Rangaswamy Mookanahalli Column: ನಮ್ಮ ಉದ್ಯಮಿಗಳಿಗೂ ಬೇಕು ಹೆಚ್ಚಿನ ಸವಲತ್ತು !
ಏಷ್ಯಾ ಪೆಸಿಫಿಕ್ ಹೂಡಿಕೆ ತಜ್ಞರು ಹೇಳುವ ಮಾತು ಕೇಳಿ ಅಲ್ಲಿನ ಸಾಮಾನ್ಯ ಹೂಡಿಕೆದಾರನ ಹಣವನ್ನ ಫಂಡ್ ಮ್ಯಾನೇಜರ್ಗಳು ಮತ್ತು ಇಂಥ ಹಣವನ್ನ ನಿಭಾಯಿಸುವ ಹತ್ತಾರು ಸಂಸ್ಥೆಗಳು ಇಲ್ಲಿ ಅಂದರೆ ಚೀನಾದ ತೇರನ್ನ ಎಳೆಯಲು, ಬೆಳೆಯಲು ಹೂಡಿಕೆ ಮೂಲಕ ಅನ್ನ-ಆಹಾರ ನೀಡಿದ್ದಾರೆ.


ವಿಶ್ವರಂಗ
mookanahalli@gmail.com
ಎರಡು ದಶಕದ ಹಿಂದೆ ನಾನು ಪ್ರಥಮ ಬಾರಿಗೆ ಚೀನಾಕ್ಕೆ ಕಾಲಿಟ್ಟಾಗ ಅ ಬದಲಾವಣೆಯ ಭರಾಟೆ ಜೋರಾಗಿತ್ತು. ಇನ್ನೆರಡು ದಶಕದಲ್ಲಿ ಇದು ವಿಶ್ವವನ್ನು ತನ್ನ ಉತ್ಪನ್ನಗಳ ಮೂಲಕ ಇವತ್ತಿನ ಮಟ್ಟಕ್ಕೆ ಬಗ್ಗಿಸಿ ಬೆನ್ನ ಮೇಲೆ ನಾಲ್ಕು ಬಾರಿಸಬಹುದು ಎಂಬುದು ಅಗುತ್ತಿದ್ದ ಬದಲಾವಣೆಯನ್ನು ಗ್ರಹಿಸಿದ ಪ್ರತಿಯೊಬ್ಬರಿಗೂ ಅರಿವಾಗುತ್ತಿತ್ತು. ಅದಕ್ಕೆ ಬುದ್ಧಿವಂತರಾಗಬೇಕಾದ ಅವಶ್ಯಕತೆ ಇರಲಿಲ್ಲ.
ಅಂಗೈ ಹುಣ್ಣಿಗೆ ಕನ್ನಡಿಯೇಕೆ? ಸಾಮಾನ್ಯರಿಗೇ ತಿಳಿಯುತ್ತಿತ್ತು ಎಂದ ಮೇಲೆ ಬಹಳಷ್ಟು ಅಮೆರಿಕನ್ ಮತ್ತು ಬ್ರಿಟನ್ ಹೂಡಿಕೆದಾರರಿಗೆ ಕೂಡ ಇದು ಗೊತ್ತಾಗಿತ್ತು. ಚಿನ್ನದ ಮೊಟ್ಟೆ ಇಡುವ ಕೋಳಿಯಿದು ಎನ್ನುವ ಅಂದಾಜು ಮಾಡಿದ್ದರು. ಈ ಬದಲಾವಣೆಯ ಭರಾಟೆಯಲ್ಲಿ ಅವರು ತುಂಬಿಸಿಕೊಂಡ ಖಜಾನೆ ದೊಡ್ಡದು.
ಇದೇ ವರ್ಗಕ್ಕೆ ಸೇರುವ ಇನ್ನೊಂದು ಪ್ರಭೇದ ಆಸ್ಟ್ರೇಲಿಯನ್ ಹೂಡಿಕೆದಾರರು ಮತ್ತು ಅವರ ಆಣತಿಗೆ ಕುಣಿದ ಆಸ್ಟ್ರೇಲಿಯನ್ ರಾಜಕಾರಣಿಗಳು. ಯುರೋಪು, ಅಮೆರಿಕ, ಆಸ್ಟ್ರೇಲಿಯಾ ಇವತ್ತು ಎಷ್ಟೇ ಅರುಚಾಡಲಿ, ಚೀನಾದ ಬಗ್ಗೆ ಏನೇ ಹೇಳಲಿ, ಇವರುಗಳ ಅನುಮತಿ ಇಲ್ಲದೆ ಚೀನಾ ಅವರ ಮನೆಯಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಗುತ್ತಿರಲಿಲ್ಲ.
