Roopa Gururaj Column: ಸಂಡೂರು ಕ್ಷೇತ್ರದ ʼಕುಮಾರಸ್ವಾಮಿʼ
ಸ್ಥಳ ಪುರಾಣ ಹೇಳುವಂತೆ, ಕುಮಾರಸ್ವಾಮಿಯುವಕನಾದಾಗ ಪಾರ್ವತಿ ವಿವಾಹ ಮಾಡಲು ಕನ್ಯಾ ನ್ವೇಷಣೆ ನಡೆಸಿ ಅವನಿಗೆ ಚಂದದ ಯೋಗ್ಯ ಕನ್ಯೆಯ ಕುರಿತು ತಿಳಿಸಿದಳು. ಸಹಜವಾಗಿಯೇ ಕುಮಾರನು ಅಮ್ಮ ಹುಡುಗಿ ಹೇಗಿದ್ದಾಳೆ? ಎಂದು ಕೇಳಿದ. ನನ್ನ ಹಾಗೆ ಸುಂದರಿಯಾಗಿದ್ದಾಳೆ ಎಂದು ಪಾರ್ವತಿ ಹೇಳಿದಳು.


ಒಂದೊಳ್ಳೆ ಮಾತು
rgururaj628@gail.com
ಬಳ್ಳಾರಿ ಜಿಲ್ಲೆ ಸಂಡೂರಿನ ದಕ್ಷಿಣ ಭಾಗದಲ್ಲಿ ಪ್ರಸಿದ್ಧಿಯಾದ ಹಾಗೂ ಸಂಡೂರಿನ ಅಧಿದೇವತೆ ಎಂದೇ ಹೆಸರಾದ ಕುಮಾರಸ್ವಾಮಿ (ಸ್ಕಂದ) ಇಲ್ಲಿ “ಕ್ರೌಂಚ" ಪರ್ವತದಲ್ಲಿ ಶತಮಾನಗಳಿಂದ ನೆಲೆಸಿದ್ದಾನೆ. ತಾಯಿ ಪಾರ್ವತಿ ದೇವಿ ಪಕ್ಕದಲ್ಲೆ ನೆಲೆಸಿದ್ದು ಈ ದೇವಾಲಯವನ್ನು ಬಾದಾಮಿ ಚಾಲುಕ್ಯರು ನಿರ್ಮಿಸಿದ ಇತಿಹಾಸವಿದೆ. ರಾಷ್ಟ್ರಕೂಟರು ಕುಮಾರಸ್ವಾಮಿ ದೇವಸ್ಥಾನವನ್ನು ನಿರ್ಮಿಸಿ ವಿಗ್ರಹ ಪ್ರತಿಷ್ಠಾಪಿಸಿದರು. ಮುಂದೆ ಈ ದೇವಸ್ಥಾನವನ್ನು ಕಲ್ಯಾಣ ಚಾಲುಕ್ಯರು ಅಭಿವೃದ್ಧಿಪಡಿಸಿದರು ಎಂಬ ಉಲ್ಲೇಖವಿದೆ.
ಸ್ಥಳ ಪುರಾಣ ಹೇಳುವಂತೆ, ಕುಮಾರಸ್ವಾಮಿಯುವಕನಾದಾಗ ಪಾರ್ವತಿ ವಿವಾಹ ಮಾಡಲು ಕನ್ಯಾ ನ್ವೇಷಣೆ ನಡೆಸಿ ಅವನಿಗೆ ಚಂದದ ಯೋಗ್ಯ ಕನ್ಯೆಯ ಕುರಿತು ತಿಳಿಸಿದಳು. ಸಹಜವಾಗಿಯೇ ಕುಮಾರನು ಅಮ್ಮ ಹುಡುಗಿ ಹೇಗಿದ್ದಾಳೆ? ಎಂದು ಕೇಳಿದ. ನನ್ನ ಹಾಗೆ ಸುಂದರಿಯಾಗಿದ್ದಾಳೆ ಎಂದು ಪಾರ್ವತಿ ಹೇಳಿದಳು.
ಇದನ್ನು ಕೇಳಿದ ತಕ್ಷಣ ಅಮ್ಮ ಹುಡುಗಿ ‘ನಿನ್ನ ಹಾಗೆ ಇದ್ದಾಳೆ ಎಂದ ಮೇಲೆ ಅವಳು ಮಾತೃ ಸಮಾನ, ನಾನು ವಿವಾಹವಾಗುವುದಿಲ್ಲ’ ಎಂದಾಗ, ಎಲ್ಲಾ ಹೆಣ್ಣು ಮಕ್ಕಳಲ್ಲೂ ನನ್ನ ಅಂಶ ಇದ್ದೇ ಇರುತ್ತದೆ ಎಂದು ಕೋಪದಿಂದ ಪಾರ್ವತಿ ಹೇಳಿದಳು. ಆದರೆ ಕುಮಾರ ಈ ಮಾತಿಗೆಲ್ಲ ಬಗ್ಗದೆ ವಿವಾಹ ಆಗುವುದೇ ಇಲ್ಲ ಎಂದನು.
