Roopa Gururaj Column: ಹೃದಯದೊಳಗೆ ಭಗವಂತನಿರಲೇಬೇಕು
ಹನುಮಂತನ ಉತ್ತರವನ್ನು ಕೇಳಿ ನಾರದ ಮುನಿಗಳು ಸಂತೋಷಪಟ್ಟರು. ಅವರು ಹನುಮಂತ ನನ್ನು ಅಪ್ಪಿಕೊಂಡು ರಾಮನ ಮೇಲಿನ ಅಪ್ರತಿಮ ಭಕ್ತಿಯನ್ನು ಹೊಗಳಿದರು. ನಡೆದ ಈ ಘಟನೆ ಕಾಲ್ಪನಿಕ ವಿರಬಹುದು, ಆದರೆ ಅದು ಸಾರುವ ವೃತ್ತಾಂತ ಮಾತ್ರ ಹೃದಯಕ್ಕೆ ನಿಲುಕುವಂಥದ್ದು.


ಒಂದೊಳ್ಳೆ ಮಾತು
rgururaj628@gmail.com
ಒಮ್ಮೆ ನಾರದ ಮುನಿಗಳು ಹನುಮಂತನನ್ನು ಸಂಚಾರ ಮಾಡುವ ವೇಳೆ ಭೇಟಿಯಾದಾಗ, ಎಂದಿನ ತಮ್ಮ ಕುಹಕ ಬುದ್ಧಿಯನ್ನು ಪ್ರದರ್ಶಿಸುತ್ತಾ. .. ನನ್ನ ಪ್ರಕಾರ ನೀನು ಭಕ್ತನಲ್ಲ! ಎಂದು ಹೇಳಿದರು. ನಾರದರು ಸ್ವತಃ ನಾರಾಯಣನ ದೊಡ್ಡ ಭಕ್ತರಾಗಿದ್ದರು ಮತ್ತು ಹನುಮಂತನ ನಿಜವಾದ ಭಕ್ತಿಯನ್ನು ಅನಾವರಣಗೊಳಿಸಲು ಬಯಸಿದ್ದರಿಂದ, ನಾರದರು ತಮಾಷೆಯಾಗಿ ಹೀಗೆ ಹೇಳಿದರು.
ಆಶ್ಚರ್ಯಚಕಿತನಾದ ಹನುಮಂತ, ನಾರದರು ಆ ತೀರ್ಮಾನಕ್ಕೆ ಹೇಗೆ ಬಂದರು ಎಂದು ಕೇಳಿದನು. ವೇದಗಳ ಪ್ರಕಾರ, ಆರು ರೀತಿಯ ಆಕ್ರಮಣಕಾರರಿದ್ದಾರೆ, ಮತ್ತು ಅವರಲ್ಲಿ ಒಂದು ರೀತಿಯವರು ಇತರರ ಮನೆಗಳಿಗೆ ಬೆಂಕಿ ಹಚ್ಚುವ ಗುಣದವರು. ನೀನು ಲಂಕೆಯಲ್ಲಿ ತಾಯಿ ಸೀತೆಯನ್ನು ಹುಡುಕಲು ಹೋದಾಗ, ಹಿಂದಿರುಗುವ ಮುಂಚೆ ರಾಕ್ಷಸರ ಮನೆಗಳಿಗೆ ಬೆಂಕಿ ಹಚ್ಚಿದ್ದೀಯ.
ಇದಾದ ಮೇಲೆ ಇನ್ನು ನಾನು ನಿಮ್ಮನ್ನು ಭಗವಂತನ ಭಕ್ತ ಎಂದು ಹೇಗೆ ಕರೆಯಲಿ? ಎಂದರು ಸುಳ್ಳು ನಗೆ ನಗುತ್ತಾ. ನಾರದರ ಉದ್ದೇಶವನ್ನು ಅರ್ಥಮಾಡಿಕೊಂಡ ಹನುಮಂತನು ಮುಗುಳ್ನ ಗುತ್ತಾ, “ನನ್ನ ಪ್ರೀತಿಯ ನಾರದರೇ, ರಾಮಭಕ್ತನ ಪ್ರಮುಖ ಕರ್ತವ್ಯವೆಂದರೆ ಅನಾಥ ಮೃತದೇಹ ಗಳನ್ನು ನೋಡಿಕೊಳ್ಳುವುದು ಮತ್ತು ಅವರ ಮುಂದಿನ ಜನ್ಮದಲ್ಲಿ ಉತ್ತಮ ಜೀವನವನ್ನು ಪಡೆಯಲು ಅವರ ಅಂತಿಮ ವಿಧಿಗಳನ್ನು ನಿರ್ವಹಿಸುವುದು.
