ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ದುರ್ಬಲ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಮಾಡುವ ತಂದೆ-ತಾಯಿ

ಮನೆಯಲ್ಲಿ ತಂದೆ-ತಾಯಿಗಳು ಕೆಲವೊಮ್ಮೆ ಸಹಜವಾಗಿ ದುರ್ಬಲ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಾರೆ. ಇದನ್ನು ಕಂಡು ಅಸೂಯೆ ಪಡುವುದು ಬೇಡ. ತಂದೆ-ತಾಯಿಗಳಿಗೆ ಎಲ್ಲರ ಬಗ್ಗೆಯೂ ಸಮಾನ ಪ್ರೀತಿ ಇರುತ್ತದೆ; ಆದರೆ ಕಾಳಜಿಯು ಆ ಮಕ್ಕಳ ಮಾನಸಿಕ, ದೈಹಿಕ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ.

ದುರ್ಬಲ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಮಾಡುವ ತಂದೆ-ತಾಯಿ

-

ಒಂದೊಳ್ಳೆ ಮಾತು

ಇದು ಮಹಾಭಾರತದಲ್ಲಿ ಬರುವ ಕಥೆ. ಒಮ್ಮೆ ಧೃತರಾಷ್ಟ್ರನ ಹತ್ತಿರ ವೇದವ್ಯಾಸರು ಬಂದು, “ನೋಡು ಧೃತರಾಷ್ಟ್ರ, ನಿನ್ನ ಮಕ್ಕಳಾದ ದುರ್ಯೋಧನ-ದುಶ್ಯಾಸನ, ಅವರ ಮಾವ ಶಕುನಿ, ಪಾಂಡುವಿನ ಮಕ್ಕಳಿಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ. ನೀನು ಅವರಿಗೆ ಸ್ವಲ್ಪ ಬುದ್ಧಿ ಹೇಳಬಾರದೆ?" ಎಂದು ಕೇಳಿದರು. ಇದರಿಂದ ಧೃತರಾಷ್ಟ್ರನಿಗೆ ಬೇಸರ ವಾಯಿತು.

“ನೀವು ಯಾವಾಗಲೂ ನನ್ನ ಮಕ್ಕಳಿಗೆ ಬುದ್ಧಿ ಹೇಳುವಂತೆ ಹೇಳುತ್ತೀರಿ. ನೀವು ಪಾಂಡು ಮಕ್ಕಳ ಮೇಲೆ ಹೆಚ್ಚು ಪ್ರೀತಿ ವಾತ್ಸಲ್ಯ ತೋರಿಸುತ್ತೀರಿ. ಯಾಕೆ ನನ್ನ ಮಕ್ಕಳು ನಿಮಗೆ ಮೊಮ್ಮಕ್ಕಳಲ್ಲವೇ? ಪಾಂಡು ಮಕ್ಕಳು ಮಾತ್ರ ಮೊಮ್ಮಕ್ಕಳಾ?" ಎಂದು ಸಿಡಿಮಿಡಿಗೊಂಡು ಕೇಳಿದ.

ಇದನ್ನು ಕೇಳಿದ ವ್ಯಾಸರು ಒಂದು ಕಥೆ ಹೇಳುತ್ತಾರೆ: “ಒಮ್ಮೆ ದೇವಲೋಕದಲ್ಲಿ ಕಾಮಧೇನು ಅಳುತ್ತಿದ್ದಳು. ಅಲ್ಲಿಗೆ ಬಂದ ಇಂದ್ರದೇವ, ‘ಯಾಕೆ ಅಳುತ್ತಾ ಇರುವೆ, ನಮ್ಮಿಂದ ಏನಾದರೂ ತಪ್ಪಾಯಿತೇ ಅಥವಾ ಯಾರಾದರೂ ನಿನ್ನ ಮನಸ್ಸಿಗೆ ನೋವಾಗು ವಂತೆ ಮಾತನಾಡಿದರಾ?’ ಎಂದು ಕೇಳಿದ.

