Kiran Upadhyay Column: ಕೊನೆಗೂ ಅವರಿಗೆ ಪದ್ಮಶ್ರೀ ಬರಲಿಲ್ಲ...
ಅನಂತ ನಾಗ್ ಕೇವಲ ಒಳ್ಳೆಯ ನಟ, ಅಭಿನಯವನ್ನು ಮಾತ್ರ ಮಾಡಬಲ್ಲರು ಎಂದರೆ ಅದು ತಪ್ಪು. ಅವರು ಹಾಡಬಲ್ಲರು, ತಬಲಾ ನುಡಿಸಬಲ್ಲರು, ಸಂಸ್ಕೃತ ಶ್ಲೋಕಗಳನ್ನು ಹೇಳಬಲ್ಲರು, ರುದ್ರ, ಅಥರ್ವಶೀರ್ಷ, ಮಂತ್ರಪುಷ್ಪವನ್ನು ಪಠಿಸಬಲ್ಲರು. ಭಗವದ್ಗೀತೆಯ ಶ್ಲೋಕಗಳು ಅವರಿಗೆ ಕಂಠಪಾಠ.


ವಿದೇಶವಾಸಿ
ಸುಮಾರು ನಾಲ್ಕು ದಶಕದ ಹಿಂದಿನ ಮಾತು. ಆಗ ಹೊತ್ತೋಟ ಮಂಜುನಾಥ ಭಾಗವತರ ಬಳಿ ಯಕ್ಷಗಾನ ಕಲಿಯುತ್ತಿದ್ದ ಕಾಲ. ‘ಸಮಯ ಸಮೂಹ’ (ಸಹ್ಯಾದ್ರಿ ಮಕ್ಕಳ ಯಕ್ಷಗಾನ ಸಮೂಹ) ಎಂಬ ಹೆಸರಿನಲ್ಲಿ ಆಗಾಗ ಯಕ್ಷಗಾನ ಪ್ರದರ್ಶನವನ್ನು ನಮ್ಮ ತಂಡ ಕೊಡುತ್ತಿತ್ತು. ಒಮ್ಮೆ ಸಿದ್ಧಾಪುರದಲ್ಲಿ ನಮ್ಮ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅಂದು ಚೌಕಿಯಲ್ಲಿ ಬಣ್ಣಕ್ಕೆ ಕುಳಿತಾಗ, ಸಮೂಹದ ಮುಂದಾಳತ್ವ ವಹಿಸಿದ್ದ ಶ್ರೀಮತಿ ವಿಜಯನಳಿನಿ ಮತ್ತು ಪ್ರೊಫೆಸರ್ ರಮೇಶ್ ದಂಪತಿ ಚೌಕಿಗೆ ಬಂದು, “ಇವತ್ತು ನಿಮಗೆಲ್ಲ ಒಂದು ಸರ್ ಪ್ರೈಸ್ ಇದೆ, ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಟರೊಬ್ಬರು ನಮ್ಮ ಯಕ್ಷಗಾನವನ್ನು ವೀಕ್ಷಿಸಲು ಬರುತ್ತಿದ್ದಾರೆ, ಬರಲು ಎಷ್ಟು ಹೊತ್ತಾಗುತ್ತದೆಯೋ ಗೊತ್ತಿಲ್ಲ, ಎಷ್ಟು ಹೊತ್ತು ಕುಳಿತು ಆಟ ನೋಡುತ್ತಾರೆಯೋ ಗೊತ್ತಿಲ್ಲ, ಯಾವುದಕ್ಕೂ ಎಲ್ಲರೂ ಚೆನ್ನಾಗಿ ಮಾಡಿ" ಎಂದು ಹೇಳಿದರು.