ಇದನ್ನೂ ಓದಿ: Roopa Gururaj Column: ಹೃದಯದೊಳಗೆ ಭಗವಂತನಿರಲೇಬೇಕು
ಪಾರ್ವತಿ ಎಷ್ಟೇ ಹೇಳಿದರೂ ವಿವಾಹವಾಗಲು ನಿರಾಕರಿಸಿದಾಗ, ಸಿಟ್ಟಿನಿಂದ ಮಗನಾದ ‘ನೀನು ತಾಯಿಯ ಮಾತನ್ನೇ ಧಿಕ್ಕರಿಸುವ ನಿನ್ನನ್ನು ಹಾಲು ಕುಡಿಸಿ ಬೆಳೆಸಿದ್ದು ನಿಷ್ಪ್ರಯೋಜಕವಾಯಿತು’ ಎಂದು ಪಾರ್ವತಿ ಹೇಳಿದ ಮಾತನ್ನು ಕೇಳಿ ಕುಮಾರ ಸ್ವಾಮಿಯ ಮನಸ್ಸಿಗೆ ನೋವಾಗಿ, ‘ಹಾಗಾದರೆ ನನಗೆ ತಾಯಿಯ ಹಾಲಿನ ಹಂಗೇ ಬೇಡ’ ಎಂದು ತಾಯಿ ಕುಡಿಸಿದ ಹಾಲನ್ನೆಲ್ಲ ಕಕ್ಕಿದ.
ಮೊದಲು ಕಕ್ಕಿದ ಹಾಲು ಬೆಳ್ಳಗಿರುವ ವಿಭೂತಿ ಬೆಟ್ಟವಾಯಿತು. ಮಗನ ಉದ್ಧಟತನ ಕಂಡ ತಾಯಿ ಇನ್ನೂ ಕೋಪಗೊಂಡು ಇಷ್ಟೇ ಅಲ್ಲ ಇನ್ನೂ ನನ್ನ ಹಾಲು ಕುಡಿದಿರುವೆ ಎಂದಳು. ಕುಮಾರನು ಮತ್ತೆ ಎರಡನೇ ಬಾರಿ ಹಾಲನ್ನು ಕಕ್ಕುತ್ತಾನೆ. ಅದು ರಕ್ತ ಮಿಶ್ರಿತ ಹಾಲಾಗಿದ್ದು, ಬಿಳಿ ಬೆಟ್ಟದ ಪಕ್ಕದಲ್ಲಿ ಮತ್ತೊಂದು ತಾಮ್ರದ ಬಣ್ಣದ ಬಟ್ಟವಾಯಿತು. ಹೆದರಿದ ಪಾರ್ವತಿ ಸಾಕು ನಿಲ್ಲಿಸು ಎಂದಳು, ಕೇಳದ ಕುಮಾರನು ‘ಅಮ್ಮ, ನೀನು ಕೊಟ್ಟ ಆಹಾರ, ಹಾಲಿನ ಅಂಶ ನನಗೆ ಯಾವುದೂ ಬೇಡ’ ಎಂದು ಮತ್ತಷ್ಟು ಕಕ್ಕಿದನು.
ಅದು ಪೂರ್ತಿ ರಕ್ತವಾಗಿದ್ದು ಮೊದಲ ಎರಡು ಬೆಟ್ಟಗಳ ಸಮೀಪ ಮತ್ತೊಂದು ಕೆಂಪು ವರ್ಣದ ಬೆಟ್ಟವಾಯಿತು. ಸಂಡೂರಿನಲ್ಲಿ ವರ್ಷಕ್ಕೊಮ್ಮೆ ಜಾತ್ರಾ ಮಹೋತ್ಸವ ನಡೆಯುತ್ತದೆ. ಆ ಸಮಯ ದಲ್ಲಿ ವಿಧಿವತ್ತಾಗಿ ಪೂಜೆ ಹೋಮ ಹವನ ಮಾಡುತ್ತಾರೆ. ಹಾಲಿನ ಬೆಟ್ಟದಲ್ಲಿ ಬಾವಿ ತರದ ಹೊಂಡ ದಿಂದ ಬಿಳಿಯ ವಿಭೂತಿ ರಾಶಿ ತೆಗೆಯುತ್ತಾರೆ. ಪುನಃ ವಿಧಿವತ್ತಾದ ಮಂತ್ರ ಪೂಜೆಗಳನ್ನು ಮಾಡಿ ವಿಭೂತಿ ಬಾವಿಯನ್ನು ಮುಚ್ಚಿ ಮತ್ತೆ ಮುಂದಿನ ವರ್ಷ ಬರುವ ಜಾತ್ರೆಯಲ್ಲಿ ತೆಗೆಯುತ್ತಾರೆ.