ಇದನ್ನೂ ಓದಿ: Roopa Gururaj Column: ಸಗಣಿ ಉಂಡೆ ಮತ್ತು ಕರ್ಮದ ಫಲ

ಕಾಮಧೇನು ಇಂದ್ರನನ್ನು ಕರೆದು, ಅಲ್ಲಿ ನೋಡು ಎಂದು ಭೂಮಿಯ ಕಡೆ ತೋರಿಸಿದಳು. ಅದೊಂದು ಹಳ್ಳಿ, ಅಲ್ಲಿ ಬಡ ರೈತನ ಗದ್ದೆಯಿತ್ತು. ರೈತನು ತನ್ನ ಹತ್ತಿರವಿದ್ದ ಎರಡೂ ನೀವೂ ಬರೆಯಬಹುದು ಎತ್ತುಗಳನ್ನು ನೊಗಕ್ಕೆ ಕಟ್ಟಿ ಗದ್ದೆಯಲ್ಲಿ ಕೆಲಸ ಮಾಡಿಸುತ್ತಿದ್ದ. ಅವು ಮುಂದೆ ಹೋಗದಿದ್ದರೆ ಬಾರುಕೋಲಿನಿಂದ ಅವುಗಳಿಗೆ ಹೊಡೆಯುತ್ತಿದ್ದ. ಆ ಎತ್ತು ಗಳು ಸರಿಯಾಗಿ ಹೊಟ್ಟೆಗೂ ಇಲ್ಲದೆ ಚರ್ಮ ಮೂಳೆ ಬಿಟ್ಟುಕೊಂಡು ನೊಗ ಎಳೆಯ ಲಾಗದೆ ಕಷ್ಟಪಡುತ್ತಿದ್ದವು. ಅವುಗಳ ಕಣ್ಣಲ್ಲಿ ನೀರು ಬರುತ್ತಿತ್ತು.

ಎತ್ತುಗಳನ್ನು ತೋರಿಸಿದ ಕಾಮಧೇನು, ‘ದೇವರಾಜ, ನನ್ನ ಮಕ್ಕಳು ಹೇಗೆ ಅಳುತ್ತಿವೆ, ಅವುಗಳ ಕಷ್ಟ ನನ್ನಿಂದ ನೋಡಲಾಗುತ್ತಿಲ್ಲ, ಏನಾದರೂ ಮಾಡಿ ಅವುಗಳ ಕಷ್ಟವನ್ನು ಪರಿಹರಿಸು’ ಎಂದು ಕೇಳಿಕೊಂಡಳು....

“ಅದಕ್ಕೆ ಇಂದ್ರನು, ‘ಏನಮ್ಮ ಕಾಮಧೇನು, ನಿನಗೆ ಇವೇ ಎರಡು ಮಕ್ಕಳಾ? ಎತ್ತು, ಹಸು ಗಳು ಸೇರಿ ಕೋಟಿ ಕೋಟಿ ಮಕ್ಕಳಿದ್ದಾರೆ. ಅವುಗಳನ್ನೆ ಬಿಟ್ಟು ಈ ಎರಡು ಮಕ್ಕಳ ಮೇಲೆ ಮಾತ್ರ ಅಷ್ಟೊಂದು ಪ್ರೀತಿ ಯಾಕೆ?’ ಎಂದು ಕೇಳಿದ. ಆಗ ಕಾಮಧೇನು ಹೇಳಿದಳು- ‘ನೋಡು ಇಂದ್ರ, ನೀನು ಹೇಳಿದಂತೆ ನನಗೆ ಎತ್ತು, ಹಸುಗಳು ಸೇರಿ ಕೋಟಿ ಕೋಟಿ ಮಕ್ಕಳು ಇದ್ದಾರೆ ನಿಜ. ಅವುಗಳೆಲ್ಲ ಸುಖವಾಗಿ ಇದ್ದಾವೆ. ಆದರೆ ಈ ಎರಡು ಮಕ್ಕಳು ಮಾತ್ರ ಹೊಟ್ಟೆಗಿಲ್ಲದೆ ಆ ರೈತನ ಗದ್ದೆಯನ್ನು ಉಳಬೇಕು. ಅಲ್ಲದೆ ಮಳೆ ಬರದೆ ಭೂಮಿಯೆಲ್ಲ ಒಣಗಿ ಬಿರುಕು ಬಿಟ್ಟಿದೆ.

