World No Tobacco Day: ತಂಬಾಕಿನ ಚಟದಿಂದ ಮುಕ್ತಿ ಬೇಕೇ? ಆಯುರ್ವೇದದಲ್ಲಿದೆ ಶಾಶ್ವತ ಪರಿಹಾರ
ಧೂಮಪಾನ ಅಥವಾ ತಂಬಾಕು ಚಟಕ್ಕೆ ಅಂಟಿಕೊಂಡಿದ್ದರೆ ಅದರಿಂದ ಮುಕ್ತಿ ಪಡೆಯುವುದು ಅಷ್ಟು ಸುಲಭವಲ್ಲ. ಹೆಚ್ಚಿನವರು ಇದರಲ್ಲಿ ಪ್ರಯತ್ನಿಸಿ ಸೋಲುತ್ತಾರೆ. ಇದಕ್ಕೆ ಕಾರಣ ಪ್ರಯತ್ನದ ಕೊರತೆಯಲ್ಲ. ದೇಹದ ಬೆಂಬಲ ದೊರೆಯದೇ ಇರುವುದು. ಆದರೆ ಆಯುರ್ವೇದವು ಅತ್ಯಂತ ಸುಲಭ ವಿಧಾನಗಳ ಮೂಲಕ ತಂಬಾಕಿನ ಚಟದಿಂದ ಮುಕ್ತಿ ದೊರಕಿಸಿಕೊಡುತ್ತದೆ. ಅದು ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.
ಸಂಗ್ರಹ ಚಿತ್ರ -
- ಡಾ. ಮಹಾದೇವನ್,
ವೈದ್ಯಕೀಯ ನಿರ್ದೇಶಕರು, ಹ್ಯಾಪಿಯೆಸ್ಟ್ ಆಯುರ್ವೇದ
ಸಣ್ಣ ವಯಸ್ಸಿನಲ್ಲಿ ಯಾವುದೋ ಕಾರಣಕ್ಕಾಗಿ ಅಂಟಿಕೊಂಡ (tobacco addiction) ಧೂಮಪಾನ ಅಥವಾ ತಂಬಾಕು ಸೇವನೆ ಚಟ (World No Tobacco Day) ಬಿಡಲು ಕೇವಲ ದೃಢ ಸಂಕಲ್ಪ ಸಾಕಾಗುವುದಿಲ್ಲ. ಯಾಕೆಂದರೆ ಇದನ್ನು ಬಿಟ್ಟ ಕೆಲವು ಗಂಟೆಗಳ ಬಳಿಕ ಹಲವು ಸಮಸ್ಯೆಗಳು ಗೋಚರವಾಗ ತೊಡಗುತ್ತದೆ. ಕಾರಣವಿಲ್ಲದೆ ಸಿಟ್ಟು, ಸುಮ್ಮನೆ ಹುಡುಕಾಡುವುದು.. ಸೇರಿದಂತೆ ಹಲವು ಸಮಸ್ಯೆಗಳು ಅರಿವಿಲ್ಲದೆ ಹುಟ್ಟಿಕೊಳ್ಳುತ್ತದೆ. ನಿಕೋಟಿನ್ ಅಂಶವು ನರಮಂಡಲ, ಜೀರ್ಣಾಂಗವ್ಯೂಹ, ನಿದ್ರೆ ಮತ್ತು ಮನಸ್ಥಿತಿಯ ಮೇಲೆ ಎಷ್ಟು ಗಾಢ ಪರಿಣಾಮ ಬೀರುತ್ತದೆ ಎಂದರೆ ಇದನ್ನು ಬಿಡಬೇಕು ಎನ್ನುವ ಪ್ರಯತ್ನದಲ್ಲಿ ಅನೇಕರು ಸೋಲುತ್ತಾರೆ. ಇದಕ್ಕೆ ಪ್ರಯತ್ನದ ಕೊರತೆ ಕಾರಣವಲ್ಲ ಬದಲಾವಣೆಯ ಸಮಯದಲ್ಲಿ ದೇಹಕ್ಕೆ (Healthy life) ಸಿಗಬೇಕಾದ ಬೆಂಬಲ ಸರಿಯಾಗಿ ದೊರೆಯದಿರುವುದಾಗಿದೆ.
