Prakash Shesharaghavachar Column: ಮೋದಿ 3.1: ಮುಂದುವರಿದಿರುವ ಅಭಿವೃದ್ದಿ ಪರ್ವ
ಮೋದಿಯವರ 11 ವರ್ಷದ ಆಡಳಿತವು ಗಣನೀಯ ಸಾಧನೆಯನ್ನು ಮಾಡಿದೆ. ವಿಧಾನಸಭೆ ಮತ್ತು ಸಂಸತ್ನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಅನುಮೋದಿಸಿ ಇತಿಹಾಸ ನಿರ್ಮಿಸಲಾಗಿದೆ. ಸಾಮಾಜಿಕವಾಗಿ, ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲೀ ಕರಣದ ಯೋಜನೆಗಳ ಜಾರಿಯು ಅವರ ಬದುಕಿನಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ಸಫಲವಾಗಿದೆ.


ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರಕಾರವು ಇಂದು (ಜೂನ್ 9) ತನ್ನ ಮೂರನೆಯ ಅಧಿಕಾರಾವಧಿಯ ಮೊದಲ ವರ್ಷವನ್ನು ಪೂರೈಸುತ್ತಿದೆ. ದೇಶದ 78 ವರ್ಷದ ಇತಿಹಾಸದಲ್ಲಿ ಮೋದಿಯವರು ಅತಿ ದೀರ್ಘ ಕಾಲದವರೆಗೆ (ಸತತ 11 ವರ್ಷ) ಅಧಿಕಾರದಲ್ಲಿರುವ ಮೂರನೆಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರಿಗೂ ಮೊದಲು ಜವಾಹರಲಾಲ್ ನೆಹರು ಅವರು 17 ವರ್ಷಗಳವರೆಗೆ ಮತ್ತು ಇಂದಿರಾ ಗಾಂಧಿಯವರು 16 ವರ್ಷಗಳವರೆಗೆ ಪ್ರಧಾನಿಯಾಗಿದ್ದರು.
ಮೋದಿಯವರು ಸದ್ಯ ಮನಮೋಹನ್ ಸಿಂಗ್ ಅವರ 10 ವರ್ಷದ ಆಳ್ವಿಕೆಯ ದಾಖಲೆಯನ್ನು ಮುರಿದಿದ್ದಾರೆ. 1977ರ ತನಕ, ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದು ಕಲ್ಪನೆಗೂ ಮೀರಿದ ವಿಷಯ ವಾಗಿತ್ತು. ಆದರೆ ಇಂದಿರಾ ಗಾಂಧಿಯವರಿಂದ ಆದ ತುರ್ತುಪರಿಸ್ಥಿತಿಯ ಹೇರಿಕೆಯು ರಾಷ್ಟ್ರ ರಾಜಕಾರಣಕ್ಕೆ ಬಹುದೊಡ್ಡ ತಿರುವು ನೀಡಿ, ವಿರೋಧ ಪಕ್ಷಗಳೂ ಅಧಿಕಾರಕ್ಕೆ ಬರಬಹುದು ಎಂಬುದನ್ನು ನಿರೂಪಿಸಿತು.
ಈಗಾಗಲೇ, ನರೇಂದ್ರ ಮೋದಿಯವರು ಸತತವಾಗಿ ಮೂರು ಬಾರಿ ಅಧಿಕಾರಕ್ಕೆ ಬಂದು ದಾಖಲೆ ನಿರ್ಮಿಸಿದ್ದಾರೆ. 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ದೊರೆಯದಿದ್ದರೂ, ಎನ್ಡಿಎ ಮೈತ್ರಿಕೂಟವು 290 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿತು. ತರುವಾಯ ನಡೆದ ಹರಿಯಾಣ, ಮಹಾರಾಷ್ಟ್ರ, ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯು ಭರ್ಜರಿ ಜಯಗಳಿಸುವ ಮೂಲಕ ಮೋದಿಯವರ ರಾಜಕೀಯ ಜನಪ್ರಿಯತೆ ಮತ್ತೊಮ್ಮೆ ಸಾಬೀತಾಯಿತು.
