Naveen Sagar Column: ಟೂರಿಸ್ಟ್ ಫ್ಯಾಮಿಲಿ ಅಲ್ಲ, ಇದು ಟೂಲ್ಕಿಟ್ ಫ್ಯಾಮಿಲಿ
ನಾನು ‘ಪ್ರವಾಸಿ ಪ್ರಪಂಚ’ ಪತ್ರಿಕೆಗೆ ಸಿದ್ಧತೆ ನಡೆಸುತ್ತಾ ಇದ್ದಾಗ ಅತ್ತ ನನ್ನ ಇನ್ನೊಂದು ಫೇವರಿಟ್ ಕ್ಷೇತ್ರವಾದ ಸಿನಿಮಾರಂಗದಲ್ಲಿ ‘ಬ್ಯಾಕ್-ಟು-ಬ್ಯಾಕ್’ ಟ್ರಾವೆಲ್ ಸಂಬಂಧಿ ಸಿನಿಮಾಗಳೇ ರಿಲೀಸಾಗ್ತಾ ಇದ್ದವು. ನೋಡಿದವರು ಏನಂತಾರೆ.. ಅದು ಪ್ರಯಾಣದ ಕಥೆಯೇ. ‘ಪಾರು ಪಾರ್ವತಿ’ ಅಂತ್ಯಾ ವುದೋ ಒಂದು ಸಿನಿಮಾ ಬಂತು. ಅದೂ ಒಂದು ‘ಸೋಲೋ ಟ್ರಿಪ್’ನ ಕಥೆಯೇ.


ಪದಸಾಗರ
naveensagar2709@gmail.com
ಮನಸ್ಸು ಕಳೆದ 6 ತಿಂಗಳುಗಳಿಂದ ಧ್ಯಾನಿಸುತ್ತಿರುವುದು ಒಂದೇ ವಿಷಯ. ಪ್ರವಾಸ ಪ್ರವಾಸ ಪ್ರವಾಸ! ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (‘ಎಐ’) ಇತ್ತೀಚಿನ ದಿನಗಳಲ್ಲಿ ನನ್ನನ್ನು ವಿಪರೀತ ಎನ್ನು ವಷ್ಟು ವಿಸ್ಮಯಗೊಳಿಸಿದ ವಿಚಾರ. ಎಷ್ಟು ಅಂದರೆ, ಮನಸಲ್ಲಿ ಅಂದುಕೊಳ್ಳೋದೆಲ್ಲ ನನ್ನ ಮೊಬೈಲ್ ಮತ್ತು ಕಂಪ್ಯೂಟರಿಗೆ ಗೊತ್ತಾಗ್ತಾ ಇದೆಯಾ ಅನ್ನುವಷ್ಟು.
ನಾವು ಮೊಬೈಲಿನಲ್ಲಿ ಸರ್ಚ್ ಮಾಡೋದನ್ನು, ಹೆಚ್ಚು ನೋಡೋದನ್ನು, ನಮ್ಮ ಆಸಕ್ತಿಗಳನ್ನು ಆಧರಿಸಿ ಅಂಥದ್ದೇ ವಿಷಯಗಳನ್ನು ನಮ್ಮ ಮುಂದೆ ಗುಡ್ಡೆ ಹಾಕುವುದು, ಸಜೆ ಮಾಡೋದು ಒಂದು ಹಂತದ ಅಚ್ಚರಿಯಾಗಿತ್ತು. ಆದರೆ ಆ ನಂತರ ನಾವು ಮನೆಯಲ್ಲಿ ಸುಮ್ಮನೆ ಮಾತನಾಡಿಕೊಳ್ಳೋ ದನ್ನೂ ನಮ್ಮ ಮೊಬೈಲ್ಗಳು ಕೇಳಿಸಿಕೊಂಡು ಅರ್ಥ ಮಾಡಿಕೊಂಡು ನಮಗೆ ರೆಕಮಂಡೇಷನ್ ಕೊಡೋಕೆ ಶುರು ಮಾಡಿದವು.
ಇದಂತೂ ಭಯ ಮತ್ತು ಅಚ್ಚರಿ ಎರಡನ್ನೂ ಒಮ್ಮೆಗೇ ಮೂಡಿಸಿ ಬಿಟ್ಟಿತ್ತು. ಮನೆಗೆ ಹೊಸತೊಂದು ಮಂಚ ಬೇಕು ಅಂತ ನಾನು-ಅಮ್ಮ ಎದುರು ಬದುರು ನಿಂತು ಮಾತನಾಡಿಕೊಂಡದ್ದನ್ನು ಮೊಬೈಲ್ ಕೇಳಿಸಿಕೊಳ್ಳುತ್ತೆ. ಮೊಬೈಲಿನ ಸೋಷಿಯಲ್ ಮೀಡಿಯಾಗಳು, ಅಪ್ಲಿಕೇಶನ್ಗಳು ಅದಕ್ಕೆ ರಿಯಾಕ್ಟ್ ಮಾಡುತ್ತವೆ ಅಂದ್ರೆ ಈ ಮಾಯೆಗೆ ಏನಂತ ಹೇಳಬೇಕು.
ನಾವು ಎಲ್ಲ ಅಪ್ಲಿಕೇಶನ್ಗಳಿಗೆ ಮೈಕ್ರೋಫೋನ್, ಕ್ಯಾಮೆರಾ, ಕಾಂಟ್ಯಾಕ್ಟ್, ಲೊಕೇಶನ್ ಇವೆಲ್ಲದರ ಆಕ್ಸೆಸ್ ಕೊಟ್ಟಿದ್ದೇವೆ. ಹೀಗಾಗಿ ಅದು ನಮ್ಮನ್ನು ಅರ್ಥಮಾಡಿಕೊಳ್ಳುತ್ತಿದೆ ಅಂತ ಅರ್ಥವೇನೋ ಆಯ್ತು. ಆದರೂ ನಮ್ಮ ಖಾಸಗಿತನ, ನಮ್ಮ ಗೋಪ್ಯತೆ ಹೀಗೆಲ್ಲ ಕಳೆದುಹೋಗಿ ಬಿಡ್ತಾ ಎಂದು ದಿಗಿಲಾಗುತ್ತದೆ.
