್ದಾರೆ.

ಇದನ್ನೂ ಓದಿ: Lokesh Kaayarga Column: ಕೆರೆ ನುಂಗಿದವರೂ ಮಳೆ ನೀರನ್ನೂ ನುಂಗಬಾರದೇ !?

ಇದೇ ಕಾರಣಕ್ಕೆ 18 ವರ್ಷಗಳ ಬಳಿಕ ಬಂದ ಗೆಲುವನ್ನು ಸಂಭ್ರಮಿಸಿದ್ದಾರೆ. ಸರಕಾರ ಜನರ ಸಂಭ್ರಮದಲ್ಲಿ ಭಾಗಿಯಾಗಿ ಅಭಿನಂದನೆ ಸಲ್ಲಿಸಿದ್ದರೆ ಸಾಕಿತ್ತು. ಹೆಚ್ಚೆಂದರೆ ಆಟಗಾರರನ್ನು ರಾಜ ಭವನ ಇಲ್ಲವೇ, ಸಿಎಂ ನಿವಾಸಕ್ಕೆ ಕರೆದು ಸನ್ಮಾನಿಸಬಹುದಿತ್ತು. ಆದರೆ ಅಭಿಮಾನಿಗಳಂತೆ ಸರಕಾರವೂ ಅತಿರೇಕದ ನಡೆ ಇಟ್ಟಿದ್ದು ಈ ದುರಂತದ ಮೂಲ. ಒಲಿಂಪಿಕ್ಸ್‌ ಪದಕ ಗೆದ್ದ ಕ್ರೀಡಾ ಪಟುಗಳಿಗೆ, ಪದ್ಮ ಪುರಸ್ಕೃತ ಗಣ್ಯರಿಗೆ ನೀಡದ ಸ್ವಾಗತ, ಸನ್ಮಾನವನ್ನು ಆರ್‌ಸಿಬಿ ಹೆಸರಿನಲ್ಲಿ ಬಂದ ಅನ್ಯ ರಾಜ್ಯದ, ಅನ್ಯ ದೇಶದ ಕ್ರೀಡಾಪಟು ಗಳಿಗೆ ನೀಡಲು ಸರಕಾರ ತೋರಿಸಿದ ಅತ್ಯುತ್ಸಾಹ ಅನಾಹುತಕ್ಕೆಡೆ ಮಾಡಿಕೊಟ್ಟಿದೆ.

ಜನರಿಂದ ಆಯ್ಕೆಯಾದ ಸರಕಾರವೊಂದು ಜನರ ಸಡಗರ, ಸಂಭ್ರಮದಲ್ಲಿ ಪಾಲ್ಗೊಂಡಿದ್ದು ತಪ್ಪಲ್ಲ ಎಂದುಕೊಂಡರೂ, ವ್ಯವಸ್ಥಿತವಾಗಿ ಸಂಘಟಿಸಬೇಕಾಗಿದ್ದ ಕಾರ್ಯಕ್ರಮವೊಂದನ್ನು ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಆತುರಾತುರವಾಗಿ ಆಯೋಜಿಸುವ ಅನಿವಾರ್ಯತೆ ಏನಿತ್ತು ? ಇಲ್ಲಿ ಆರಂಭದಿಂದಲೇ ಎಲ್ಲ ನೀತಿ, ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಪಂದ್ಯ ಗೆಲ್ಲುವ ಮುನ್ನವೇ ಆರ್‌ಸಿಬಿ ಪ್ರತಿನಿಧಿಗಳು ಸಂಭ್ರಮಾಚರಣೆಯ ಪ್ರಸ್ತಾಪ ಮುಂದಿಟ್ಟಿದ್ದರು. ಈ ಪ್ರಸ್ತಾಪ ವನ್ನು ಹೊತ್ತು ಬಂದ ಕೆಎಸ್‌ಸಿಎ ಮತ್ತು ಆಯೋಜಕ ಸಂಸ್ಥೆ ಪ್ರತಿನಿಧಿಗಳು ಪೊಲೀಸರನ್ನು ಸಂಪರ್ಕಿಸುವ ಮೊದಲು ಸರಕಾರದ ಪ್ರಭಾವಿ ನಾಯಕರನ್ನು ಸಂಪರ್ಕಿಸಿದ್ದರು.