ಪ್ರತಿ ವರ್ಷವೂ ತೆಗೆದ ವಿಭೂತಿಯನ್ನು ಭಕ್ತರಿಗೆ ಪ್ರಸಾದ ಕೊಡುತ್ತಾರೆ. ಸುಬ್ರಹ್ಮಣ್ಯ ಸ್ವಾಮಿ ಎರಡನೆಯ ಸಾರಿ ಕಕ್ಕಿದ ಹಾಲು ರಕ್ತ ಮಿಶ್ರಿತವಾದ ಬೆಟ್ಟ ಹಾಗೂ ಪೂರ್ತಿ ರಕ್ತವನ್ನೇ ಕಕ್ಕಿದ ಬೆಟ್ಟ ಇವು ಅಪಾರವಾದ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿನ ಸಂಪತ್ಭರಿತ ಬೆಟ್ಟ ಗಳಾಗಿವೆ. ಈ ಪರ್ವತದ ಆಕಾರವು ವೃತ್ತಾಕಾರವಾಗಿದ್ದು ಮಧ್ಯದಲ್ಲಿ ರಂಧ್ರವಿದೆ. ದಂತ ಕಥೆಯಂತೆ ಕಾರ್ತಿಕೇಯ ತಾರಕಾಸುರನೊಡನೆ ಯುದ್ಧ ಮಾಡುವಾಗ ಎಲ್ಲರನ್ನೂ ಸಂಹಾರ ಮಾಡಿದನು. ಆದರೆ ಕೆಲವು ರಾಕ್ಷಸರು ಈ ಪರ್ವತದಲ್ಲಿ ಅಡಗಿದ್ದರು. ಕಾರ್ತಿಕೇಯನು ತನ್ನ ಶಸ್ತ್ರದಿಂದ ಈ ಬೆಟ್ಟವನ್ನು ಚುಚ್ಚಿ ರಂಧ್ರ ಮಾಡಿ ಒಳಗೆ ಅಡಗಿದ್ದ ರಾಕ್ಷರನ್ನೆಲ್ಲ ಸಂಹಾರ ಮಾಡುವಾಗ ಆ ಸಣ್ಣ ರಂಧ್ರ ದೊಡ್ಡದಾ ಗುತ್ತದೆ. ಈಗ ಗುಹೆಯಂತಿದೆ.
ಮೊದಲು ಈ ದೇವಾಲಯಕ್ಕೆ ಮಹಿಳೆಯರು ಹೋಗದಂತೆ ನಿಬಂಧವಿತ್ತು. ಈಗ ಇಲ್ಲ. ಇಲ್ಲಿನ ಇನ್ನೊಂದು ವಿಶೇಷ ಎಂದರೆ ಕುಮಾರಸ್ವಾಮಿ ದೇವರ ದರ್ಶನಕ್ಕೆ ಹೋದವರಿಗೆ ಅವರಷ್ಟೇ ಎತ್ತರ ಇದ್ದಂತೆ ಗೋಚರಿಸುತ್ತಾನೆ. ಮಕ್ಕಳಿಗೆ ಮಕ್ಕಳಂತೆ ಯುವಕರಿಗೆ ಯುವಕರಂತೆ ಪ್ರೌಢರಿಗೆ ಪ್ರೌಢರಂತೆ. ಇಲ್ಲಿನ ಕ್ರೌಂಚ ಪರ್ವತದ ಸುತ್ತಮುತ್ತ ಕುಮಾರಸ್ವಾಮಿ ವಾಹನವಾದ ನವಿಲುಗಳು ಸಾಕಷ್ಟು ಇದೆ. ಇಲ್ಲಿ ಅಗಸ್ತ್ಯರು ನಿರ್ಮಿಸಿದ ಪುಷ್ಕರಣಿಯಲ್ಲಿ ಸ್ನಾನ ಮಾಡಿದರೆ ಚರ್ಮ ವ್ಯಾಧಿ ಗುಣವಾಗುತ್ತದೆ ಎಂಬ ನಂಬಿಕೆ.
ಸುತ್ತ ಆವರಿಸಿರುವ ಬೆಟ್ಟ ಗುಡ್ಡಗಳ ನಡುವೆ ಹರಿಯುವ ‘ನಾರಿ ಹಳ್ಳ’ ದ ಇನ್ನೊಂದು ಹೆಸರು ‘ಮಾನಸ ಸರೋವರ’. ಇಂತಹ ಪುರಾಣ ಪ್ರಸಿದ್ಧವಾದ ಕ್ಷೇತ್ರಗಳಿಗೆ ಭೇಟಿಕೊಟ್ಟು, ನಮ್ಮ ಮಕ್ಕಳಿಗೂ ಇದರ ಬಗ್ಗೆ ತಿಳಿಸೋಣ.