ಇದನ್ನೂ ಓದಿ: Prakash Shesharaghavachar Column: ಭಾವೋದ್ವೇಗಕ್ಕೆ ಒಳಗಾಗದೆ ವಾಸ್ತವವನ್ನು ಅರ್ಥೈಸಿಕೊಳ್ಳಿ
ಮೋದಿಯವರ ಆಡಳಿತದ ಬಹುದೊಡ್ಡ ಸಾಧನೆಯೆಂದರೆ, ಸರಕಾರದ ಯೋಜನೆಗಳು ತಂತ್ರಜ್ಞಾನದ ಬಳಕೆಯ ಮೂಲಕ ಭ್ರಷ್ಟಾಚಾರರಹಿತವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗುವ ವ್ಯವಸ್ಥೆಯನ್ನು ರೂಪಿಸಿರುವುದು. ಅವರ 11 ವರ್ಷದ ಆಡಳಿತದಲ್ಲಿನ ಅಭಿವೃದ್ಧಿ ಯೋಜನೆಗಳು ಜನರ ಜೀವನಮಟ್ಟವನ್ನು ಹೆಚ್ಚಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸಿವೆ.
ಭಾರತಕ್ಕೆ ಸ್ವಾತಂತ್ರ್ಯ ಬಂದ ಶತಮಾನೋತ್ಸವ ವರ್ಷವೆನಿಸಿಕೊಳ್ಳಲಿರುವ 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಿಸುವ ಗುರಿಯು ಕೇವಲ ಘೋಷಣೆಗೆ ಸೀಮಿತವಾಗಿಲ್ಲ. ವಿಕಸಿತ ಭಾರತದ ಪರಿಕಲ್ಪನೆಯನ್ನು ದೇಶದ ಮುಂದಿಟ್ಟು ಅದನ್ನು ಸಾಽಸಲು ವೈವಿಧ್ಯಮಯ ಯೋಜನೆಗಳ ರೂಪದಲ್ಲಿ ಭದ್ರಬುನಾದಿಯನ್ನು ಹಾಕಲಾಗುತ್ತಿದೆ.
ಮೋದಿಯವರ 11 ವರ್ಷದ ಆಡಳಿತವು ಪ್ರತಿಯೊಂದು ರಂಗದಲ್ಲೂ ಗಣನೀಯ ಸಾಧನೆಯನ್ನು ಮಾಡಿದೆ. ರಾಜಕೀಯವಾಗಿ ಹೇಳುವುದಾದರೆ, ವಿಧಾನಸಭೆ ಮತ್ತು ಸಂಸತ್ನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಅನುಮೋದಿಸಿ ಇತಿಹಾಸ ನಿರ್ಮಿಸಲಾಗಿದೆ.
ಸಾಮಾಜಿಕವಾಗಿ, ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲೀಕರಣದ ಯೋಜನೆಗಳ ಜಾರಿಯು ಅವರ ಬದುಕಿನಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ಸಫಲವಾಗಿದೆ. ಈ ಯೋಜನೆಗಳು ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರಿಗೆ ವರವಾಗಿ ಪರಿಣಮಿಸಿವೆ, ಆರ್ಥಿಕ ಸ್ವಾತಂತ್ರ್ಯ ಗಳಿಸುವ ಅವರ ಕನಸು ನನಸಾಗುತ್ತಿದೆ. ‘ಲಕ್ಪತಿ ದೀದಿ’ ಮತ್ತು ‘ಬಿಮಾ ಸಖಿ’ ಯೋಜನೆಗಳನ್ನು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿಯೇ ರೂಪಿಸಲಾಗಿದೆ.

ವಿಶೇಷವಾಗಿ ‘ಲಕ್ಪತಿ ದೀದಿ’ ಯೋಜನೆಯು ಅತ್ಯಾಧುನಿಕ ತಂತ್ರಜ್ಞಾನದ ಡ್ರೋನ್ಗಳ ಬಳಕೆಯ ಮೂಲಕ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ನಿಟ್ಟಿನಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದೆ, ಗ್ರಾಮೀಣ ಮಹಿಳೆಯರ ಆತ್ಮವಿಶ್ವಾಸವನ್ನು ದುಪ್ಪಟ್ಟಾಗಿಸುವಲ್ಲಿ ಇದು ಸಹಾಯಕ ವಾಗಿದೆ.