ಭದ್ರತಾ ದೃಷ್ಟಿಯಿಂದ ವಿಧಾನಸೌಧದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸುವುದು ಬೇಡ ಎಂದು ಡಿಸಿಪಿ ಕಚೇರಿ ಸಲಹೆ ನೀಡಿದ್ದರೂ ಆಳುವ ನಾಯಕರು ಮತ್ತು ಹಿರಿಯ ಅಧಿಕಾರಿಗಳು ಈ ಸಲಹೆಯನ್ನು ಬದಿಗೊತ್ತಿದ್ದರು. ಇಂತಹ ಸಂದರ್ಭಗಳಲ್ಲಿ ಅನುಸರಿಸಬೇಕಾದ ಸಾಮಾನ್ಯ ನಿಯಮ (ಎಸ್‌ಒಪಿ) ಗಳನ್ನು ಮೂಲೆಗೆ ತಳ್ಳಲಾಗಿತ್ತು. ರಾಜಕೀಯ ಮತ್ತು ಅಧಿಕಾರದ ಶಿಷ್ಟಾಚಾರ ಗಳನ್ನು ಧಿಕ್ಕರಿಸಿ ಶಕ್ತಿ ಸೌಧದ ಮುಂದೆ ರಾಜ್ಯಪಾಲರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜತೆ ನಾಯಕರ ಮಕ್ಕಳು, ಮೊಮ್ಮಕ್ಕಳನ್ನು ವೇದಿಕೆಗೆ ತಂದು ಕೂರಿಸಲಾಗಿತ್ತು. ಡಿಸಿಎಂ ಶಿವಕುಮಾರ್ ಅವರು ವೇದಿಕೆಗೆ ನುಗ್ಗಿ ಬಂದವರ ಕತ್ತು ಹಿಡಿದು ತಳ್ಳಿದ ಕ್ಷಣದಲ್ಲಿಯೇ ಕಾರ್ಯಕ್ರಮದ ಭದ್ರತಾ ಲೋಪ ಬಯಲಾಗಿತ್ತು. ಸನ್ಮಾನದ ಕಾರ್ಯಕ್ರಮದ ಘನತೆ, ಗೌರವ ಮಣ್ಣುಪಾಲಾಗಿತ್ತು.

7 R

ಈ ಪ್ರಕರಣದಲ್ಲಿ ತಪ್ಪು ಯಾರದ್ದು ಎಂದರೆ ಒಬ್ಬರನ್ನು ಬೊಟ್ಟು ಮಾಡಲು ಸಾಧ್ಯವಿಲ್ಲ. ಆದರೆ ಅಭಿಮಾನಿಗಳಿಂದ ಹಿಡಿದು ಆಯೋಜಕರ ತನಕ ಪ್ರತಿಯೊಬ್ಬರೂ ಅಂದು ವಿವೇಕ ಮರೆತು ನಡೆದುಕೊಂಡಿದ್ದರು. ಅತಿಯಾದ ಸಂಭ್ರಮವೋ, ಉದ್ವೇಗವೋ ಅಥವಾ ಆ ಕ್ಷಣದಲ್ಲಿ ಕಾಣಿಸಿ ಕೊಳ್ಳುವ ಅವಸರವೋ ಕನಿಷ್ಠ ಸಾಮಾನ್ಯ ಜ್ಞಾನವೂ ಮರೆಯಾಗಿತ್ತು.

ನಾಯಕರಿಗೆ ವಿಜಯೋತ್ಸವದ ಸಡಗರ ಮತ್ತು ಪ್ರಚಾರದ ಹುಚ್ಚು ಹೊಳೆಯಲ್ಲಿ ಮಿಂದೇಳುವ ತವಕ. ರಾಜಕೀಯ ಮೇಲಾಟದಲ್ಲಿ ತಾವೇ ಮುಂದಾಗಿ ಸನ್ಮಾನಿಸಿ ಕ್ರೆಡಿಟ್ ಪಡೆದುಕೊಳ್ಳುವ ಹುನ್ನಾರ. ಹಿಂಬಾಲಕರಿಗೆ ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರನನ್ನು ಹತ್ತಿರದಿಂದ ನೋಡ ಬೇಕೆಂಬ ಇರಾದೆ. ತಮ್ಮ ಮಕ್ಕಳಿಗೆ ಸ್ಟಾರ್ ಆಟಗಾರರ ಆಟೋಗ್ರಾಫ್ ಕೊಡಿಸಿ ಧನ್ಯರಾಗುವ ಹಂಬಲ.

