Roopa Gururaj Column: ಹಸುವಿನ ಶಾಪಕ್ಕೆ ಈಡಾದ ಮನುಷ್ಯನ ಮಕ್ಕಳು
ಆಕೆ ಛೀ ಛೀ ಇಷ್ಟು ಗಲೀಜಾದ ನಿನ್ನ ಕರುವನ್ನು ನಾನು ಮುಟ್ಟಲಾರೆ ನನಗೆ ಅಸಹ್ಯ ಎಂದು ನಿರಾಕರಿಸಿದಳು. ಅಸಹಾಯಕವಾದ ಹಸುವಿಗೆ ಕೋಪ ಬಂದಿತು. ‘ನೀವು ಮನುಷ್ಯರು ಉಪಯೋಗ ಸಿಗುವ ತನಕ ಬಳಸಿಕೊಳ್ಳುತ್ತೀರಿ, ನಿನ್ನ ಮಗು ಹುಟ್ಟಿದ ಕೂಡಲೇ ನಡೆಯುತ್ತದೆ ಅದಕ್ಕೆ ನಿನಗೆ ಇಷ್ಟು ಅಹಂಕಾರ. ನನ್ನ ಕರು ಹುಟ್ಟಿದ ಎಂಟು ತಿಂಗಳಿಗೆ ತನ್ನ ಕಾಲ ಮೇಲೆ ನಿಲ್ಲುತ್ತದೆ


ಒಂದೊಳ್ಳೆ ಮಾತು
rgururaj628@gmail.com
ಪೂರ್ವ ಯುಗದಲ್ಲಿ ಒಬ್ಬ, ತನ್ನ ಪತ್ನಿ ಮಕ್ಕಳ ಜೊತೆ ನೆಲೆಸಿದ್ದನು. ಮನೆಯಲ್ಲಿ ಒಂದು ಹಸು ಇದ್ದು ಅದು ಕೊಡುವ ಹಾಲಿನಿಂದ ಮೊಸರು, ತುಪ್ಪ ಬೆಣ್ಣೆ, ಎಲ್ಲಾ ಕುಟುಂಬಕ್ಕಾಗುತ್ತಿತ್ತು. ಹಸು ಹಾಲು ಕೊಡುವುದು ನಿಲ್ಲಿಸಿದ ಕೂಡಲೇ ಮನೆಯವನು ಅದನ್ನು ಕಾಡಿಗೆ ದೂಡಿದನು. ಕಾಡಿಗೆ ಬಂದ ಗೋವು ಹಸಿವೆ, ಬಾಯಾರಿಕೆಯಿಂದ ಬಳಲಿತು, ಹಾಗೇ ಅಲೆಯುತ್ತಾ ಒಂದು ಶಿವನ ದೇವ ಸ್ಥಾನಕ್ಕೆ ಹೋಯಿತು. ‘ಈ ಸ್ವಾರ್ಥಿ ಮನುಷ್ಯ ನನ್ನಿಂದ ಉಪಯೋಗವಾಗುವವರೆಗೆ ಬಳಸಿಕೊಂಡು ಈಗ ನನ್ನನ್ನು ಕಾಡಿಗೆ ದೂಡಿದ್ದಾನೆ, ನನಗೆ ನೀನೇ ದಿಕ್ಕು’ ಎಂದು ಶಿವನ ಮುಂದೆ ನಿಂತು ಪ್ರಾರ್ಥಿ ಸಿತು. ಭಗವಂತನ ಅಗೋಚರ ಶಕ್ತಿಯ ಪ್ರೇರಣೆಯಿಂದ ದೂರದ ಕಾಡಿಗೆ ಹೋಗಿ ನೆಲೆ ಕಂಡು ಕೊಂಡಿತು.