ಇದರಿಂದಾಗಿ, ಡ್ರೋನ್ ಬಳಕೆಯು ಕೇವಲ ಪುರುಷ ಪ್ರಧಾನ, ತಮಗೆ ನಿಲುಕದ ತಂತ್ರಜ್ಞಾನ ಎಂಬ ಮಹಿಳೆಯರ ಗ್ರಹಿಕೆಯು ಸುಳ್ಳಾದಂತಾಗಿದೆ. ಕೃಷಿ ವಲಯದಲ್ಲಿ ಹೊಸ ವೃತ್ತಿ ಸಾಧ್ಯತೆಗಳಿಗೆ ಬಾಗಿಲು ತೆರೆದಂತಾಗಿದೆ.
ಡ್ರೋನ್ ತಂತ್ರಜ್ಞಾನವು ಆಧುನಿಕ ಯುಗದ ಯುದ್ಧದ ಸ್ವರೂಪವನ್ನೇ ಬದಲಾಯಿಸಿರುವ ಹಾಗೆ ಕೃಷಿ ಕ್ಷೇತ್ರದಲ್ಲೂ ಗಮನಾರ್ಹ ಬದಲಾವಣೆಗೆ ಕಾರಣವಾಗುತ್ತಿದೆ; ಕೃಷಿ ಚಟುವಟಿಕೆಯಲ್ಲಿ ನಿಖರವಾದ ಕ್ಷೇತ್ರನಕ್ಷೆಯನ್ನು ಸಿದ್ಧಪಡಿಸಲು, ರಸಗೊಬ್ಬರ, ನೀರು ಮತ್ತು ಕೀಟನಾಶಕ ಪೋಲಾ ಗುವುದನ್ನು ಕಡಿಮೆ ಮಾಡಲು ಈಗ ಸುಲಭಸಾಧ್ಯವಾಗಿದೆ.
ರೋಗಗಳು ಮತ್ತು ಕೀಟಗಳ ಬಾಧೆ, ಪೋಷಕಾಂಶಗಳ ಕೊರತೆ ಮುಂತಾದವನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಬೆಳೆಯ ಉತ್ತಮ ಇಳುವರಿಯನ್ನು ಸಾಕಾರಗೊಳಿಸಲು ಡ್ರೋನ್ಗಳು ಅನುವು ಮಾಡಿಕೊಡುತ್ತಿವೆ. ಅತಿಯಾದ ಔಷಧಿ ಸಿಂಪಡಣೆಯಿಲ್ಲದೆ ಪರಿಸರದ ಮೇಲಿನ ವ್ಯತಿರಿಕ್ತ ಪರಿಣಾಮ ಕಡಿಮೆಯಾಗಿ ರೈತರ ಮತ್ತು ಬಳಕೆದಾರರ ಆರೋಗ್ಯ ಸಂರಕ್ಷಣೆಯಾಗುವುದಕ್ಕೆ ಡ್ರೋನ್ಗಳ ಬಳಕೆ ಕಾರಣವಾಗಿದೆ.
‘ಡ್ರೋನ್ ದೀದಿ’ ಯೋಜನೆಯು ಮಹಿಳೆಯರ ಹೆಚ್ಚುವರಿ ಆದಾಯ ಗಳಿಕೆಗೆ ದಾರಿಯಾಗಿದ್ದು, ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಭದ್ರತೆ ಮತ್ತು ಸ್ವಾವಲಂಬಿತನವನ್ನು ನೀಡಿದೆ. ಡ್ರೋನ್ ಸೇವೆಯ ಮೂಲಕ ಮಹಿಳೆಯರು ವಾರ್ಷಿಕ ಕನಿಷ್ಠ ಒಂದು ಲಕ್ಷ ರುಪಾಯಿಯಷ್ಟು ಹೆಚ್ಚುವರಿ ಆದಾಯವನ್ನು ಗಳಿಸಲು ಸಾಧ್ಯವಾಗುತ್ತಿದೆ.