ಆರ್‌ಸಿಬಿ ತಂಡದ ಪ್ರತಿನಿಧಿಗಳಿಗೆ, ಸಂಘಟಕರಿಗೆ ವಿಧಾನ ಸೌಧದ ಮುಂದೆ ಕಾರ್ಯಕ್ರಮ ಏರ್ಪಡಿಸಿ, ರಾಜ್ಯಪಾಲರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗಿ ಎಲ್ಲರ ಉಪಸ್ಥಿತಿಯಲ್ಲಿ ಆಟಗಾರರನ್ನು ಸನ್ಮಾನಿಸಿ ತಮ್ಮ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿಕೊಳ್ಳುವ ವ್ಯಾಪಾರ ತಂತ್ರ. ರಾಜಕೀಯ ನಾಯಕರ ಅಡಿಯಾಳುಗಳಾದ ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ಗಟ್ಟಿ ಧ್ವನಿಯಲ್ಲಿ ಏನನ್ನೂ ಹೇಳಲಾಗದ ಅಸಹಾಯಕತೆ. ಇವೆಲ್ಲವೂಗಳ ಮೇಲಾಟದಲ್ಲಿ ಯಾವುದು ಆಗಬಾರ ದಿತ್ತೋ ಅದು ಘಟಿಸಿ ಹೋಗಿದೆ. 11 ಅಮಾಯಕ ಜೀವಗಳು ಬಲಿಯಾಗಿವೆ.

ದುರಂತ ಸಂಭವಿಸಿದ ಬಳಿಕವೂ ಈ ಮೇಲಾಟ ನಿಂತಿಲ್ಲ. ಭದ್ರತಾ ವೈಫಲ್ಯಕ್ಕೆ ಪೊಲೀಸರೇ ಕಾರಣ ಎಂದು ಆಯುಕ್ತರು ಸೇರಿ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿಯ ರಾಜೀನಾಮೆ ಪಡೆದು ಉಳಿದವರನ್ನು ರಕ್ಷಿಸುವ ಯತ್ನ ನಡೆದಿದೆ. ಆರ್‌ಸಿಬಿ, ಕೆಎಸ್‌ಸಿಎ, ಎನ್‌ಡಿಎ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ನ್ಯಾಯಾಲಯದ ಮುಂದಿಟ್ಟಿರುವ ವಾದಗಳನ್ನು ನೋಡಿದರೆ ಕಾನೂನಿನ ಕುಣಿಕೆಯಿಂದ ಪಾರಾಗಲು ಇವರೆಲ್ಲರಿಗೂ ಸಾಕಷ್ಟು ದಾರಿಗಳಿವೆ. ಆದರೆ ವಿಜಯೋತ್ಸವದ ಸಮೂಹ ಸನ್ನಿಯ ಸೆಳೆತಕ್ಕೊಳಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ದ್ವಾರದಲ್ಲಿ ಉಸಿರು ಚೆಲ್ಲಿದ 11 ಮಂದಿಯ ಕುಟುಂಬ ವರ್ಗ ಮಾತ್ರ ಇನ್ನು ಜೀವನ ಪೂರ್ತಿ ಈ ಕ್ರೀಡೆಯನ್ನು ಆಸ್ವಾದಿಸಲು, ಗೆದ್ದಾಗ ಸಂಭ್ರಮಿಸಲು ಸಾಧ್ಯವಿಲ್ಲ.

ನಾಯಕರು, ಅಧಿಕಾರಿಗಳು ಮತ್ತು ಆಯೋಜಕರು ಅರೆಕ್ಷಣ ಯೋಚಿಸಿ, ಕಾಮನ್ ಸೆನ್ಸ್‌ ಬಳಸಿ ನಿರ್ಧಾರ ಕೈಗೊಂಡಿದ್ದರೂ ಈ ದುರ್ಘಟನೆಯನ್ನು ಖಂಡಿತವಾಗಿಯೂ ತಪ್ಪಿಸಬಹುದಿತ್ತು. ಸಿನಿಮಾ ನಟರು ಮತ್ತು ಕ್ರಿಕೆಟಿಗರ ಬಗ್ಗೆ ನಮ್ಮ ಜನರಿಗಿರುವ ಕ್ರೇಜ್ ಮತ್ತು ಹುಚ್ಚು ಅಭಿಮಾನ ತಿಳಿಯದ ವಿಷಯವೇನಲ್ಲ.