ಯಾರು ಎಂಬ ಗುಟ್ಟು ಮಾತ್ರ ಬಿಟ್ಟು ಕೊಟ್ಟಿರಲಿಲ್ಲ. ಯಕ್ಷಗಾನ ಆರಂಭವಾಯಿತು. ಅಂದು ಕಂಸವಧೆ ಪ್ರಸಂಗವಾದದ್ದರಿಂದ ಬಲರಾಮನ ಪಾತ್ರ ಮಾಡಿದ್ದ ನನ್ನ ಪ್ರವೇಶ ಪ್ರಥಮಾರ್ಧದ ನಂತರವೇ ಇತ್ತು. ಬಲರಾಮನ ಪ್ರವೇಶ ಮಾಡಿ, ರಂಗಸ್ಥಳದಲ್ಲಿ ನಿಂತು ಸಭಿಕರ ಕಡೆ ನೋಡಿದಾಗ, ಮೊದಲನೇ ಸಾಲಿನಲ್ಲಿ ಶುಭ್ರ, ಶ್ವೇತವರ್ಣದ ಜುಬ್ಬಾ ಪೈಜಾಮು ಧರಿಸಿದ್ದ ಸುರದ್ರೂಪಿಯೊಬ್ಬರು ಕುಳಿತಿದ್ದರು.
ನಮ್ಮ ಯಕ್ಷಗಾನ ನೋಡಲು ಬರಬೇಕಾಗಿದ್ದ ಚಿತ್ರನಟ ಅವರೇ ಎಂಬುದು ಕ್ಷಣಾರ್ಧದಲ್ಲಿ ಗ್ರಹಿಕೆಗೆ ಬಂತು. ಒಮ್ಮೆಲೇ ಕೈಕಾಲು ಥರಗುಟ್ಟಲು ಆರಂಭಿಸಿದವು. ಇಂಥ ಅಗ್ರಗಣ್ಯ ನಟನ ಎದುರು ನಾನು ಅಭಿನಯಿಸುವುದಲ್ಲ, ನಿಲ್ಲಲೂ ಸಾಧ್ಯವಿಲ್ಲ ಎಂದೆನಿಸಿಬಿಟ್ಟಿತು. ಅಂದು ಏನು ಮಾತನಾಡಿ ದೆನೋ, ಏನು ಅಭಿನಯ ಮಾಡಿದೆನೋ, ಒಂದೂ ನೆನಪಿಲ್ಲ.
ಅಂತೂ ಇಂತೂ ಅಂದಿನ ಪ್ರಸಂಗದ ಪಾತ್ರ ಮುಗಿಸಿ ರಂಗಸ್ಥಳ ಇಳಿಯುತ್ತಿದ್ದಂತೆ, “ಎಲ್ಲರೂ ಗ್ರೂಪ್ ಫೋಟೋಕ್ಕೆ ಬಂದು ನಿಲ್ಲಬೇಕು" ಎಂದು ಅಪ್ಪಣೆಯಾಯಿತು. ನಮ್ಮ ತಂಡದವರೆಲ್ಲ ಸಮೂಹ ಛಾಯಾಚಿತ್ರಕ್ಕಾಗಿ ನಿಲ್ಲುತ್ತಿದ್ದಂತೆಯೇ, ಅಷ್ಟು ಹೊತ್ತೂ ಎದುರು ಕುಳಿತಿದ್ದ ನಟ ಅನಂತ ನಾಗ್ ವೇದಿಕೆಯ ಮೇಲೆ ಬಂದರು. ಎಲ್ಲ ಬಾಲ ಕಲಾವಿದರ ಕೈಕುಲುಕಿ, ಚೆನ್ನಾಗಿ ಮಾಡಿದ್ದೀರಿ ಎಂದು ಹೇಳುತ್ತಾ ಮಧ್ಯದಲ್ಲಿ ನಿಂತರು. ಅಂದು ನಾವೆಲ್ಲ ಬಣ್ಣ ಬಣ್ಣದ ಯಕ್ಷಗಾನದ ವೇಷ ತೊಟ್ಟು ಫೋಟೋಗೆ ನಿಂತಿದ್ದೆವು, ಅನಂತ ನಾಗ್ ತಮ್ಮ ಬಿಳಿಯ ಉಡುಪಿನಲ್ಲಿ ನಿಂತಿದ್ದರು.
