ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

R T Vittalmurthy Column: ಸಿದ್ದು ಸೇಫ್‌ ಆಗಿದ್ದೇ ಬಿಜೆಪಿಗೆ ಚಿಂತೆ

ಇನ್ನು ಬಿಹಾರದ ರಾಜಕಾರಣದಲ್ಲಿ ದೊಡ್ಡ ಮಟ್ಟದ ಆಟ ಅಡುವ ಕನಸು ಕಂಡಿದ್ದ ಕಾಂಗ್ರೆಸ್ ಯಗಾದಿಗಾ ಹೊಡೆತ ತಿಂದು ಮೂಲೆ ಸೇರಿದೆ. ಯಾವಾಗ ಅದು ಇಂಥ ದಯನೀಯ ಸ್ಥಿತಿಗೆ ತಲುಪಿತೋ, ಆಗ ಕಾಂಗ್ರೆಸ್ ವರಿಷ್ಠರು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಸಿಎಂ ಬದಲಾವಣೆಗೆ ಕೈ ಹಾಕುವ ಆಟದಿಂದ ಗಪ್ಪನೆ ಹಿಂದೆ ಸರಿದಿದ್ದಾರೆ.

R T Vittalmurthy Column: ಸಿದ್ದು ಸೇಫ್‌ ಆಗಿದ್ದೇ ಬಿಜೆಪಿಗೆ ಚಿಂತೆ

-

ಮೂರ್ತಿಪೂಜೆ

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶವು ರಾಜ್ಯ ಬಿಜೆಪಿಯ ಹಲವು ನಾಯಕ ರಿಗೆ ನಿರಾಸೆ ಉಂಟು ಮಾಡಿದೆ. ಹಾಗಂತ ಈ ಫಲಿತಾಂಶ ಪಕ್ಷಕ್ಕೆ ವ್ಯತಿರಿಕ್ತವಾಗಿರಲಿ ಅಂತೇನೂ ಅವರು ಬಯಸಿರಲಿಲ್ಲ. ಆದರೆ ಬಿಹಾರ ವಿಧಾನಸಭೆ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷ ಒಂದಷ್ಟು ಬಲಿಷ್ಠವಾಗಲಿ ಅಂತ ಅವರು ನಿರೀಕ್ಷಿಸುತ್ತಿದ್ದರು.

ಕಾರಣ? ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಉತ್ತಮ ವಾದರೆ, ಆ ಮೂಲಕ ಅದಕ್ಕೆ ಶಕ್ತಿ ಬಂದರೆ, ಕರ್ನಾಟಕದ ರಾಜಕಾರಣದಲ್ಲಿ ಪಲ್ಲಟ ಗಳಾಗಲಿವೆ. ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸಲು ಅದು ಸಜ್ಜಾಗುತ್ತದೆ ಎಂದು ಅವರು ಭಾವಿಸಿದ್ದರು.

ಅವರ ಈ ಲೆಕ್ಕಾಚಾರಕ್ಕೆ ಕೆಲವು ನಂಬಿಕೆಗಳೂ ಕಾರಣವಾಗಿದ್ದವು. ಇಂಥ ನಂಬಿಕೆಗಳ ಪೈಕಿ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ವರಿಷ್ಠರು ಎಷ್ಟು ಇಷ್ಟಪಡುತ್ತಾರೆ ಎಂಬ ಬಗೆಗಿನ ಮಾಹಿತಿಯೂ ಒಂದು. ಎಲ್ಲಕ್ಕಿಂತ ಮುಖ್ಯವಾಗಿ ಶ್ರೀಮತಿ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೆಲ್ಲ ಹೆಜ್ಜೆ ಹೆಜ್ಜೆಗೂ ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸುವುದರಿಂದ, ಸಹಜವಾಗಿಯೇ ರಾಹುಲ್ ಗಾಂಧಿ ಅವರ ಮೇಲೆ ಒತ್ತಡ ಹೇರುತ್ತಾರೆ.

ಇದನ್ನೂ ಓದಿ: R T Vittalmurthy Column: ಬಿಜೆಪಿ ನಾಯಕರು ʼಭಾಗವತʼ ಓದಬೇಕು

ಅವರ ಮೂಲಕವೇ ಸಿದ್ದರಾಮಯ್ಯ ಅವರಿಗೆ ಪದತ್ಯಾಗ ಮಾಡುವಂತೆ ಸೂಚನೆ ಕೊಡಿಸು ತ್ತಾರೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿತ್ತು. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಕೈ ಪಾಳಯದಿಂದ ತೇಲಿ ಬಂದ ಸುದ್ದಿಯೊಂದು ಬಿಜೆಪಿ ನಾಯಕರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು.