ಹೀಗಾಗಿಯೇ ಈ ಯೋಜನೆಗೆ ‘ಲಕ್ಪತಿ ದೀದಿ’ ಎಂದು ನಾಮಕರಣ ಮಾಡಲಾಗಿದೆ. 2 ಕೋಟಿ ‘ಲಕ್ಪತಿ ದೀದಿ’ಗಳನ್ನು ರೂಪಿಸುವ ಗುರಿಯೊಂದಿಗೆ 2023ರಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ತದನಂತರ 2024-25ರ ಅವಧಿಯಲ್ಲಿ ಕಾರ್ಯಕ್ರಮದ ಗುರಿಯನ್ನು 3 ಕೋಟಿಗೆ ಹೆಚ್ಚಿಸಿ, ಈಗಾಗಲೇ ಈ ಗುರಿಯನ್ನು ಬಹುತೇಕ ಸಾಧಿಸಲಾಗಿದೆ.
ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಮಹಿಳೆಯು ಸ್ವಸಹಾಯ ಗುಂಪಿನ ಸದಸ್ಯೆಯಾಗಿರಬೇಕಾದ್ದು ಕಡ್ಡಾಯ. ಡ್ರೋನ್ ಖರೀದಿಸಲು ಭಾರತ ಸರಕಾರವು ಶೇ.80ರಷ್ಟು ಸಹಾಯಧನವನ್ನು ನೀಡುತ್ತಿದೆ. ಮಾತ್ರವಲ್ಲದೆ, ಜನಧನ್ ಖಾತೆ ಹೊಂದಿರುವ ಮಹಿಳಾ ಸ್ವಸಹಾಯ ಗುಂಪಿನ ಪ್ರತಿಯೊಬ್ಬ ಸದಸ್ಯೆ ಯೂ 5000 ರುಪಾಯಿಯಷ್ಟು ಓವರ್ ಡ್ರಾಫ್ಟ್ ಗೆ ಅರ್ಹರಾಗಿರುತ್ತಾರೆ. ಸಹಾಯಧನ ಪಡೆಯುವ ಮುನ್ನ, ಡ್ರೋನ್ ಬಳಕೆಗೆ ಸಂಬಂಧಿಸಿದ 15 ದಿನಾವಧಿಯ ತರಬೇತಿಯನ್ನು ಮಹಿಳೆಯರು ಕಡ್ಡಾಯವಾಗಿ ಪಡೆದಿರಬೇಕು.
ಕರ್ನಾಟಕದ ಗಂಗಾವತಿಯಲ್ಲಿ ಮಹಿಳೆಯರು ಈ ತರಬೇತಿ ಮುಗಿಸಿ, ಡ್ರೋನ್ ಬಳಕೆಯ ಮೂಲಕ ಔಷಧಿ ಸಿಂಪಡಿಸುವ ಕೆಲಸ ಆರಂಭಿಸಿ ಈಗ ಸ್ವಾವಲಂಬಿಗಳಾಗಿದ್ದಾರೆ. ಈ ಯಶಸ್ಸು ಇತರ ಮಹಿಳೆಯರಿಗೂ ಪ್ರೇರಣೆಯಾಗಿ ರಾಜ್ಯದ ಇತರ ಭಾಗಗಳಿಗೂ ಈ ಯೋಜನೆ ವಿಸ್ತರಿಸುತ್ತಿದೆ.