ಇವತ್ತು ಜಗತ್ತಿನ ಮೇಲೆ ಸವಾರಿ ಮಾಡುವ ಹಂತಕ್ಕೆ ಬೆಳೆಯುತ್ತಿರಲಿಲ್ಲ. 20 ವರ್ಷದಲ್ಲಿ ಹೀಗಾಗ ಬಹುದು ಎಂದು ಅಂದಾಜಿಸಿದ್ದ ಇವರುಗಳು ತಮ್ಮ ಮನೆಯವರನ್ನ ಇದರ ಬಗ್ಗೆ ಏಕೆ ಎಚ್ಚರಿಸ ಲಿಲ್ಲ? ಅವರು ತಮ್ಮ ಖಜಾನೆ ಭರ್ತಿಯಾದರೆ ಸಾಕು ಎನ್ನುವ ಮನೋಭಾವ ಹೊಂದಿದ್ದವರು.
ಇದನ್ನೂ ಓದಿ: Rangaswamy Mookanahalli Column: ಏನೂ ಮಾಡಲಿಕ್ಕಾಗದು, ಬೆಳಕಿನ ಕೆಳಗೆ ಸದಾ ಕತ್ತಲೆಯೇ..!
15-20 ವರ್ಷದಿಂದ ಚೀನಾದಲ್ಲಿ ಬೀಡುಬಿಟ್ಟಿದ್ದ ಮತ್ತು ಇಂದಿಗೂ ಅ ವಾಸಿಸುತ್ತಿರುವ ಇಂಥ ಅತಿ ಶ್ರೀಮಂತ ಹೂಡಿಕೆದಾರರು ಅಮೆರಿಕ ಮತ್ತು ಯುರೋಪಿನ ಟಿವಿ ಚಾನಲ್ಗಳಲ್ಲಿ ‘ಏಷ್ಯಾ ಪೆಸಿಫಿಕ್ ಹೂಡಿಕೆ ತಜ್ಞರು’ ಎನ್ನುವ ಹಣೆಪಟ್ಟಿ ಅಡಿಯಲ್ಲಿ ಚಾನಲ್ಗಳ ಮೂಲಕ ಕೂಡ ಸಾಕಷ್ಟು ಹಣ ವನ್ನ ದೋಚಿದ್ದಾರೆ. ಅಲಿಬಾಬ, ಟೆನ್ಸೆಂಟ್, ಪಿಂಗ್ ಆನ್ನಂಥ ಸಂಸ್ಥೆಗಳಲ್ಲಿ ಮಿಲಿಯನ್ ಗಟ್ಟಲೆ ಅಮೆರಿಕನ್ ಪೋರ್ಟ್ ಪೋಲಿಯೋ ಹಣವನ್ನು ಸುರಿದಿದ್ದಾರೆ ಎಂದರೆ ನಿಮಗೆ ಅಚ್ಚರಿ ಆಗ ಬಹುದು.
ಏಷ್ಯಾ ಪೆಸಿಫಿಕ್ ಹೂಡಿಕೆ ತಜ್ಞರು ಹೇಳುವ ಮಾತು ಕೇಳಿ ಅಲ್ಲಿನ ಸಾಮಾನ್ಯ ಹೂಡಿಕೆದಾರನ ಹಣವನ್ನ ಫಂಡ್ ಮ್ಯಾನೇಜರ್ಗಳು ಮತ್ತು ಇಂಥ ಹಣವನ್ನ ನಿಭಾಯಿಸುವ ಹತ್ತಾರು ಸಂಸ್ಥೆಗಳು ಇಲ್ಲಿ ಅಂದರೆ ಚೀನಾದ ತೇರನ್ನ ಎಳೆಯಲು, ಬೆಳೆಯಲು ಹೂಡಿಕೆ ಮೂಲಕ ಅನ್ನ-ಆಹಾರ ನೀಡಿದ್ದಾರೆ.