ಅದೆಂದರೆ, ಇವತ್ತು ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವ ಪ್ರಬಲ ನಾಯಕರೆಂದರೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ. ಇಂಥ ವೇಣುಗೋಪಾಲ್ ಅವರ ಮಾತನ್ನು ರಾಹುಲ್ ಗಾಂಧಿ ಯಾವ ಕಾರಣಕ್ಕೂ ಮೀರುವುದಿಲ್ಲ.

DK Shivakumar

ಇದೇ ಕಾರಣಕ್ಕಾಗಿ ಡಿ.ಕೆ.ಶಿವಕುಮಾರ್ ಅವರು ಎಷ್ಟೇ ಪ್ರಯತ್ನ ಮಾಡಿದರೂ ಅಂತಿಮ ಹಂತದಲ್ಲಿ ವೇಣುಗೋಪಾಲ್ ಅದಕ್ಕೆ ಅಡ್ಡಿಯಾಗುತ್ತಿದ್ದರು. ಅದರೆ ಅಂಥ ಕೆ.ಸಿ.ವೇಣು ಗೋಪಾಲ್ ಅವರ ಮೇಲೆ ಈಗ ಪ್ರಿಯಾಂಕ ಗಾಂಧಿಯವರ ವಕ್ರದೃಷ್ಟಿ ಬಿದ್ದಿದೆ. ಹೀಗಾಗಿ ರಾಹುಲ್ ಗಾಂಧಿಯವರ ಕಣ್ಣು, ಕಿವಿಯಾಗಿರುವ ಅವರನ್ನು ಪಕ್ಷದ ಪ್ರಧಾನ ಕಾರ್ಯ ದರ್ಶಿ ಹುದ್ದೆಯಿಂದ ಎತ್ತಂಗಡಿ ಮಾಡಿಸಿ, ಆ ಜಾಗಕ್ಕೆ ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರನ್ನು ತಂದು ಕೂರಿಸಲು ಅವರು ಬಯಸಿದ್ದಾರೆ ಎಂಬುದು. ಹೀಗೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಡಿ.ಕೆ.ಶಿವಕುಮಾರ್ ಅವರ ಶಕ್ತಿ ಹೆಚ್ಚಾಗುತ್ತಿರುವು ದರಿಂದ ನವೆಂಬರ್ ಇಪ್ಪತ್ತರ ಹೊತ್ತಿಗೆ ಕರ್ನಾಟಕದಲ್ಲಿ ಸಿಎಂ ಬದಲಾವಣೆಯ ಆಟ ಆರಂಭವಾಗುತ್ತದೆ. ಈ ಆಟ ಶುರುವಾಗಿ ಸಿದ್ದರಾಮಯ್ಯ ಅವರು ಕೆಳಗಿಳಿದಾಗ ಸಹಜ ವಾಗಿಯೇ ರಾಜ್ಯ ಕಾಂಗ್ರೆಸ್‌ನಲ್ಲಿ ಘಟಸ್ಫೋಟ ಸಂಭವಿಸುತ್ತದೆ.

ಸಿದ್ದರಾಮಯ್ಯ ಅವರು ಕೆಳಗಿಳಿದು ಡಿ.ಕೆ.ಶಿವಕುಮಾರ್ ಪಟ್ಟಕ್ಕೇರಿದ ಮೇಲೆ ಸಿದ್ದರಾಮ ಯ್ಯ ಅವರ ಬಣ ಕ್ರಾಂತಿಗೆ ಮುಂದಾಗುತ್ತದೆ. ಈ ಸಂದರ್ಭದಲ್ಲಿ ಅರವತ್ತರಷ್ಟು ಶಾಸಕರು ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ನಿಂದ ಹೊರಬರುತ್ತಾರೆ. ಪರಿಣಾಮ, ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರ ಉರುಳುತ್ತದೆ.