ಒಂದು ದಿನ ಕಟ್ಟಿಗೆ ತರಲು ಒಬ್ಬ ಮಹಿಳೆ ಬಂದಳು. ಹಸುವನ್ನು ನೋಡಿದಳು. ಹಸು ಗರ್ಭಿಣಿ ಯಾಗಿತ್ತು. ಕೆಲವೇ ದಿನಗಳಲ್ಲಿ ಕರು ಹಾಕುತ್ತದೆ. ನಾನು ಹಸುವನ್ನು ಮನೆಗೆ ಕರೆದುಕೊಂಡು ಹೋದರೆ ಮನೆಗೆ ಬೇಕಾದಷ್ಟು ಹಾಲು ಸಿಗುತ್ತದೆ ಮತ್ತು ಮಾರಿ ಹಣ ಸಂಪಾದನೆ ಮಾಡಬಹುದು ಎಂದು ಯೋಚಿಸಿ, ಅದನ್ನು ಕರೆದೊಯ್ಯಲು ತನ್ನ ಗಂಡನನ್ನು ಕರೆತರಲು ಹೋದಳು. ಆದರೆ ಅವಳು ಗಂಡನೊಂದಿಗೆ ಬರುವ ಹೊತ್ತಿಗೆ ಆ ಹಸು ಅಲ್ಲಿ ಇರಲಿಲ್ಲ ಬೇರೆ ಕಡೆ ಹೋಗಿತ್ತು.
ಇದನ್ನೂ ಓದಿ: Roopa Gururaj Column: ಹಣ ಆಸ್ತಿ ಅಂತಸ್ತನ್ನು ಅವಲಂಬಿಸಿದ ಸಂಬಂಧಗಳು
ಹಸು ತನ್ನ ಕರು ಹುಟ್ಟುವ ಸಮಯಕ್ಕೆ ಸುರಕ್ಷಿತ ಜಾಗಕ್ಕೆ ತೆರಳಿ ಅಲ್ಲಿ ಕರು ಹಾಕಿತು. ಅದು ಕರು ಹಾಕಿದ ಸ್ವಲ್ಪ ಹೊತ್ತಿಗೆ, ಅದೇ ಮಹಿಳೆ ಕಟ್ಟಿಗೆ ತರಲು ಕಾಡಿಗೆ ಬಂದಳು, ಹಸು ಕರು ಹಾಕಿರುವು ದನ್ನು ನೋಡಿದಳು. ಇದು ಈ ಹಿಂದೆ ನಾನು ನೋಡಿದ ಹಸು. ಈಗ ಕರು ಹಾಕಿದೆ ಹಸು ಮತ್ತು ಕರುವನ್ನು ಮನೆಗೆ ಕರೆದೊಯ್ಯುವೆ ಎಂದು ಸಂತೋಷದಿಂದ ಅಂದುಕೊಂಡು ತನ್ನ ಗಂಡನನ್ನು ಕರೆ ತರಲು ಹೊರಟಳು.
ಹಾಗೆ ಹೊರಟಿದ್ದ ಮಹಿಳೆಗೆ ಹಸು ಹೇಳಿತು. ‘ಅಕ್ಕ ನನಗೆ ಸ್ವಲ್ಪ ಸಹಾಯ ಮಾಡು. ಈಗ ತಾನೆ ಹುಟ್ಟಿದ ನನ್ನ ಕರು ಕೆಳಗೆ ಬಿದ್ದು ಮಣ್ಣುಮೆತ್ತಿ ಗಲೀಜಾಗಿದೆ, ಅದು ಕಾಲೂರಿ ನಡೆಯಲು ಎಂಟು ತಿಂಗಳು ಬೇಕು. ಕೆಳಗೆ ಬಿದ್ದ ನನ್ನ ಕರುವನ್ನು ಎತ್ತಿ ನನ್ನ ಬೆನ್ನ ಮೇಲೆ ಹಾಕು, ನಾನು ಸುರಕ್ಷಿತ ಜಾಗಕ್ಕೆ ಕರೆದುಕೊಂಡು ಹೋಗಿ ಅದಕ್ಕೆ ನಡೆಯಲು ಬರುವವರೆಗೆ ನೋಡಿಕೊಳ್ಳಬೇಕು’ ಎಂದಿತು.