ಇದನ್ನೂ ಓದಿ: Naveen Sagar Column: 8 ವರ್ಷದ ಹಿಂದೆ ನಡೆದಿತ್ತು ಆಪರೇಷನ್ ಸಿಂದೂರ್ !
ನಾವು ಮೊಬೈಲನ್ನು ಜೇಬಲ್ಲಿಟ್ಟುಕೊಂಡು ಓಡಾಡಿರೋ ಜಾಗಗಳೆಲ್ಲವನ್ನು ಆಧರಿಸಿ ನಮ್ಮ ಅಭಿರುಚಿ ಅಗತ್ಯಗಳನ್ನು ಈ ಜಗತ್ತು ನಿರ್ಧರಿಸುತ್ತಿದೆ ಅಂದ್ರೆ, ಜಗತ್ತು ನಮ್ಮ ಯೋಚನೆಗೆ ತಕ್ಕಂತೆ ವರ್ತಿಸಿ ನಮ್ಮ ಬದುಕನ್ನು ಸುಲಭಗೊಳಿಸುತ್ತಿದೆ ಅಂತ ಖುಷಿಪಡಬೇಕಾ? ಅಥವಾ ನಮ್ಮನ್ನು ನಿಯಂತ್ರಿಸುತ್ತಿದೆ ಅಂತ, ನಮ್ಮ ಪ್ರೈವೆಸಿ ನುಚ್ಚುನೂರು ಮಾಡಿ ನಮ್ಮನ್ನೇ ಆಳುತ್ತಿದೆ ಎಂದು ಬೇಸರಪಟ್ಟುಕೊಳ್ಳಬೇಕಾ? ಗೊತ್ತಿಲ್ಲ. ಆದರೆ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನೋದು ನಮ್ಮ ನ್ಯಾಚುರಲ್ ಇಂಟೆಲಿಜೆನ್ಸ್ ನ ಪ್ರತಿರೂಪ ಅಲ್ಲವಾ? ನಾನು ನನ್ನ ಬರಹದ ಮೊದಲ ಸಾಲಿಗೆ ಬರುತ್ತೇನೆ. ನಾನು ಪ್ರವಾಸದ ಬಗ್ಗೆ ಧೇನಿಸುತ್ತಿದ್ದೇನೆ, ಗೂಗಲ್ನಲ್ಲಿ, ಯುಟ್ಯೂಬ್, ಇನ್ಸ್ಟಾ, ಫೇಸ್ಬುಕ್, ಟ್ವಿಟರ್ನಲ್ಲಿ ಪ್ರವಾಸದ ಬಗ್ಗೆಯೇ ಜಾಲಾಡುತ್ತೇನೆ ಎಂಬ ಕಾರಣಕ್ಕೆ ನನಗೆ ಕೇವಲ ಪ್ರವಾಸಿ ಸಂಬಂಧಿ ವಿಷಯಗಳೇ ಮತ್ತೆ ಮತ್ತೆ ಫೀಡ್ನಲ್ಲಿ ಬರುವುದು ಓಕೆ. ‘ಎಐ’ ಕೈಚಳಕ ಎಂದು ಒಪ್ಪಿಕೊಂಡು ಬಿಡುತ್ತೇನೆ.
ಆದರೆ ನನಗೆ ಸಿಗುವ ವ್ಯಕ್ತಿಗಳು, ನನ್ನನ್ನು ಮಾತನಾಡಿಸುವವರು, ನನಗೆ ಫೊನ್ ಮಾಡುವವರು, ಅಕ್ಕಪಕ್ಕದ ಮನೆಯವರು, ಎಲ್ಲರೂ ಪ್ರವಾಸದ ಬಗ್ಗೆಯೇ ಮಾತಾಡೋದು ಯಾವ ಆರ್ಟಿಫಿಷಿ ಯಲ್ ಇಂಟೆಲಿಜೆನ್ಸ್ ಇದನ್ನು ನ್ಯಾಚುರಲ್ ಇಂಟೆಲಿಜೆ ಅನ್ನಬಹುದಾ? ನಾನು ಯಾವ ಕೆಲಸದಲ್ಲಿ ದ್ದೇನೆ ಅಂತ ಅರ್ಥಮಾಡಿಕೊಂಡು ಅದರ ಕುರಿತೇ ನನ್ನ ಸುತ್ತಲಿನ ಸಮಾಜ ರಿಯಾಕ್ಟ್ ಮಾಡುವುದು ಬಹಳ ಸಹಜ ಕ್ರಿಯೆ ಅಲ್ವಾ? ನಾನು ಕ್ರಿಕೆಟ್ ಪ್ರೇಮಿ ಎಂದು ಗೊತ್ತಾದರೆ ನನ್ನ ಜತೆ ಕ್ರಿಕೆಟ್ ಅಸಕ್ತರೇ ಮಾತನಾಡುತ್ತಾರೆ.
ರಾಜಕೀಯ ಆಸಕ್ತನಾದರೆ ಅದನ್ನೇ ಮಾತನಾಡುವವರು ಹತ್ತಿರವಾಗುತ್ತಾರೆ. ಸಿನಿಮಾ, ಫಿಟ್ನೆಸ್, ಸೆಕ್ಸ್, ಎಲ್ಲವೂ ಹೀಗೆಯೇ. ಈ ಸಹಜಬುದ್ಧಿಮತ್ತೆಯ ಪ್ಯಾಟರ್ನ್ ಇಟ್ಕೊಂಡೇ ಸೃಷ್ಟಿಯಾದದ್ದು ಕೃತಕ ಬುದ್ಧಿಮತ್ತೆ. ಆದರೆ ಇವೆರಡನ್ನೂ ಮೀರಿ ನನ್ನನ್ನು ಅಚ್ಚರಿಗೊಳಿಸುವುದು ಪ್ರಕೃತಿ ನಮ್ಮ ಆಲೋಚನೆಗೆ ತಕ್ಕಂತೆ ವರ್ತಿಸುತ್ತಿದೆ ಎಂಬ ಅಂಶ. ಅದು ನಿಜವಾಗಿಯೂ ನಮ್ಮ ಆಲೋಚನೆಗೆ ಅನುಗುಣವಾಗಿ ವರ್ತಿಸುತ್ತಿರುತ್ತದೆಯೋ ಅಥವಾ ನಮಗೆ ಹಾಗನಿಸುತ್ತಿರುತ್ತದೆಯೋ ಇಂದಿಗೂ ಗೊಂದಲವೇ.
