ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಭಗವಂತನನ್ನು ಕಾಣಲು ಬೇಕಾದ ಭಾವ

ಒಮ್ಮೆಯಾದರೂ ಭಗವಂತನು ನನಗೆ ತನ್ನ ದರ್ಶನ ಭಾಗ್ಯವನ್ನು ಕರುಣಿಸಲಿಲ್ಲ. ಕಡೇ ಪಕ್ಷ ಅವನು ಸ್ವಪ್ನದಲ್ಲಿಯೂ ನನಗೆ ಕಾಣಿಸಿಕೊಳ್ಳಲಿಲ್ಲ ಎಂದು ಆ ಬ್ರಾಹ್ಮಣನು ಮಾರುತ್ತರಿಸಿದ. ಆ ಬ್ರಾಹ್ಮಣನ ಮಾತನ್ನು ಕೇಳಿ ವಿಕ್ರಮಾದಿತ್ಯನ ಮನಸ್ಸು ಕರಗಿತು. ಆ ಆಶ್ರಮದಲ್ಲಿಯೇ ಕುಳಿತು ಭಗವಂತನನ್ನು ಶುದ್ಧ ಮನಸ್ಸಿನಿಂದ ಧ್ಯಾನ ಮಾಡಿದ.

ಭಗವಂತನನ್ನು ಕಾಣಲು ಬೇಕಾದ ಭಾವ

ಒಂದೊಳ್ಳೆ ಮಾತು

rgururaj628@gmail.com

ಒಮ್ಮೆ ರಾಜಾ ವಿಕ್ರಮಾದಿತ್ಯನು ತನ್ನ ರಾಜ್ಯದಲ್ಲಿನ ಪ್ರಜೆಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಮಾರುವೇಷದಲ್ಲಿ ದೇಶ ಸಂಚಾರ ಹೊರಟನು. ಒಂದು ಕಡೆ ಬ್ರಾಹ್ಮಣನೊಬ್ಬ ಯಜ್ಞವನ್ನು ಮಾಡುತ್ತಿದ್ದ ದೃಶ್ಯವು ಅವನ ಕಣ್ಣಿಗೆ ಬಿತ್ತು. ಆ ಬ್ರಾಹ್ಮಣನ ಆಶ್ರಮದ ಹತ್ತಿರವೇ ಯಜ್ಞಕುಂಡದಿಂದ ಹೊರಬಿದ್ದ ಬೂದಿಯ ಒಂದು ಗುಡ್ಡವೇ ಏರ್ಪಟ್ಟಿತ್ತು.

ವಿಕ್ರಮಾದಿತ್ಯನು ಅವನ ಬಳಿಗೆ ಹೋಗಿ, ಸ್ವಾಮಿ! ನೀವೇನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ. ಅದಕ್ಕೆ ಆ ಬ್ರಾಹ್ಮಣನು, ಮಗೂ, ನಾನು ಕಳೆದ 68 ವರ್ಷಗಳಿಂದಲೂ ಭಗವಂತನನ್ನು ಕುರಿತು ಯಜ್ಞವನ್ನು ಮಾಡುತ್ತಿದ್ದೇನೆ. ಈ ಪಕ್ಕದಲ್ಲಿ ಸಂಗ್ರಹವಾಗಿರುವುದು ಆ ಯಜ್ಞದ ಭಸ್ಮವೇ! ಎಂದು ಹೇಳಿದನು.

ಹಾಗಾದರೆ ನೀವೇನಾದರೂ ಭಗವದನುಗ್ರಹಕ್ಕೆ ಪಾತ್ರರಾಗಿದ್ದೀರಾ? ಎಂದು ವಿಕ್ರಮಾದಿತ್ಯನು ಪ್ರಶ್ನಿಸಿದನು. ಅದೇ ನನ್ನಲ್ಲಿರುವ ಕೊರಗು. ಒಮ್ಮೆಯಾದರೂ ಭಗವಂತನು ನನಗೆ ತನ್ನ ದರ್ಶನ ಭಾಗ್ಯವನ್ನು ಕರುಣಿಸಲಿಲ್ಲ. ಕಡೇ ಪಕ್ಷ ಅವನು ಸ್ವಪ್ನದಲ್ಲಿಯೂ ನನಗೆ ಕಾಣಿಸಿಕೊಳ್ಳಲಿಲ್ಲ ಎಂದು ಆ ಬ್ರಾಹ್ಮಣನು ಮಾರುತ್ತರಿಸಿದ. ಆ ಬ್ರಾಹ್ಮಣನ ಮಾತನ್ನು ಕೇಳಿ ವಿಕ್ರಮಾದಿತ್ಯನ ಮನಸ್ಸು ಕರಗಿತು. ಆ ಆಶ್ರಮದಲ್ಲಿಯೇ ಕುಳಿತು ಭಗವಂತನನ್ನು ಶುದ್ಧ ಮನಸ್ಸಿನಿಂದ ಧ್ಯಾನ ಮಾಡಿದ.