ಇಂದಿಗೂ ಆ ಭಾವಚಿತ್ರದಲ್ಲಿ ಎದ್ದು ಕಾಣುವುದು ಅನಂತ ನಾಗ್ ಅವರೇ ಹೊರತು ಉಳಿದವ ರ್ಯಾರೂ ಅಲ್ಲ. ಅಂದು ಮೊದಲ ಬಾರಿಗೆ ನಾನು ಅನಂತ ನಾಗ್ ಅವರನ್ನು ಎದುರು ಬದುರಾಗಿ ಕಂಡದ್ದು. ಅಂದು ನನ್ನ ಪಾತ್ರ ಚೆನ್ನಾಗಿ ಆಗಿರಲಿಲ್ಲ ಎಂಬ ಸತ್ಯ ನನಗೆ ತಿಳಿದಿದ್ದರೂ, ಅವರು ಆಡಿದ ‘ಚೆನ್ನಾಗಿ ಮಾಡಿದ್ದೀರಿ’ ಎಂಬ ಎರಡೇ ಪದ ಕೆಲವು ತಿಂಗಳುಗಳವರೆಗೆ ನನಗೆ ಪ್ರೋತ್ಸಾಹದ ಚುಚ್ಚುಮದ್ದಾಗಿತ್ತು. ಅಂದು ಮೊದಲ ಬಾರಿ ನಾನು ಒಬ್ಬ ಜನಪ್ರಿಯ ಚಿತ್ರನಟನನ್ನು, ಅದರಲ್ಲೂ ನನಗೆ ಇಷ್ಟವಾದ ನಟನನ್ನು ಎದುರುಬದುರಾಗಿ ಭೇಟಿಯಾಗಿದ್ದೆ. ಅದರ ನಂತರ ಮತ್ತೊಮ್ಮೆ ಅವರನ್ನು ಇನ್ನೂ ಹತ್ತಿರದಿಂದ ಭೇಟಿಯಾಗುವ ಅವಕಾಶ ಸಿಕ್ಕಿತ್ತು, ಅದು ಈ ಸಂದರ್ಭದಲ್ಲಿ ಅಪ್ರಸ್ತುತ.
ಒಂದೇ ವ್ಯಕ್ತಿಯಲ್ಲಿ ಎಷ್ಟು ಗುಣಗಳು ಅಡಕವಾಗಿರಬಲ್ಲದು ಎಂಬುದಕ್ಕೆ ಜೀವಂತ ಉದಾಹರಣೆ ಅನಂತ್ ನಾಗ್. ವಿದ್ಯೆ, ವಿಧೇಯತೆ, ವಿವೇಕ, ಸಮಯ ಪ್ರಜ್ಞೆ, ಸ್ಥಿತಪ್ರಜ್ಞೆ, ಭ್ರಾತೃತ್ವ, ಕಲೆ, ನೇರ ನಡೆ-ನುಡಿ, ತಾಳ್ಮೆ ಎಲ್ಲವೂ ಅಡಕವಾಗಿರುವವ ಕೆಲವೇ ಜನರನ್ನು ಪಂಕ್ತಿಯಲ್ಲಿ ನಿಲ್ಲಿಸಿದರೆ, ಅದರಲ್ಲಿ ಸ್ಥಾನ ಪಡೆಯುವವರು ಅನಂತ ನಾಗ್.
ಪ್ರಾಥಮಿಕ ಶಾಲೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುತ್ತಿದ್ದಂಥ ವಿದ್ಯಾರ್ಥಿ. ನಂತರ ಮುಂಬೈಗೆ ಹೋಗಿ, ಪ್ರೌಢ ಶಿಕ್ಷಣ ಪಡೆಯುವಾಗ ಹತ್ತನೇ ತರಗತಿಯಲ್ಲಿ ಅನುತ್ತೀರ್ಣ. ಇಂಗ್ಲಿಷ್ ಎಂದರೆ ಮೈಲುದ್ದ ಓಡುತ್ತಿದ್ದ ಅವರು ಇಂಗ್ಲಿಷ್ ಸಿನಿಮಾಗಳನ್ನು ನೋಡಿ, ಆ ಭಾಷೆಯ ಕುರಿತು ಆಸಕ್ತಿ ಹೊಂದಿ, ಅದನ್ನು ಕಲಿಯಲು ಆರಂಭಿಸಿದರು. ಚಿತ್ರರಂಗಕ್ಕೆ ಕಾಲಿಡುವುದಕ್ಕಿಂತ ಮೊದಲು ನಾಲ್ಕೈದು ವರ್ಷ ರಂಗಭೂಮಿಯಲ್ಲಿ ಕೆಲಸ ಮಾಡಿದವರು.