ಕಲ್ಲಿನಂತೆ ಗಟ್ಟಿಯಾಗಿರುವ ಭೂಮಿಯನ್ನು ನೇಗಿಲಿನಿಂದ ಎಳೆಯಲು ಹೊಟ್ಟೆಗೂ ಹಾಕದೆ ನಿತ್ರಾಣವಾಗಿರುವ ಅವುಗಳಿಂದ ಕೆಲಸ ಮಾಡಿಸುತ್ತಾನೆ, ಕೆಲಸ ಮಾಡಲು ಆಗದೆ ರೈತನ ಕೈಯಲ್ಲಿ ಹೊಡೆಸಿಕೊಳ್ಳುತ್ತಾ ನಿತ್ಯವೂ ಕಣ್ಣೀರು ಹಾಕುತ್ತವೆ. ಇದನ್ನು ನನ್ನಿಂದ ನೋಡಲಾಗುವುದಿಲ್ಲ ಹಾಗಾಗಿ ಹೇಳಿದೆ’ ಎಂದಿತು.

ಕನಿಕರಗೊಂಡ ಇಂದ್ರನು, ‘ಕಾಮಧೇನು, ನಿನ್ನ ಮಕ್ಕಳ ಮೇಲಿರುವ ಕರುಳಿನ ಪ್ರೀತಿ ನನಗೆ ಅರ್ಥವಾಯಿತು’ ಎನ್ನುತ್ತಾ, ಸುತ್ತಮುತ್ತ ಮಳೆ ಸುರಿಸಿದನು. ಇದರಿಂದ ಭೂಮಿಯೆ ಹಸಿಯಾಗಿ ಮಣ್ಣು ಮೃದುವಾಯಿತು. ಎತ್ತುಗಳು ಸರಾಗವಾಗಿ ನೇಗಿಲನ್ನು ಎಳೆದವು. ಇದು ಕಾಮಧೇನುವಿಗಿರುವ ಪುತ್ರವಾತ್ಸಲ್ಯ".

ಹೀಗೆ ಕತೆ ಹೇಳಿ ಮುಗಿಸಿದ ವ್ಯಾಸರು, “ನೋಡು ಧೃತರಾಷ್ಟ್ರ ನೀನೂ ನನಗೆ ಮಗ, ಪಾಂಡುವೂ ಮಗನೇ, ಹಾಗೆಯೇ ನಿನ್ನ ಮಕ್ಕಳು ಮೊಮ್ಮಕ್ಕಳೇ, ಪಾಂಡು ಮಕ್ಕಳೂ ಮೊಮ್ಮಕ್ಕಳೇ! ಎಲ್ಲರ ಮೇಲೂ ನನಗೆ ಸಮಾನವಾದ ಪ್ರೀತಿ ಇದೆ. ಆದರೆ ಯಾವ ಮಕ್ಕಳು ಹೆಚ್ಚು ಕಷ್ಟಪಡುತ್ತಿರುತ್ತಾರೋ, ಅವರ ಬಗ್ಗೆ ಹೆತ್ತ ತಂದೆ-ತಾಯಿಗೆ ಕನಿಕರ, ಪ್ರೀತಿ ಜಾಸ್ತಿ ಇರುತ್ತದೆ. ಅದು ಸಹಜ ಕೂಡ. ಆದುದರಿಂದ ನಿನ್ನ ಮಕ್ಕಳು ಪಾಂಡು ಮಕ್ಕಳಿಗೆ ತೊಂದರೆ ಕೊಡದಂತೆ ತಿದ್ದಿ ಬುದ್ಧಿ ಹೇಳು. ತಂದೆ ಇಲ್ಲದ ಅವರನ್ನು ನಿನ್ನ ಮಕ್ಕಳಂತೆಯೇ ಪಾಲಿಸಬೇಕು" ಎಂದು ಬುದ್ಧಿವಾದ ಹೇಳಿದರು.

ಮನೆಯಲ್ಲಿ ತಂದೆ-ತಾಯಿಗಳು ಕೆಲವೊಮ್ಮೆ ಸಹಜವಾಗಿ ದುರ್ಬಲ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಾರೆ. ಇದನ್ನು ಕಂಡು ಅಸೂಯೆ ಪಡುವುದು ಬೇಡ. ತಂದೆ-ತಾಯಿಗಳಿಗೆ ಎಲ್ಲರ ಬಗ್ಗೆಯೂ ಸಮಾನ ಪ್ರೀತಿ ಇರುತ್ತದೆ; ಆದರೆ ಕಾಳಜಿಯು ಆ ಮಕ್ಕಳ ಮಾನಸಿಕ, ದೈಹಿಕ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ.