Roopa Gururaj Column: ಮನುಷ್ಯನ ತಲೆ ಬುರುಡೆಗಿರುವ ಬೆಲೆ
ಸತ್ತ ಮೇಲೆ ಬೆಲೆ ಇರುವುದು ನಾವು ಮಾಡುವ ಸತ್ಕಾರ್ಯಗಳಿಗೆ, ನಮ್ಮ ಶರೀರಕ್ಕಲ್ಲ. ಹಾಗಿದ್ದಾಗ ಬದುಕಿದ್ದಾಗ ಮತ್ತೊಬ್ಬರಿಗೆ ತಲೆಬಾಗಿಸುವುದರಿಂದ, ಕೈ ಮುಗಿಯುವು ದರಿಂದ, ಅಪ್ಪಿ ಪ್ರೀತಿ ಹಂಚುವು ದರಿಂದ ನಾವು ಎಂದಿಗೂ ಚಿಕ್ಕವರಾಗುವುದಿಲ್ಲ. ಅಹಂಕಾರ ಬಿಟ್ಟಾಗ ಮಾತ್ರ ನಾವು ಮನುಷ್ಯರಾಗಿ ಬದುಕಲು ಅರ್ಹತೆ ಹೊಂದುತ್ತೇವೆ


ಒಂದೊಳ್ಳೆ ಮಾತು
rgururaj628@gmail.com
ಹಳ್ಳಿಯೊಂದಕ್ಕೆ ಬೌದ್ಧ ಭಿಕ್ಷುಗಳೊಬ್ಬರು ಬಂದಿದ್ದರು. ಸಾಮ್ರಾಟ ಅಶೋಕ ಅವರಲ್ಲಿಗೆ ಹೋಗಿ ಭಿಕ್ಷುಗಳ ಚರಣಕ್ಕೆ ಎರಗಿದ. ಇದು ಅಶೋಕನ ಮಂತ್ರಿಯೊಬ್ಬನಿಗೆ ಇಷ್ಟವಾಗಲಿಲ್ಲ. ಅಶೋಕ ನಂತಹ ಮಹಾ ಸಾಮ್ರಾಟ ಹಳ್ಳಿಯಲ್ಲಿ ಭಿಕ್ಷೆ ಬೇಡುತ್ತಿರುವ ಭಿಕ್ಷುವಿನ ಪಾದಕ್ಕೆ ನಮಿಸುವುದು ಎಂದರೇನು? ಎಂದು ಅವನ ಭಾವನೆ. ಅರಮನೆಗೆ ಹಿಂತಿರುಗುತ್ತಿದ್ದಂತೆಯೇ, ಅವನು ಸಾಮ್ರಾಟನಿಗೆ ನೀವು ಮಾಡಿದ್ದು ನನಗೆ ಸ್ವಲ್ಪವೂ ಸರಿ ಎನಿಸಲಿಲ್ಲ. ನಿಮ್ಮಂತಹ ದೊಡ್ಡ ಸಾಮ್ರಾಟ, ಹೋಗಿ ,ಹೋಗಿ ಅಂತಹ ಒಬ್ಬ ಸಾಧಾರಣ ಭಿಕಾರಿಯ ಚರಣಕ್ಕೆ ವಂದಿಸುವುದು ಎಂದರೆ, ಇದು ನನಗೆ ಸ್ವಲ್ಪ ಕೂಡಾ ಸರಿ ಕಾಣಲಿಲ್ಲ, ಎಂದು ಹೇಳಿದ. ಆಗ ಅಶೋಕ ಏನೂ ಮಾತನಾಡದೇ ನಕ್ಕು ಸುಮ್ಮನಾದ.
ಸ್ವಲ್ಪ ದಿನಗಳ ನಂತರ ಸಾಮ್ರಾಟ ಅಶೋಕ, ಆ ಮಂತ್ರಿಯನ್ನು ಕರೆದು, ನಾನೊಂದು ಪ್ರಯೋಗ ವನ್ನು ಮಾಡಬೇಕಿದೆ. ನಾನು ಕೊಡುವ ಈ ಸಾಮಾನುಗಳನ್ನು ನೀನು ತೆಗೆದುಕೊಂಡು ಹೋಗಿ ಮಾರುಕಟ್ಟೆಯಲ್ಲಿ ಮಾರಿಕೊಂಡು ಬರಬೇಕು, ಎಂದು ಹೇಳಿದ. ಆ ಸಾಮಾನುಗಳೆಂದರೆ, ಒಂದು ಕುರಿಯ ತಲೆ, ಒಂದು ಹಸುವಿನ ತಲೆ, ಇನ್ನೊಂದು ಮನುಷ್ಯನ ತಲೆ, ಇತರ ಅನೇಕ ಪ್ರಾಣಿಗಳ ತಲೆಗಳಿದ್ದವು.
