Vishweshwar Bhat Column: ಹೊಣೆಯರಿತ ವ್ಯಕ್ತಿಗಳು, ಬ್ರ್ಯಾಂಡ್ ಗಳು ನಿರೀಕ್ಷೆಯನ್ನೂ ಹುಸಿಗೊಳಿಸೋದಿಲ್ಲ
ಗ್ವಾಲಿಯರ್ನಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ಆಗದಷ್ಟು ಪ್ರತಿಕೂಲ ಹವಾಮಾನ ಪರಿಸ್ಥಿತಿ ಇದೆ ಎಂಬ ಸಂಗತಿ ಕ್ಯಾಪ್ಟನ್ಗೂ ತಿಳಿದು ಬಂತು. ಕೊಂಚಕಾಲ ಕಾಯಬೇಕಾಗುತ್ತದೆ ಎಂದು ವಿಮಾನ ಸಿಬ್ಬಂದಿ ಹೇಳುತ್ತಿದ್ದರೆ ಅನೇಕ ಪ್ರಯಾಣಿಕರು ಬೇರೆ ಬೇರೆ ಜಾಲತಾಣಗಳಲ್ಲಿ ಜಾಲಾಟ ಮಾಡಿ ಇಂದು ಇಡೀ ದಿನ ಹವಾಮಾನ ಹೀಗೆಯೇ ಇರುತ್ತದೆ ಎಂಬ ಮುನ್ಸೂಚನೆಯನ್ನೂ ಕೊಡಲಾರಂಭಿಸಿದರು.


ಇದೇ ಅಂತರಂಗ ಸುದ್ದಿ
vbhat@me.com
ಇದು ಕೆಲ ವರ್ಷಗಳ ಹಿಂದಿನ ಮಾತು. ಸಹಸ್ರಾರು ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಲು ಖ್ಯಾತ ಮ್ಯಾನೇಜ್ಮೆಂಟ್ ಗುರು ರಘುರಾಮನ್ ಗ್ವಾಲಿಯರ್ಗೆ ಹೊರಟಿದ್ದರು. ಅದು ಕಾಲೇಜೊಂದರ ಬಹುಮುಖ್ಯ ಕಾರ್ಯಕ್ರಮ. ರಘುರಾಮನ್ ಪ್ರಯಾಣ ಮಾಡುತ್ತಿದ್ದ ಇಂಡಿಗೋ ವಿಮಾನದಲ್ಲಿ ಪುಣೆ, ಹೈದರಾಬಾದ್, ಮುಂಬಯಿ ಸೇರಿದಂತೆ ಅನೇಕ ಭಾಗಗಳ ಪ್ರಯಾಣಿಕರಿದ್ದರು.
ಮಾರ್ಗಮಧ್ಯದಲ್ಲಿ ಅದು ಇಂದೋರ್ನಲ್ಲಿ ಇಳಿಯಿತು. ಅಲ್ಲಿ ಒಂದಷ್ಟು ಪ್ರಯಾಣಿಕರು ವಿಮಾನ ಹತ್ತಿದರು. ಅಷ್ಟೊತ್ತಿಗಾಗಲೇ ತಾಪಮಾನದಲ್ಲಿ ವ್ಯತ್ಯಯವಾಗಿತ್ತು, ಮೋಡ ಮುಸುಕಿಕೊಂಡಿತ್ತು, ರನ್ವೇ ಕಾಣಿಸುತ್ತಿರಲಿಲ್ಲ. ಇಂಥ ಸಂದರ್ಭದಲ್ಲಿ ವಿಮಾನದ ಲ್ಯಾಂಡಿಂಗ್-ಟೇಕಾಫ್ ಕಷ್ಟಕರ. ಅಷ್ಟರಲ್ಲಿ ಮಳೆಯೂ ಪ್ರಾರಂಭವಾಯಿತು.
ಗ್ವಾಲಿಯರ್ನಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ಆಗದಷ್ಟು ಪ್ರತಿಕೂಲ ಹವಾಮಾನ ಪರಿಸ್ಥಿತಿ ಇದೆ ಎಂಬ ಸಂಗತಿ ಕ್ಯಾಪ್ಟನ್ಗೂ ತಿಳಿದು ಬಂತು. ಕೊಂಚಕಾಲ ಕಾಯಬೇಕಾಗುತ್ತದೆ ಎಂದು ವಿಮಾನ ಸಿಬ್ಬಂದಿ ಹೇಳುತ್ತಿದ್ದರೆ ಅನೇಕ ಪ್ರಯಾಣಿಕರು ಬೇರೆ ಬೇರೆ ಜಾಲತಾಣಗಳಲ್ಲಿ ಜಾಲಾಟ ಮಾಡಿ ಇಂದು ಇಡೀ ದಿನ ಹವಾಮಾನ ಹೀಗೆಯೇ ಇರುತ್ತದೆ ಎಂಬ ಮುನ್ಸೂಚನೆಯನ್ನೂ ಕೊಡಲಾರಂಭಿಸಿದರು.
ಸುಮಾರು ಎರಡೂವರೆ ಗಂಟೆ ಕಾದ ನಂತರ ಅಂದಿನ ವಿಮಾನಯಾನ ರದ್ದಾಯಿತು ಮತ್ತು ಪ್ರಯಾಣಿಕರಿಗೆ ಮಾರನೇ ದಿನ ಪ್ರಯಾಣಿಸುವಂತೆ ವಿನಂತಿ ಮಾಡಿಕೊಂಡರು. ತುರ್ತು ಕೆಲಸದ ಮೇಲೆ ಹೋಗಲೇಬೇಕಿದ್ದವರಿಗೆ ಅಡಚಣೆಯಾದರೆ, ಇನ್ನು ಕೆಲವರಿಗೆ ಆ ಅಪರಿಚಿತ ಊರಿನಲ್ಲಿ ಎಲ್ಲಿ ಉಳಿದುಕೊಳ್ಳಬೇಕು ಎಂಬ ಬಗ್ಗೆ ಗೊಂದಲವುಂಟಾದವು.