ಇವತ್ತು ಚೀನಾಗೆ ಯಾರ ಕೈತುತ್ತಿನ ಅವಶ್ಯಕತೆ ಇಲ್ಲ. ಅದು ಎಲ್ಲರ ತುತ್ತನ್ನ ಕಸಿಯುವ ಮಟ್ಟಕ್ಕೆ ಬೆಳೆದು ನಿಂತಿದೆ. ಇದಕ್ಕೆ ಚೀನಾ ತೆತ್ತಿರುವ ಬೆಲೆ ಕಡಿಮೆಯೇನಿಲ್ಲ. ತನ್ನ ಲೆಕ್ಕಕ್ಕೆ ಮಾತ್ರ ಉಂಟು, ಬೇರೆಯ ಆಟಗಳಿಗೆ ಲೆಕ್ಕವಿಲ್ಲದ ಲಕ್ಷಾಂತರ ನಾಗರಿಕರ ಬೆವರು, ರಕ್ತದ ಜತೆಗೆ ಸಮಾಧಿಯ ಮೇಲೆ ಇಂದು ಚೀನಾ ತನ್ನ ಸಾಮ್ರಾಜ್ಯವನ್ನ ಕಟ್ಟಿದೆ.
ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಚೀನಿಯರಿಗೆ ಅಮೆರಿಕ ಮತ್ತು ಯುರೋಪು ಎಂದರೆ ಇಂದಿಗೂ ಬಿಡಲಾಗದ ವ್ಯಾಮೋಹ. ಏಷ್ಯನ್ ದೇಶಗಳ ಅತಿ ದೊಡ್ಡ ವೀಕ್ನೆಸ್, ಪಾಶ್ಚಾತ್ಯರನ್ನ ಮತ್ತು ಅವರ ಬದುಕುವ ರೀತಿಯನ್ನ ಬೆಸ್ಟ್ ಎಂದುಕೊಳ್ಳುವುದು. ಜಗತ್ತಿಗೇ ಉತ್ಪನ್ನಗಳನ್ನ ಮಾರುವ ಚೀನಿಯರು, ‘ಅಮೆರಿಕನ್ ಬ್ರ್ಯಾಂಡ್’ ಎಂದರೆ ಸಾಕು ಬಾಯಿಬಿಡುವುದು ಸತ್ಯ.
ಗಮನಿಸಿ ಅಮೆರಿಕದಲ್ಲಿನ ಬಂಡವಾಳಶಾಹಿಗಳ ಹಣ ಚೀನಾದಲ್ಲಿ ಹೂಡಿಕೆಯಾಗುತ್ತದೆ, ಅಲ್ಲಿನ ಹೂಡಿಕೆಯಿಂದ ಉತ್ಪನ್ನ ತಯಾರಿಸಿ ಅದನ್ನ ಇವರು ಜಗತ್ತಿಗೆ ಮಾರಲು ಸಿದ್ಧವಾದರು. ಬೇರೆ ಕಡೆಗೆ ಮಾರುವುದು ಒಂದು ಕಥೆಯಾದರೆ ಚೀನಾದಲ್ಲಿ ತಯಾರಿಸಿದ ಪದಾರ್ಥ ಅಮೆರಿಕ ಸೇರಿ ಮತ್ತೆ ಅಲ್ಲಿಂದ ಬ್ರ್ಯಾಂಡ್ ಹೆಸರಿನಲ್ಲಿ ಚೀನಾ ಮಾರುಕಟ್ಟೆಯನ್ನು ಮರುಪ್ರವೇಶಿಸುತ್ತಿದ್ದವು.