ಈ ನಿಟ್ಟಿನಲ್ಲಿ ಆಯುರ್ವೇದ ಸಾಕಷ್ಟು ಸಹಾಯ ಮಾಡಬಲ್ಲದು. ಇದಕ್ಕಾಗಿ ಮಾನಸಿಕ ಸಮಾಲೋಚನೆ ಮತ್ತು ಯೋಗದ ಸಂಯೋಜನೆ ಅತ್ಯಗತ್ಯವಾಗಿದೆ. ಇದು ಯಾವುದೇ ತಕ್ಷಣದ ‘ಡಿಟಾಕ್ಸ್’ ಅಥವಾ ಹರ್ಬಲ್ ಶಾರ್ಟ್ಕಟ್ ಅಲ್ಲ. ದೀರ್ಘಕಾಲದ ತಂಬಾಕು ಸೇವನೆಯಿಂದ ದೇಹಕ್ಕೆ ಉಂಟಾಗಿರುವ ಹಾನಿಯನ್ನು ಅಂದರೆ ಶ್ವಾಸಕೋಶದ ದಾರಿಗಳು ಒಣಗಿರುವುದು, ಜೀರ್ಣಶಕ್ತಿ ಕುಂದಿರುವುದು ಮತ್ತು ದೇಹದ ರೋಗನಿರೋಧಕ ಶಕ್ತಿ ಹಾಗೂ ಜೀವಕಳೆಯನ್ನು ಹಂತ ಹಂತವಾಗಿ ಸರಿಪಡಿಸುವ ವ್ಯವಸ್ಥಿತ ಚಿಕಿತ್ಸಾ ಕ್ರಮವಾಗಿದೆ.
ಮಗು ಆಗುವುದೋ ? ಅಥವಾ ಮಗು ಮಾಡಿಕೊಳ್ಳುವುದೇ ?
ಆಯುರ್ವೇದದ ಪ್ರಕಾರ ತಂಬಾಕು ಮುಖ್ಯವಾಗಿ ‘ವಾತ’ ಮತ್ತು ‘ಪಿತ್ತ’ ದೋಷಗಳನ್ನು ಹೆಚ್ಚಿಸುತ್ತದೆ. ವರ್ಷಗಳ ಕಾಲ ತಂಬಾಕು ಸೇವಿಸುವುದರಿಂದ ಅದು ಶ್ವಾಸನಾಳಗಳ ಮತ್ತು ಮಾನಸಿಕ ಮಾರ್ಗಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಿರುತ್ತದೆ. ಇದು ದೇಹದ ಶಕ್ತಿಯನ್ನು ಕುಂದಿಸುತ್ತದೆ. ಇದರ ಪರಿಣಾಮವೇ ತಂಬಾಕು ಬಿಟ್ಟಾಗ ಅತಿಯಾದ ಆಯಾಸ, ಆತಂಕ ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಾದಂತೆ ಭಾಸವಾಗುವ ಲಕ್ಷಣಗಳು ಕಂಡು ಬರುತ್ತದೆ.
ತಂಬಾಕು ಬಿಟ್ಟ ಮೊದಲ ವಾರದಿಂದ ನಾಲ್ಕು ವಾರಗಳು ಅಂದರೆ ಸುಮಾರು ಒಂದು ತಿಂಗಳು ಅತ್ಯಂತ ಕಷ್ಟಕರವಾದ ಸಮಯ. ಈ ಬಗ್ಗೆ ನಾವು ಪ್ರಾಮಾಣಿಕವಾಗಿರಬೇಕು. ಈ ಅವಧಿಯಲ್ಲಿ ತಂಬಾಕು ಬೇಕೇ ಬೇಕು ಎನ್ನುವ ಹಂಬಲ ತುತ್ತ ತುದಿಯಲ್ಲಿರುತ್ತದೆ. ನಿದ್ರೆ ಸರಿಯಾಗುವುದಿಲ್ಲ, ಜೀರ್ಣಕ್ರಿಯೆ ಏರುಪೇರಾಗುತ್ತದೆ ಮತ್ತು ಕ್ಷಣಕ್ಷಣಕ್ಕೂ ಮೂಡ್ ಬದಲಾಗುತ್ತದೆ. ಈ ಹಂತದಲ್ಲಿ ‘ಬಿಹೇವಿಯರಲ್ ಕೌನ್ಸೆಲಿಂಗ್’ (ನಡವಳಿಕೆಯ ಸಮಾಲೋಚನೆ) ತುಂಬಾ ಸಹಾಯ ಮಾಡುತ್ತದೆ. ಯಾಕೆಂದರೆ ತಂಬಾಕಿನ ಮೇಲೆ ದೈಹಿಕ ಅವಲಂಬನೆಯಷ್ಟೇ ಮಾನಸಿಕ ಅವಲಂಬನೆಯೂ ತೀವ್ರವಾಗಿರುತ್ತದೆ.