ಅಷ್ಟರಲ್ಲಿ ರಘುರಾಮನ್ ಮತ್ತು ಅವರ ಸಹಯಾತ್ರಿ ಇಂದೋರ್ನಿಂದ ಗ್ವಾಲಿಯರ್ಗೆ ರಸ್ತೆ ಮಾರ್ಗವಾಗಿ 500 ಕಿ. ಮೀ. ದೂರವನ್ನು ಒಂಬತ್ತು ಗಂಟೆಗಳ ಕಾಲ ಪ್ರಯಾಣಿಸಿ ತಲುಪುವುದೆಂದು ತೀರ್ಮಾನ ತೆಗೆದುಕೊಂಡಾಗಿತ್ತು. ಆ ಮಾರ್ಗಮಧ್ಯದಲ್ಲಿ ದುರ್ಗಮ ಬೆಟ್ಟಗುಡ್ಡಗಳ ಪ್ರದೇಶವಿರು ವುದು ಕೂಡ ಗೊತ್ತಿತ್ತು. ಗ್ವಾಲಿಯರ್ನ ಕಾಲೇಜಿನ ಆಡಳಿತ ಮಂಡಳಿಗೆ ಮೂರು ತಿಂಗಳ ಮೊದಲೇ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಮಾತು ಕೊಟ್ಟಿದ್ದರು.
ಹೀಗಾಗಿ ರಘುರಾಮನ್ ಹೇಗಾದರೂ ಮಾಡಿ ತಲುಪಲೇಬೇಕೆಂಬ ತೀರ್ಮಾನಕ್ಕೆ ಬಂದಿದ್ದರು. ಕೆಲವರು ಕಾರ್ಯಕ್ರಮಗಳಿಗೆ ಒಪ್ಪಿಕೊಳ್ಳುವಾಗಲೇ ‘ವಿಮಾನದ ಟಿಕೆಟ್ ಕೊಡಿಸಿ, ಆಗ ಮಾತ್ರವೇ ನಿಗದಿಯಾದ ವೇಳೆಗೆ ಬರುತ್ತೇವೆ’ ಎಂಬ ವಾಗ್ದಾನ ಮಾಡಿರುತ್ತಾರೆ. ಆದರೆ ರಘುರಾಮನ್ ಹಾಗೆ ಮಾಡಿರಲಿಲ್ಲ. ಹೊಣೆಯರಿತ ವ್ಯಕ್ತಿ ಮತ್ತು ಬ್ರ್ಯಾಂಡ್ಗಳು ತಮ್ಮ ಅವಲಂಬಿತ ಗ್ರಾಹಕರಿಗೆ ಎಂದೂ ನಿರಾಶೆ ಮಾಡುವುದಿಲ್ಲ.
ರಘುರಾಮನ್ ಕಾರ್ಯಕ್ರಮದ ಆಯೋಜಕರನ್ನು ಸಂಪರ್ಕಿಸಿ ಆಗಿರುವ ತೊಂದರೆಯನ್ನು ತಿಳಿಸಿದ್ದರು. ವಿಮಾನಯಾನ ಮತ್ತೆ ಆರಂಭ ಆಗಬಹುದು ಎಂಬ ಆಶಾಭಾವ ಕಾಲೇಜ್ ಆಡಳಿತ ಮಂಡಳಿ ಸದಸ್ಯರಲ್ಲಿತ್ತು. ಆದರೆ ಅವರನ್ನು ನಿರಾಶೆಗೆ ಒಳಪಡಿಸುವುದು ರಘುರಾಮನ್ಗೆ ಇಷ್ಟವಿರಲಿಲ್ಲ. ರಘುರಾಮನ್ ಅರೆ ಕ್ಷಣವೂ ವ್ಯರ್ಥ ಮಾಡದೇ ಟ್ಯಾಕ್ಸಿ ಹಿಡಿದು ಗಂಟೆಗಟ್ಟಲೆ ಪ್ರಯಾಣಿಸಿ ರಾತ್ರಿ ಹನ್ನೆರಡು ಗಂಟೆಯ ವೇಳೆಗೆ ಗ್ವಾಲಿಯರ್ನ ಹೋಟೆಲು ತಲುಪಿದರು.
ಮಾರನೇ ದಿನ ಬೆಳಗ್ಗೆ ಕಾರ್ಯಕ್ರಮ ನಡೆಯುವುದಿತ್ತು. ಅವರು ರಸ್ತೆ ಮೂಲಕ ಪ್ರಯಾಣಿಸುವಾಗ ಭಾರಿ ಮಳೆ ಸುರಿಯುತ್ತಲೇ ಇತ್ತು. ಕಣ್ಣ ಮುಂದಿನ ರಸ್ತೆ ಕಾಣಿಸದಷ್ಟು ಮಂಜು ಮುಸುಕಿತ್ತು. ಅಪರಿಚಿತ ಊರಿನಲ್ಲಿ ಇಂಥ ರಸ್ತೆ ಪ್ರಯಾಣ ಮಾಡುವುದು ಖಂಡಿತವಾಗಿಯೂ ಸುರಕ್ಷಿತವಲ್ಲ ಎಂಬುದು ಅವರಿಗೆ ಗೊತ್ತಿತ್ತು. ಆಗ ಅವರ ನೆನಪಿಗೆ ಬಂದಿದ್ದು 2008ರಲ್ಲಿ ಮುಂಬಯಿಯಲ್ಲಿ ನಡೆದ ಉಗ್ರರ ದಾಳಿ. ತಾಜ್ ಹೋಟೆಲಿನಲ್ಲಿದ್ದ ಸಿಬ್ಬಂದಿಯನ್ನು ಬಚಾವು ಮಾಡಲು ತಮ್ಮ ಜೀವದ ಹಂಗು ತೊರೆದು ಆತಂಕವಾದಿಗಳ ವಿರುದ್ಧ ಹೋರಾಡಿದವರು ತಾಜ್ ಹೋಟೆಲಿನ ಸಿಬ್ಬಂದಿ.
ಅವರು ತಮ್ಮ ಜೀವ ಉಳಿಸಿಕೊಳ್ಳಲು ಓಡಿಹೋಗಬಹುದಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಹೋಟೆಲಿನಲ್ಲಿದ್ದ ಎಲ್ಲರನ್ನೂ ರಕ್ಷಿಸುವ ಪಣತೊಟ್ಟರು. ಅವರು ವಿಶ್ವದ ವಿಶ್ವಾ ಸಾರ್ಹ ಬ್ರ್ಯಾಂಡ್ ಎಂದು ಪರಿಗಣಿತವಾದ ಕಂಪನಿಯ ಬಹುದೊಡ್ಡ ಆಸ್ತಿ.
ನೀವು ಹೊಣೆಯರಿತ ವ್ಯಕ್ತಿ ಅಥವಾ ಬ್ರ್ಯಾಂಡ್ ಅಗಿದ್ದರೆ, ನಿಮ್ಮಲ್ಲಿರುವ ಸರ್ವಶ್ರೇಷ್ಠ ಪ್ರಯತ್ನ ವನ್ನು ಹಾಕುತ್ತೀರಿ ಮತ್ತು ನಿಮ್ಮನ್ನು ನಂಬಿರುವವರನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ. ಸ್ವತಃ ತೊಂದರೆಗೊಳಗಾದರೂ ಲೆಕ್ಕಿಸದೇ ನಿಮ್ಮನ್ನು ನಂಬಿರುವವರ ರಕ್ಷಣೆಗೆ ನೀವು ನಿಲ್ಲುತ್ತೀರಿ. ತುಸು ಯೋಚಿಸಿ, ಅಂದು ರಘುರಾಮನ್ ಅಷ್ಟೆಲ್ಲ ಕಷ್ಟಪಡಬೇಕಿರಲಿಲ್ಲ. 500 ಕಿ.ಮೀ. ದೂರವನ್ನು ರಸ್ತೆ ಮೂಲಕ ಪ್ರಯಾಣಿಸುವ ಕಷ್ಟ ತೆಗೆದುಕೊಳ್ಳಬೇಕಿರಲಿಲ್ಲ. ಆದರೆ ಅವರು ತಮ್ಮ ಮೇಲೆ ಕಾರ್ಯಕ್ರಮ ಸಂಘಟಕರು ಇಟ್ಟ ವಿಶ್ವಾಸಕ್ಕೆ ಲೋಪ ಆಗಬಾರದು ಎಂದು ನಿರ್ಧರಿಸಿದ್ದರು.
ಅದಕ್ಕಾಗಿ ಯಾವ ಕಷ್ಟವಾದರೂ, ಅನನುಕೂಲವಾದರೂ ಸೈ, ಅನುಭವಿಸಲು ಸಿದ್ಧರಾಗಿದ್ದರು. ಯೋಗಿ ದುರ್ಲಭಜೀ ಅವರು ಹರಿದ್ವಾರಕ್ಕೆ ಹೋಗಿದ್ದಾಗಿನ ಸಂಗತಿಯಿದು. ಚಳಿಗಾಲ ಆರಂಭ ವಾಗಿತ್ತು. ಅವರು ನೆಟ್ವರ್ಕ್ ಇಲ್ಲದ, ಗುಡ್ಡದ ಮೇಲಿರುವ ಆಶ್ರಮದಲ್ಲಿ ಬರಿಮೈಯಲ್ಲಿ ಇಪ್ಪತ್ತೊಂದು ದಿನ ಧ್ಯಾನಕ್ಕೆ ಕುಳಿತಿದ್ದರು.
ನಾನು ಅವರನ್ನು ಸಂಪರ್ಕಿಸಲು ಮೂರ್ನಾಲ್ಕು ಸಲ ಪ್ರಯತ್ನಿಸಿದೆ. ಅವರ ಸಂಪರ್ಕ ಸಾಧ್ಯ ವಾಗಲಿಲ್ಲ. ಆದರೆ ನನಗೆ ಅವರು ಧ್ಯಾನಕ್ಕೆ ಕುಳಿತಿರುವುದು ಗೊತ್ತಿರಲಿಲ್ಲ. ಇಪ್ಪತ್ನಾಲ್ಕನೇ ದಿನದಂದು ದುರ್ಲಭಜೀ ಕರೆ ಬಂತು. “ನಿಮ್ಮ ಮೆಸೇಜ್ನಿಂದ ಫೋನ್ ಮಾಡಿದ್ದು ಗೊತ್ತಾಯಿತು. ಏನು ಸಮಾಚಾರ?" ಎಂದು ಕೇಳಿದರು.
“ಯೋಗಿಜೀ, ನಿಮ್ಮ ಆರೋಗ್ಯ ವಿಚಾರಿಸಲು ಸುಮ್ಮನೆ ಫೋನ್ ಮಾಡಿದ್ದೆ, ಬೇರೆ ಯಾವ ಉದ್ದೇಶವೂ ಇಲ್ಲ" ಎಂದೆ. “ಅದೇ ಉತ್ತಮ. ಯಾವ ಉದ್ದೇಶವಿಲ್ಲದೇ ಕರೆ ಮಾಡಿದ್ದು ಕೇಳಿ ಇನ್ನೂ ಸಂತೋಷವಾಯಿತು" ಎಂದು ಹೇಳಿದರು. ಅಂದು ನಾವಿಬ್ಬರೂ ಸುಮಾರು ಅರ್ಧ ಗಂಟೆ ಮಾತಾಡಿದೆವು. ನಂತರ ನನಗೆ ಗೊತ್ತಾಗಿದ್ದೇನೆಂದರೆ, ಅಂದು ಯೋಗಿಜೀ ಆ ದುರ್ಗಮ ಗುಡ್ಡ-ಬೆಟ್ಟದಲ್ಲಿ, ಆ ಕೊರೆಯುವ ಚಳಿಯಲ್ಲಿ, ಸುಮಾರು ಮೂರು ತಾಸು ಕಾಲ್ನಡಿಗೆಯಲ್ಲಿ ಕ್ರಮಿಸಿ ನೆಟ್ವರ್ಕ್ ಇರುವ ಜಾಗಕ್ಕೆ ಬಂದು ಫೋನ್ ಮಾಡಿದ್ದರು.
“ಭಟ್ಟರು, ನನ್ನನ್ನು ನೆನಪಿಸಿಕೊಂಡು ಐದಾರು ಸಲ ಫೋನ್ ಮಾಡಿದ್ದಾರೆ. ಏನು ವಿಷಯವೋ ಗೊತ್ತಿಲ್ಲ. ಯಾವುದಕ್ಕೂ ಅವರ ಜತೆ ಮಾತಾಡಿ ಬರುತ್ತೇನೆ" ಎಂದರಂತೆ. ಆಗ ಅವರ ಶಿಷ್ಯರು, “ಯೋಗಿಜೀ, ನೀವು ಹೋಗಬೇಡಿ, ನಾವು ಭಟ್ಟರ ಜತೆ ಮಾತಾಡಿ ಬರುತ್ತೇವೆ" ಎಂದು ಹೇಳಿದರಂತೆ. ಆದರೆ ದುರ್ಲಭಜೀ ಸ್ವತಃ ನನ್ನ ಜತೆಗೇ ಮಾತಾಡಲು ಹೊರಟಿದ್ದರು.
ನನಗೆ ಈ ಥರದ ಅನುಭವವಾಗುತ್ತಿರುವುದು ಮೊದಲ ಸಲವಲ್ಲ. ನನಗೆ ಯೋಗಿಜೀ ಬಗೆಗಿದ್ದ ಪ್ರೀತಿ ಮತ್ತಷ್ಟು ಹೆಚ್ಚಿತು. ತಮಗೆ ಎಷ್ಟು ಕಷ್ಟವಾದರೂ ಕೆಲವರು ಬೇರೆಯವರಿಗಾಗಿ ಎಂಥ ಸಂಕಷ್ಟ ಗಳನ್ನಾದರೂ ಅನುಭವಿಸಲು ಸಿದ್ಧರಿರುತ್ತಾರೆ. ಬೇರೆಯವರಿಗೆ ನಿರಾಸೆ, ಬೇಸರ ಮೂಡಿಸಲು ಅವರು ಸರ್ವಥಾ ಸಿದ್ಧರಿರುವುದಿಲ್ಲ. ಅದಕ್ಕಾಗಿ ಎಂಥ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಆ ಮೂಲಕ ತಮ್ಮ ಬ್ರ್ಯಾಂಡ್ ಮೌಲ್ಯವನ್ನು ಕಾಪಾಡಿಕೊಳ್ಳುತ್ತಾರೆ. ನಮ್ಮ ವ್ಯಕ್ತಿತ್ವಕ್ಕೆ ಹೊಡೆತ ಬೀಳುತ್ತದೆ ಎನಿಸಿದರೆ, ಯಾವ ಸವಾಲುಗಳನ್ನಾದರೂ ಎದುರಿಸಲು ಸನ್ನದ್ಧ ರಾಗಿರಬೇಕು, ಕಷ್ಟಗಳನ್ನು ಅನುಭವಿಸಲು ತಯಾರಿರಬೇಕು.
ಎಲ್ಲಕ್ಕಿಂತ ಆಶಾವಾದ ಮುಖ್ಯ
ಮಾರ್ಟಿನ್ ಸೆಲಿಗ್ಮನ್ ಸತತ 22 ವರ್ಷಗಳ ಕಾಲ ಅಧ್ಯಯನ ಮಾಡಿ ಅದರ ಸಾರಾಂಶವನ್ನು ತನ್ನ ‘ಲರ್ನಡ್ ಆಪ್ಟಿಮಿಸಂ’ ಪುಸ್ತಕದಲ್ಲಿ ದಾಖಲಿಸಿzನೆ. ಆತನ ಪ್ರಕಾರ, ಆಶಾವಾದವೆಂಬುದು ಎಲ್ಲಕ್ಕಿಂತ ಮಹತ್ವಪೂರ್ಣವಾದ ಗುಣವಿಶೇಷಣವಾಗಿದ್ದು, ಯಾರಲ್ಲಿ ಅದು ಹೆಚ್ಚಿನ ಪ್ರಮಾಣ ದಲ್ಲಿ ಇರುವುದೋ ಅವರು ವ್ಯಕ್ತಿಗತವಾಗಿ ಮತ್ತು ವ್ಯಾವಹಾರಿಕವಾಗಿ ಸಫಲತೆಯನ್ನು ಕಾಣುತ್ತಾರೆ.
ಆಶಾವಾದಿ ಜನರು ಬದುಕಿನ ಎಲ್ಲ ಮಜಲುಗಳಲ್ಲಿ ಪರಿಣಾಮಕಾರಿಯಾಗಿ ಹೊರಹೊಮ್ಮುತ್ತಾರೆ. ಬದುಕಿನಲ್ಲಿ ನಿಮ್ಮ ಬಹುದೊಡ್ಡ ಜವಾಬ್ದಾರಿ ಏನೆಂದರೆ ನಿಮಗೆ ಯಾವ ಕ್ಷೇತ್ರದಲ್ಲಿ ಹೆಚ್ಚು ಒಲವಿದೆ ಎಂಬುದನ್ನು ಕಂಡುಕೊಳ್ಳುವುದು. ಗಮನಿಸಿ ನೋಡಿ, ಜಗತ್ತಿನಲ್ಲಿ ಯಶಸ್ಸು ಕಂಡ ಎಲ್ಲರೂ ಈ ಸೂತ್ರವನ್ನು ಹಿಡಿದೇ ಮೇಲಕ್ಕೇರಿದವರಾಗಿರುತ್ತಾರೆ. ತಾವು ಮಾಡುವ ಯಾವ ಕೆಲಸ ಬೇರೆಯವರಿಗಿಂತ ಭಿನ್ನವಾಗಿರುತ್ತದೆ ಎಂಬುದು ಅವರಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ.
ನಂತರದಲ್ಲಿ ಆ ಕ್ಷೇತ್ರದ ಮೇಲೆ ತಮ್ಮ ಸಂಪೂರ್ಣ ಧ್ಯಾನವನ್ನು ಕೇಂದ್ರೀಕರಿಸುತ್ತಾರೆ. ನಿಮ್ಮ ಯೋಗ್ಯತೆಗೆ ತಕ್ಕಂತೆ ನೀವು ಮಾಡುವ ಕೆಲಸದಲ್ಲೂ ನೀವು ಔನ್ನತ್ಯವನ್ನು ಪಡೆಯುವುದು ಖಂಡಿತವಾಗಿ ಸಾಧ್ಯವಿದೆ. ಇದು ನನ್ನ ಆದ್ಯತೆಯ ಕ್ಷೇತ್ರ, ಇದರಲ್ಲಿ ನಾನು ನೂರಕ್ಕೆ ನೂರು ಪ್ರಥಮ ಸ್ಥಾನಕ್ಕೇರುತ್ತೇನೆ ಎಂದು ಪಣತೊಟ್ಟು ಹೊರಡಿ, ಆ ಕೆಲಸ ನೀವಂದುಕೊಂಡಂತೆ ಆಗುತ್ತದೆ.
