ದುಬಾ(ರಿ)ರೆ ಪಾಠ: ಪ್ರಾಣಿಗಳ ಪ್ರೀತಿಗಿರಲಿ ಜೀವದ ಅಂತರ !
ಆನೆ ಶಿಬಿರಗಳಲ್ಲಿ ಮದ ಗಜಗಳ ಕಾದಾಟ ಮತ್ತು ಸಾವು ಹೊಸದೇನಲ್ಲ. ಹಿಂದೆ ಬಿಆರ್ಟಿ ವ್ಯಾಪ್ತಿಯ ಕೆ.ಗುಡಿ ಅರಣ್ಯ ಶಿಬಿರದಲ್ಲಿ ಮದವೇರಿದ ಗಜೇಂದ್ರ ಹೆಸರಿನ ಆನೆಯು ಶ್ರೀರಾಮ ಹೆಸರಿನ ಆನೆಯನ್ನು ತಿವಿದು ಸಾಯಿಸಿತ್ತು. ಇವೆರಡೂ ದಸರೆಯಲ್ಲಿ ಜತೆಯಾಗಿ ಹೆಜ್ಜೆ ಹಾಕಿದ್ದ ಆನೆಗಳಾಗಿದ್ದವು. ದಸರೆ ಆನೆಗಳು ಸೇರಿ ಸಾಕಾನೆಗಳು ಹೆಚ್ಚಿನ ಸಂಖ್ಯೆಯಲ್ಲಿರುವ ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿ ಇಂತಹ ಕಾದಾಟಗಳು ಹಲವು ಬಾರಿ ನಡೆದಿವೆ. ಭೀಮನಕಟ್ಟೆ ಶಿಬಿರದಲ್ಲಿ ಅಂಬಾರಿ ಹೊತ್ತು ಸಾಗಿದ್ದ ಬಲರಾಮ ಆನೆ ತನ್ನ ವೃದ್ಧಾಪ್ಯದಲ್ಲಿ ಮತ್ತೊಂದು ಆನೆಯ ದಾಳಿಗೆ ಗುರಿಯಾಗಿದ್ದ. ಆದರೆ ಈ ಕಾದಾಟದಲ್ಲಿ ಪ್ರವಾಸಿ ಮಹಿಳೆಯೊಬ್ಬರು ಬಲಿಯಾಗಿರುವುದು ದುರದೃಷ್ಟಕರ.