ಕನ್ನಡ, ಹಿಂದಿ, ಮರಾಠಿ, ಕೊಂಕಣಿ ಭಾಷೆಯಲ್ಲಿ ನಾಟಕ ಮಾಡುತ್ತಿದ್ದರು. ಅಮೋಲ್ ಪಾಲೇಕರ್, ಸತ್ಯದೇವ್ ದುಬೆ, ಗಿರೀಶ್ ಕಾರ್ನಾಡ್ ಜತೆ ಅಭಿನಯಿಸಿದವರು. ಆ ಐದು ವರ್ಷಗಳಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಅನಂತ ನಾಗ್ ಕೇವಲ ಒಳ್ಳೆಯ ನಟ, ಅಭಿನಯವನ್ನು ಮಾತ್ರ ಮಾಡಬಲ್ಲರು ಎಂದರೆ ಅದು ತಪ್ಪು. ಅವರು ಹಾಡಬಲ್ಲರು, ತಬಲಾ ನುಡಿಸಬಲ್ಲರು,
ಸಂಸ್ಕೃತ ಶ್ಲೋಕಗಳನ್ನು ಹೇಳಬಲ್ಲರು, ರುದ್ರ, ಅಥರ್ವಶೀರ್ಷ, ಮಂತ್ರಪುಷ್ಪವನ್ನು ಪಠಿಸಬಲ್ಲರು. ಭಗವದ್ಗೀತೆಯ ಶ್ಲೋಕಗಳು ಅವರಿಗೆ ಕಂಠಪಾಠ. ಅಷ್ಟೇ ಅಲ್ಲ, ಅದರ ಅರ್ಥವನ್ನೂ ಅವರು ವಿವರಿಸಬಲ್ಲರು. ಅನಂತ ನಾಗ್ 1948ರಂದು ಮುಂಬೈನ ಚೌಪಾಟಿಯಲ್ಲಿ ಶ್ರೀಮತಿ ಆನಂದಿ ಮತ್ತು ಶ್ರೀ ಸದಾನಂದ ನಾಗರಕಟ್ಟೆಯವರ ಸುಪುತ್ರನಾಗಿ ಜನಿಸಿದರು. ಅಕ್ಕ ಶ್ಯಾಮಲಾ, ತಮ್ಮ ಶಂಕರ್ ನಾಗ್. ಮಡದಿ ಗಾಯತ್ರಿ. 1973ರಲ್ಲಿ ನಂಜರಾಜ್ ಅರಸ್ ನಿರ್ದೇಶನದಲ್ಲಿ ಬಿಡುಗಡೆಯಾದ ‘ಸಂಕಲ್ಪ’ ಇವರ ಮೊದಲ ಚಿತ್ರ.
ಒಂದು ವರ್ಷದ ನಂತರ ಶ್ಯಾಮ್ ಬೆನೆಗಲ್ ನಿರ್ದೇಶನದ ‘ಅಂಕುರ್’ ಚಿತ್ರದಿಂದ ಹಿಂದಿಗೂ ಪದಾರ್ಪಣೆ ಮಾಡಿದರು. ಶ್ಯಾಮ್ ಬೆನೆಗಲ್ ಜತೆ ಆರು ಚಿತ್ರಗಳಲ್ಲಿ ಕೆಲಸ ಮಾಡಿದರು. ಅವರ ಅಡ್ಡ ಹೆಸರಾದ ‘ನಾಗರಕಟ್ಟೆ’ಯನ್ನು ಹಿಂದಿ ಚಿತ್ರರಂಗಕ್ಕೆ ಬೇಕಾಗಿ ‘ನಾಗ್’ ಎಂದು ಬದಲಾಯಿಸಿದ್ದು ಅದೇ ಶ್ಯಾಮ್ ಬೆನೆಗಲ್ ಇರಲಿ, ಅಲ್ಲಿಂದ ಹಿಂತಿರುಗಿ ನೋಡದ ಅವರು ಸುಮಾರು ಇನ್ನೂರ ಐವತ್ತಕ್ಕೂ ಹೆಚ್ಚು ಕನ್ನಡ, ಸುಮಾರು ಐವತ್ತರಷ್ಟು ಹಿಂದಿ, ಮಲಯಾಳಂ, ತೆಲುಗು, ತಮಿಳು, ಮರಾಠಿ ಚಿತ್ರಗಳಲ್ಲಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದಾರೆ.