ಹಿಂದಿನ ದಿನ ಪಂದ್ಯವನ್ನು ವೀಕ್ಷಿಸಲು ಬೆಂಗಳೂರಿನ ಮೂಲೆ, ಮೂಲೆಯಲ್ಲಿ ಸೇರಿದ್ದ ಜನಸಾಗರ, ರಾತ್ರಿಯಿಡೀ ನಡೆದ ಸಂಭ್ರಮಾಚರಣೆ, ಮಧ್ಯರಾತ್ರಿಯಲ್ಲಿ ಉಂಟಾದ ಟ್ರಾಫಿಕ್ ಜಾಮ್, ಹರಿದ ದಾಖಲೆ ಪ್ರಮಾಣದ ಮದ್ಯದ ಹೊಳೆ..ಇವೆಲ್ಲವೂ ಅಭಿಮಾದ ಹುಚ್ಚು ತಾರಕಕ್ಕೇರಿರುವ ಪ್ರತ್ಯಕ್ಷ ಸಾಕ್ಷ್ಯಗಳನ್ನು ನೀಡಿದ್ದವು. ಇಷ್ಟಾದ ಬಳಿಕವೂ ವಿಜಯೋತ್ಸವದ ಮೆರವಣಿಗೆ ಮತ್ತು ಸಂಭ್ರಮಾ ಚರಣೆಗೆ ಬನ್ನಿ ಎಂದು ಮುಕ್ತ ಆಹ್ವಾನ ನೀಡಿದರೆ ಲಕ್ಷೋಪಲಕ್ಷ ಜನರು ದಾಂಗುಡಿ ಇಡುತ್ತಾರೆನ್ನು ವುದು ನಮ್ಮಂತಹ ಜನಸಾಮಾನ್ಯರೂ ಊಹೆ ಮಾಡಬಹುದಾದ ಸಂಗತಿ. ಈ ಸಣ್ಣ ಸಂಗತಿ ನಮ್ಮ ನಾಯಕರಿಗೆ, ಅಧಿಕಾರಿಗಳಿಗೆ ಮತ್ತು ಆಯೋಜಕರಿಗೆ ಏಕೆ ತಿಳಿಯಲಿಲ್ಲ ?

ಐಪಿಎಲ್ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವಿದೇಶಿ ಆಟಗಾರರು ಟೂರ್ನಿ ಮುಗಿಸಿದ ಬೆನ್ನಿಗೇ ಸ್ವದೇಶದ ವಿಮಾನ ಹತ್ತಲು ಸಿದ್ದರಾಗಿದ್ದಾರೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ಕಾರ‌್ಯಕ್ರಮ ಆಯೋಜಿಸಲಾಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಎಷ್ಟೇ ತರಾತುರಿ ಇದ್ದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಾದ ಹೊಣೆ ಪೊಲೀಸರದ್ದು. ಈ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರಿಗೆ ಸಾಕಷ್ಟು ಅನುಭವವೂ ಇದೆ.

ಡಾ.ವಿಷ್ಣುವರ್ಧನ್, ಅಂಬರೀಶ್, ಪುನೀತ್ ರಾಜ್‌ಕುಮಾರ್ ನಿಧನರಾದ ಅವಧಿಯಲ್ಲಿ ಸೇರಿದ್ದ ಜನಸಾಗರವನ್ನು ಬೆಂಗಳೂರು ಪೊಲೀಸರು ಯಶಸ್ವಿಯಾಗಿ ನಿಭಾಯಿಸಿದ್ದರು. ಸ್ವಲ್ಪ ಎಚ್ಚರಿಕೆ ತಪ್ಪಿದರೂ ಅನುಹುತ ಸಾಧ್ಯ ಎನ್ನುವುದಕ್ಕೆ ಡಾ.ರಾಜ್‌ಕುಮಾರ್ ನಿಧನದ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರದ ದೃಷ್ಟಾಂತವಿತ್ತು.