ಇದನ್ನೂ ಓದಿ: Roopa Gururaj Column: ವಿಧಿಬರಹ ತಪ್ಪಿಸಲು ಸಾಧ್ಯವಿಲ್ಲ

ದೇವರು ಅವನಿಗೆ ಪ್ರತ್ಯಕ್ಷನಾಗಿ, ರಾಜಾ! ನಿನಗೇನು ಬೇಕೋ ಅದನ್ನು ಕೋರಿಕೋ! ಎಂದು ಹೇಳಿ ದನು. ದೇವಾ ನನಗೇನೂ ಬೇಕಾಗಿಲ್ಲ. ಆದರೆ ಆ ವೃದ್ಧ ಬ್ರಾಹ್ಮಣನು ನಿನ್ನನ್ನು ಕುರಿತು ಕಳೆದ 68 ವರ್ಷಗಳಿಂದ ಯಜ್ಞಗಳನ್ನು ಮಾಡುತ್ತಿದ್ದರೂ ಸಹ ನೀನೇತಕ್ಕೆ ಆವನಿಗೆ ನಿನ್ನ ದರ್ಶನ ಭಾಗ್ಯ ವನ್ನು ಕರುಣಿಸಲಿಲ್ಲ? ಎಂದು ವಿಕ್ರಮಾದಿತ್ಯನು ಕೇಳಿದ ಪ್ರಶ್ನೆಗೆ ದೇವರು ಪಕಪಕನೆ ನಕ್ಕನು.

ರಾಜಾ! ನಾನು ಭಾವಪ್ರಿಯನೇ ಹೊರತು, ಬಾಹ್ಯಪ್ರಿಯನಲ್ಲ. ನೀನು ಸಮಾರಾಧನೆಯನ್ನು ಮಾಡು ತ್ತೀಯೋ, ಎಷ್ಟು ಜನಕ್ಕೆ ಅನ್ನವಿಕ್ಕುತ್ತೀಯೋ, ಎಷ್ಟು ಜನಕ್ಕೆ ವಸ್ತ್ರಾದಿಗಳನ್ನು ದಾನ ಮಾಡು ತ್ತೀಯೋ ಎನ್ನುವ ಲೆಕ್ಕ ನನಗೆ ಬೇಕಾಗಿಲ್ಲ. ನನಗೆ ಬೇಕಾಗಿರುವುದು ಭಾವವೇ.

ಯಾರು ಶುದ್ಧ ಮನಸ್ಸಿನಿಂದ ನನ್ನನ್ನು ಧ್ಯಾನಿಸುತ್ತಾರೋ ಅವರೇ ನನ್ನ ಪ್ರಿಯ ಭಕ್ತರು. ಅಂತಹ ಪರಮ ಭಕ್ತರಿಗೆ ನಾನು ದಾಸಾನುದಾಸ. ಆ ಬ್ರಾಹ್ಮಣನು ನಿರಂತರವಾಗಿ ಮಂತ್ರವನ್ನು ಉಚ್ಚರಿಸು ತ್ತಿದ್ದಾನೆ. ಆದರೆ ಅವನ ದೃಷ್ಟಿಯೆಲ್ಲಾ ಮಂತ್ರವನ್ನು ಉಚ್ಚರಿಸುವುದರ ಮೇಲಿದೆಯೇ ಹೊರತು ಮಾಧವನಾದ ನನ್ನ ಮೇಲಲ್ಲ.

ಕೇವಲ ತುಟಿಯಂಚಿನಲ್ಲಿ ಉಚ್ಚರಿಸುವ ಮಂತ್ರಗಳಲ್ಲ ನನಗೆ ಬೇಕಾಗಿರುವುದು. ಆ ಕರೆ ಹೃದಯದ ಅಂತರಾಳದಿಂದ ಬರಬೇಕು ಎಂದು ವಿವರಿಸಿದ ಭಗವಂತ. ನಮ್ಮಲ್ಲಿಯೂ ಅನೇಕರು ಬೆಳಗ್ಗೆ ಗಡಿಬಿಡಿಯಲ್ಲಿ ಗೀತೆ, ಮಂತ್ರ ಹೇಳುತ್ತೇವೆ. ಒಂದು ಟೈಮ್ ಟೇಬಲ್ ಹಾಕಿಕೊಂಡು ಎಷ್ಟು ಗಂಟೆಗೆ ಪೂಜೆ ಇಷ್ಟು ಗಂಟೆಗೆ ಊಟ ತಿಂಡಿ ಎಂದು ಧಾವಂತದಿಂದ ಇಡೀ ದಿನವನ್ನು ಆ ಸಮಯದ ಲೆಕ್ಕಾಚಾರಕ್ಕೆ ತಕ್ಕಂತೆ ಮುಗಿಸುತ್ತೇವೆ.

ಕೊನೆಗೆ ಎಲ್ಲವನ್ನೂ ಅಂದುಕೊಂಡಂತೆ ಮಾಡಿದೆವು ಎನ್ನುವ ಸಮಾಧಾನಕ್ಕಿಂತ, ಅಲ್ಲೊಂದು ಖಿನ್ನತೆ ಮನೆ ಮಾಡಿರುತ್ತದೆ. ಏಕೆಂದರೆ ಈ ಧಾವಂತದಲ್ಲಿ ಮುಗಿಸಿದ ಯಾವ ಕೆಲಸದಲ್ಲೂ ನಾವು ತನ್ಮಯ ಭಾವದಲ್ಲಿ ಇರಲು ಸಾಧ್ಯವಿಲ್ಲ. ಈ ಗಡಿಬಿಡಿಗಳಲ್ಲಿ ದೇವರಿಗೆ ನಮಸ್ಕರಿಸಬೇಕಾದರೆ ದೀಪ ಹಚ್ಚಬೇಕಾದರೆ ನಮ್ಮಲ್ಲಿರಬೇಕಾದ ಸಮಾಧಾನ ಭಾವ, ಸಮರ್ಪಣೆ ಎಲ್ಲವೂ ಸಮಯದ ಲೆಕ್ಕಾ ಚಾರದಲ್ಲಿ ಕಳೆದು ಹೋಗುತ್ತದೆ.

ಆದ್ದರಿಂದಲೇ ದಿನದಲ್ಲಿ ಎಷ್ಟು ಕೆಲಸ ಮುಗಿಸುತ್ತೇವೆ ಎನ್ನುವುದಕ್ಕಿಂತ, ಮಾಡುವ ಒಂದಷ್ಟು ಕೆಲಸಗಳನ್ನು ಎಷ್ಟು ತನ್ಮಯತೆಯಿಂದ ಮಾಡುತ್ತೇವೆ ಎನ್ನುವುದು ನಮ್ಮ ಮನಸ್ಸಿನ ನೆಮ್ಮದಿಗೆ ಕಾರಣವಾಗುತ್ತದೆ. ಆಗಾಗ ಸುಮ್ಮನೆ ಒಂದು ಕಾಫಿ ಕುಡಿಯತ್ತಾ ಕೇಳುವ ನಮ್ಮಿಷ್ಟದ ಹಾಡು, ದೇವರ ಮನೆಯಲ್ಲಿ ಮಾಡುವ ಒಂದಷ್ಟು ಹೊತ್ತಿನ ಧ್ಯಾನ, ಅಡುಗೆ ಮನೆಯಲ್ಲಿ ಗುನುಗುತ್ತ ಮಾಡುವ ನಮ್ಮಿಷ್ಟದ ಅಡುಗೆ ಎಲ್ಲವೂ ಸಂಭ್ರಮವಾಗಬೇಕು.

ಆಗ ಪ್ರತಿದಿನವೂ ಸಹ್ಯವಾಗುತ್ತದೆ. ಕೆಲಸಕ್ಕೆ ಹೋಗಿ ಬರುವ ಧಾವಂತ ಇದ್ದದ್ದೇ. ಮನೆಯಲ್ಲಿರುವ ಸ್ವಲ್ಪ ಹೊತ್ತು ಇಂತಹ ಚಿಕ್ಕಪುಟ್ಟ ಕ್ಷಣಗಳನ್ನು ನಮ್ಮದಾಗಿಸಿಕೊಂಡು ಸಂಭ್ರಮಿಸೋಣ.