ಆಯುರ್ವೇದವು ಮಾನಸಿಕ ಚಿಕಿತ್ಸೆಯ ಜೊತೆಜೊತೆಯಾಗಿಯೇ ಕೆಲಸ ಮಾಡುತ್ತದೆ. ಇಲ್ಲಿ ಕೆಲವು ಸಾಂಪ್ರದಾಯಿಕ ಗಿಡಮೂಲಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ.
ಶ್ವಾಸಕೋಶದ ಆರೋಗ್ಯಕ್ಕೆ ತುಳಸಿ. ಇದು ಶ್ವಾಸನಾಳದ ಕಿರಿಕಿರಿಯನ್ನು ಕಡಿಮೆ ಮಾಡಿ ಶ್ವಾಸಕೋಶವನ್ನು ಸ್ವಚ್ಛಗೊಳಿಸುತ್ತದೆ. ಹಿಪ್ಪಲಿ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಬಲಪಡಿಸುತ್ತದೆ. ಆಡು ಸೋಗೆ ಕಫವನ್ನು ಕರಗಿಸಿ ಉಸಿರಾಟದ ಹಾದಿಯನ್ನು ಸುಗಮಗೊಳಿಸುತ್ತದೆ.
ಜೀರ್ಣಕ್ರಿಯೆ ಮತ್ತು ಕಲ್ಮಶ ನಿವಾರಣೆಗೆ ಅಳಲೆಕಾಯಿ (ಹರೀತಕಿ). ತಂಬಾಕು ಬಿಡುವಾಗ ಹೊಟ್ಟೆಯ ಆರೋಗ್ಯ ಕೆಡುವುದು ಸಹಜ. ಇದನ್ನು ನಿಯಂತ್ರಿಸಲು ಅಳಲೆಕಾಯಿ ಸಹಾಯ ಮಾಡುತ್ತದೆ.
ನರಮಂಡಲ ಮತ್ತು ಅಂಗಾಂಶಗಳ ಪುನಶ್ಚೇತನಕ್ಕೆ ನೆಲ್ಲಿಕಾಯಿ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿದ್ದು ಹಾನಿಗೊಳಗಾದ ಅಂಗಾಂಶಗಳನ್ನು ಪುನರ್ನಿರ್ಮಿಸಲು ಸಹಾಯ ಮಾಡುತ್ತದೆ. ಒಣದ್ರಾಕ್ಷಿಯು ದೇಹದ ಶುಷ್ಕತೆಯನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತಗೊಳಿಸುತ್ತದೆ.
ಇದರೊಂದಿಗೆ ದೈನಂದಿನ ಸಣ್ಣಪುಟ್ಟ ಅಭ್ಯಾಸಗಳೂ ಇಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲವು. ಸೋಂಪಿನ ಕಾಳು ಅಥವಾ ಲವಂಗವನ್ನು ಅಗಿಯುವುದರಿಂದ ಏನನ್ನಾದರೂ ತಿನ್ನುತ್ತಲೇ ಇರಬೇಕೆನ್ನುವ ಬಯಕೆಯನ್ನು ನಿಯಂತ್ರಿಸಬಹುದು. ಉಗುರುಬೆಚ್ಚಗಿನ ನೀರಿಗೆ ನಿಂಬೆರಸ ಮತ್ತು ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಹೆಚ್ಚುತ್ತದೆ ಹಾಗೂ ನಾಲಿಗೆಯ ಮೇಲಿರುವ ಕಹಿ ರುಚಿ ದೂರವಾಗುತ್ತದೆ. ಈ ಅವಧಿಯಲ್ಲಿ ಉಸಿರಾಟದ ಕ್ರಿಯೆಗಳು ಎರಡು ರೀತಿಯಲ್ಲಿ ಕೆಲಸ ಮಾಡುತ್ತವೆ.
ಅನುಲೋಮ-ವಿಲೋಮ, ಕಪಾಲಭಾತಿ ಮತ್ತು ಭಸ್ತ್ರಿಕಾ ಪ್ರಾಣಾಯಾಮಗಳು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುವ ಜೊತೆಗೆ ನರಮಂಡಲವನ್ನು ಶಾಂತಗೊಳಿಸುತ್ತವೆ. ಯೋಗಾಸನಗಳಾದ ಭುಜಂಗಾಸನ (ಎದೆಯ ಭಾಗವನ್ನು ವಿಸ್ತರಿಸಲು), ಸೇತುಬಂಧಾಸನ (ಡಯಾಫ್ರಮ್ ಬಲಪಡಿಸಲು) ಮತ್ತು ಬಾಲಾಸನ (ದೇಹಕ್ಕೆ ವಿಶ್ರಾಂತಿ ನೀಡಲು) ದೇಹಕ್ಕೆ ಆಯಾಸವಾಗದಂತೆ ಬೆಂಬಲ ನೀಡುತ್ತವೆ. ಆದರೆ ಅತಿಯಾದ ಆತಂಕ ಅಥವಾ ನಿದ್ರಾಹೀನತೆ ಇರುವವರು ತೀವ್ರವಾದ ಪ್ರಾಣಾಯಾಮಗಳನ್ನು ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.
ಆಯುರ್ವೇದದಲ್ಲಿ 'ಡಿಟಾಕ್ಸ್' ಎಂದರೇನು?
ಇತ್ತೀಚೆಗೆ 'ಡಿಟಾಕ್ಸ್' ಎಂಬ ಪದದ ಸುತ್ತ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಆಯುರ್ವೇದವು ಇದಕ್ಕೆ ಸ್ಪಷ್ಟವಾದ ಗೆರೆಯನ್ನು ಎಳೆದಿದೆ.
ಆಯುರ್ವೇದದಲ್ಲಿ ನಿಜವಾದ ಡಿಟಾಕ್ಸ್ ಎಂದರೆ ಅದು 'ಶೋಧನ ಚಿಕಿತ್ಸೆ'. ಇದು ದೇಹದಲ್ಲಿ ಸಂಗ್ರಹವಾಗಿರುವ ವಿಷಕಾರಿ ಅಂಶಗಳನ್ನು ವ್ಯವಸ್ಥಿತವಾಗಿ ಹೊರಹಾಕಿ, ದೋಷಗಳನ್ನು ಸಮತೋಲನಕ್ಕೆ ತರುವ ಪ್ರಕ್ರಿಯೆಯಾಗಿದೆ.
ನಾವು ಸಾಮಾನ್ಯವಾಗಿ ಬಳಸುವ ಹರ್ಬಲ್ ಟೀ, ಉಗುರು ಬೆಚ್ಚಗಿನ ನೀರು ಅಥವಾ ಆಹಾರದ ಬದಲಾವಣೆಗಳು 'ಶಮನ ಚಿಕಿತ್ಸೆಯ' ಅಡಿಯಲ್ಲಿ ಬರುತ್ತವೆ. ಇವು ಲಕ್ಷಣಗಳನ್ನು ತಾತ್ಕಾಲಿಕವಾಗಿ ಶಾಂತಗೊಳಿಸಿ, ಗುಣಮುಖವಾಗಲು ಸಹಕರಿಸುತ್ತವೆಯೇ ಹೊರತು ದೇಹದ ಒಳಗಿನ ಕಲ್ಮಶಗಳನ್ನು ಸಂಪೂರ್ಣವಾಗಿ ಹೊರಹಾಕಲು ಇಷ್ಟೇ ಸಾಕಾಗುವುದಿಲ್ಲ.
ತಂಬಾಕನ್ನು ಬಿಡುವ ಕೊನೆ ಹಂತದಲ್ಲಿ ಒಂದು ಹಂತಕ್ಕೆ ಬಂದು ಚೇತರಿಕೆ ನಿಂತು ಹೋದಂತೆ ಭಾಸವಾದಾಗ ಕೇವಲ 'ಶಮನ' ಸಾಲದು, 'ಶೋಧನ' ಚಿಕಿತ್ಸೆಯ ಅಗತ್ಯವಿದೆ ಎಂದು ಅರ್ಥ ಮಾಡಿಕೊಳ್ಳಬೇಕು.
ಅರ್ಹತೆ ಇರುವ ಆಯುರ್ವೇದ ಮೇಲ್ವಿಚಾರಣೆಯೊಂದಿಗೆ ಪ್ರಯತ್ನಿಸಿದಾಗ ಪಂಚಕರ್ಮವು ಹೆಚ್ಚಿನ ಪ್ರಮಾಣದ ಪ್ರಭಾವವನ್ನು ಬೀರುತ್ತದೆ.
ನಸ್ಯ: ಈ ಚಿಕಿತ್ಸೆಯು (ಔಷಧೀಯ ಮೂಗಿನ ಚಿಕಿತ್ಸೆ) ವರ್ಷಗಳ ಹೊಗೆ ಹಾನಿಯನ್ನು ತೆಗೆದುಕೊಂಡ ಉಸಿರಾಟದ ಮಾರ್ಗಗಳನ್ನು ತೆರವುಗೊಳಿಸುತ್ತದೆ.
ಬಸ್ತಿ: (ಔಷಧೀಯ ಎನಿಮಾಗಳು) ಉಲ್ಬಣಗೊಂಡ ವಾತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ತಂಬಾಕು ಬಿಟ್ಟ ನಂತರದ ಹಂತವನ್ನು ಮೀರಿದ ಆತಂಕ, ನಿದ್ರಾಹೀನತೆ ಮತ್ತು ನರಗಳ ಕಿರಿಕಿರಿ ಮುಂತಾದವುಗಳನ್ನು ಇದು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ.
ವಮನ: ದೀರ್ಘಕಾಲದ ಕಫ ಮತ್ತು ಕಫ ಪ್ರಕೃತಿ ಇರುವವರಲ್ಲಿ ವೈದ್ಯರ ಸಲಹೆಯ ಮೇರೆಗೆ ಇದನ್ನು ಪರಿಗಣಿಸಬಹುದು.
ಇವಾವುವೂ ಮನೆಯಲ್ಲಿ ಸುಮ್ಮನೆ ಮಾಡುವ ಚಿಕಿತ್ಸೆಗಳಲ್ಲ. ಇವುಗಳಿಗೆ ತರಬೇತಿ ಪಡೆದ ವೈದ್ಯರ ತಪಾಸಣೆ ಅತ್ಯಗತ್ಯ. ಇದಲ್ಲದೆ, ಶಾಸ್ತ್ರೀಯ ಗ್ರಂಥಗಳಲ್ಲಿ ‘ಧೂಪನ’ (Therapeutic dhoopana) ಚಿಕಿತ್ಸೆಯ ಉಲ್ಲೇಖವಿದೆ. ಇದು ಹರಳೆಣ್ಣೆ, ಅರಿಶಿನ ಅಥವಾ ತುಪ್ಪದ ಆಧಾರಿತ ಔಷಧೀಯ ಧೂಮವನ್ನು ಉಸಿರಾಡುವ ಪ್ರಕ್ರಿಯೆಯಾಗಿದ್ದು, ಶ್ವಾಸನಾಳದ ಕಫವನ್ನು ತೆಗೆಯಲು ಬಳಸಲಾಗುತ್ತದೆ. ಇದು ನೋಡಲು ಧೂಮಪಾನದಂತೆ ಕಂಡರೂ, ಧೂಮಪಾನಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ಇದನ್ನು ತಜ್ಞರ ಮಾರ್ಗದರ್ಶನದಲ್ಲೇ ಮಾಡಬೇಕು.
ಕಳೆದುಕೊಂಡಿದ್ದ ಚೈತನ್ಯ ಮರಳಿ ಪಡೆಯುವುದು ಹೇಗೆ?
ತಂಬಾಕು ಬಿಟ್ಟ ಮೊದಲ ಕೆಲವು ದಿನಗಳ ಕಷ್ಟವನ್ನು ನಿಭಾಯಿಸಿದ ನಂತರ ಚಿಕಿತ್ಸೆಯ ಉದ್ದೇಶ ಬದಲಾಗುತ್ತದೆ. ಆಗ ಲಕ್ಷಣಗಳನ್ನು ನಿರ್ವಹಿಸುವ ಬದಲು ದೇಹವನ್ನು 'ಪುನರ್ನಿರ್ಮಾಣ' ಮಾಡುವ ಕಡೆಗೆ ಗಮನ ನೀಡಲಾಗುತ್ತದೆ. ವರ್ಷಗಳ ಕಾಲ ನಿರಂತರ ತಂಬಾಕು ಸೇವನೆಯಿಂದಾಗಿ ಶ್ವಾಸಕೋಶದ ಅಂಗಾಂಶಗಳಿಗೆ ಆಕ್ಸಿಡೇಟಿವ್ ಹಾನಿಯಾಗಿರುತ್ತದೆ. ಶ್ವಾಸಕೋಶ ಚೇತರಿಸಿಕೊಳ್ಳಲು ಕೇವಲ ಧೂಮಪಾನ ನಿಲ್ಲಿಸಿದರೆ ಸಾಲದು, ಅದಕ್ಕೆ ಸೂಕ್ತ ಪೋಷಣೆ ಬೇಕು. ಹಿಪ್ಪಲಿ, ಆಡುಸೋಗೆ, ಜ್ಯೇಷ್ಠಮಧು, ತುಳಸಿ ಮತ್ತು ನೆಲ್ಲಿಕಾಯಿಯನ್ನು ಒಟ್ಟಿಗೆ ಬಳಸುವುದರಿಂದ ಶ್ವಾಸಕೋಶದ ಒಳಪದರ ಗುಣಮುಖವಾಗುತ್ತದೆ ಮತ್ತು ಆಮ್ಲಜನಕದ ಮಟ್ಟ ಸುಧಾರಿಸುತ್ತದೆ.
ಇದರೊಂದಿಗೆ ನರಮಂಡಲಕ್ಕೂ ಸಮಾನ ಗಮನ ನೀಡಬೇಕು. ತಂಬಾಕು ಬಿಟ್ಟು ತಿಂಗಳುಗಳೇ ಕಳೆದರೂ ಕೆಲವರಲ್ಲಿ ಮೂಡ್ ಸ್ವಿಂಗ್ಸ್, ಏಕಾಗ್ರತೆಯ ಕೊರತೆ ಮತ್ತು ನಿದ್ರೆಯ ಸಮಸ್ಯೆಗಳು ಕಾಡಬಹುದು. ಏಕೆಂದರೆ, ಅನೇಕ ವರ್ಷಗಳ ಕಾಲ ಒತ್ತಡವನ್ನು ನಿಭಾಯಿಸಲು ಮೆದುಳು, ನಿಕೋಟಿನನ್ನು ಬಳಸಿಕೊಂಡಿರುತ್ತದೆ. ಈಗ ನಿಕೋಟಿನ್ ಇಲ್ಲದೆ ಆ ಸಾಮರ್ಥ್ಯವನ್ನು ಮೆದುಳು ಸ್ವತಃ ಪುನರ್ನಿರ್ಮಿಸಿಕೊಳ್ಳಬೇಕಾಗುತ್ತದೆ.