20ನೇ ಶತಮಾನದಲ್ಲಿ ನಮಗೆ ಎಲ್ಲ ಕಡೆಯಿಂದ ಮಾಹಿತಿಯ ಮಹಾಪೂರವೇ ಹರಿದುಬರುತ್ತಲಿದೆ. ನಿಮ್ಮ ಕ್ಷೇತ್ರದಲ್ಲಿ ಶಾಂತವಾಗಿ, ಸ್ಪಷ್ಟವಾಗಿ, ಸರ್ವಶ್ರೇಷ್ಠತೆಯನ್ನು ಸಾಧಿಸಬೇಕೆಂದಾದಲ್ಲಿ ನಿಯತ ವಾಗಿ ತಂತ್ರಜ್ಞಾನ ಮತ್ತು ಸಂಚಾರ ಸಾಧನಗಳನ್ನು ತೊರೆದು ನೀವು ನಿಮ್ಮ ಧ್ಯೇಯಕ್ಕೆ ಸಮಯ ಮೀಸಲಿಡಬೇಕು.
ನೀವು ಈ ದಿಸೆಯಲ್ಲಿ ಏಕಾಗ್ರತೆ ಸಾಧಿಸದೇ ಇದ್ದರೆ ಗುರಿ ತಲುಪಲಾರಿರಿ. ಹೆಚ್ಚು ಮೌಲ್ಯಯುತ ವಸ್ತುಗಳನ್ನು ನಿಮ್ಮ ಬಳಿ ಹೆಚ್ಚಿಸಿಕೊಳ್ಳಬೇಕೆಂದಾದಲ್ಲಿ ಕಡಿಮೆ ಮೌಲ್ಯದ ಹಲವು ಸಂಗತಿಗಳನ್ನು ನೀವು ತ್ಯಜಿಸಬೇಕಾಗುತ್ತದೆ. ಪ್ರತಿ ಕೆಲಸಕ್ಕೆ ಕೈ ಹಾಕುವಾಗಲೂ ಇದು ಮಹತ್ವಪೂರ್ಣವಾದದ್ದಾ? ಎಂದು ನಿಮಗೆ ನೀವೇ ಪ್ರಶ್ನೆ ಮಾಡಿಕೊಂಡು ನಂತರ ಮುನ್ನಡೆಯಿರಿ. ಅದೃಷ್ಟ ಕೈಕೊಡದಿದ್ದರೆ, ನೀವು ಅಂದುಕೊಂಡಿದ್ದೇ ಆಗುವುದರಲ್ಲಿ ಅನುಮಾನವಿಲ್ಲ.
ಮನಸ್ಸಿನ ಭಯ ಮತ್ತು ಚಿಂತನೆ
ಖ್ಯಾತ ಬರಹಗಾರ ಎಕ್ಹಾರ್ಟ್ ಟಾಲ್ ಒಂದು ಮಾತು ಹೇಳಿದ್ದಾನೆ: ನಾನು ಮಾಡುತ್ತಿರುವ ಕೆಲಸದಲ್ಲಿ ನನಗೆ ಸಂತೃಪ್ತಿ ಸಿಗುತ್ತಿದೆಯೇ ಎಂದು ನಿಮಗೆ ನೀವೇ ಒಂದು ಪ್ರಶ್ನೆ ಕೇಳಿಕೊಳ್ಳಿ. ಇಲ್ಲ ಎಂದಾದಲ್ಲಿ ಒಂದು ವಿಚಾರವನ್ನು ಗಮನಿಸಿ, ನಿಮ್ಮ ಭೂತ, ಭವಿಷ್ಯ ಮತ್ತು ವರ್ತಮಾನವನ್ನು ನೀವೇ ಕತ್ತಲಕೂಪಕ್ಕೆ ತಳ್ಳುತ್ತಿದ್ದೀರಿ ಎಂದರ್ಥ. ನೀವು ನಿಮ್ಮ ಕೈಯನ್ನು ಬೆಂಕಿಯ ಕೆನ್ನಾಲಿಗೆ ಮೇಲೆ ಇಡುವುದಿಲ್ಲ ಎಂಬುದರ ಅರ್ಥ ನೀವು ಬೆಂಕಿಗೆ ಹೆದರುತ್ತೀರಿ ಎಂದಲ್ಲ.
ಬೆಂಕಿಗೆ ಕೈ ಇಟ್ಟರೆ ಕೈ ಸುಟ್ಟುಹೋಗುತ್ತದೆ ಎಂಬ ಅರಿವು ನಿಮಗಿದೆ ಎಂದರ್ಥ. ಅನವಶ್ಯಕವಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ತರವಲ್ಲ ಎಂಬುದು ನಿಮಗೆ ಗೊತ್ತಿದೆ, ಹಾಗಂತ ಅದರ ಕುರಿತಾಗಿ ನಿಮ್ಮ ಮನದಲ್ಲಿ ಹೆದರಿಕೆ ಇದೆ ಎಂದರ್ಥವಲ್ಲ. ಇದೇನೂ ಮಹಾದೊಡ್ಡ ಸಂಗತಿಯಲ್ಲ, ಸಾಮಾನ್ಯಜ್ಞಾನ ಅಷ್ಟೆ.