ಹೆಚ್ಚಿನ ಹಣವನ್ನು ಕಂಡ ಚೀನಿ ಪ್ರಜೆಗಳು ಅಮೆರಿಕನ್ ಬ್ರ್ಯಾಂಡ್ ಇದ್ದ ವಸ್ತುಗಳನ್ನೆಲ್ಲ ಕೊಳ್ಳಲು ಶುರುಮಾಡಿದರು. ಸಹಜವಾಗೇ ಅಮೆರಿಕನ್ನರ ಬೇಳೆ ಬೇಯುತ್ತಿತ್ತು. ಅಲ್ಲಿನ ಬಂಡವಾಳಶಾಹಿಗಳು ಸ್ವಲ್ಪವೂ ಕಷ್ಟಪಡದೆ ಸಾವಿರಾರು ಕೋಟಿ ರೂಪಾಯಿಯನ್ನು ಜೇಬಿಗೆ ಇಳಿಸುತ್ತಿದ್ದರು. ಚೀನಾ ಹೆಸರಿಗೆ ಮಾತ್ರ ಕಮ್ಯುನಿ, ಆದರೆ ನಿಜಾರ್ಥದಲ್ಲಿ ಅದು ಅಮೆರಿಕೆಗಿಂತ ಹೆಚ್ಚು ಬಂಡವಾಳಶಾಹಿ ದೇಶ.
ಹೀಗಾಗಿ ಚೀನಾದ ಸರಕಾರದ ಕೃಪೆಯೊಂದಿಗೆ ಅಲ್ಲಿನ ಬಂಡವಾಳ ಶಾಹಿಗಳು ಕೂಡ ಲೆಕ್ಕವಿಲ್ಲ ದಷ್ಟು ಹಣವನ್ನು ಮಾಡಿಕೊಂಡರು. ನಿಜ ಹೇಳಬೇಕಂದರೆ ಕಳೆದ 2 ದಶಕದಲ್ಲಿ ನೂರು ವರ್ಷ ವಾದರೂ ಮಾಡಿಕೊಳ್ಳಲಾಗದ ಲಾಭವನ್ನು ಎರಡೂ ದೇಶದ ಬಂಡವಾಳಶಾಹಿಗಳು ಮಾಡಿ ಕೊಂಡರು. ಒಟ್ಟಾರೆ ಹೇಳಬೇಕೆಂದರೆ ಚೀನಾ-ಅಮೆರಿಕ ಎರಡೂ ‘ವಿನ್-ವಿನ್’ ನಲ್ಲಿ ಸರಾಗವಾಗಿ ಸಾಗುತ್ತಿದ್ದವು.
ಟ್ರಂಪ್ಗೆ ಬೇಕಿರುವುದು ಕೂಡ ಹಣ. ಹೇಳಿಕೇಳಿ ಅವರೊಬ್ಬ ವ್ಯಾಪಾರಿ. ಅವರಿಗೆ ವ್ಯಾಪಾರ-ಲಾಭ ಮೊದಲು, ನಂತರ ಮಿಕ್ಕಿದ್ದೆಲ್ಲ! ಆದರೆ ಚೀನಾದ ಮಹತ್ವಾಕಾಂಕ್ಷೆ ಜಗತ್ತಿನ ದೊಡ್ಡಣ್ಣನ ಪಟ್ಟದಲ್ಲಿ ಕೂರುವುದು, ಅದೊಂದು ಆಸೆಯನ್ನ ಚೀನಾ ಬದಿಗಿಟ್ಟಿದ್ದರೆ? ವಿಶ್ವದಲ್ಲಿ ಇಂದಿನ ಅನಿಶ್ಚಿತತೆ ಇರುತ್ತಿರಲಿಲ್ಲ.
ಪ್ರಾರಂಭದಲ್ಲಿ ಚೀನಿಯರ ಜತೆ ಕೆಲಸ ಮಾಡುವುದು ಬಹಳ ಕಷ್ಟವಿತ್ತು. ಅವರು ತಾವು ಹೇಳಿದ ಗುಣಮಟ್ಟವನ್ನ ಎಂದಿಗೂ ಕಳಿಸುತ್ತಿರಲಿಲ್ಲ. ಕೆಲವೊಮ್ಮೆ ಕಂಟೈನರ್ ಪೂರ್ತಿ ಹಳೆಯ ಜೀ ಬಟ್ಟೆ ಯನ್ನ (ಸ್ಪ್ಯಾನಿಷ್ನಲ್ಲಿ ಜೀ ಬಟ್ಟೆಗೆ ತೆಹಾನೂ ಎನ್ನುತ್ತಾರೆ) ತುಂಬಿ ಕಳಿಸಿದ ಘಟನೆಯನ್ನ ಕಂಡ ದ್ದಕ್ಕೆ ಸಾಕ್ಷಿ ನಾನು. ನಂತರದ ದಿನಗಳಲ್ಲಿ ಭಾಷೆ ಬರದಿದ್ದರೂ ಅವರ ನಿಖರತೆ ಮತ್ತು ಪ್ರೊಫೆಷನ ಲಿಸಮ್ ಕಂಡು ಆಶ್ಚರ್ಯಗೊಂಡಿದ್ದೇನೆ.
ಆದರೆ ಇಂದಿಗೂ ಚೀನಿಯರ ಒಂದು ಅತ್ಯಂತ ಕೆಟ್ಟ ಬುದ್ಧಿ ನನಗೆ ಸಹ್ಯವಾಗುವುದಿಲ್ಲ. ಯುರೋಪ್ ಅಥವಾ ಅಮೆರಿಕದಿಂದ ಗ್ರಾಹಕರು ಬರುತ್ತಿದ್ದಾರೆ ಅಂದರೆ ಸಾಕು, ಐದಾರು ಹುಡುಗಿ ಯರನ್ನು ಬುಕ್ ಮಾಡಿ ಕರೆತರುತ್ತಾರೆ. ಎಷ್ಟು ಸಾಧ್ಯವೋ ಅಷ್ಟು ಗ್ರಾಹಕನನ್ನ ತಮ್ಮ ಖೆಡ್ಡಾಗೆ ಕೆಡವಿಕೊಳ್ಳುತ್ತಾರೆ. ಒಮ್ಮೆ ಗ್ರಾಹಕನಾದವನನ್ನು ತಮ್ಮ ಮುಷ್ಟಿಯಿಂದ ಜಾರದಂತೆ ನೋಡಿ ಕೊಳ್ಳಲು ಅವರು ಎ ರೀತಿಯ ಜಾಣತನ ಬಳಸುತ್ತಾರೆ.
ಇದರ ಜತೆಗೆ ಅವರು ತಮ್ಮ ಹೊಸ ವಸ್ತುವಿನ ಸ್ಯಾಂಪಲ್ ಕೈಲಿ ಹಿಡಿದು ಯುರೋಪಿಗೆ ಬಂದರೆ, ಜತೆಗೆ ತಮ್ಮ ಹಳೆಯ ಗ್ರಾಹಕನಿಗೆ ಉಡುಗೊರೆ ತರುವುದನ್ನ ಮರೆಯುವುದಿಲ್ಲ. ಸ್ಪ್ಯಾನಿಷರು ಹಂದಿಮಾಂಸಪ್ರಿಯರು. ಮಾಂಸ ಹಳೆಯದಾದಷ್ಟೂ ಅದಕ್ಕೆ ಬೇಡಿಕೆ ಮತ್ತು ಬೆಲೆ ಹೆಚ್ಚು. ಆಯಕಟ್ಟಿನ ಜಾಗದಲ್ಲಿ ಕುಳಿತಿರುವ ವ್ಯಕ್ತಿಗಳಿಗೆ ಇಂಥ ಏನಾದರೂ ಉಡುಗೊರೆ ಇಲ್ಲದೆ ಅವರು ಬರಿಕೈಲಿ ಬಂದದ್ದು ಕಡಿಮೆ.
ನೇರವಾಗಿ ನೀವು ಅದನ್ನು ಲಂಚ ಎನ್ನಲಾಗದಿದ್ದರೂ ಒಂದು ಮಟ್ಟದ ಭ್ರಷ್ಟಾಚಾರ ಎನ್ನುವು ದಂತೂ ಸತ್ಯ. ಹಣ ತೆಗೆದುಕೊಂಡರೆ ಮಾತ್ರ ಅದು ಭ್ರಷ್ಟಾಚಾರವಲ್ಲ, ಉಡುಗೊರೆ ಕೂಡ ಒಂದು ರೀತಿಯ ಭ್ರಷ್ಟಾಚಾರವೇ ಹೌದು. ಅದರಲ್ಲೂ ಆ ಉಡುಗೊರೆಯು, ವ್ಯಕ್ತಿಯೊಬ್ಬ ಕುಳಿತ ಕುರ್ಚಿಯ ಬಲದಿಂದ ಸಿಕ್ಕಿದ್ದು ಎಂದಾದಾಗ ಅದು ಲಂಚದ ಇನ್ನೊಂದು ರೂಪವೇ ಹೌದು.
ಅಂದಿಗೆ ಅಮೆರಿಕನ್ನರು, ಯುರೋಪಿಯನ್ನರು ಇದನ್ನು ಸಾಮಾನ್ಯ ಎನ್ನುವಂತೆ ಕಂಡರು. ನಾಳೆ ಎದುರಾಗಬಹುದಾದ ಸಮಸ್ಯೆಯನ್ನು ಅವರು ಕಂಡರೂ ಜಾಣಕುರುಡು, ಜಾಣಕಿವುಡಿಗೆ ಬಲಿ ಯಾದರು. ಅಂದಿಗೆ ಎಲ್ಲರೂ ಲಾಭದಲ್ಲಿ ಪಾಲು ಉಂಡವರೇ, ಇಂದಿಗೆ ದೇಶಪ್ರೇಮದ ಮಾತನ್ನು ಆಡುತ್ತಾರೆ.
ಉದ್ದಿಮೆದಾರರು, ಹೂಡಿಕೆದಾರರು, ರಾಜಕಾರಣಿಗಳ ನಡುವೆ ನೋವುಣ್ಣುವುದು ಮಾತ್ರ ಜನಸಾಮಾನ್ಯರು. ನಯ-ವಿನಯದ ಪ್ರತೀಕದ ನಡವಳಿಕೆಯಿಂದ ಜಗತ್ತಿನ ಉದ್ಯಮದ ಮೇಲೆ ಅವರು ಸಾಧಿಸಿರುವ ಹಿಡಿತ ಇಂದು-ನಾಳೆಗೆ ಸಡಿಲವಾಗುವುದಲ್ಲ. ಅಂದ ಮಾತ್ರಕ್ಕೆ ನಾವು ಅದನ್ನೇ ಕೊಂಡು ಸುಮ್ಮನಿರಬೇಕು ಅಂತಲೂ ಅಲ್ಲ.
ಅಲ್ಲಿ ಉದ್ಯಮಗಳು ಬೆಳೆಯಲು ಸರಕಾರ ಸಿಕ್ಕಾಪಟ್ಟೆ ಸಹಾಯಹಸ್ತ ನೀಡಿದೆ. ಹೀಗಾಗಿ ಬೆಳವಣಿಗೆ ಯ ಟ್ರೈನ್ ಮಿಸ್ ಮಾಡಿಕೊಳ್ಳಲು ಯಾವ ಚೀನಿ ಪ್ರಜೆಯೂ ಸಿದ್ಧನಿಲ್ಲ. ನೀರು, ಕರೆಂಟು, ಜಾಗ, ಬೇಕಾದ ಲೈಸೆನ್ಸ್ ಕೊಟ್ಟು ಇನ್ನೊಂದು ಐದಾರು ವರ್ಷ ನನಗೇನೂ ಬೇಡ, ನಯಾಪೈಸೆ ಟ್ಯಾಕ್ಸ್ ಬೇಡ. ನೀನು ಉತ್ಪಾದನೆ ಮಾಡು, ಕೆಲಸ ಸೃಷ್ಟಿಸು, ಮಾರಾಟ ಮಾಡು ಅಷ್ಟು ಸಾಕು ಎನ್ನುವ ಸರಕಾರವದು!