ನಾನು ‘ಪ್ರವಾಸಿ ಪ್ರಪಂಚ’ ಪತ್ರಿಕೆಗೆ ಸಿದ್ಧತೆ ನಡೆಸುತ್ತಾ ಇದ್ದಾಗ ಅತ್ತ ನನ್ನ ಇನ್ನೊಂದು ಫೇವರಿಟ್ ಕ್ಷೇತ್ರವಾದ ಸಿನಿಮಾರಂಗದಲ್ಲಿ ‘ಬ್ಯಾಕ್-ಟು-ಬ್ಯಾಕ್’ ಟ್ರಾವೆಲ್ ಸಂಬಂಧಿ ಸಿನಿಮಾಗಳೇ ರಿಲೀಸಾಗ್ತಾ ಇದ್ದವು. ನೋಡಿದವರು ಏನಂತಾರೆ.. ಅದು ಪ್ರಯಾಣದ ಕಥೆಯೇ. ‘ಪಾರು ಪಾರ್ವತಿ’ ಅಂತ್ಯಾ ವುದೋ ಒಂದು ಸಿನಿಮಾ ಬಂತು. ಅದೂ ಒಂದು ‘ಸೋಲೋ ಟ್ರಿಪ್’ನ ಕಥೆಯೇ. ಅರೆ ಇದು ಹೇಗೆ ಸಾಧ್ಯ? ನಾನು ಟ್ರಾವೆಲ್ ಟೂರಿಸಂ ಬಗ್ಗೆ ಯೋಚಿಸುತ್ತಿರುವುದಕ್ಕೆ ಪ್ರತಿಯಾಗಿ ಯೂನಿವರ್ಸ್ ಇಂಥದ್ದನ್ನೇ ನನ್ನ ಮುಂದೆ ಹರವಿಡುತ್ತಿದೆಯಾ? ಇಲ್ಲ ಅದು ಜಗತ್ತಿನ ಪ್ರತಿ ಆಲೋಚನೆಗೂ ರಿಯಾಕ್ಟ್ ಮಾಡುತ್ತಿದೆ.
ಆದರೆ ನಮಗೆ ಕಾಣಿಸೋದು ನಮ್ಮ ಆಸಕ್ತಿಯ ಸುತ್ತಲಿನದ್ದು. ಇನ್ಯಾರೋ ಹಣಕಾಸಿನ ಬಗ್ಗೆಯೇ ಯೋಚಿಸುತ್ತಿರುವವನಿಗೆ ಲಕ್ಕೀ ಭಾಸ್ಕರ್, ಜೀಬ್ರಾ ಥರದ ಸಿನಿಮಾ ಕಂಡು, ‘ಅರೆ! ನನ್ನ ಆಲೋಚನೆ ಅರ್ಥ ಮಾಡಿಕೊಂಡಂಥ ಸಿನಿಮಾ ಬಂದಿದ್ಯಲ್ಲ. ಇದು ಹೇಗೆ?’ ಅಂತ ಅಚ್ಚರಿಯಾಗ್ತಾ ಇರಬಹುದು. ಅವನ ಜಗತ್ತಲ್ಲೂ ಟ್ರಾವೆಲ್ ಸಿನಿಮಾ ಬಂದಿರುತ್ತದೆ.
ನನ್ನ ಜಗತ್ತಲ್ಲೂ ಹಣದ ಸಿನಿಮಾ ಬಂದಿರುತ್ತದೆ. ಆದರೆ ನಮಗೆ ಕಾಣಿಸೋದು ನಮ್ಮ ಆಲೋ ಚನೆಯ ಸುತ್ತಲಿರೋದು ಮಾತ್ರ. ಇಲ್ಲಿ ಜಗತ್ತಿಗೆ ನಾವು ರಿಯಾಕ್ಟ್ ಮಾಡ್ತಿದೀವೋ, ನಮಗೆ ಜಗತ್ತು ರಿಯಾಕ್ಟ್ ಮಾಡ್ತಿದೆಯೋ ಎಂಬುದು ಬಗೆಹರಿಯದ ಒಗಟು. ಪರಸ್ಪರ ರಿಯಾಕ್ಟ್ ಮಾಡಿಕೊಳ್ಳು ತ್ತಿದ್ದೇವೆ ಎಂಬುದು ಅಂತಿಮ ಸತ್ಯ.
ಅಸಲಿಗೆ ನಾನು ಬರೆಯಹೊರಟದ್ದು ಮೇಲಿನ ವಿಷಯ ಅಲ್ಲವೇ ಅಲ್ಲ. ನಾನು ಬರೆಯಬೇಕೆಂದು ಕೊಂಡಿದ್ದು ‘ಟೂರಿಸ್ಟ್ ಫ್ಯಾಮಿಲಿ’ ಎಂಬ ತಮಿಳು ಸಿನಿಮಾ ಬಗ್ಗೆ. ಒನ್ಸ್ ಅಗೇನ್ ಪ್ರವಾಸವನ್ನೇ ಆವಾಹಿಸಿಕೊಂಡಿರುವ ನನಗೆ ಕಳೆದ ಒಂದು ತಿಂಗಳಿಂದ ಈ ಟೂರಿಸ್ಟ್ ಫ್ಯಾಮಿಲಿ ಎಂಬ ಪೋಸ್ಟರ್ ಫೇಸ್ಬುಕ್ನಲ್ಲಿ ಆಗಾಗ್ಗೆ ಕಾಣಿಸಿಕೊಳ್ತಾನೇ ಇತ್ತು.