‘ಮಿಂಚಿನ ಓಟ’, ‘ಹೊಸ ನೀರು’, ‘ಅವಸ್ಥೆ’, ‘ಗಂಗವ್ವ ಗಂಗಾಮಾಯಿ’ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರದ ‘ಶ್ರೇಷ್ಠ ನಟ’ ಪ್ರಶಸ್ತಿ ಪಡೆದರೆ, ‘ನಾ ನಿನ್ನ ಬಿಡಲಾರೆ’, ‘ಬರ’, ‘ಗೌರಿ ಗಣೇಶ’, ‘ಹೆಂಡ್ತಿಗ್ಹೇಳ್ಬೇಡಿ’, ‘ಉದ್ಭವ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಗಳಿಗೆ ದಕ್ಷಿಣ ಭಾರತ ಫಿಲಂಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೀವಮಾನದ ಸಾಧನೆಗಾಗಿ ಡಾ. ವಿಷ್ಣುವರ್ಧನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅವರು ಬರೆದಿರುವ ‘ನನ್ನ ತಮ್ಮ ಶಂಕರ’ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಲಭಿಸಿದೆ. ಇದರ ಹೊರತಾಗಿ ಅವರು ಅಭಿನಯಿಸಿದ ‘ಬಯಲು ದಾರಿ’, ‘ಕನ್ನೇಶ್ವರ ರಾಮ’, ‘ನಾ ನಿನ್ನ ಬಿಡಲಾರೆ’, ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ನಾರದ ವಿಜಯ’, ‘ಬೆಳದಿಂಗಳ ಬಾಲೆ’, ‘ಇಬ್ಬನಿ ಕರಗಿತು’, ‘ಮುದುಡಿದ ತಾವರೆ ಅರಳಿತು’, ‘ಗಾಳಿಪಟ’, ‘ವಾಸ್ತು ಪ್ರಕಾರ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ಕಾಸರಗೋಡು’, ‘ಕೆಜಿಎಫ್’ ಅಬ್ಬಾ, ಒಂದಾ, ಎರಡಾ... ನೂರಾರು ಜನಪ್ರಿಯ ಚಿತ್ರಗಳು.
ಒಂದು ಕಾಲದಲ್ಲಿ ಅನಂತ ನಾಗ್ ಮತ್ತು ಜ್ಯೂಲಿ ಲಕ್ಷ್ಮೀ ಜೊತೆಯಾದ ಚಿತ್ರಗಳು ಎಂದರೆ ಗಲ್ಲಾ ಪೆಟ್ಟಿಗೆಯಲ್ಲಿ ಸೋಲಿಲ್ಲ ಎಂದೇ ಆಗಿತ್ತು. ಇಬ್ಬರೂ ಜೊತೆಯಾಗಿ ಇಪ್ಪತ್ತೈದು ಚಿತ್ರಗಳಲ್ಲಿ ನಟಿಸಿರುವುದು ಇದಕ್ಕೆ ಸಾಕ್ಷಿ. ನನ್ನ ದೃಷ್ಟಿಯಲ್ಲಿ ಅನಂತ ನಾಗ್ ಕನ್ನಡ ಚಿತ್ರರಂಗದ ಮೊದಲ ‘ಚಾಕಲೇಟ್ ಹೀರೋ’.
ನಂತರದ ದಿನಗಳಲ್ಲಿ ಅವರು ಹಾಸ್ಯಮಿಶ್ರಿತ ಹೀರೋ ಪಾತ್ರಕ್ಕೂ ಒಗ್ಗಿಕೊಂಡು ಸೈ ಎನ್ನಿಸಿ ಕೊಂಡರು. ಅನಂತ ನಾಗ್ ಕರ್ನಾಟಕದ ರಾಜಕೀಯ ಪುಟಗಳಲ್ಲೂ ತಮ್ಮ ಹೆಸರನ್ನು ದಾಖಲಿಸಿ ದ್ದಾರೆ. 1994ರಲ್ಲಿ ಮಶ್ವರಂ ವಿಧಾನಸಭೆ ಕ್ಷೇತ್ರದಿಂದ ಆರಿಸಿ ಬಂದು, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರಾಜಕೀಯ ತಮಗೆ ಹೇಳಿಸಿದ್ದಲ್ಲ ಎಂದು ಅರಿವಾದಾಗ, ಅದನ್ನು ಬಿಟ್ಟು ಪುನಃ ನಟನೆಗೆ ಮರಳಿದ್ದಾರೆ. ಇದನ್ನೆಲ್ಲ ಯಾಕೆ ಹೇಳುತ್ತಿದ್ದೇನೆ ಎಂದರೆ, ಇಷ್ಟೆಲ್ಲ ಇದ್ದರೂ ಅನಂತ ನಾಗ್ ಅವರ ಹೆಸರನ್ನು ಭಾರತ ಸರಕಾರ ನೀಡುವ ‘ಪದ್ಮಶ್ರೀ’ ಪ್ರಶಸ್ತಿಗೆ ಪರಿಗಣಿಸುತ್ತಿಲ್ಲ ಎಂಬ ಬೇಸರ ನನ್ನನ್ನೂ ಸೇರಿದಂತೆ ಅವರ ಅಭಿಮಾನಿಗಳನ್ನು ಕಾಡುತ್ತಿತ್ತು.