ಇದನ್ನೂ ಓದಿ: Roopa Gururaj Column: ಪ್ರಭು ಶ್ರೀರಾಮನ ಆಜ್ಞೆ ಮೀರಿದ ಲಕ್ಷ್ಮಣ
ಇವುಗಳನ್ನು ಮಾರುಕಟ್ಟೆಯಲ್ಲಿ ಮಾರಿಕೊಂಡು ಬಾ ಎಂದು ಹೇಳಿದ ಅಶೋಕ. ಈ ಸಾಮ್ರಾಟರು ಏನು ಮಾಡಲು ಹೊರಟಿದ್ದಾರೆ? ಎಂದು ಯೋಚಿಸುತ್ತಾ ಮಂತ್ರಿ, ಅವುಗಳನ್ನು ತೆಗೆದುಕೊಂಡು ಮಾರುಕಟ್ಟೆಗೆ ಹೋದ. ಹಸುವಿನ ತಲೆ, ಕುದುರೆಯ ತಲೆ, ವಿವಿಧ ಪ್ರಾಣಿಗಳ ತಲೆಗಳೆಲ್ಲವೂ ಬೇಗ ಮಾರಾಟವಾದವು. ಆದರೆ ಮನುಷ್ಯನ ತಲೆ ಮಾತ್ರ ಮರಾಟವಾಗಲಿಲ್ಲ, ಯಾರೂ ಅದನ್ನು ಕೊಂಡುಕೊಳ್ಳಲ್ಲಿಲ್ಲ.
ಅದರ ಹತ್ತಿರವೂ ಸುಳಿಯಲಿಲ್ಲ. ಅದೊಂದನ್ನು ವಾಪಾಸು ತೆಗೆದುಕೊಂಡು ಸಾಮ್ರಾಟರ ಬಳಿಗೆ ಬಂದ ಮಂತ್ರಿ. ಆಗ ಸಾಮ್ರಾಟ, ಹೋಗಲಿ ಅದನ್ನು ಉಚಿತವಾಗಿ ಯಾರಿಗಾದರೂ ಕೊಟ್ಟು ಬಾ, ಎಂದು ಮಂತ್ರಿಗೆ ಹೇಳಿದ. ಮಂತ್ರಿ ಪುನಃ ಹಿಂತುರುಗಿ ಮಾರುಕಟ್ಟೆಗೆ ಹೋಗಿ, ಇದನ್ನು ಪುಕ್ಕಟೆ ಯಾಗಿ ಕೊಡುತ್ತಿದ್ದೇನೆ, ಯಾರು ಬೇಕಾದರೂ ತೆಗೆದುಕೊಳ್ಳಿ ಎಂದು ಹೇಳಿದ.
ಆಗ ಜನರು, ಕೋಪದಿಂದ ನಿಮಗೇನು ತಲೆಕೆಟ್ಟಿದೆಯೇ? ಈ ಅನಿಷ್ಟವನ್ನು ಯಾರು ಇಟ್ಟು ಕೊಳ್ಳುತ್ತಾರೆ? ಇದನ್ನು ಯಾರು ಕೊಂಡುಕೊಳ್ಳುತ್ತಾರೆ? ತೆಗೆದುಕೊಂಡು ಹೋಗಿ ಸ್ಮಶಾನದಲ್ಲಿ ಬಿಸಾಕಿ! ಈ ಅಸಹ್ಯವನ್ನು ಇದಕ್ಕೆ ಅದೇ ಸರಿಯಾದ ಜಾಗ ಎಂದು ಮಂತ್ರಿಗೆ ಹೇಳಿದರು. ಮನುಷ್ಯ ನ ತಲೆಗೆ ಸ್ಮಶಾನವೇ ಸರಿಯಾದ ಜಾಗವೆಂದು ಮಂತ್ರಿಗೆ ಮನವರಿಕೆಯಾಯಿತು.