ಕನ್ನಡದ ಸ್ಟಾರ್ ನಟರು ಬಿಡಿ, ತಮಿಳು, ತೆಲುಗು ಭಾಷೆಯ ಸ್ಟಾರ್ ನಟರು ಬಂದಾಗಲೂ ಇಲ್ಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯ. ಇನ್ನು ಭಾರತ ಮತ್ತು ಹೊರ ದೇಶಗಳಲ್ಲಿ ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿಯಂತಹ ಆಟಗಾರ ಇಲ್ಲಿನ ರಸ್ತೆಗಳಲ್ಲಿ ಕಾಣಿಸಿಕೊಂಡರೆ, ಸಾವಿರಾರು ಜನರು ಮುಗಿ ಬೀಳುವುದು ನಿರೀಕ್ಷಿತವೇ ಆಗಿತ್ತು.

ಹೀಗಿರುವಾಗ ಕಪ್ ಗೆದ್ದ ಸಂಭ್ರಮೋತ್ಸವಕ್ಕೆ ಎಷ್ಟು ಜನರು ಸೇರಬಹುದೆಂದು ಒಬ್ಬ ಕಾನ್‌ ಸ್ಟೇಬಲ್ ಕೂಡ ಅಂದಾಜಿಸಬಹುದಿತ್ತು. ರಾಜಕೀಯ ನಾಯಕರು, ಸಂಘಟಕರು ಈ ಸಂದರ್ಭ ವನ್ನು ತಮ್ಮ ಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳುವುದು ಕೂಡ ಅನಿರೀಕ್ಷಿತವಾಗಿರಲಿಲ್ಲ. ಸಮೂಹ ಸನ್ನಿಯಲ್ಲಿ ಸಾಗಿ ಬರುವ ಅಭಿಮಾನಿಗಳ ಅತಿರೇಕದ ವರ್ತನೆಯೂ ಅಚ್ಚರಿಯ ವಿಷಯ ವಾಗಿರಲಿಲ್ಲ. ಸಂದರ್ಭದ ಸೂಕ್ಷ್ಮತೆಯನ್ನು, ಅಪಾಯದ ಸಾಧ್ಯತೆಯನ್ನು ನಗರದ ಪೊಲೀಸ್ ಅಧಿಕಾರಿಗಳು, ಆಯೋಜಕರು ಮತ್ತು ನಾಯಕರ ಗಮನಕ್ಕೆ ತರಬೇಕಿತ್ತು. ಈ ವಿಚಾರದಲ್ಲಿ ಕಟ್ಟುನಿಟ್ಟಾಗಿ ವ್ಯವಹರಿಸಬೇಕಿತ್ತು.

ಖಾಸಗಿ ಸಂಘಟನೆಯೊಂದು ಈ ರೀತಿಯ ಕಾರ್ಯಕ್ರಮ ಸಂಘಟಿಸಬೇಕಾದರೆ ಹತ್ತಾರು ಇಲಾಖೆ ಗಳಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಆಯೋಜಕರು ಸರಕಾರದ ಮಟ್ಟದಲ್ಲಿ ರಾಜಕೀಯ ಒತ್ತಡ ತರದೇ ಹೋಗಿದ್ದರೆ ರಾತ್ರೋರಾತ್ರಿ ಅಧಿಕಾರಿಗಳು ಮತ್ತು ಪೊಲೀಸರ ಅನುಮತಿ ಪಡೆದು ಕೊಳ್ಳಲು ಸಾಧ್ಯವಿರಲಿಲ್ಲ. ಕೆಎಸ್‌ಸಿಎ, ಆರ್‌ಸಿಬಿ ಮತ್ತು ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ ಈ ವಿಚಾರದಲ್ಲಿ ತಮ್ಮ ರಾಜಕೀಯ ಪ್ರಭಾವ ಬಳಸಿರುವುದು ಮೇಲ್ನೋಟಕ್ಕೆ ತಿಳಿಯುವ ಸಂಗತಿ. ಆದರೆ ವಿಧಾನ ಸೌಧ ಮತ್ತು ಚಿನ್ನಸ್ವಾಮಿ ಸ್ಟೇಡಿಯಂ ಎರಡೂ ಕಡೆ ಸನ್ಮಾನ ಕಾರ್ಯಕ್ರಮ ನಡೆಸುವ ಪ್ರಸ್ತಾಪವನ್ನು ಪೊಲೀಸರು ಮತ್ತು ಅಧಿಕಾರಿಗಳು ಸಾರಾಸಗಟಾಗಿ ತಿರಸ್ಕರಿಸಬೇಕಿತ್ತು. ಎಂಜಿ ರಸ್ತೆಯ ಟ್ರಿನಿಟಿ ಸರ್ಕಲ್ ತುದಿಯಿಂದ ಅನಿಲ್ ಕುಂಬ್ಲೆ ಸರ್ಕಲ್ ತನಕ ಆಟಗಾರರನ್ನು ಮೆರವಣಿಗೆಯಲ್ಲಿ ಕರೆ ತಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸನ್ಮಾನಿಸುವ ನಿರ್ಧಾರ ಕೈಗೊಂಡಿ ದ್ದರೂ ಭದ್ರತೆಯ ಕೆಲಸ ಸುಲಭವಾಗುತ್ತಿತ್ತು. ಈ ವಿಷಯದಲ್ಲಿ ಆಯೋಜಕ ಸಂಸ್ಥೆ ಮತ್ತು ಪೊಲೀಸರ ನಡುವೆ ಯಾವುದೇ ಸಮನ್ವಯತೆ ಇರಲಿಲ್ಲ.

