ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thimmanna Bhagwat Column: ಇದು ಅಮಾನುಷವನ್ನು ತೊಲಗಿಸುವ ಮನೀಷೆ...

ಸ್ವಾತಂತ್ರ್ಯೋತ್ತರ ಭಾರತದಲ್ಲೂ ಜಾತಿವ್ಯವಸ್ಥೆ ಪ್ರಮುಖ ರಾಜಕೀಯ ಅಸ್ತ್ರವಾಗಿ ಬೆಳೆಯಿತು. ಆದರೆ ಜಾತ್ಯಾಧಾರಿತ ತಾರತಮ್ಯ ನಿವಾರಣೆಗೆ ಅನೇಕ ಕಾನೂನುಗಳು ಜಾರಿಗೆ ಬಂದವು. ಡಾ. ಅಂಬೇಡ್ಕರರಂಥ ಮಹನೀಯರ ಆಶಯ ಮತ್ತು ಒತ್ತಾಯದ ಫಲವಾಗಿ ಜಾತ್ಯಾಧಾರಿತ ತಾರತಮ್ಯ ಮತ್ತು ಅಸ್ಪೃಶ್ಯತೆ ಗಳನ್ನು ಸ್ಪಷ್ಟವಾಗಿ ನಿಷೇಧಿಸುವ 15 ಮತ್ತು 17ನೇ ವಿಧಿಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದ 16, 46, 342(1),366 ವಿಧಿಗಳನ್ನು ಸಂವಿಧಾನದಲ್ಲಿ ಸೇರಿಸಲಾಯಿತು.

ಇದು ಅಮಾನುಷವನ್ನು ತೊಲಗಿಸುವ ಮನೀಷೆ...

Profile Ashok Nayak Jun 17, 2025 8:01 AM

ಕಾನೂನು ಸೆನ್ಸ್‌

ತಿಮ್ಮಣ್ಣ ಭಾಗ್ವತ್

ಜಾಗ್ರತ್ಸ್ವಪ್ನ ಸುಷುಪ್ತಿಷು ಸ್ಪುಟತರಾ ಯಾ ಸಂವಿ ದುಜ್ಜೃಂಭತೇ ಯಾ ಬ್ರಹ್ಮಾದಿಪಿಪೀಲಿಕಾತ ತನುಷು ಪ್ರೋತಾ ಜಗತ್ಸಾಕ್ಷಿಣೀ| ಸೈವಾಹಂ ನ ಚ ದೃಶ್ಯವಸ್ತ್ವಿತಿ ದೃಢಪ್ರಜ್ಞಾಪಿ ಯಸ್ಯಾಸ್ತಿಚೇ- ಚ್ಚಾಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ"|1| (ಮನೀಷಾ ಪಂಚಕಂ- ಆದಿ ಶಂಕರಾಚಾರ್ಯರು).

ಸನಾತನ ಧರ್ಮದ ಮೂಲ ತತ್ವಗಳಲ್ಲಿ ಜಾತ್ಯಾಧಾರಿತ ತಾರತಮ್ಯ ಮತ್ತು ಅಸ್ಪೃಶ್ಯತೆಯಂಥ ಅಮಾನವೀಯ ಅಂಶಗಳು ಇರಲಿಲ್ಲ ಎಂಬುದಕ್ಕೆ ಸಾಕ್ಷಾತ್ ಶಿವನ ಜತೆ ಆದಿಶಂಕರರು ನಡೆಸಿದ ಈ ಸಂವಾದಕ್ಕಿಂತ ಹೆಚ್ಚಿನ ದೃಷ್ಟಾಂತ ಬೇಕಾಗಿಲ್ಲ. ಸೃಷ್ಟಿಕರ್ತನಾದ ಬ್ರಹ್ಮನಿಂದ ಇರುವೆಯಷ್ಟು ಸಣ್ಣ ಜೀವಿಯವರೆಗೆ ಎಲ್ಲರಲ್ಲಿ ಎಚ್ಚರ, ಸ್ವಪ್ನ ಮತ್ತು ಗಾಢನಿದ್ರೆಯ ಅವಸ್ಥೆಗಳಲ್ಲಿಯೂ ಪ್ರಕಾಶಿ ಸುವ ಆ ಚೈತನ್ಯವೇ ನಾನು ಹೊರತು ಕಣ್ಣಿಗೆ ಕಾಣುವ ಶರೀರವಲ್ಲ ಮತ್ತು ಅಂಥ ಜ್ಞಾನ ಹೊಂದಿ ದವನು ಚಾಂಡಾಲನಾಗಲೀ ಬ್ರಾಹ್ಮಣನಾಗಲೀ ಗುರುವೆಂದೇ ತಿಳಿಯುತ್ತೇನೆ ಎಂದು ಶಂಕರ ಭಗವತ್ಪಾದರು ಹೇಳಿದ್ದಾರೆ.