‘ಅಡಾಪ್ಟೋಜೆನಿಕ್’ ಗಿಡಮೂಲಿಕೆಗಳು ಮತ್ತು ‘ಮೇಧ್ಯ ರಸಾಯನಗಳು’ (ಮೆದುಳು ಹಾಗೂ ನರಮಂಡಲದ ಆರೋಗ್ಯವನ್ನು ಸುಧಾರಿಸುವ ಔಷಧಗಳು) ಮಾನಸಿಕ ಸ್ಥಿರತೆ ಮತ್ತು ಸ್ಪಷ್ಟತೆಯನ್ನು ಮರಳಿ ತರಲು ಸಹಾಯ ಮಾಡುತ್ತವೆ. ಇದರ ಜೊತೆಗೆ ಮಾನಸಿಕ ಸಮಾಲೋಚನೆ ಮತ್ತು ಮೈಂಡ್ಫುಲ್ನೆಸ್ (ಧ್ಯಾನ) ಮುಂದುವರಿಸುವುದರಿಂದ ಮರಳಿ ತಂಬಾಕಿನ ಕಡೆಗೆ ಹೋಗುವ ಅಪಾಯ ಗಣನೀಯವಾಗಿ ಕಡಿಮೆಯಾಗುತ್ತದೆ.
ದೀರ್ಘಾವಧಿಯ ಗುರಿ
ಚೇತರಿಕೆಯ ಅಂತಿಮ ಹಂತವು ಅತ್ಯಂತ ಶಾಂತ ಹಾಗೂ ಅಷ್ಟೇ ನಿರ್ಣಾಯಕವಾದದ್ದು. ವರ್ಷಗಳ ಕಾಲ ತಂಬಾಕಿನಿಂದಾಗಿ ಕ್ಷೀಣಿಸಿರುವ ‘ಓಜಸ್’ (ದೈಹಿಕ ಜೀವಕಳೆ ಮತ್ತು ರೋಗನಿರೋಧಕ ಶಕ್ತಿ) ಮರಳಿ ಪಡೆಯಲು ಸಮಯ ಬೇಕಾಗುತ್ತದೆ. ದೇಹಕ್ಕೆ ಈಗ ತಂಬಾಕಿನ ಹಂಬಲ ಇಲ್ಲದಿರಬಹುದು. ಆದರೆ ದೇಹ ಸಂಪೂರ್ಣವಾಗಿ ಮೊದಲಿನಂತಾಗಿದೆ ಎಂದೂ ಅರ್ಥವಲ್ಲ.
ಆಗ ಆಹಾರ ಪದ್ಧತಿ ಪ್ರಮುಖ ಪಾತ್ರ ವಹಿಸುತ್ತದೆ. ‘ಸಾತ್ವಿಕ ಆಹಾರ’ ಕ್ರಮ—ಅಂದರೆ ತಾಜಾ ಆಹಾರ, ಸರಿಯಾಗಿ ಬೇಯಿಸಿದ ಆಹಾರ, ಆಯಾ ಕಾಲಕ್ಕೆ ಸಿಗುವ ತರಕಾರಿಗಳು ಮತ್ತು ಹಣ್ಣುಗಳು, ಧಾನ್ಯಗಳು, ಹೆಸರುಬೇಳೆ, ಮಿತವಾಗಿ ಹಸುವಿನ ತುಪ್ಪ, ನೆನೆಸಿದ ಬಾದಾಮಿ ಮತ್ತು ಖರ್ಜೂರಗಳ ಬಳಕೆಯಿಂದ ದೇಹದ ಅಂಗಾಂಶಗಳಿಗೆ ಒಳಗಿನಿಂದ ಪೋಷಣೆ ಸಿಗುತ್ತದೆ. ವಾತ ಮತ್ತು ಪಿತ್ತವನ್ನು ಹೆಚ್ಚಿಸುವ ಅತಿಯಾದ ಮಸಾಲೆ, ಎಣ್ಣೆಯಲ್ಲಿ ಕರಿದ, ಕೆಫೀನ್ ಮುಂತಾದ ಸಂಸ್ಕರಿಸಿದ ಆಹಾರಗಳನ್ನು ದೂರವಿಡಬೇಕು. ಏಕೆಂದರೆ ತಂಬಾಕು ಬಿಟ್ಟಾಗ ಕಾಡುವ ಕಿರಿಕಿರಿ ಮತ್ತು ಚಡಪಡಿಕೆಯನ್ನು ಇವು ಮತ್ತೆ ಪ್ರಚೋದಿಸಬಹುದು.