ಆ ಮೂಲಕ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಅನಿವಾರ್ಯವಾಗುತ್ತದೆ. ಹೀಗೆ ಮಧ್ಯಂತರ ಚುನಾವಣೆ ನಡೆದರೆ ಅನುಮಾನವೇ ಬೇಡ, ಬಿಜೆಪಿ-ಜೆಡಿಎಸ್ ಮೈತ್ರಿಕೂಟ ನೂರೈವತ್ತು ಕ್ಷೇತ್ರಗಳಲ್ಲಿ ನಿರಾಯಾಸವಾಗಿ ಗೆಲ್ಲುತ್ತದೆ ಎಂಬುದು ರಾಜ್ಯ ಬಿಜೆಪಿಯ ಹಲವು ನಾಯಕರ ಲೆಕ್ಕಾಚಾರವಾಗಿತ್ತು.

ಆದರೆ ಇತ್ತೀಚೆಗೆ ಹೊರಬಂದ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಬಂಪರ್ ಕೊಡುಗೆ ದಕ್ಕಿದ್ದರೆ ಮಹಾಘಟಬಂಧನ್ ಹೀನಾಯ ಸೋಲನುಭವಿಸಿದೆ. ಇನ್ನು ಬಿಹಾರದ ರಾಜಕಾರಣದಲ್ಲಿ ದೊಡ್ಡ ಮಟ್ಟದ ಆಟ ಅಡುವ ಕನಸು ಕಂಡಿದ್ದ ಕಾಂಗ್ರೆಸ್ ಯಗಾದಿಗಾ ಹೊಡೆತ ತಿಂದು ಮೂಲೆ ಸೇರಿದೆ. ಯಾವಾಗ ಅದು ಇಂಥ ದಯನೀಯ ಸ್ಥಿತಿಗೆ ತಲುಪಿತೋ, ಆಗ ಕಾಂಗ್ರೆಸ್ ವರಿಷ್ಠರು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಸಿಎಂ ಬದಲಾವಣೆಗೆ ಕೈ ಹಾಕುವ ಆಟದಿಂದ ಗಪ್ಪನೆ ಹಿಂದೆ ಸರಿದಿದ್ದಾರೆ. ಹೀಗೆ ಅವರು ಹಿಂದೆ ಸರಿದಿರುವುದು ಸ್ಪಷ್ಟವಾಗುತ್ತಿದ್ದಂತೆಯೇ ಮಧ್ಯಂತರ ಚುನಾವಣೆಯ ಕನಸು ಕಂಡ ರಾಜ್ಯ ಬಿಜೆಪಿಯ ಹಲವು ನಾಯಕರು ತಣ್ಣಗಾಗಿದ್ದಾರೆ. ಅಷ್ಟೇ ಅಲ್ಲ, ‘ಸಿದ್ದರಾಮಯ್ಯ ಕೆಳಗಿಳಿಯುವುದು ಗ್ಯಾರಂಟಿ’ ಅಂತ ಮೊನ್ನೆ ಮೊನ್ನೆಯ ತನಕ ಶಾಸ್ತ್ರ ಹೇಳುತ್ತಿದ್ದವರು ಈಗ, ‘ರಾಜ್ಯ ಕಾಂಗ್ರೆಸ್ ಅನ್ನು ಸಿದ್ದರಾಮಯ್ತ ಫಿನಿಷ್ ಮಾಡುತ್ತಾರೆ’ ಅಂತ ಪ್ಲೇಟು ತಿರುಗಿಸುತ್ತಿದ್ದಾರೆ.