ಇದನ್ನೂ ಓದಿ: Roopa Gururaj Column: ಬನಶಂಕರಿ ದೇವಿಯ ಮಹಾತ್ಮೆ
ನಾನು ಲಂಕೆಗೆ ಹೋದಾಗ, ಆ ದೊಡ್ಡ ಅರಮನೆಗಳಲ್ಲಿ ಯಾರೂ ಭಗವಂತನ ನಾಮಗಳನ್ನು ಜಪಿಸುತ್ತಿರಲಿಲ್ಲ ಎಂದು ನಾನು ಕಂಡುಕೊಂಡೆ. ಭಗವಂತನ ಪವಿತ್ರ ನಾಮಗಳು ಮತ್ತು ಕೀರ್ತಿ ಯನ್ನು ಜಪಿಸದವರನ್ನು ಮೃತದೇಹಗಳೆಂದು ಪರಿಗಣಿಸಲಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಅವರು ಈಗಾಗಲೇ ಸತ್ತಿದ್ದರಿಂದ, ಅವರ ಅತ್ಯಂತ ದುಃಖಕರ ಅಸ್ತಿತ್ವದಿಂದ ಅವರನ್ನು ಬಿಡುಗಡೆ ಮಾಡಲು, ನಾನು ಅವರ ಅರಮನೆಗಳ ಜೊತೆಗೆ ಅವೆಲ್ಲವನ್ನೂ ಸುಟ್ಟು ಹಾಕಿದೆ.
ನಾನು ಸುಡದೆ ಬಿಟ್ಟ ಏಕೈಕ ಅರಮನೆ ವಿಭೀಷಣನದ್ದು, ಅಲ್ಲಿಂದ ರಾಮನ ನಾಮದ ಜಪಧ್ವನಿ ಗಳು ನನ್ನ ಕಿವಿಗೆ ಬಂದು ತಟ್ಟಿದವು. ಅಲ್ಲಿ ಮಾತ್ರ ಬದುಕಿರುವ ಆತ್ಮಗಳು ಉಸಿರಾಡುತ್ತಿದ್ದವು. ಮಿಕ್ಕೆಲ್ಲ ಕಡೆ ಭಗವಂತನಿಲ್ಲದ ಜೀವಂತ ಶವಗಳು ಓಡಾಡಿಕೊಂಡಿದ್ದವು.
ಹನುಮಂತನು ಮುಂದುವರೆಸುತ್ತಾ, ವಾಸ್ತವವಾಗಿ, ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜೋರಾಗಿ ಘರ್ಜನೆ ಮಾಡಿದೆ, ಅದು ಲಂಕೆಯ ಎಲ್ಲಾ ನಿವಾಸಿ ರಾಕ್ಷಸರನ್ನು ಹೆದರಿಸಿತು. ಆ ಭೀಕರ ಘರ್ಜನೆಯನ್ನು ಕೇಳಿ, ಅನೇಕ ಗರ್ಭಿಣಿ ರಾಕ್ಷಸಿಯರ ಗರ್ಭಪಾತವಾಯಿತು. ಈ ರೀತಿಯಾಗಿ, ಭವಿಷ್ಯದಲ್ಲಿ ರಾಕ್ಷಸ ಕುಲವು ಲಂಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಮತ್ತು ತೊಂದರೆಗಳನ್ನು ಉಂಟುಮಾಡುವುದಿಲ್ಲ ಎಂದು ನಾನು ಖಚಿತಪಡಿಸಿಕೊಂಡೆ ಎಂದನು.