ನಾನು ಇದನ್ನು ನಿರ್ಲಕ್ಷಿಸುತ್ತಲೇ ಇದ್ದೆ. ಆದರೆ ಕಳೆದ ಒಂದು ವಾರದಿಂದ ಈ ಚಿತ್ರ ಓಟಿಟಿಯಲ್ಲಿ ಟ್ರೆಂಡಿಂಗಿನಲ್ಲಿದೆ. ಜನ ಮುಗಿ ಬಿದ್ದು ನೋಡ್ತಿದ್ದಾರೆ. ನೋಡಿದ ನಂತರ ಅಭಿಪ್ರಾಯ ಬರೆಯು ತ್ತಿದ್ದಾರೆ. ಮೊದಲ ಇನ್ನಿಂಗ್ಸಿನಲ್ಲಿ ಬಂದ ಅಭಿಪ್ರಾಯಗಳೆಲ್ಲ ಸೂಪರ್ ಪಾಸಿಟಿವ್. “ಇಂಥ ಚಿತ್ರ ನಮ್ಮ ಕನ್ನಡದವ್ರು ಯಾಕೆ ಮಾಡಲ್ಲ. ಆಕ್ಟಿಂಗ್ ಸೂಪರ್, ಕಥೆ ಸೂಪರ್, ನಗಿಸಿ ಅಳಿಸುವ, ಅಳಿಸಿ ನಗಿಸುವ ಅದ್ಭುತ ಚಿತ್ರ. ಮಾನವೀಯತೆ ಸಾರುವ ಚಿತ್ರ"- ಹೀಗೆ ಸಾಲು ಸಾಲು ಹೊಗಳಿಕೆಗಳು.
ಸೋಷಿಯಲ್ ಮೀಡಿಯಾ ಇರೋದೇ ಹಾಗೆ. ಅದು ಸನ್ನಿಗೆ ಒಳಪಡಿಸೋ ಮಾಧ್ಯಮ. ಊರೆಲ್ಲ ಹೊಗಳುವಾಗ ನಾನು ಹೊಗಳದಿದ್ದರೆ ಸಮಾಜ ಒಪ್ಪುತ್ತಾ ಎಂದು ಹೆದರುವಂತೆ ಮಾಡುತ್ತದೆ. ಇಂಥ ಸಮಯದಲ್ಲಿ ಅಬ್ಬ ಈ ಹರಿವಿಗೆ ವಿರುದ್ಧವಾಗಿ ಈಜಿ ಬಿಡುತ್ತಾನೆ. ಅಷ್ಟೊತ್ತು ಹೊಗಳುತ್ತಿದ್ದ ಗುಂಪು ಶುರುವಲ್ಲಿ ಇವನನ್ನು ವಿಚಿತ್ರವಾಗಿ ನೋಡುತ್ತದೆ.
ವಿರೋಧಿಸಬೇಕಾ, ಪರ ನಿಲ್ಲಬೇಕಾ ಅಂತ ಯೋಚಿಸುತ್ತದೆ. ಹಾಗೆ ನೋಡ್ತಾ ಇದ್ದಂತೆ ಆ ವಿರುದ್ಧ ಈಜಿನ ವ್ಯಕ್ತಿಯ ಹಿಂದೆ ಇನ್ನೊಂದು ನೂರು ಜನ ಈಜಿ ಬರುವುದು ಕಾಣುತ್ತದೆ. ಅಲ್ಲಿಂದ ಅಸಲಿ ಮಂಥನ ಶುರುವಾಗುತ್ತದೆ. ಯೆಸ್. ಟೂರಿಸ್ಟ್ ಫ್ಯಾಮಿಲಿ ಮೊದಲ ಸುತ್ತಿನ ಹೊಗಳಿಕೆಯ ನಂತರ ಆಳದ ವಿಮರ್ಶೆಗೆ ಒಳಪಡಲಾರಂಭಿಸಿತು.
ಚಿತ್ರದ ಒಳಗಿರೋ ಹಿಡನ್ ಅಜೆಂಡಾ ಮತ್ತು ಪ್ರಾಪಗ್ಯಾಂಡಗಳ ಅನಾವರಣವಾಯಿತು. ಜನ ಆಗ ಯೋಚಿಸಲಾರಂಭಿಸಿದರು. ಅರೆ ಹೌದಲ್ಲ, ನಾವು ಈ ದೃಷ್ಟಿಕೋನದಲ್ಲಿ ಯೋಚಿಸಲೇ ಇಲ್ಲವಲ್ಲ ಎಂದು. ಕೊನೆಗೆ ಮತ್ತದೇ ದ್ವಂದ್ವ. ಕಾನೂನು ಕಟ್ಟಳೆ ಮುಖ್ಯವೋ, ಮಾನವೀಯತೆ ಮುಖ್ಯವೋ. ಈ ಚಿತ್ರವನ್ನು ಮೆಚ್ಚಿದ್ದು ತಪ್ಪೋ ಸರಿಯೋ. ಮೆಚ್ಚಬೇಕಿತ್ತೋ ವಿರೋಧಿಸಬೇಕಿತ್ತೋ! ಸಿನಿಮಾದ ಗೆಲುವಿಗೆ ಇದಕ್ಕಿಂತ ಇನ್ನೇನು ಬೇಕು?
ಸೋಷಿಯಲ್ ಮೀಡಿಯಾದಲ್ಲಿ ಎಲ್ಲ ವಿಮರ್ಶೆಗಳನ್ನು ಓದಿದ ನಂತರ ಸಿನಿಮಾ ನೋಡುವ ಯಾರೇ ಆದರೂ ಪೂರ್ವಗ್ರಹ ಪೀಡಿತರಾಗುವುದು ಸಹಜ. ಆದರೆ ನನಗೆ ಸಿನಿಮಾ ನೋಡುವ ಕಲೆ ಒಲಿದಿರುವುದರಿಂದ ಎಲ್ಲವನ್ನೂ ಮರೆತು ನೋಡುತ್ತಾ ಹೋದೆ. ನಾನು ಪ್ರತಿ ಸಿನಿಮಾವನ್ನೂ ತೀರಾ ಸಾಮಾನ್ಯ ಪ್ರೇಕ್ಷಕನಾಗಿ ನೋಡುವುದನ್ನು ಇಷ್ಟಪಡುತ್ತೇನೆ. ಅದು ನನ್ನ ಸುಖಕ್ಕಾಗಿ. ಅಳಿಸುವ ತಾಕತ್ತಿರುವ ದೃಶ್ಯ ಅಳಿಸಬೇಕು. ನಗಿಸುವ ಶಕ್ತಿ ಇರುವ ಸೀನ್ ನಗಿಸಬೇಕು. ಸಿನಿಮಾ ನೋಡುವಾಗ ವಿಮರ್ಶಕನಾಗಬಾರದು. ನೋಡಿದ ಮೇಲೆ ವಿಮರ್ಶಕನಾಗಬೇಕು.