ಕಾರ‌್ಯಕ್ರಮ ಸಂಬಂಧ ಮೊದಲು ಮಾಹಿತಿ ನೀಡಿದ ಆರ್‌ಸಿಬಿ ಪ್ರತಿನಿಧಿಗಳ ಹೊಣೆಗೇಡಿತನ ಈ ಅವ್ಯವಸ್ಥೆಗೆ ನಾಂದಿ ಹಾಡಿದ್ದರಲ್ಲಿ ಸಂಶಯವಿಲ್ಲ. ತನ್ನ ಇನ್ ಸ್ಟಾ ಸಾಮಾಜಿಕ ಜಾಲತಾಣದಲ್ಲಿ 2 ಕೋಟಿಗಿಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸಂಸ್ಥೆ ಯಾವುದೇ ಪೋಸ್ಟ್‌ ಮಾಡುವ ಮೊದಲು ಹತ್ತಾರು ಬಾರಿ ಯೋಚಿಸಬೇಕಿತ್ತು. ಆದರೆ ಆರಂಭದಲ್ಲಿ ವಿಜಯೋತ್ಸವಕ್ಕೆ ಬನ್ನಿ ಎಂದು ಮುಕ್ತ ಆಹ್ವಾನ ನೀಡಿದ ಕ್ರೀಡಾ ಸಂಸ್ಥೆ, ಆಟಗಾರರ ಮೆರವಣಿಗೆಯ ಮಾಹಿತಿಯನ್ನು ಹಂಚಿಕೊಂಡಿತ್ತು.

ಬಳಿಕ ಉಚಿತ ಆನ್ ಲೈನ್ ಟಿಕೆಟ್ ಪಡೆದು ಚಿನ್ನಸ್ವಾಮಿ ಸ್ಟೇಡಿಯಂಗೆ ಬರುವಂತೆ ಆಹ್ವಾನ ನೀಡಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಬರುವುದು ಗೊತ್ತಿದ್ದರೂ ಕೆಎಸ್‌ಸಿಎ ಆಡಳಿತ ಮಂಡಳಿ, ವಿಐಪಿ ಎಂಟ್ರಿ ಬಿಟ್ಟು ಸ್ಟೇಡಿಯಂನ ಎಲ್ಲ ಬಾಗಿಲುಗಳಲ್ಲಿ ಪ್ರವೇಶ ನೀಡುವ ಬದಲು ಮೂರು ದ್ವಾರಗಳನ್ನಷ್ಟೇ ಬಾಗಿಲುಗಳನ್ನಷ್ಟೇ ತೆರೆದಿಟ್ಟಿತ್ತು. ಇದುವೇ ಜನರ ನೂಕು ನುಗ್ಗಲಿಗೆ ಪ್ರಧಾನ ಕಾರಣವಾಯಿತು. ಅಲ್ಲಿ ಸೇರಿದ್ದ ಲಕ್ಷ ಸಂಖ್ಯೆಯ ಅಭಿಮಾನಿಗಳನ್ನು ನಿಯಂತ್ರಿ ಸಲು ನೂರರ ಸಂಖ್ಯೆಯ ಪೊಲೀಸರೂ ಇರಲಿಲ್ಲ.

ವಿಧಾನ ಸೌಧದ ಎದುರು ಲಕ್ಷಾಂತರ ಸಂಖ್ಯೆಯಲ್ಲಿ ನೆರೆದ ಅಭಿಮಾನಿಗಳ ಎಲ್ಲೆ ಮೀರಿದ ವರ್ತನೆ ಯನ್ನು ಕಂಡಾಗಲೇ ನಾಯಕರು, ಅಧಿಕಾರಿಗಳು ಮತ್ತು ಆಯೋಜಕರು ಅಪಾಯದ ಸೂಚನೆ ಗ್ರಹಿಸಿ ತಕ್ಷಣವೇ ಹೆಚ್ಚುವರಿ ಭದ್ರತೆಗೆ ಕ್ರಮ ತೆಗೆದುಕೊಳ್ಳಬೇಕಿತ್ತು. ವಿಧಾನಸೌಧ, ಹೈಕೋರ್ಟ್ ಎಂಬ ಪರಿವೆ ಇಲ್ಲದೆ ಅಲ್ಲಿನ ಪ್ರತಿಮೆಗಳ ಮೇಲೆ, ಕಟ್ಟಡ, ಲೈಟ್ ಕಂಬಗಳನ್ನು ಏರಿ ಕುಳಿತವರನ್ನು ನಿಯಂತ್ರಿಸುವವರಿರಲಿಲ್ಲ. ಅದಾಗಲೇ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಒಂದು ವೇಳೆ ಆಟಗಾರ ರನ್ನು ಮೆರವಣಿಗೆಯಲ್ಲಿ ಒಯ್ದಿದ್ದರೆ ಇನ್ನಷ್ಟು ಅನಾಹುತ ನಡೆಯುವ ಸಾಧ್ಯತೆ ಇತ್ತು. ಅಲ್ಲಿನ ದುಂಡಾವರ್ತಿ ಹಸೀನಾ ಅವರನ್ನು ಹೊರಗಟ್ಟಿದ ಬಾಂಗ್ಲಾ ಸಂಸತ್ ಎದುರಿನ ದಂಗೆ, ಲಂಕಾದ ಅಧ್ಯಕ್ಷರನ್ನು ಹೊರದಬ್ಬಿದ ಕ್ರಿಪ್ರ ರಾಜಕೀಯ ದಂಗೆಯ ದೃಶ್ಯಾವಳಿಗಳನ್ನು ನೆನಪಿಸುವಂತಿತ್ತು.

ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗ ಶಾಸಕಾಂಗದ ಸೂಚನೆಯನ್ನು ಪಾಲಿಸಬೇಕು ನಿಜ. ಆದರೆ ಅದಕ್ಕೂ ಸ್ವತಂತ್ರ ಅಸ್ತಿತ್ವವಿದೆ. ಆಡಳಿತ ಸೇವೆಯಲ್ಲಿರುವವರಿಗೆ ದೇಶದ, ರಾಜ್ಯದ ಸೇವೆ ಮತ್ತು ಹಿತಾಸಕ್ತಿ ಮುಖ್ಯವೇ ಹೊರತು ಆಡಳಿತದಲ್ಲಿ ಇರುವವರ ಸೇವೆಯಲ್ಲ. ಐಎಎಸ್, ಐಪಿಎಸ್, ಕೆಎಎಸ್ ಶ್ರೇಣಿಯ ಅಧಿಕಾರಿಗಳು ಇದನ್ನು ಮರೆತರೆ, ಭದ್ರತೆಯಂತಹ ವಿಷಯಗಳಲ್ಲಿ ರಾಜಕೀಯ ಒತ್ತಡಗಳಿಗೆ ಮಣಿದರೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ದುರಂತ ಮರು ಕಳಿಸಬಹುದು. ಈ ಅನಾಹುತ ಮರುಕಳಿಸದಿರಲಿ.