ಎಂಥ ವಿಪರ್ಯಾಸವೆಂದರೆ, ಸತತ ಐದು ದಶಕಗಳ ಕಾಲ ಚಿತ್ರರಂಗದಲ್ಲಿದ್ದು, ಬಹು ಭಾಷೆಯ ಚಲನಚಿತ್ರಗಳಲ್ಲಿ ನಟಿಸಿ, ತಮ್ಮದೇ ಆದ ಛಾಪು ಮೂಡಿಸಿದ ಅನಂತ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಬರಲಿಲ್ಲ ಎಂದರೆ ಹೇಗೆ? ಕಳೆದ ಎರಡು ಮೂರು ವರ್ಷಗಳಿಂದಂತೂ ಅನಂತ್ ನಾಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರಕಬೇಕು ಎಂಬುದು ಅವರ ಅಭಿಮಾನಿಗಳ ಒತ್ತಾಸೆಯಾಗಿತ್ತು. ಅದಕ್ಕಾಗಿ ಅಭಿಯಾನೋಪಾದಿಯಲ್ಲಿ ಕೆಲಸಗಳೂ ನಡೆದವು. ಅನಂತ ನಾಗ್ ಹಿತೈಷಿಗಳು ತಮ್ಮ ಕೈಲಾದ ದ್ದನ್ನೆಲ್ಲ ಮಾಡಿದರು.
ಆದರೆ ಅನಂತ ನಾಗ್ ಇದಕ್ಕೆ ಎಂದೂ ತಲೆಕೆಡಿಸಿಕೊಂಡವರಂತೆ ಕಾಣಲಿಲ್ಲ. ಎಲ್ಲಿಯೂ ಲಾಬಿ ಮಾಡಿದ್ದು ಕಂಡುಬರಲಿಲ್ಲ. ಪ್ರಶಸ್ತಿಗಾಗಿ ಯಾರಿಗೂ ಬೆಣ್ಣೆ ಹೊಸೆಯಲಿಲ್ಲ, ಅವರಲ್ಲಿ ಆ ಹಪಾಹಪಿಯೇ ಇರಲಿಲ್ಲ. ಅನಂತ ನಾಗ್ ಆ ರೀತಿಯ ಜನವೇ ಅಲ್ಲ. ನೇರವಾದ ನಡೆ, ಅದಕ್ಕಿಂತಲೂ ನೇರವಾದ, ಖಾರವಾದ ನುಡಿ ಇರುವವರಿಗೆ ಇಂದಿನ ದಿನಗಳಲ್ಲಿ ಪ್ರಶಸ್ತಿಗಳು ಸುಲಭವಾಗಿ ಒಲಿದು ಬರುವುದಿಲ್ಲ. ಅನಂತ ನಾಗ್ ಆ ದರ್ಜೆಗೆ ಸೇರಿದವರು.
ಅನಂತ ನಾಗ್ ಅಭಿನಯಿಸಿದ ಅರ್ಧಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡವರು. ಆದರೂ ಇಂದಿಗೂ ಅವರ ಹೆಸರಿನಲ್ಲಿ ಅಭಿಮಾನಿಗಳ ಸಂಘಗಳಿಲ್ಲ. ಅವರ ಚಲನಚಿತ್ರ ಬಿಡುಗಡೆಯಾದರೆ ದೊಡ್ಡ ದೊಡ್ಡ ಕಟೌಟ್, ಹೋರ್ಡಿಂಗ್ಗಳು ತಲೆಯೆತ್ತಿ ನಿಲ್ಲುವುದಿಲ್ಲ, ಕೊರಳಿಂದ ಹಿಡಿದು ನೆಲಕ್ಕೆ ತಾಗುವಷ್ಟು ದೊಡ್ಡ ಹೂವಿನ ಹಾರ ಬೀಳುವುದಿಲ್ಲ, ಹಾಲಿನ ಅಭಿಷೇಕವಿಲ್ಲ.