BY Vijayendra

ವಿಜಯೇಂದ್ರ ಅವರೇ ಇರಲಪ್ಪೋ..: ಇದೇ ರೀತಿ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವು ಕರ್ನಾಟಕದಲ್ಲಿನ ಮಧ್ಯಂತರ ಚುನಾವಣೆಯ ಕನಸನ್ನು ಭಗ್ನಗೊಳಿಸು ತ್ತಿದ್ದಂತೆಯೇ ರಾಜ್ಯ ಬಿಜೆಪಿ ಪಾಳಯದಲ್ಲಿ ಹೊಸ ವರಸೆ ಶುರುವಾಗಿದೆ. ಅದೆಂದರೆ ಪಕ್ಷದ ಹಾಲಿ ಅಧ್ಯಕ್ಷ ವಿಜಯೇಂದ್ರ ಅವರು ಮುಂದುವರಿಯಲಿ ಅಂತ ಅವರ ವಿರೋಧಿಗಳೇ ಹೇಳುತ್ತಿರುವುದು. ಮೊನ್ನೆ ಮೊನ್ನೆಯ ತನಕ ‘ವಿಜಯೇಂದ್ರ ಹಟಾವೋ’ ಯೋಜನೆಗೆ ಬಲ ತುಂಬುತ್ತಿದ್ದ ಈ ವಿರೋಧಿಗಳು ಈಗ, ‘ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ನವೆಂಬರ್ ೧೫ಕ್ಕೆ ಎರಡು ವರ್ಷ ಪೂರ್ತಿಯಾಗಿದೆ. ಹೇಗಿದ್ದರೂ ಅವರ ಅಧಿಕಾರಾವಧಿ ಇನ್ನೂ ಒಂದು ವರ್ಷ ಇರುವುದರಿಂದ ಅವರೇ ಅಲ್ಲಿಯ ತನಕ ಮುಂದುವರಿಯಲಿ. ಆದರೆ ವರಿಷ್ಠರು ಕರ್ನಾಟಕಕ್ಕೆ ಬಂದು ಪುನಃ ಅವರ ಹೆಸರನ್ನು ಘೋಷಿಸಬಾರದು’ ಎಂದು ಒತ್ತಾಯಿಸುತ್ತಿದ್ದಾರೆ.

ಮೂಲಗಳ ಪ್ರಕಾರ, ಇದನ್ನೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ ಅವರಿಗೆ ವಿವರಿಸಲು ರಾಜ್ಯ ಬಿಜೆಪಿಯ ಕೆಲ ನಾಯಕರು ದಿಲ್ಲಿಗೆ ಹೋಗಲಿದ್ದಾರೆ. ಅಂದ ಹಾಗೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು, ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವ ಕನಸು ಮೊಳೆತಿದ್ದರೆ, ಈ ವಿರೋಧಿ ಪಡೆ ವಿಜಯೇಂದ್ರ ಹಟಾವೋ ಯೋಜನೆಗೆ ಬಲ ತುಂಬುತ್ತಿತ್ತು. ಆದರೆ ಯಾವಾಗ ಈ ಕನಸು ಕಮರಿತೋ, ಆಗ ಅಧ್ಯಕ್ಷ ಸ್ಥಾನದ ಹೊರೆ ತಕ್ಷಣ ಬೇಡ. ಹೀಗಾಗಿ ಅದು ವಿಜಯೇಂದ್ರ ಹೆಗಲ ಮೇಲೇ ಇರಲಿ ಎಂಬ ಲೆಕ್ಕಾಚಾರಕ್ಕೆ ಬಂದಿದೆ.

ಕರ್ನಾಟಕದಲ್ಲೂ ಬಿಹಾರ ಮಾಡೆಲ್: ಅಂದ ಹಾಗೆ, ಬಿಹಾರ ಚುನಾವಣೆಯ ಫಲಿ ತಾಂಶ ಎನ್‌ಡಿಎ ಮೈತ್ರಿಕೂಟದ ಪರವಾಗಿರಲು ಏನು ಕಾರಣ ಎಂಬ ಬಗ್ಗೆ ಕುತೂಹಲ ಕಾರಿ ಚರ್ಚೆ ಆಗುತ್ತಿದೆ. ಅದರ ಪ್ರಕಾರ, ಬಿಹಾರದಲ್ಲಿ ಅತಿ ಹಿಂದುಳಿದ ಜಾತಿಗಳನ್ನು ಗುರುತಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಅವುಗಳನ್ನು ಸಂಘಟಿಸಿದರು. ಇದರ ಲಾಭ ಎನ್‌ಡಿಎ ಮೈತ್ರಿಕೂಟಕ್ಕೆ ದೊಡ್ಡ ಮಟ್ಟದಲ್ಲಿ ದೊರೆಯಿತು ಎಂಬುದು ಒಂದು. ಕುತೂ ಹಲದ ಸಂಗತಿ ಎಂದರೆ ಬಿಹಾರದಲ್ಲಿ ನಿತೀಶ್ ಕುಮಾರ್ ಮಾಡಿದ ಕೆಲಸವನ್ನು ಕರ್ನಾಟಕದಲ್ಲಿ ಬಿಜೆಪಿ ಕೂಡ ಮಾಡುತ್ತಿದೆ.