ಟೂರಿಸ್ಟ್ ಫ್ಯಾಮಿಲಿ ಚಿತ್ರದ ಕಥೆಯ ಎಳೆ ಚಿಕ್ಕದು. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉದ್ಭವ ವಾಗಿರುವುದರಿಂದ, ಅಲ್ಲಿ ಬದುಕು ದುಸ್ತರವಾಗಿ ಒಂದು ಕುಟುಂಬ ರಾತ್ರೋರಾತ್ರಿ ಜಲಮಾರ್ಗ ದಲ್ಲಿ ಕದ್ದು ಭಾರತದ ಗಡಿ ದಾಟುತ್ತದೆ. ರಾಮೇಶ್ವರದಲ್ಲಿ ಪೊಲೀಸರನ್ನು ಯಾಮಾರಿಸಿ, ಎಮೋಶನಲ್ ಆಗಿ ಪಳಗಿಸಿ ಚೆನ್ನೈ ತಲುಪಿಕೊಳ್ಳುತ್ತದೆ. ನಕಲಿ ಕಾರ್ಡ್ಗಳನ್ನು ಮಾಡಿಕೊಂಡು ಸೆಟ್ಲ್ ಆಗುತ್ತಾರೆ.
ತಾವು ನಿರಾಶ್ರಿತರು ಎಂದು ಹೇಳಿಕೊಳ್ಳದೆಯೇ ನೆರೆಹೊರೆಯವರನ್ನೆಲ್ಲ ತಮ್ಮ ಮಾನವೀಯ ಗುಣದಿಂದ, ಸ್ನೇಹಪರತೆಯಿಂದ ಗೆಲ್ಲುತ್ತಾರೆ. ಆ ನಂತರ ಸತ್ಯ ಹೇಳಿಕೊಳ್ಳುತ್ತಾರೆ. ಆದರೆ ಭಾರತ ದವರು ಈ ಶ್ರೀಲಂಕನ್ ನಿರಾಶ್ರಿತರನ್ನು ತಮ್ಮವರನ್ನಾಗಿಸಿಕೊಳ್ಳುತ್ತಾರೆ. ಕಾನೂನಿನ ಕೈಯಿಂದಲೂ ಉಳಿಸುತ್ತಾರೆ. ಶುಭಂ. ಹೌದು ಸಿನಿಮಾ ಅಂತ ನೋಡಿದಾಗ, ದೃಶ್ಯಗಳು ನಗಿಸುವಲ್ಲಿ, ಅಳಿಸುವಲ್ಲಿ ಯಶಸ್ವಿಯಾಗಿವೆ.
ಒಬ್ಬೊಬ್ಬರ ಅಭಿನಯ, ದೃಶ್ಯಕಟ್ಟುವಿಕೆ, ಭಾವುಕ ಸನ್ನಿವೇಶಗಳು ಎಲ್ಲವೂ ಸೂಪರ್. ನಾನು ಎರಡು ಮೂರು ದೃಶ್ಯಗಳಲ್ಲಿ ನನಗೇ ಅರಿವಿಲ್ಲದೆ ಕಣ್ಣೀರು ತುಂಬಿಕೊಂಡೆ. ಆದರೆ ಸಿನಿಮಾ ಮುಗಿದ ನಂತರ ಬೇಡವೆಂದರೂ ಆಶಯದ ಬಗ್ಗೆ ಪ್ರಶ್ನೆ ಏಳುತ್ತದೆ. ಲಕ್ಕೀ ಭಾಸ್ಕರ್ ಚಿತ್ರದಲ್ಲಿ ನಾಯಕ ಕುಟುಂಬಕ್ಕಾಗಿ ಫೈನಾನ್ಷಿಯಲ್ ಫ್ರಾಡ್ ಮಾಡುವುದರ ಬಗ್ಗೆ ವಿಮರ್ಶಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಸಂದೇಶದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.
ಈ ಚಿತ್ರ ಕೂಡ ಅದಕ್ಕಿಂತ ಆತಂಕಕಾರಿ ಸಂದೇಶವನ್ನು ಸುಪ್ತವಾಗಿ ನೀಡುತ್ತದೆ. ಅಕ್ರಮ ವಲಸೆ ಒಪ್ಪಿತ. ಮಾನವೀಯತೆ ಮೊದಲು ಎಂದು ಜನರನ್ನು ಒಪ್ಪಿಸುವ ನಿಟ್ಟಿನಲ್ಲಿ ಟ್ಯೂನ್ ಮಾಡುತ್ತದೆ ಟೂರಿಸ್ಟ್ ಫ್ಯಾಮಿಲಿ. ಇದು ಪ್ರಾಪಗ್ಯಾಂಡ ಬಿತ್ತುವ ಉದ್ದೇಶ ಹೊತ್ತುಕೊಂಡೇ ಬಂದಿದೆ ಅನಿಸುವುದು ಯಾಕೆ ಅಂದರೆ, ಚಿತ್ರದ ಮೊದಲಲ್ಲಿ ಅಥವಾ ಅಟ್ ಲೀಸ್ಟ್ ಕೊನೆಯಲ್ಲಿ ಒಂದು ಡಿಸ್ಕ್ಲೈಮರ್ ಕೂಡ ಹಾಕುವುದಿಲ್ಲ.