ಆದರೆ ಇಂಥದೇ ಸಂಗತಿಗಳನ್ನು ವ್ಯಾವಹಾರಿಕ ಜಗತ್ತಿನಲ್ಲಿ ಅಗತ್ಯ ಬಿದ್ದಾಗ ಬಳಸಿಕೊಳ್ಳುವುದಿದೆ ಯಲ್ಲ, ಅದು ಜಾಣತನ. ಇದಕ್ಕಿಂತ ಭಿನ್ನವಾದ ಮನೋವೈಜ್ಞಾನಿಕ ಭಯ ಕೂಡ ನಮ್ಮ ಮನಸ್ಸಿನಲ್ಲಿ ಇರುತ್ತದೆ. ಇಂಥ ಪ್ರಸಂಗ ಎದುರಾಗದಿರಲಿ, ಅದಾಗುವುದು ಬೇಡ, ಇದರಿಂದ ನಾನು ಇಕ್ಕಟ್ಟಿಗೆ ಸಿಕ್ಕುವಂತಾಗದಿರಲಿ ಎಂಬ ಸುಖಾಸುಮ್ಮನೆ ಭಯಗಳು ಕೂಡ ನಮ್ಮಲ್ಲಿ ಆಗಾಗ ಕಾಣಿಸಿಕೊಳ್ಳುವು ದುಂಟು.
ಅಂಥ ಭಯಗಳು ಮನದ ಪರದೆಯ ಮೇಲೆ ಮೂಡಿದಾಗ ನೀವು ಭೌತಿಕವಾಗಿ ಇಲ್ಲೇ ಇರುತ್ತೀರಿ, ಆದರೆ ನಿಮ್ಮ ಮನಸ್ಸು ಭವಿಷ್ಯದ ಬಗ್ಗೆ ಚಿಂತನೆಯಲ್ಲಿ ತೊಡಗಿರುತ್ತದೆ. ಹಾಗಾದಾಗ ಮನದ ಮೂಲೆಯಂದು ವ್ಯಗ್ರತೆಯ ಭಾವ ಮೂಡಿರುತ್ತದೆ. ವರ್ತಮಾನ ಸ್ಥಿತಿಯಲ್ಲಿ ಸಹಜಭಾವದಲ್ಲಿದ್ದರೆ ನಾವು-ನೀವು.
ಜೀವನದ ಉಳಿದ ಭಾಗ
ಮೊದಲ ಬಾರಿಗೆ ಡೈವಿಂಗ್ಗೆ ಆಗಮಿಸಿದವರು ಬಹಳ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವು ಸಲ ಇನ್ಸ್ಟ್ರಕ್ಟರ್ಗೆ ಉತ್ತರಿಸಲು ಸಹ ಆಗುವುದಿಲ್ಲ. ಇನ್ನು ಕೆಲವರು, ಕೇಳುವ ಎಲ್ಲ ಪ್ರಶ್ನೆಗಳನ್ನು ಕೇಳಿ, ಸಂದೇಹಗಳನ್ನು ಪರಿಹರಿಸಿಕೊಂಡು ನಂತರ ಡೈವ್ ಮಾಡದಿರಲು ನಿರ್ಧರಿಸುತ್ತಾರೆ. ಬಹುತೇಕ ಜನರ ಪ್ರಶ್ನೆ ಎಷ್ಟು ನಕಾರಾತ್ಮಕವಾಗಿರುತ್ತದೆಂದರೆ ಅವೆಲ್ಲವೂ ಸಾವಿನ ಕುರಿತಾ ಗಿರುತ್ತದೆ. “ಸ್ಕೈ ಡೈವಿಂಗ್ ಮಾಡುವಾಗ ಪ್ಯಾರಚೂಟ್ ಬಿಚ್ಚಿಕೊಳ್ಳದಿದ್ದರೆ ಏನಾಗುತ್ತದೆ?" ಎಂಬುದು ಎಲ್ಲರೂ ಕೇಳುವ ಪ್ರಶ್ನೆ. ಒಂದು ದಿನ ಕೆಲ ಯುವಕರು ಸ್ಕೈ ಡೈವಿಂಗ್ಗೆ ಬಂದರು.
ಅವರಲ್ಲಿ ಒಬ್ಬ ಅದೇ ಪ್ರಶ್ನೆ ಕೇಳಿದ- “ಮೇಲಿಂದ ಜಿಗಿದಾಗ ಪ್ಯಾರಚೂಟ್ ಬಿಚ್ಚಿಕೊಳ್ಳದಿದ್ದರೆ ಏನು ಕತೆ?" ಅದಕ್ಕೆ ಇನ್ಸ್ಟ್ರಕ್ಟರ್ ಹೇಳಿದ- “ಮತ್ತೊಂದು ಪ್ಯಾರಚೂಟ್ ಅನ್ನು ಬಳಸಿ". ಅದಕ್ಕೆ ಆ ಯುವಕ, “ಅದೂ ಓಪನ್ ಆಗದಿದ್ದರೆ ಏನು ಮಾಡುವುದು?" ಎಂದ. ಆಗ ಇನ್ಸ್ಟ್ರಕ್ಟರ್, “ಆಗ ಏನೂ ಮಾಡಲು ಆಗೊಲ್ಲ. ಬೇರೆ ದಾರಿಯಿಲ್ಲ" ಎಂದು ಹೇಳಿದ.
ಈ ಮಾತಿಗೆ ಮತ್ತಷ್ಟು ಉದ್ವಿಗ್ನನಾದ ಯುವಕ “ಪ್ಯಾರಚೂಟ್ ಓಪನ್ ಆಗದ ಸನ್ನಿವೇಶದಲ್ಲಿ ನಾವು ಭೂಮಿಗೆ ಬಂದು ಅಪ್ಪಳಿಸಲು ಎಷ್ಟು ಸಮಯ ಬೇಕಾಗುತ್ತದೆ?" ಎಂದು ಕೇಳಿದ. ಈ ಪ್ರಶ್ನೆಗೆ ಇನ್ಸ್ಟ್ರಕ್ಟರ್ ಸಮಾಧಾನದಿಂದ ಹೇಳಿದ “ರೆಸ್ಟ್ ಆಫ್ ಯುವರ್ ಲೈಫ್".