ಮೂಲಗಳ ಪ್ರಕಾರ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಈ ಕಾರ್ಯಕ್ಕೆ ಚಾಲನೆ ನೀಡಿ ಹಲವು ತಿಂಗಳುಗಳೇ ಆಗಿವೆ. ಅದರನ್ವ ಯ ಹಿಂದುಳಿದ ಜಾತಿಗಳಿಂದ ಬಂದ ಹಲವು ನಾಯಕರನ್ನು ಗುರುತಿಸಿ, ಅವರಿಗೆ ಜವಾ ಬ್ದಾರಿ ಕೊಟ್ಟು ಅತಿ ಹಿಂದುಳಿದ ಜಾತಿಗಳ ಮತಬ್ಯಾಂಕನ್ನು ಬಲಪಡಿಸುವ ಜವಾಬ್ದಾರಿ ವಹಿಸಲಾಗಿದೆ. ಕುತೂಹಲದ ಸಂಗತಿ ಎಂದರೆ ಈ ಹೊಣೆಗಾರಿಕೆ ಹೊತ್ತ ಹಲವರು ಬಿಜೆಪಿಯವರಲ್ಲ. ‌

ಹೀಗೆ ಇಂಥವರನ್ನು ನೇಮಿಸುವಾಗ ಸಿದ್ದರಾಮಯ್ಯ ಸರಕಾರದಲ್ಲಿ ಲಾಭ ಪಡೆಯುತ್ತಿರುವ ಹಿಂದುಳಿದ ಜಾತಿಗಳು ಯಾವುವು? ವಂಚಿತವಾಗುತ್ತಿರುವ ಜಾತಿಗಳು ಯಾವುವು? ಎಂಬ ದಾಖಲೆಗಳನ್ನು ಸಂಗ್ರಹಿಸುವ ಹೊಣೆಗಾರಿಕೆಯನ್ನು ಅವರಿಗೆ ವಹಿಸಲಾಗಿದೆ. ಇವತ್ತು ರಾಜ್ಯದಲ್ಲಿ 197-198 ಹಿಂದುಳಿದ ಜಾತಿಗಳಿವೆ.

ಇವುಗಳಲ್ಲಿ ಅತಿ ಹಿಂದುಳಿದವರ ಪಟ್ಟಿಯಲ್ಲಿ 95 ಜಾತಿಗಳಿವೆ. ಈ ಜಾತಿಗಳನ್ನು ಸಂಘಟಿಸಿ ದರೆ ಬಹುತೇಕ ಕ್ಷೇತ್ರಗಳಲ್ಲಿ ವಿನ್ನಿಂಗ್ ಮಾರ್ಜಿನ್‌ಗೆ ಅಗತ್ಯವಾದಷ್ಟು ಮತಗಳು ದಕ್ಕುತ್ತವೆ ಎಂಬುದು ಸಂತೋಷ್ ಲೆಕ್ಕಾಚಾರ.

ಸಂಪುಟ ಪುನಾರಚನೆ ನಿಜಕ್ಕೂ ಕಷ್ಟ: ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವಾರ ದಿಲ್ಲಿ ಪ್ರವಾಸ ಮಾಡಿದರಲ್ಲ? ಈ ಸಂದರ್ಭದಲ್ಲಿ ಅವರು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಬಂದಿದ್ದೇ ತಡ, ಕರ್ನಾಟಕದಲ್ಲಿ ಸಂಪುಟ ಪುನಾರಚನೆ ಗ್ಯಾರಂಟಿ ಎಂಬ ಮಾತು ಕೇಳಿಬರುತ್ತಿದೆ. ಆದರೆ ದಿಲ್ಲಿಯ ಕಾಂಗ್ರೆಸ್ ಮೂಲಗಳ ಪ್ರಕಾರ, ಸಂಪುಟ ಪುನಾರಚನೆ ನಿಜಕ್ಕೂ ಕಷ್ಟ. ಕಾರಣ? ಸಂಪುಟ ಪುನಾರಚನೆಗೆ ಕೈ ಹಾಕಿ ಹತ್ತೋ ಹನ್ನೆರಡು ಮಂದಿಯನ್ನು ಕಿತ್ತುಹಾಕಿದರೆ ಮೊದಲ ಕಂತಿನ ಭಿನ್ನಮತೀಯರ ಪಡೆ ಮೇಲೆದ್ದು ನಿಲ್ಲುತ್ತದೆ. ಇದೇ ರೀತಿ ಮಂತ್ರಿ ಮಂಡಲಕ್ಕೆ ಸೇರಲಾಗದವರು ಎರಡನೇ ಕಂತಿನ ಭಿನ್ನಮತೀಯರಾಗುತ್ತಾರೆ.