ಅರಿಶಿನ ಅಥವಾ ಶುಂಠಿ ನೀರನ್ನು ಕುಡಿಯುವುದು, ತುಳಸಿ ಅಥವಾ ಪುದೀನಾ ಎಲೆಗಳನ್ನು ಹಾಕಿ ಹಬೆ ತೆಗೆದುಕೊಳ್ಳುವುದು, ಸರಿಯಾದ ಸಮಯಕ್ಕೆ ಮಲಗುವುದು ಮತ್ತು ಸಂಜೆ ವೇಳೆಯಲ್ಲಿ ಶಾಂತವಾಗಿ ಧ್ಯಾನ ಮಾಡುವುದು ಈ ರೀತಿಯ ದೈನಂದಿನ ಸರಳ ಅಭ್ಯಾಸಗಳು ಚೇತರಿಕೆಯನ್ನು ಸುಲಭಗೊಳಿಸುತ್ತವೆ. ಇವು ಯಾವುದೇ ಕಠಿಣ ನಿಯಮಗಳಲ್ಲ, ಬದಲಿಗೆ ವರ್ಷಗಳ ಕಾಲ ರಾಸಾಯನಿಕಗಳಿಗೆ ದಾಸರಾಗಿದ್ದ ನಿಮ್ಮ ನರಮಂಡಲಕ್ಕೆ ‘ಈಗ ದೇಹ ಸುರಕ್ಷಿತವಾಗಿದೆ’ ಎಂಬ ಸಂದೇಶವನ್ನು ನೀಡುವ ಸರಳ ಮಾರ್ಗಗಳಾಗಿವೆ.
ನಾಲ್ಕು ದಿನಗಳ ಆ ನೋವಿಗೆ ಕಾರಣ ಹದಿನಾಲ್ಕು
ತಂಬಾಕಿನಿಂದ ಮುಕ್ತಿ ಎನ್ನುವುದು ಕೇವಲ ಒಂದು ಕೆಟ್ಟ ಅಭ್ಯಾಸವನ್ನು ನಿಲ್ಲಿಸುವ ಕ್ರಿಯೆಯಲ್ಲ. ಅದು ದೇಹವನ್ನು ಮರುಸ್ಥಾಪಿಸುವ ಒಂದು ಪವಿತ್ರ ಪ್ರಕ್ರಿಯೆ. ವರ್ಷಗಳ ಕಾಲ ನಿಕೋಟಿನ್ ನಿಮ್ಮ ದೇಹದಿಂದ ಏನೆಲ್ಲವನ್ನು ಕಿತ್ತುಕೊಂಡಿತ್ತೋ, ಅದನ್ನು ಮರಳಿ ದೇಹಕ್ಕೆ ನೀಡುವುದೇ ಇದರ ನಿಜವಾದ ಉದ್ದೇಶ. ಆಯುರ್ವೇದ, ಪಂಚಕರ್ಮ, ಮನಶ್ಶಾಸ್ತ್ರೀಯ ಸಮಾಲೋಚನೆ, ಯೋಗ ಮತ್ತು ಜಾಗೃತ ಜೀವನಶೈಲಿಯ ಈ ಸಮಗ್ರ ವಿಧಾನವು ತಂಬಾಕು ಮುಕ್ತ ಪಯಣವನ್ನು ಸುಲಭವಾಗಿಸದಿದ್ದರೂ, ಅದನ್ನು ಕ್ರಮಿಸಬಹುದಾದ ದಾರಿಯನ್ನು ಸುಂದರಗೊಳಿಸುತ್ತದೆ.
ದೇಹವು ಮತ್ತೆ ಗುಣಮುಖವಾಗಬಲ್ಲದು, ಶ್ವಾಸಕೋಶಗಳು ಸ್ವಚ್ಛವಾಗುತ್ತವೆ, ನರಮಂಡಲವು ಸಮತೋಲನಕ್ಕೆ ಬರುತ್ತದೆ ಮತ್ತು ‘ಓಜಸ್’ ಮರಳಿ ಸಿಗುತ್ತದೆ ಎಂಬ ನಂಬಿಕೆಯೇ ಒಬ್ಬ ವ್ಯಕ್ತಿಯನ್ನು ತಂಬಾಕಿನಿಂದ ಶಾಶ್ವತವಾಗಿ ದೂರವಿಡಲು ಸಹಾಯ ಮಾಡುತ್ತದೆ.