ಆದರೆ ಮಹಿಳೆ ಕರುವನ್ನು ನೋಡಿದಳು. ಆಗಿನ್ನೂ ಹುಟ್ಟಿದ ಅದರ ಮೈಯೆಲ್ಲಾ ಗಲೀಜಾಗಿತ್ತು. ಆಕೆ ಛೀ ಛೀ ಇಷ್ಟು ಗಲೀಜಾದ ನಿನ್ನ ಕರುವನ್ನು ನಾನು ಮುಟ್ಟಲಾರೆ ನನಗೆ ಅಸಹ್ಯ ಎಂದು ನಿರಾಕರಿಸಿದಳು. ಅಸಹಾಯಕವಾದ ಹಸುವಿಗೆ ಕೋಪ ಬಂದಿತು. ‘ನೀವು ಮನುಷ್ಯರು ಉಪಯೋಗ ಸಿಗುವ ತನಕ ಬಳಸಿಕೊಳ್ಳುತ್ತೀರಿ, ನಿನ್ನ ಮಗು ಹುಟ್ಟಿದ ಕೂಡಲೇ ನಡೆಯುತ್ತದೆ ಅದಕ್ಕೆ ನಿನಗೆ ಇಷ್ಟು ಅಹಂಕಾರ. ನನ್ನ ಕರು ಹುಟ್ಟಿದ ಎಂಟು ತಿಂಗಳಿಗೆ ತನ್ನ ಕಾಲ ಮೇಲೆ ನಿಲ್ಲುತ್ತದೆ.
ಆದರೆ ಈಗ ನಾನು ಶಾಪ ಕೊಡುವೆ, ಇನ್ನು ಮುಂದೆ ನಿಮಗೆ ಹುಟ್ಟಿದ ಮಗು ಎದ್ದು ನಿಲ್ಲಲು ಎಂಟು ತಿಂಗಳಾಗುತ್ತದೆ, ಇಲ್ಲಿಯ ತನಕ ಹುಟ್ಟಿದ ನನ್ನ ಕರುಗಳು ನಿಲ್ಲಲು ಎಂಟು ತಿಂಗಳು ಬೇಕಾಗಿತ್ತು. ಇನ್ನು ಮುಂದೆ ಪ್ರಾಣಿ ಸಂಕುಲದಲ್ಲಿ ಮರಿ ಮತ್ತು ಕರುಗಳು ಹುಟ್ಟಿದ ಕೂಡಲೇ ಎದ್ದು ತನ್ನ ಕಾಲ ಮೇಲೆ ತಾನೇ ನಿಲ್ಲುತ್ತದೆ’ ಎಂದು ಹೇಳಿ ಅವಳನ್ನು ಓಡಿಸಿ ಬಿಟ್ಟಿತು.
ಈ ರೀತಿ ಗೋವು ಮಹಿಳೆಗೆ ಕೊಟ್ಟ ಶಾಪದಿಂದಾಗಿ ಮನುಷ್ಯರಿಗೆ ಹುಟ್ಟಿದ ಮಕ್ಕಳು ಎದ್ದು ನಿಲ್ಲಲು 8-10 ತಿಂಗಳು ಬೇಕಾಗುತ್ತದೆ. ಪ್ರಾಣಿಗಳಿಗೆ ಹುಟ್ಟಿದ ಮರಿ- ಕರುಗಳು, ಕೆಲವೇ ಸಮಯದಲ್ಲಿ ಎದ್ದು ನಿಂತು ಓಡಾಡುತ್ತವೆ. ಕಥೆ ಕಾಲ್ಪನಿಕವಾದರೂ, ನಾವು ಮನುಷ್ಯರು ನಡೆದುಕೊಳ್ಳುವುದು ಹೀಗೆಯೇ ಅಲ್ಲವೇ? ಇನ್ನಾದರೂ ಸ್ವಾರ್ಥ ಬಿಟ್ಟು, ಹೆಸರಿಗೆ ತಕ್ಕಂತೆ ಮನುಷ್ಯರಾಗಿ ಬದುಕೋಣ. ಲಾಭಕ್ಕಾಗಿ ಅಲ್ಲದೆ ಆತ್ಮ ಸಂತೃಪ್ತಿಗಾಗಿ ನಾಲ್ಕು ಜನರಿಗೆ ನೆರವಾಗೋಣ.