ಕಳೆದ ಎರಡು-ಮೂರು ದಶಕದಿಂದ ಇದೇ ನೀತಿಯನ್ನು ಚೀನಿ ಸರಕಾರ ಅನುಸರಿಸಿಕೊಂಡು ಬಂದಿದೆ. ಭಾರತದಲ್ಲಿ ಇಂದಿಗೂ ಉದ್ದಿಮೆದಾರನಿಗೆ ಸರಿಯಾದ ಯಾವ ಸೌಲಭ್ಯವೂ ಇಲ್ಲ. ಹೂಡಿಕೆದಾರರು ಹೇಗೋ ಬದುಕಿಕೊಳ್ಳುತ್ತಾರೆ. ಉದ್ದಿಮೆ ಕಟ್ಟಿದವರ ಪರಿಸ್ಥಿತಿ ಮಾತ್ರ ಭಾರತದಲ್ಲಿ ಕಷ್ಟ. ತೀರಾ ದೊಡ್ಡ ಉದ್ದಿಮೆದಾರರ ಪರಿಸ್ಥಿತಿ ಪರವಾಗಿಲ್ಲ. ಏಕೆಂದರೆ ಅವರಿಗೆ ರಾಜಕೀಯ ನೇತಾರರ ಅಥವಾ ಅಧಿಕಾರಸ್ಥರ ಸಹಾಯವಿರುತ್ತದೆ.
ಬ್ಯಾಂಕಿಗೆ ಹೋಗದೆ ಅಲ್ಲಿಂದ ಸಾಲ ಮಂಜೂರಾಗಿರುತ್ತದೆ. ಆದರೆ ಸಣ್ಣ ಉದ್ದಿಮೆದಾರರ ಸ್ಥಿತಿ ಶತ್ರುವಿಗೂ ಬೇಡ ಎನ್ನುವಂತಿದೆ. ತೆರಿಗೆ ಮಾತ್ರ ಸಮಯಕ್ಕೆ ಸರಿಯಾಗಿ ಕಟ್ಟಿಬಿಡಬೇಕು. ಇಲ್ಲದಿದ್ದರೆ ದಿನದ ಲೆಕ್ಕಾಚಾರದಲ್ಲಿ ಅದರ ಮೇಲೆ ಬಡ್ಡಿ ಹಾಕಲಾಗುತ್ತದೆ. ಆದರೆ ಸಣ್ಣ ಉದ್ದಿಮೆಗಳ ಉಳಿವಿಗೆ, ಬೆಳವಣಿಗೆಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳ ಕೊಡುಗೆ ಮಾತ್ರ ಶೂನ್ಯ ಎಂದು ಹೇಳಬಹುದು.
2014ರಿಂದ ಈಚೆಗೆ ಕೇಂದ್ರ ಸರಕಾರ ಪರವಾಗಿಲ್ಲ, ಆದರೂ ಚೀನಾದಂಥ ಅತಿದೊಡ್ಡ ದೇಶ ಕೇವಲ ಎರಡು ದಶಕದಲ್ಲಿ ಬದಲಾದ ರೀತಿಯಲ್ಲಿ ಬದಲಾಗಲು ನಮ್ಮಿಂದ ಸಾಧ್ಯವಾಗಲೇ ಇಲ್ಲ. ಹಾಗೆ ನೋಡಲು ಹೋದರೆ ಅಮೆರಿಕ ಮಾಡೆಲ್, ಚೀನಾ ಮಾಡೆಲ್ ಅಭಿವೃದ್ಧಿ ಎನ್ನುವುದು ಪೊಳ್ಳು. ನಾವು ಅವರನ್ನು ಅನುಕರಿಸುವುದು ಬೇಕಿಲ್ಲ.
ಅನುಸರಿಸಿದರೆ ಅವರಿಗಿಂತ ವೇಗವಾಗಿ ಆ ದಾರಿಯಲ್ಲಿ ಸಾಗಬೇಕು. ಇಲ್ಲವೇ ನಮ್ಮದೇ ಆದ ದಾರಿ ಯಿರಬೇಕು. ನಮ್ಮದು ಇಂದಿಗೂ ಅತಂತ್ರ ಪರಿಸ್ಥಿತಿ. ನಮ್ಮ ಬಳಿ ನಮ್ಮದು ಎನ್ನುವ ದಾರಿಯಿಲ್ಲ. ಆತ್ಮನಿರ್ಭರತೆ ಎನ್ನುವ ಮಾತಿಗೆ ಬಲವನ್ನು ತುಂಬಲಾಗಲಿಲ್ಲ. ಅತ್ತ ಅವರ ದಾರಿಯಲ್ಲಿ ನಾವು ಅವರಿಗಿಂತ ಬಹಳಷ್ಟು ಹಿಂದೆ ಇದ್ದೇವೆ.