ಹನುಮಂತನ ಉತ್ತರವನ್ನು ಕೇಳಿ ನಾರದ ಮುನಿಗಳು ಸಂತೋಷಪಟ್ಟರು. ಅವರು ಹನುಮಂತ ನನ್ನು ಅಪ್ಪಿಕೊಂಡು ರಾಮನ ಮೇಲಿನ ಅಪ್ರತಿಮ ಭಕ್ತಿಯನ್ನು ಹೊಗಳಿದರು. ನಡೆದ ಈ ಘಟನೆ ಕಾಲ್ಪನಿಕವಿರಬಹುದು, ಆದರೆ ಅದು ಸಾರುವ ವೃತ್ತಾಂತ ಮಾತ್ರ ಹೃದಯಕ್ಕೆ ನಿಲುಕುವಂಥದ್ದು.
ನಮ್ಮೊಳಗೆ ಭಗವಂತನೆನ್ನುವ ಆತ್ಮ ಸಾಕ್ಷಿ ಇರುವವರೆಗೂ ನಮ್ಮ ಅಸ್ತಿತ್ವಕ್ಕೆ ಒಂದು ಬೆಲೆ. ಭಗವಂತನೇ ಇಲ್ಲದ ಜೀವಗಳು ಬದುಕಿದ್ದೂ ಸತ್ತಂತೆ. ಎಲ್ಲಿಯವರೆಗೆ ನಮ್ಮಲ್ಲಿ ಭಗವಂತನ ನಾಮಸ್ಮರಣೆ, ಇರುತ್ತದೋ ಅಲ್ಲಿಯವರೆಗೆ ಧರ್ಮ ಕರ್ಮಗಳ ಆಲೋಚನೆಗಳು ನಮ್ಮನ್ನು ಸರಿದಾರಿಯಲ್ಲಿ ನಡೆಸಲು ನೆರವಾಗುತ್ತದೆ.
ರಾಷ್ಟ್ರಕವಿ ಕುವೆಂಪುರವರು ತಮ್ಮ ಪದ್ಯದಲ್ಲಿ ಬರೆದಿಲ್ಲವೇ - “ಶಿವನಿಲ್ಲದ ಸೌಂದರ್ಯವೇ! ಶವ ಮುಖದಾ ಕಣ್ಣೋ". ಎಷ್ಟು ಅರ್ಥಪೂರ್ಣವಾದ ಸಾಲುಗಳು. ಯಾರಲ್ಲಿ ಸುಳ್ಳು ಸತ್ಯ, ಧರ್ಮ ಕರ್ಮ, ನೀತಿ ಅನೀತಿಯ ವಿವೇಚನೆ ಇರುವುದಿಲ್ಲವೋ ಅವರ ಕಣ್ಣುಗಳಲ್ಲಿ ಯಾವ ರೀತಿಯ ಕಾಂತಿ ತೇಜಸ್ಸು ಸಹ ಇಲ್ಲದೆ ಶವದ ಮುಖದಂತೆ ತಣ್ಣಗಿರುತ್ತದೆ.
ಅಂತಹವರನ್ನು ನೋಡಿದಾಗ ಮಾತನಾಡಿಸಿದಾಗ ನಮಗೆ ಯಾವ ರೀತಿಯ ಆಪ್ತ ಭಾವವೂ ಮೂಡುವುದಿಲ್ಲ. ಆದ್ದರಿಂದಲೇ ಜೀವನದಲ್ಲಿ ನಮ್ಮೆಲ್ಲರಿ ಗಿಂತ ದೊಡ್ಡವನು ನಮ್ಮನ್ನು ಕಾಯುವ ಭಗವಂತನಿದ್ದಾನೆ ಎನ್ನುವ ಒಂದು ಸಾತ್ವಿಕ ಭಯದಿಂದ ಬದುಕುವವರೆಗೆ ನಮ್ಮ ಅಸ್ತಿತ್ವಕ್ಕೆ ಒಂದು ಬೆಲೆ. ನಮ್ಮ ಬದುಕಿಗೂ ಒಂದು ನೆಲೆ.