ಅಕ್ರಮ ವಲಸೆ ಯಾವುದೇ ಕಾರಣಕ್ಕೇ ಆದರೂ ಕಾನೂನುಬಾಹಿರ. ಈ ಚಿತ್ರ ಅದನ್ನು ಬೆಂಬಲಿಸುವುದಿಲ್ಲ ಎಂಬ ಒಂದು ಡಿಸ್ಕ್ಲೈಮರ್ ಆದರೂ ಹಾಕಿದ್ದರೆ ಚಿತ್ರಕ್ಕೆ ಘನತೆ ಸಿಗುತ್ತಿತ್ತು. ಬಾಲಿವುಡ್ನಲ್ಲಿ ರಾಜ್ಕುಮಾರ್ ಹಿರಾನಿ ‘ಡಂಕೀ’ ಎಂಬ ಚಿತ್ರ ನಿರ್ದೇಶಿಸಿದ್ದರು. ಅದು ಕೂಡ ಅಕ್ರಮವಲಸೆ ಕುರಿತ ಚಿತ್ರ. ಡಂಕೀ ಅಂದರೇನೇ ಅದು ಅಕ್ರಮಮಾರ್ಗದಲ್ಲಿ ದೇಶ ದಾಟುವ ಪ್ರಕ್ರಿಯೆ. ಡಂಕೀ ಚಿತ್ರ ಅಕ್ರಮ ವಲಸೆಯ ಪರ ನಿಂತು ಮಾಡಿದ್ದ ಸಿನಿಮಾ.
‘ಯಾವ್ಯಾವುದೋ ಅನಿವಾರ್ಯತೆಗೆ, ಸೂಕ್ತ ದಾಖಲೆಗಳಿಲ್ಲದೆ ಗಡಿ ದಾಟಿ ಹೋಗಬೇಕಾಗುತ್ತದೆ. ಮನುಷ್ಯತ್ವ ಮೊದಲು ಎಂಬುದನ್ನು ಪರಿಗಣಿಸಿ’ ಎಂಬ ನೇರ ಸಂದೇಶ ನೀಡಿದ ಚಿತ್ರ. ಇದು ನೇರ ಸಂದೇಶ ನೀಡಿದೆ, ಹಿಡನ್ ಅಜೆಂಡಾ ಇಟ್ಟುಕೊಂಡಿಲ್ಲ ಅಂತ ಸಮರ್ಥಿಸಬಹುದಾ? ನೋ. ಇನ್ ಫ್ಯಾಕ್ಟ್ ಡಂಕೀ ಚಿತ್ರದಲ್ಲಿ ಭಾರತೀಯರು ವಿದೇಶಕ್ಕೆ ಅಕ್ರಮ ವಲಸೆ ಹೋಗಿ ಅಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳುವಂತೆ ಚಿತ್ರಿಸಲಾಗಿದೆ.
ಇಲ್ಲಿ ನಾವು ಗಮನಿಸಬೇಕಾದ ಅಂಶ ಒಂದಿದೆ. ದೇಶದಲ್ಲಿ ‘ಸಿಎಎ’ ಮತ್ತು ‘ಎನ್ಆರ್ಸಿ’ ಜಾರಿಗೆ ತರಲು ಕೇಂದ್ರ ಸರಕಾರ ಉದ್ದೇಶಿಸಿದ್ದ ಸಮಯದಲ್ಲಿ ಅದರ ವಿರುದ್ಧ ಹೋರಾಟಗಳು ಶುರು ವಾದವು. ಅಕ್ರಮ ವಲಸೆ ತಡೆಯಲು ಸಿಎಎ ಮತ್ತು ಎನ್ಆರ್ಸಿ ಅತ್ಯಗತ್ಯ ಅಂತ ಗೊತ್ತಿದ್ದರೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಪಕ್ಷಗಳು ಅಕ್ರಮ ವಲಸಿಗರನ್ನೇ ನಂಬಿಕೊಂಡಿ ರುವುದರಿಂದ ಇದರ ವಿರುದ್ಧ ನಿಂತಿದ್ದವು.
ಇಂಥ ಸಮಯದಲ್ಲಿ ರಾಜ್ಕುಮಾರ್ ಹಿರಾನಿ ಪಾಕಿಸ್ತಾನಿಯರೋ, ಬಾಂಗ್ಲಾದೇಶಿಯರೋ ಭಾರತಕ್ಕೆ ಡಂಕೀ ಮಾರ್ಗದಲ್ಲಿ ಬಂದು ಸಮರ್ಥನೆಗೆ ನಿಲ್ಲುವ ಸಿನಿಮಾ ಮಾಡಲು ಸಾಧ್ಯ ಇರಲಿಲ್ಲ. ಆ ಸಿನಿಮಾವನ್ನು ಜನ ಒಪ್ಪುತ್ತಲೂ ಇರಲಿಲ್ಲ. ಹೀಗಾಗಿ ಜಾಣ ಹಿರಾನಿ ಭಾರತೀಯರನ್ನೇ ಅಕ್ರಮವಲಸಿಗರನ್ನಾಗಿ ತೋರಿಸಿ ಒಪ್ಪಿಸುವ ಜಾಣತನ ತೋರಿದ.