ಇವತ್ತು ಬಿಹಾರದ ಫಲಿತಾಂಶ ಕಾಂಗ್ರೆಸ್ ಪಕ್ಷದ ಸೊಂಟಕ್ಕೆ ಬಕಾಬರಲೆ ಬಾರಿಸಿರುವು ದರಿಂದ ಕರ್ನಾಟಕದಲ್ಲಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವುದು ವರಿಷ್ಠರಿಗೆ ಇಷ್ಟವಿಲ್ಲ. ಇದೇ ರೀತಿ ಮಂತ್ರಿಮಂಡಲ ಪುನಾರಚನೆಗೆ ಕೈ ಹಾಕಿದರೆ ಹಲವು ಬಣಗಳು ಬಡಿದಾಟ ಕ್ಕಿಳಿಯುತ್ತವೆ. ಇಂಥ ಬಡಿದಾಟ ಬಿಜೆಪಿಯ ಆಸೆಗೆ ಬೆಂಬಲ ನೀಡಬಹುದು ಎಂಬುದು ವರಿಷ್ಠರ ಆತಂಕ.

ಸದ್ಯಕ್ಕಿರುವ ಮಾಹಿತಿಗಳ ಪ್ರಕಾರ ಹಾಲಿ ಸಂಪುಟದ 17 ರಿಂದ 19 ಮಂತ್ರಿಗಳನ್ನು ತೆಗೆದು‌ ಹಾಕಬೇಕು ಅಂತ ಪಕ್ಷದ ರಣತಂತ್ರಜ್ಞರು ಕಳಿಸಿರುವ ರಿಪೋರ್ಟು ವರಿಷ್ಠರ ಕೈಲಿದೆ. ಆದರೆ ಬಿಹಾರದಲ್ಲಿ ಬಿದ್ದ ಹೊಡೆತದಿಂದ ಸುಸ್ತಾಗಿರುವ ವರಿಷ್ಠರು ಈ ವರದಿಯನ್ನು ಜಾರಿ ಗೊಳಿಸಲು ಹಿಂಜರಿಯುತ್ತಿದ್ದಾರೆ. ಮೂಲಗಳ ಪ್ರಕಾರ, ಸಂಪುಟ ಪುನಾರಚನೆ ಈ ವರ್ಷ ನಡೆಯುವುದು ಡೌಟು. ಒಂದು ವೇಳೆ ಎಲ್ಲವನ್ನೂ ಮೀರಿ ರಿಸ್ಕ್ ತೆಗೆದುಕೊಳ್ಳಲು ವರಿಷ್ಠರು ಮುಂದಾದರೆ ಅದು ಪವಾಡ.

ಲಾಸ್ಟ್ ಸಿಪ್: ಅಂದ ಹಾಗೆ, ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಸಿಎಂ ಸಿದ್ದರಾಮಯ್ಯ ಅವರನ್ನು ಗಟ್ಟಿಗೊಳಿಸಿದೆ ಎಂಬ ಮಾತೇನಿದೆ, ಇದನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪಾಳಯ ಒಪ್ಪುವುದಿಲ್ಲ. ಕೇಳಿದರೆ, ‘ನೋಡ್ತಾ ಇರಿ. ಡಿಕೆಶಿ ಸಾಹೇಬ್ರು ರಿಯಲ್ ಫೈಟರ್. ನಿರ್ಣಾಯಕ ಸಂದರ್ಭದಲ್ಲಿ ಒಂದು ಬಾಂಬು ಸಿಡಿಸಿ ಪರಿಸ್ಥಿತಿಯನ್ನು ತಮ್ಮ ಕಂಟ್ರೋಲಿಗೆ ತೆಗೆದುಕೊಳ್ಳುತ್ತಾರೆ, ಮುಖ್ಯಮಂತ್ರಿ ಅಗುತ್ತಾರೆ’ ಅಂತ ವಿಶ್ವಾಸ ವ್ಯಕ್ತ ಪಡಿಸುತ್ತದೆ. ಅದು ಹೇಳುವ ಬಾಂಬು ಯಾವುದು? ಅನ್ನುವುದೇ ಸದ್ಯದ ಕುತೂಹಲ.