‘ಲಕ್ಪತಿ ದೀದಿ’ ಯೋಜನೆಯಿಂದ ಬಹುವಾಗಿ ಪ್ರಭಾವಿತರಾಗಿರುವ ಮೈಕ್ರೋಸಾ- ಕಂಪನಿಯ ಸಂಸ್ಥಾಪಕ ಬಿಲ್ ಗೇಟ್ಸ್ ಅವರು, ಈ ಯೋಜನೆಯು ಹೇಗೆ ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ ಎಂಬುದನ್ನು ಉದಾಹರಣೆಗಳ ಸಮೇತ ಲೇಖನವೊಂದರಲ್ಲಿ ವಿವರಿಸಿದ್ದಾರೆ. “ಡ್ರೋನ್ ಹಾರಿಸುವುದು ಸುಲಭವಲ್ಲ,
ಇದಕ್ಕೆ ಸಾಕಷ್ಟು ಅಭ್ಯಾಸ ಮತ್ತು ಕೌಶಲ ಬೇಕು. ನಾನು ದೆಹಲಿಗೆ ಬಂದಿದ್ದಾಗ ಸಂಗೀತಾ ದೇವಿ, ಸುಮಂತ್ರಾ ದೇವಿ ಮತ್ತು ಕಾಜಲ್ ಕುಮಾರಿ ಎಂಬ ಬಿಹಾರದ ಮೂವರು ಡ್ರೋನ್ ದೀದಿಯರನ್ನು ಭೇಟಿಯಾದೆ. ಇವರು ಭಾರತದ ಕೃಷಿ ಉತ್ಪಾದಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯು ತ್ತಿದ್ದಾರೆ" ಎಂದು ಬಿಲ್ ಗೇಟ್ಸ್ ಈ ಲೇಖನದಲ್ಲಿ ಪ್ರಶಂಸಿಸಿದ್ದಾರೆ.
‘ಡ್ರೋನ್ ದೀದಿ’ ಕಾರ್ಯಕ್ರಮವು ಭಾರತದಲ್ಲಿ ಗಣನೀಯವಾಗಿ ವಿಸ್ತರಿಸುವಂತಾಗಲು ವಿಪುಲ ಅವಕಾಶಗಳು ತೆರೆದುಕೊಳ್ಳುತ್ತಿವೆ. ನಿಜಾವಧಿಯ ಡೇಟಾವನ್ನು ಬಳಸಿಕೊಂಡು, ರೋಗಗಳು ಮತ್ತು ಕೀಟಗಳನ್ನು ಪತ್ತೆ ಹಚ್ಚಲು, ಮಣ್ಣಿನ ತೇವಾಂಶವನ್ನು ಅಳೆಯಲು, ಬೆಳೆಗಳ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡುವ ಮೂಲಕ ಅವುಗಳ ಗುಣಮಟ್ಟ ಮತ್ತು ಪ್ರಮಾಣವನ್ನು ಸುಧಾರಿಸಲು ಈ ಕಾರ್ಯಕ್ರಮವು ಸಹಾಯಕವಾಗಿದೆ. ಈ ಕಾರ್ಯಕ್ರಮವು ಕೃಷಿ ಪರಿಣಾಮಗಳನ್ನು ಮೀರಿ ಮಹಿಳಾ ಸಬಲೀಕರಣಕ್ಕಾಗಿನ ಒಂದು ದಾರಿಯಾಗಿರುವುದು, ಇದರ ಯಶಸ್ಸಿಗೆ ಕಾರಣವಾಗಿದೆ ಎನ್ನಲಡ್ಡಿಯಿಲ್ಲ.