ಜೀವನದಲ್ಲಿ ಬದಲಾವಣೆ
ನನ್ನ ಸ್ನೇಹಿತರೊಬ್ಬರು ಹೇಳಿದ ಪ್ರಸಂಗವಿದು. ಒಮ್ಮೆ ಅವರು ತಮ್ಮ ಗೆಳೆಯನಿಗೆ ಫೋನ್ ಮಾಡಿದರಂತೆ. ಆಗ ಅವರಿಗೆ ಈ ರೆಕಾರ್ಡೆಡ್ ಮೆಸೇಜ್ ಕೇಳಿಸಿತಂತೆ- “ನಾನು ಈಗ ನಿಮ್ಮೊಂದಿಗೆ ಮಾತನಾಡಲು ಲಭ್ಯವಿಲ್ಲ. ನೀವು ನನಗೆ ಫೋನ್ ಮಾಡಿದ್ದಕ್ಕೆ ಧನ್ಯವಾದಗಳು. ನಾನು ನನ್ನ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡುತ್ತಿದ್ದೇನೆ. ಬೀಪ್ ಸೌಂಡ್ ಕೇಳಿಸಿದ ನಂತರ ನಿಮ್ಮ ಮೆಸೇಜ್ ಏನೆಂಬುದನ್ನು ಹೇಳಿ, ನಾನು ವಾಪಸ್ ಕರೆ ಮಾಡುತ್ತೇನೆ. ಒಂದು ವೇಳೆ ನಾನು ವಾಪಸ್ ಫೋನ್ ಮಾಡದಿದ್ದರೆ, ನಾನು ಜೀವನದಲ್ಲಿ ಮಾಡಿರುವ ಬದಲಾವಣೆಗಳಲ್ಲಿ ನೀವೂ ಒಬ್ಬರು ಎಂದು ಭಾವಿಸಿ". ಎರಡು-ಮೂರು ದಿನಗಳಾದರೂ ಅವರ ಗೆಳೆಯನ ಫೋನ್ ಕರೆ ಬರಲಿಲ್ಲ. ಆತ ಜೀವನದಲ್ಲಿ ಮಾಡಿಕೊಂಡ ಬದಲಾವಣೆಗಳಲ್ಲಿ ತಾನೂ ಸೇರಿದ್ದೇನೆಂಬುದು ಅವರಿಗೆ ಮನವರಿಕೆಯಾಯಿತು.
ಎಂಥ ಜನ ಮಾರ್ರೇ
ಖ್ಯಾತ ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್ಯ ಅವರು ಅನುಭವಿಸಿದ ಈ ಸಮಸ್ಯೆ ನಿಮ್ಮದೂ ಆಗಿರಬಹುದು. ಅದನ್ನು ಅವರೇ ಹೇಳ್ತಾರೆ ಕೇಳಿ. “ಜ್ವರ ಬಂದು ಎರಡು ದಿನ ಮಲಗಿದ್ದೆ. ವಿಷಯ ಗೊತ್ತಾಗಿ ಫೋನ್ ಮಾಡಿದ ಆತ್ಮೀಯರೆಲ್ಲರೂ ಜ್ವರ ಹೇಗಿದೆ ಅಂತ ಕೇಳಿದರು. ಅಪ್ಪಿತಪ್ಪಿಯೂ ಈಗ ನೀನು ಹೇಗಿದ್ದೀಯಾ ಅಂತ ಕೇಳಲಿಲ್ಲ. ಇವರಿಗೆಲ್ಲ ನನಗಿಂತಲೂ ಜ್ವರವೇ ಮುಖ್ಯವಾಗಿ ಹೋಯ್ತ, ಎಂಥ ಜನ ಮಾರ್ರೇ..!
ಪತ್ನಿ ಮತ್ತು ಅವಳ ಪ್ರತಿಕ್ರಿಯೆ
ಖ್ಯಾತ ಉದ್ಯಮಿ ಹರ್ಷ್ ಗೋಯಂಕಾ ಕೆಲ ವರ್ಷಗಳ ಹಿಂದೆ ಮಾಡಿದ್ದ ಒಂದು ಟ್ವೀಟ್ ನೆನಪಾಗುತ್ತಿದೆ. ಅದರಲ್ಲಿ ಅವರು ಒಂದು ಹಾಸ್ಯ ಪ್ರಸಂಗವನ್ನು ಹಂಚಿಕೊಂಡಿದ್ದರು. ನಾನು ನನ್ನ ಹೆಂಡತಿಗೆ ಹೇಳಿದೆ- You are negetive. ಅಷ್ಟಕ್ಕೇ ಅವಳ ಕೋಪ ನೆತ್ತಿಗೇರಿಬಿಟ್ಟಿತು. ಎಲ್ಲಿತ್ತೋ ಕೋಪ... ‘ನೀವೇನು ಬಹಳ ಪಾಸಿಟಿವ್ ವ್ಯಕ್ತಿಯಾ? ನೀವು ಪರಮ ಸ್ವಾರ್ಥಿ, ಮಹಾ ಕಂಜೂಸು, ಸಂವೇದನಾರಹಿತ ವ್ಯಕ್ತಿ, ಕಲ್ಲು ಹೃದಯಿ, ನಿಮ್ಮಂಥ ವ್ಯಕ್ತಿ ಜತೆ ನಾನು ಯಾಕೆ ಸಂಸಾರ ಮಾಡುತ್ತಿದ್ದೆನೋ ಗೊತ್ತಿಲ್ಲ, ನಾನು ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು, ನಿಮ್ಮ ಜತೆ ಇರುವುದಕ್ಕಿಂತ ಹಾಳುಬಾವಿ ಹಾರಿ ಸಾಯೋದು ವಾಸಿ.
ನಿಮ್ಮಂಥ ವ್ಯಕ್ತಿ ಜತೆ ಜೀವನ ಸಾಗಿಸುತ್ತಿದ್ದೇನಲ್ಲ.. ನಾನು ಹಿಂದಿನ ಜನ್ಮದಲ್ಲಿ ಅದ್ಯಾವ ಪಾಪ ಮಾಡಿದ್ದೆನೋ ಗೊತ್ತಿಲ್ಲ...ನನ್ನ ಕರ್ಮ..ಕರ್ಮ’ ಎಂದು ಏರಿದ ಧ್ವನಿಯಲ್ಲಿ ಕಿರುಚಿದಳು.ನನಗೆ ಮಧ್ಯೆ ಬಾಯಿ ಹಾಕಲು ಅವಕಾಶ ಕೊಡದೇ ಒಂದೇ ಸಮನೆ ಕೋಪ-ತಾಪ ಪ್ರದರ್ಶಿಸಿಬಿಟ್ಟಳು. ಅಷ್ಟಕ್ಕೂ ನಾನು ಹೇಳಬೇಕೆಂದಿದ್ದುದು ‘ನಿನ್ನ ಕೋವಿಡ್ ಟೆಸ್ಟ್ರಿ ಪೋರ್ಟ್ ನೆಗೆಟಿವ್ ಬಂದಿದೆ ’ ಅಂತ. ಅಷ್ಟರೊಳಗೆ ಇಷ್ಟೆಲ್ಲ ಭಾನಗಡಿ ಆಗಿ, ರಂಬಾರುಡಿ ಜರುಗಿಹೋಯಿತು.