ಯಾಕೆ ಇರಬೇಕು ಹೇಳಿ? ಅವರು ನಾಯಕರಾದ ಬಹುತೇಕ ಚಿತ್ರಗಳಲ್ಲಿ ಹೊಡೆದಾಟ ಬಡಿದಾಟ ಗಳಿಲ್ಲ. ಅನಂತ ನಾಗ್ ಒಬ್ಬರೇ ನೂರಾರು ರೌಡಿಗಳನ್ನು ಹೊಡೆದು ಓಡಿಸಿದ್ದಿಲ್ಲ, ಮಚ್ಚು ಲಾಂಗು ಕೈಯಲ್ಲಿ ಹಿಡಿದಿದ್ದಿಲ್ಲ, ಗುಂಡು ಹೊಡೆದು ಐವತ್ತು ಜನರನ್ನು ಸಾಯಿಸಿದ್ದಿಲ್ಲ, ಹೆಲಿಕಾಪ್ಟರ್ನಿಂದ ಜೋತಾಡಿ ಕಳ್ಳರನ್ನು ಬೆನ್ನಟ್ಟಲಿಲ್ಲ, ವಿಮಾನದಿಂದ ಜಿಗಿದು ನಾಯಕಿಯನ್ನು ರಕ್ಷಿಸಲಿಲ್ಲ. ಅವರದ್ದೇನಿದ್ದರೂ ಸೀದಾಸಾದಾ ನಮ್ಮ ಮನೆಯಲ್ಲಿಯೋ, ಪಕ್ಕದ ಮನೆಯಲ್ಲಿಯೋ ನಡೆಯುವ ಕಥೆಯಲ್ಲಿನ ಒಂದು ಪಾತ್ರ.
ಎಷ್ಟೋ ಬಾರಿ ಅವರೇ ಖಳನಾಯಕರಿಂದ ಪೆಟ್ಟು ತಿಂದು ಬಂದಿರುವ, ರಸ್ತೆ ಬದಿಯಲ್ಲಿ ಹೋಗುವವರಿಂದಲೂ ಬೈಗುಳ ಕೇಳಿಸಿಕೊಂಡು, ಅವಮಾನಿತನಾಗಿ ಬರುವ ಪಾತ್ರಗಳು. ಅದಕ್ಕೆಲ್ಲ ಪದ್ಮಶ್ರೀ ಯಾರು ಕೊಡಬೇಕು? ಯಾಕೆ ಕೊಡಬೇಕು ಹೇಳಿ? ಕೊನೆಗೂ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಒಲಿಯಲೇ ಇಲ್ಲ. ಇನ್ನು ಮುಂದೆಯೂ ಅದು ಅವರಿಗೆ ಸಿಗುವುದಿಲ್ಲ.
ಕಾರಣ, ಅನಂತ ನಾಗ್ ಈ ವರ್ಷ ‘ಪದ್ಮ’ ಪ್ರಶಸ್ತಿಯಿಂದ ‘ಭೂಷಣ’ರಾಗಿದ್ದಾರೆ. ತಡವಾದರೂ ಪದ್ಮಶ್ರೀಗಿಂತ ಒಂದು ಅಟ್ಟ ಎತ್ತರದ ‘ಪದ್ಮಭೂಷಣ’ ಪ್ರಶಸ್ತಿಯೇ ಅವರಿಗೆ ದೊರಕಿದೆ. ಮೊನ್ನೆ ಅದನ್ನು ಅವರು ಸ್ವೀಕರಿಸಲು ಬಿಳಿ ಕುರ್ತಾ ಪೈಜಾಮ ತೊಟ್ಟು ನಡೆಯುತ್ತಿದ್ದಾಗ, ನಾಲ್ಕು ದಶಕದ ಹಿಂದೆ ಸಿzಪುರದಲ್ಲಿ ಮೊದಲ ಬಾರಿಗೆ ಕಂಡ ಅನಂತ ನಾಗ್ ನೆನಪಾದರು!