ಪ್ರೇಕ್ಷಕ ಇದನ್ನು ಒಪ್ಪಿದರೆ, ಬಾಂಗ್ಲಾ, ಪಾಕಿ, ಆಫ್ಘನ್, ಶ್ರೀಲಂಕ ಇವರೆಲ್ಲರ ಅಕ್ರಮ ವಲಸೆ ಒಪ್ಪಲೇಬೇಕಲ್ಲವಾ! ಇದು ನೇರ ಸಿನಿಮಾ ಎಂಬಂತೆ ಮಾಡಿ ಅಜೆಂಡಾವನ್ನು ಅಡಗಿಸಿಟ್ಟಿದ್ದಲ್ಲವಾ? ಹೀಗಾಗಿ ಟೂರಿಸ್ಟ್ ಫ್ಯಾಮಿಲಿ ಮತ್ತು ಡಂಕೀ ಎರಡೂ ಡೇಂಜರಸ್ ಸಿನಿಮಾಗಳೇ. ನಕ್ಸಲರನ್ನು, ಭಯೋತ್ಪಾದಕರನ್ನು, ಅಂಡರ್ ವಲ್ಡ ಕ್ರಿಮಿಗಳನ್ನು ವೈಭವೀಕರಿಸಿ, ಅವರ ಮೇಲೆ ಸಿಂಪಥಿ ಹುಟ್ಟಿಸಿ ಹೀರೋಗಳನ್ನಾಗಿ ಮಾಡುವ ಸಿನಿಮಾಗಳು ಕಾಲಕಾಲಕ್ಕೆ ಬಂದು ಹೋಗಿವೆ. ಅದರ ಮುಂದುವರಿದ ಭಾಗವೇ ಅಕ್ರಮ ವಲಸಿಗರನ್ನು ಒಳ್ಳೆಯವರು ಎಂದು ಬಿಂಬಿಸುವ ಸಿನಿಮಾಗಳು.
ನಿಮಗೆ ನೆನಪಿರಬಹುದು. ಎಂಬತ್ತರ ದಶಕದಲ್ಲಿ ನಮ್ಮದೇ ರಾಜ್ಯದ ನಾರಾಯಣ ಅನ್ನೋವ್ರು ಮೀನು ಹಿಡಿಯಲು ಹೋಗಿ, ಪ್ರಕೃತಿ ವಿಕೋಪಕ್ಕೆ ಸಿಲುಕಿ ಅರಿವಿಲ್ಲದೇ ಭಾರತದ ಗಡಿಯಿಂದ ಪಾಕ್ ಗಡಿಗೆ ಬಿಸಾಕಲ್ಪಡುತ್ತಾರೆ. ತಾವು ಗಡಿ ದಾಟಿದ್ದೇವೆ ಎಂಬುದೂ ಅವರಿಗೆ ಗೊತ್ತಿರೋದಿಲ್ಲ.
ಆದರೆ ಪಾಕಿಸ್ತಾನ ಅದನ್ನು ಅಕ್ರಮ ವಲಸೆ ಎಂದು ಪರಿಗಣಿಸಿ ಅವರನ್ನು ಬರೋಬ್ಬರಿ ಇಪ್ಪತ್ತೊಂದು ವರ್ಷ ಜೈಲಿನಲ್ಲಿಡುತ್ತದೆ. ಡಿಪೋರ್ಟ್ ಕೂಡ ಮಾಡುವುದಿಲ್ಲ. ವಾಜಪೇಯಿ ಅವರ ಅವಧಿಯಲ್ಲಿ ಅವರಿಗೆ ಬಿಡುಗಡೆ ಸಿಕ್ಕು ಭಾರತಕ್ಕೆ ಮರಳುತ್ತಾರೆ. ‘ಮತ್ತೆ ಮುಂಗಾರು’ ಎಂಬ ಚಿತ್ರ ಇದೇ ಕಥಾನಕವನ್ನು ಇಟ್ಟುಕೊಂಡು ತಯಾರಾಗಿತ್ತು.
ಗೊತ್ತಿದ್ದೋ ಗೊತ್ತಿಲ್ಲದೆಯೋ, ಅನಿವಾರ್ಯತೆಗೋ ಇನ್ನೇನಕ್ಕೋ ದೇಶದ ಗಡಿ ದಾಟಿ ಇನ್ನೊಂದು ದೇಶಕ್ಕೆ ಕಾಲಿಡುವುದು ಸಮರ್ಥನೀಯ ಅಲ್ಲವೇ ಅಲ್ಲ. ಭಾವನೆಗಳ ಹೆಸರಲ್ಲಿ ಜನರನ್ನು ಇಂಥ ವಿಚಾರಗಳಲ್ಲಿ ದಿಕ್ಕುತಪ್ಪಿಸುವುದು ಅಪಾಯಕಾರಿ ಬೆಳವಣಿಗೆ. ಜನ ಇದನ್ನು ಸಿನಿಮಾವಾಗಿ ಮೆಚ್ಚುವುದು ತಪ್ಪೇನಲ್ಲ. ಆದರೆ ಆ ನಂತರ ಈ ಸಿನಿಮಾದ ಸಂದೇಶವನ್ನು ಖಂಡಿಸದೇ ಹೋದರೆ, ಕಡೇಪಕ್ಷ ಗಮನಿಸದೇ ಹೋದರೆ ಅದು ಆತಂಕಪಡಬೇಕಾದ ವಿಷಯ.
ಕನ್ನಡ, ಹಿಂದಿ, ತಮಿಳು ಅಂತ ಬಡಿದಾಡುವವರು, ಕ್ರಿಕೆಟ್ ಫ್ರಾಂಚೈಸ್ ಹೆಸರಲ್ಲಿ ಭಾಷಾಭಿಮಾನ ಮೆರೆಯುವವರು, ಒಂದು ಅಕ್ರಮ ವಲಸೆಯ ಚಿತ್ರವನ್ನು, ಅದೂ ಪರದೇಶದಿಂದ ಭಾರತಕ್ಕೆ ನುಸುಳುವವರನ್ನು ಒಪ್ಪಿ ‘ಆಹಾ ಓಹೋ’ ಎನ್ನುತ್ತಿರುವುದು ಕಣ್ಣೀರಿಡುತ್ತಿರುವುದು ವಿಪರ್ಯಾಸ!
‘ಪ್ರತಿ ಸನ್ಯಾಸಿಗೂ ಒಂದು ಪಾತಕ ಇತಿಹಾಸ, ಪ್ರತಿ ಪಾತಕಿಗೂ ಒಂದು ಒಳ್ಳೇ ಭವಿಷ್ಯ ಇರುತ್ತದೆ’ ಅನ್ನೋ ಮಾತು ನಿಜವಿರಬಹುದು. ಆದರೆ ಪಾತಕವನ್ನು ಒಪ್ಪಲಾಗುವುದಿಲ್ಲವಲ್ಲ. ಅಪರಾಧಕ್ಕೆ ಶಿಕ್ಷೆ ಆಗಲೇಬೇಕು. ಅದೇ ರೀತಿ ಮಾನವೀಯತೆಗೆ ಮಣೆ ಹಾಕಿ, ಅಕ್ರಮವಲಸೆಯನ್ನು ಒಪ್ಪಿಕೊಳ್ಳ ಲಾಗುವುದಿಲ್ಲ.