ಖುಷಿಯಾಗಿರುವುದು ಹೇಗೆ?
ದಲೈ ಲಾಮಾ ಅವರು ಬರೆದ ‘ಖುಷಿಯಾಗಿರುವುದು ಹೇಗೆ?’ ಎಂಬ ಪುಟ್ಟ ಬರಹವನ್ನು ಓದುತ್ತಿದ್ದೆ. ಕೆಲವೊಮ್ಮೆ ಸಫಲತೆಯ ಖುಷಿಯ ಅನುಭೂತಿ ತಾತ್ಕಾಲಿಕವಾಗಿರುತ್ತದೆ, ಆದರೆ ಯಾವುದಾದರೂ ದುಃಖದ ವಿಚಾರ ಮನಸಿನಲ್ಲಿ ತುಂಬಾ ದಿನಗಳ ತನಕ ನಿರಾಶಾದಾಯಕ ಭಾವವನ್ನು ಮೂಡಿಸಿ ರುತ್ತದೆ. ಹೀಗಾದಾಗ ನಮ್ಮ ಖುಷಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಹೋಗುತ್ತದೆ. ಮನೋ ವಿಜ್ಞಾನಿಗಳ ಪ್ರಕಾರ, ಈ ಪ್ರಕ್ರಿಯೆಗೆ ‘ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ಥಿತಿ’ ಎನ್ನಲಾಗುತ್ತದೆ. ಈ ಸಿದ್ಧಾಂತ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹಾಸುಹೊಕ್ಕಾಗಿರುತ್ತದೆ.
ವೇತನದಲ್ಲಿ ಹೆಚ್ಚಳವಾದಾಗ, ಹೊಸ ಕಾರು ಖರೀದಿಸಿದಾಗ, ಸ್ನೇಹಿತರ ಹೊಗಳಿಕೆಯ ಮಾತುಗಳು ಇವೆಲ್ಲವೂ ನಮಗೆ ಕೆಲ ದಿನಗಳ ತನಕ ಖುಷಿಯನ್ನು ಕೊಡುತ್ತಲೇ ಇರುತ್ತವೆ. ಇವೆಲ್ಲವೂ ತಾತ್ಕಾಲಿಕ. ಮತ್ತೆ ಕೆಲದಿನಗಳಲ್ಲಿ ನಾವು ಖುಷಿಯ ಸಾಮಾನ್ಯ ಸ್ಥಿತಿಗೆ ಮರಳುತ್ತೇವೆ. ಅದೇ ರೀತಿ ಮಿತ್ರನೊಬ್ಬ ನಮ್ಮ ಬಗ್ಗೆ ಕಟಕಿಯಾಡಿದಾಗ, ರಿಪೇರಿಗೆ ಹೋಗಿ ಬಂದ ಕಾರು ಕೈಕೊಟ್ಟಾಗ, ಹೀಗೆ ಸಣ್ಣಪುಟ್ಟ ಸಂಗತಿಗಳು ನಮ್ಮನ್ನು ಮತ್ತೆ ದುಃಖಕ್ಕೆ ತಳ್ಳುತ್ತವೆ.
ಆದರೆ ಕೆಲವೇ ದಿನಗಳಲ್ಲಿ ಅವೆಲ್ಲವೂ ತೆರೆಮರೆಗೆ ಸರಿದು ಮತ್ತೆ ಖುಷಿಯ ಸಹಜಸ್ಥಿತಿಗೆ ಬರುತ್ತೇವೆ. ಬಾಹ್ಯ ಪ್ರಪಂಚದ ಇಂಥ ಅನೇಕ ಘಟನೆಗಳ ಹೊರತಾಗಿಯೂ ನಾವು ಸ್ವಂತ ಖುಷಿಯ ಅನುಭೂತಿಗೆ ಮರಳಿ ಬರುವುದು ಸಾಧ್ಯವಿದೆ. ಹಾಗಾದರೆ ಅದನ್ನು ನಿರ್ಧರಿಸುವ ಸಂಗತಿ ಏನು? ಅಂಥ ಪ್ರತಿಕೂಲ ಸಂಗತಿಗಳಿದ್ದಾಗಲೂ ನಮ್ಮ ಖುಷಿಯ ಸ್ಥಿತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳು ವುದು ಹೇಗೆ? ನಮಗೆ ಪ್ರಕೃತಿದತ್ತವಾಗಿ ದಕ್ಕಿರುವ ಖುಷಿಯ ಜತೆಗೆ ನಮ್ಮ ಮನಸ್ಸಿನಲ್ಲಿ ನಾವೇ ಸ್ಥಾಪನೆ ಮಾಡಿಕೊಳ್ಳಬಹುದಾದ ಕೆಲವು ದಿಟ್ಟ ನಿರ್ಧಾರಗಳಿಂದ ನಮ್ಮ ಖುಷಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದು ಸಾಧ್ಯವಿದೆ.
ಪ್ರತಿ ಬಾರಿಯೂ ಸಣ್ಣಪುಟ್ಟ ಗೆಲುವುಗಳ ಕಾರಣದಿಂದ ಸಿಗುವ ಖುಷಿ ನಮ್ಮ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ. ಸುಖ ಅಥವಾ ದುಃಖ ಅದನ್ನು ಸ್ವೀಕರಿಸುವುದು ಮತ್ತು ಮನಸ್ಸನ್ನು ಸದಾ ಉಲ್ಲಸಿತವಾಗಿ ಇಟ್ಟುಕೊಳ್ಳುವುದು, ಸ್ಥಿತಪ್ರಜ್ಞ ಮನಃಸ್ಥಿತಿಯನ್ನು ಕಾಯ್ದುಕೊಳ್ಳುವುದು ಇವೆಲ್ಲವೂ ನಮ್ಮೊಳಗಿನ ವಿಶೇಷ ತಾಕತ್ತು.