ಮಂತ್ರಿ ಸಾಮ್ರಾಟನ ಬಳಿಗೆ ಬಂದು, ಇದನ್ನು ಉಚಿತವಾಗಿ ಕೊಟ್ಟರೂ ಸ್ವೀಕರಿಸಲು ಯಾರೂ ಸಿದ್ಧರಿಲ್ಲ ಎಂದು ಹೇಳಿದ. ಆಗ ಅಶೋಕ, ನಾನು ಸತ್ತ ನಂತರ ನನ್ನ ತಲೆಯನ್ನು ನೀನು ಮಾರಲು ಹೋದಲ್ಲಿ ಆಗ ಏನಾದರೂ ವ್ಯತ್ಯಾಸ ಆಗುತ್ತದೆಯೇ? ಎಂದು ಕೇಳಿದ.
ಸಾಮ್ರಾಟನ ಈ ಪ್ರಶ್ನೆಗೆ ಉತ್ತರ ಹೇಗೆ ಹೇಳುವುದೆಂದು ಮಂತ್ರಿಗೆ ಸ್ವಲ್ಪ ಕಸಿವಿಸಿಯಾಯಿತು. ಪ್ರಭೂ, ನೀವು ಕ್ಷಮಿಸುವುದಾದರೆ, ನಾನು ಹೇಳಬಲ್ಲೆ, ನಿಮ್ಮ ತಲೆಯನ್ನು ಸಹಾ ಯಾರೂ ಕೊಂಡು ಕೊಳ್ಳುವುದಿಲ್ಲ. ಇಂದು ನನಗೆ ಮೊಟ್ಟಮೊದಲ ಬಾರಿಗೆ ಅರಿವಾಯಿತು. ಮನುಷ್ಯನ ತಲೆಗೆ ಯಾವ ಬಿಡಿ ಕಾಸಿನ ಬೆಲೆಯೂ ಇಲ್ಲವೆಂದು, ಎಂದು ಹೇಳಿದ.
ಆಗ ಸಾಮ್ರಾಟ, ಈ ಬೆಲೆ ಇಲ್ಲದ ಶಿರವನ್ನು ನಾನೊಬ್ಬ ಭಿಕ್ಷುವಿನ ಚರಣಗಳಲ್ಲಿ ಇರಿಸಿದಾಗ ನಿನಗೇಕೆ ಅಷ್ಟೊಂದು ಅಸಮಾಧಾನವಾಯಿತು? ಮನುಷ್ಯನ ಶಿರಕ್ಕೆ ಯಾವ ಬೆಲೆಯೂ ಇಲ್ಲ ಎಂದಾದ ಮೇಲೆ, ತಲೆ ಬಾಗಲು ಅಹಂಕಾರವೇಕೆ? ಎಂದು ಕೇಳಿದ.
ನಿಜವೇ ಅಲ್ಲವೇ? ಸತ್ತ ಮೇಲೆ ಬೆಲೆ ಇರುವುದು ನಾವು ಮಾಡುವ ಸತ್ಕಾರ್ಯಗಳಿಗೆ, ನಮ್ಮ ಶರೀರ ಕ್ಕಲ್ಲ. ಹಾಗಿದ್ದಾಗ ಬದುಕಿದ್ದಾಗ ಮತ್ತೊಬ್ಬರಿಗೆ ತಲೆಬಾಗಿಸುವುದರಿಂದ, ಕೈ ಮುಗಿಯುವುದರಿಂದ, ಅಪ್ಪಿ ಪ್ರೀತಿ ಹಂಚುವುದರಿಂದ ನಾವು ಎಂದಿಗೂ ಚಿಕ್ಕವರಾಗುವುದಿಲ್ಲ. ಅಹಂಕಾರ ಬಿಟ್ಟಾಗ ಮಾತ್ರ ನಾವು ಮನುಷ್ಯರಾಗಿ ಬದುಕಲು ಅರ್ಹತೆ ಹೊಂದುತ್ತೇವೆ. ಇನ್ನಾದರೂ ನಮ್ಮ ನಾಡೆ ನುಡಿಗಳಲ್ಲಿ ಒಳ್ಳೆಯ ಬದಲಾವಣೆ ಮಾಡಿಕೊಳ್ಳೊಣ.