ನಾಳೆ ನಾವು ಜರ್ಮನಿಯನ್ನು ಕೂಡ ಹಿಂದಿಕ್ಕಿ ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯಾಗ ಬಹುದು, ಆಗುತ್ತೇವೆ. ಆದರೇನು ಅಮೆರಿಕ 30 ಟ್ರಿಲಿಯನ್ ಆರ್ಥಿಕತೆ ಹೆಸರಿನಲ್ಲಿ ಮೊದಲ ಸ್ಥಾನದಲ್ಲಿದೆ, ಸರಿಸುಮಾರು 20 ಟ್ರಿಲಿಯನ್ ಆಜುಬಾಜಿನಲ್ಲಿ ಚೀನಾ ಎರಡನೇ ಸ್ಥಾನದಲ್ಲಿದೆ, ಮೂರನೇ ಸ್ಥಾನದಲ್ಲಿ 4.75 ಟ್ರಿಲಿಯನ್ನಲ್ಲಿ ಜರ್ಮನಿಯಿದೆ, 4.2 ಟ್ರಿಲಿಯನ್ ಆರ್ಥಿಕತೆಯಾಗಿ ಭಾರತವಿದೆ.
ಇದೆಷ್ಟು ದೊಡ್ಡ ಕಂದಕ ಎನ್ನುವುದು ಅರಿವಾಯ್ತು ಎಂದುಕೊಳ್ಳುವೆ. ದೇಹದಲ್ಲಿ ತ್ರಾಣವಿಲ್ಲದ ಬಡಕಲು ಭಾರತೀಯ ಭಾರತಕ್ಕಾಗಿ ಚೀನಾ ಆಪ್ ಮಾತ್ರವಲ್ಲ ಚೀನಾದ ಎಲ್ಲಾ ಪದಾರ್ಥವನ್ನೂ ಬಿಡಲು ಸಿದ್ಧ. ಅವನ ಮನೋಬಲವನ್ನ ಹೆಚ್ಚಿಸುವ, ಅವನ ಔದ್ಯಮಿಕ ಶಕ್ತಿಗೆ ನೀರೆರೆಯುವ ಕಾಯಕವನ್ನು ಸರಕಾರ ಮಾಡಬೇಕಿದೆ.
ಎಲ್ಲವನ್ನೂ ಒಂದೇ ದಿನದಲ್ಲಿ ಸರಕಾರ ಮಾಡಲಿ ಎನ್ನುವ ಸಿನಿಕತನವಿಲ್ಲ. ಆ ದಾರಿಯಲ್ಲಿ ಅದು ಹಾಕುತ್ತಿರುವ ಹೆಜ್ಜೆ ಮತ್ತು ವೇಗ ಖಂಡಿತ ಸಾಲದು. ತೆರಿಗೆ ಮತ್ತು ಹಣದುಬ್ಬರದಿಂದ ಸಾಮಾನ್ಯ ಜನರನ್ನು ಹೈರಾಣು ಮಾಡುತ್ತಿರುವ ರಾಜ್ಯ ಮತ್ತು ಕೇಂದ್ರ ಸರಕಾರಗಳು ಪಾರದರ್ಶಕವಾಗಿ ಕೆಲಸ ಮಾಡುವುದು ಕಲಿಯುವವರೆಗೂ ನಮ್ಮ ದೇಶ ಬದಲಾಗುವುದಿಲ್ಲ.
ಮೂರನೇ ಆರ್ಥಿಕತೆಯಾಗುವುದು ದೊಡ್ಡ ವಿಷಯವೇ ಅಲ್ಲ. ಹೆಚ್ಚಿನ ಪರಿಶ್ರಮವಿರದಿದ್ದರೂ ನಾವು 2027ಕ್ಕೆ ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿರುತ್ತೇವೆ. ಇದರಲ್ಲಿ ನಾವು ಮಾಡಿದ್ದೇನು? ಎನ್ನುವ ಆತ್ಮಾವಲೋಕನವನ್ನು ನಮ್ಮ ಸರಕಾರಗಳು ಮಾಡಿಕೊಳ್ಳಲಿ. ಅದು ನಿಜವಾದ ಬದಲಾವಣೆಗೂ ದಾರಿಯಾಗಲಿ.