ಇನ್ನು, ‘ಬಿಮಾ ಸಖಿ’ ಯೋಜನೆಯೂ ಮಹಿಳಾ ಸಬಲೀಕರಣಕ್ಕಿರುವ ಮತ್ತೊಂದು ದಾರಿ ಯಾಗಿದ್ದು, ಭಾರತೀಯ ಜೀವವಿಮಾ ನಿಗಮದ ಮೂಲಕ ಇದನ್ನು ಜಾರಿಗೆ ತರಲಾಗಿದೆ. ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು 18 ರಿಂದ 70 ವರ್ಷದವರೆಗಿನ ವಯೋಮಾನದ ಮಹಿಳೆಯರು ಈ ಯೋಜನೆಯಲ್ಲಿ ಭಾಗವಹಿಸಲು ಅರ್ಹರು. ಈ ಯೋಜನೆಯಡಿ ನೋಂದಾಯಿಸಿ ಕೊಂಡ ‘ಬಿಮಾ ಸಖಿ’ಯರು, ಜೀವವಿಮಾ ಪಾಲಿಸಿಯನ್ನು ಮಾರಾಟ ಮಾಡಬೇಕಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಜೀವ ವಿಮಾ ನಿಗಮವು ಅಗತ್ಯ ತರಬೇತಿಯನ್ನು ನೀಡುತ್ತದೆ. ‘ಬಿಮಾ ಸಖಿ’ಯರು ವರ್ಷಕ್ಕೆ 24 ಪಾಲಿಸಿಯನ್ನು ಮಾಡಿಸಬೇಕು, ಇದಕ್ಕೆ ಅಗತ್ಯವಾಗುವ ನೆರವನ್ನು ನಿಗಮದ ವತಿಯಿಂದ ನೀಡಲಾಗುತ್ತದೆ. ‘ಬಿಮಾ ಸಖಿ’ಯರಿಗೆ ಮೂರು ವರ್ಷಗಳವರೆಗೆ ಮಾಸಿಕ ವೇತನವು (ಮೊದಲನೆಯ ವರ್ಷ 7 ಸಾವಿರ, ಎರಡನೆಯ ವರ್ಷ 6 ಸಾವಿರ ಮತ್ತು ಮೂರನೆಯ ವರ್ಷ 5 ಸಾವಿರ ರುಪಾಯಿ) ದೊರೆಯುತ್ತದೆ ಹಾಗೂ ಅವರು ಮಾರುವ ಪಾಲಿಸಿಗಳಿಗೆ ಕಮಿಷನ್ ಕೂಡ ದೊರೆಯುತ್ತದೆ.
‘ಹಸಿದವರಿಗೆ ಆಹಾರವಾಗಿ ನಿರಂತರವಾಗಿ ಮೀನು ನೀಡುವುದರ ಬದಲು, ಮೀನು ಹಿಡಿಯುವ ಕಲೆಯನ್ನೇ ಕಲಿಸಿದರೆ ಅವರು ತಮ್ಮ ಸ್ವಂತ ಶಕ್ತಿಯಿಂದ ದುಡಿದು ಆಹಾರವನ್ನು ದಕ್ಕಿಸಿ ಕೊಳ್ಳುತ್ತಾರೆ’ ಎಂಬರ್ಥದ ಒಂದು ಮಾತಿದೆ. ಅಂತೆಯೇ, ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಿಸುವ ಇಂಥ ಯೋಜನೆಗಳು ಲಕ್ಷಾಂತರ ಮಹಿಳೆಯರ ಬದುಕಿನಲ್ಲಿ ಅಗಾಧವಾದ ಬದಲಾವಣೆಯನ್ನು ತರುತ್ತಿವೆ.
ಉಚಿತ ಕೊಡುಗೆಯ ಯೋಜನೆಗಳು ಮಹಿಳೆಯರನ್ನು ಪರಾವಲಂಬಿಗಳನ್ನಾಗಿ ಮಾಡುತ್ತಿವೆ. ಅದಕ್ಕೆ ಹೊರತಾದ ಈ ಎರಡು ಯೋಜನೆಗಳು ಮಹಿಳೆಯರಲ್ಲಿನ ಕೌಶಲವನ್ನು ವರ್ಧಿಸುವುದರ ಜತೆಗೆ ಅವರನ್ನು ಆರ್ಥಿಕವಾಗಿಯೂ ಸಬಲೀಕರಿಸುತ್ತಿವೆ ಹಾಗೂ ಅವರ ಬದುಕಿನಲ್ಲಿ ಬೆಳಕಾಗಿವೆ. ಇಂಥ ದೂರಗಾಮಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿರುವ ಶ್ರೇಯಸ್ಸು ಮೋದಿಯವರ ಸರಕಾರಕ್ಕೆ ಸಲ್ಲುತ್ತದೆ.
(ಲೇಖಕರು ಬಿಜೆಪಿಯ ವಕ್ತಾರರು)