ಮನೆಯಲ್ಲಿ ಆರ್ಥಿಕ ಸಂಕಷ್ಟವಿದೆ ಅಂತ ನೆರೆಮನೆಗೆ ಹೋಗಿ ಇರಲಾಗುವುದಿಲ್ಲ ಅಲ್ಲವೇ? ನೆರೆಹೊರೆಯವರ ಆರ್ಥಿಕ ಕಷ್ಟಗಳಿಗೇ ಮಿಡಿಯದ ಜನರು ಅರ್ಥಿಕಸಂಕಷ್ಟದಿಂದ ಅಕ್ರಮವಲಸೆ ಬಂದವನನ್ನು ಒಪ್ಪಿಕೊಳ್ಳುವುದರಲ್ಲಿ ಯಾವ ಲಾಜಿಕ್ ಇದೆ? ಪೊಲೀಸ್ ವ್ಯವಸ್ಥೆ, ಭದ್ರತಾ ವ್ಯವಸ್ಥೆ ಮತ್ತು ಭಾರತೀಯರ ಎಮೋಷನ್ಗಳನ್ನು ಅಣಕಿಸುವ ಸಿನಿಮಾ ಈ ಟೂರಿಸ್ಟ್ ಫ್ಯಾಮಿಲಿ.
ತಮಿಳುನಾಡು ಈಗ ಅಕ್ರಮ ವಲಸಿಗರ ಅತಿ ದೊಡ್ಡ ತಾಣವಾಗಿದೆ. ಶ್ರೀಲಂಕನ್ ನಿರಾಶ್ರಿತರೇ ಸ್ಟಾಲಿನ್ ನ ಅತಿ ದೊಡ್ಡ ವೋಟ್ ಬ್ಯಾಂಕ್. ಲಕ್ಷಗಟ್ಟಲೆ ಇರುವ ಶ್ರೀಲಂಕನ್ ರೆಫ್ಯೂಜಿಗಳನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ಸ್ಟಾಲಿನ್ ತಯಾರಿಲ್ಲ. ಈಗಾಗಲೇ ಸರಕಾರದ ಬೊಕ್ಕಸದ ಅತಿ ದೊಡ್ಡ ಪಾಲು ಶ್ರೀಲಂಕನ್ ನಿರಾಶ್ರಿತರ ಪಾಲಾಗಿದೆ.
ಅವರಿಗೆ ಅಕ್ರಮವಾಗಿ ವೋಟರ್ ಐಡಿ, ಆಧಾರ್ ಕೂಡ ಕೊಟ್ಟದ್ದಾಗಿದೆ. ಇನ್ನು ಉಳಿದಿರೋ ದೇನು? ಮುಂದಿನ ವರ್ಷ ಬರುವ ಚುನಾವಣೆಯಲ್ಲಿ ಅವರೆಲ್ಲರೂ ಸ್ಟಾಲಿನ್ ಪಕ್ಷಕ್ಕೆ ವೋಟ್ ಹಾಕಿ ಗೆಲ್ಲಿಸೋದು. ಅಷ್ಟೇ! ತಮಿಳುನಾಡಲ್ಲಿ ಬಿಜೆಪಿ ಬಲಗೊಳ್ಳುತ್ತಿದೆ. ಎಐಎಡಿಎಂಕೆ ಮೈತ್ರಿ ಯಾಗುತ್ತಿದೆ. ತೃತೀಯ ಶಕ್ತಿಯಾಗಿ ವಿಜಯ್ ಪಕ್ಷ ಹೊರಹೊಮ್ಮುತ್ತಿದೆ. ಇಂಥ ಟೈಮಲ್ಲಿ ‘ಸಿಎಎ’, ‘ಎನ್ಆರ್ಸಿ’ ಜಾರಿ ಆಗೇಬಿಡುತ್ತದೆ ಎಂಬ ಆತಂಕವೂ ಸ್ಟಾಲಿನ್ಗಿದೆ.
ಈಗ ನಿರಾಶ್ರಿತರ ವೋಟ್ ಉಳಿಸಿಕೊಳ್ಳೋದು ಸ್ಟಾಲಿನ್ಗೆ ಬಹುಮುಖ್ಯವಾಗಿದೆ. ತಮಿಳುನಾಡಿನ ಜನರಲ್ಲೂ ನಿರಾಶ್ರಿತರ ಬಗ್ಗೆ ಒಳ್ಳೇ ಭಾವನೆ ಬಿತ್ತುವುದು ಅಗತ್ಯವಾಗಿದೆ. ಈ ದಿಸೆಯಲ್ಲಿ ಬಂದಿರೋ ಚಿತ್ರವೇ ಟೂರಿಸ್ಟ್ ಫ್ಯಾಮಿಲಿ ಎಂಬ ಸುಪ್ತಸಂದೇಶದ ಟೂಲ್ಕಿಟ್ ಚಿತ್ರ. ತಮಿಳುನಾಡಿನಲ್ಲಿ ಬ್ರೇನ್ ವಾಷ್ ಮಾಡೋಕೆ ಬಂದಿರೋ ಈ ಚಿತ್ರ ಇಡೀ ದೇಶದ ಬ್ರೇನ್ ವಾಷ್ ಮಾಡೋ ಕೆಲಸ ಮಾಡುತ್ತಿದೆ. ಜನರು ಭಾವನೆಗಳಿಗೆ ಮರುಳಾಗಿ ಅಪಾಯಕಾರಿ ಸಂದೇಶವನ್ನು ನಿರ್ಲಕ್ಷಿಸುತ್ತಿದ್ದಾರೆ. ಇದು ನಿಜವಾದ ಟ್ರ್ಯಾಜಿಡಿ.