ಇದನ್ನೇ ಸ್ವಾಮಿ ವಿವೇಕಾನಂದರೂ ಪ್ರತಿಪಾದಿಸಿ ಜಾತ್ಯಾಧಾರಿತ ತಾರತಮ್ಯವು ಮೂಲಧರ್ಮದ ಭಾಗವಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿ ಕಾಲಾಂತರದಲ್ಲಿ ಸೇರಿಹೋಗಿರುವ ಅಂಥ ಅನಿಷ್ಟಗಳನ್ನು ಕಿತ್ತುಹಾಕಬೇಕೆಂದು ಕರೆ ನೀಡಿದರು.

ಹಿಂದೂಗಳಲ್ಲಿರುವ ಜಾತಿ ವ್ಯವಸ್ಥೆ ಮೂಲದಲ್ಲಿ ಉದ್ಯೋಗಾಧಾರಿತವಾಗಿದ್ದರೂ ಕಾಲಕ್ರಮದಲ್ಲಿ ಜನ್ಮದಿಂದಲೇ ಜಾತಿ ಗುರುತಿಸುವ ಹಾಗೂ ಅದರ ಆಧಾರದಲ್ಲಿ ಮೇಲು ಕೀಳೆಂದು ಪರಿಗಣಿಸುವ ಪದ್ಧತಿಯಾಗಿ ಬೆಳೆಯಿತು ಮತ್ತು ಅಸ್ಪೃಶ್ಯತೆಯಂಥ ಅನಿಷ್ಟಗಳು ಮೂಲತತ್ವಗಳಿಗೆ ವಿರುದ್ಧವಾಗಿ ಆಚರಣೆಗೆ ಬಂದವು.

ಇದನ್ನೂ ಓದಿ: Thimmanna Bhagwat Column: ಏಕರೂಪದ ನಾಗರಿಕ ಸಂಹಿತೆ: ಬೆಳಗಲಿ ಹೃದಯ ದೀವಿಗೆ

ಇಂಥ ಅನಿಷ್ಟಗಳ ವಿರುದ್ಧ ಅನೇಕ ಸಮಾಜ ಸುಧಾರಕರು ಸ್ವಾತಂತ್ರ್ಯ ಪೂರ್ವದಲ್ಲೇ ಹೋರಾಟ ನಡೆಸಿದರು. ಆದರೆ ಜಾತ್ಯಾಧಾರಿತ ತಾರತಮ್ಯ ಮತ್ತು ಅಸ್ಪೃಶ್ಯತೆ ವಿರುದ್ಧ ಬ್ರಿಟಿಷರು ಯಾವುದೇ ಕಾನೂನುಗಳನ್ನು ಜಾರಿ ಮಾಡಲಿಲ್ಲ. ಬದಲಾಗಿ ಜಾತಿಗಣತಿಯಂಥ ಉಪಕ್ರಮಗಳ ಮೂಲಕ ಜಾತಿ ವ್ಯವಸ್ಥೆಯನ್ನು ಅಧಿಕೃತಗೊಳಿಸಿದ್ದರಿಂದ ಅದು ಸರಕಾರಿ ದಾಖಲೆಗಳ ಒಂದು ಅನಿವಾರ್ಯ ಭಾಗವಾಯಿತು.

ಸ್ವಾತಂತ್ರ್ಯೋತ್ತರ ಭಾರತದಲ್ಲೂ ಜಾತಿವ್ಯವಸ್ಥೆ ಪ್ರಮುಖ ರಾಜಕೀಯ ಅಸ್ತ್ರವಾಗಿ ಬೆಳೆಯಿತು. ಆದರೆ ಜಾತ್ಯಾಧಾರಿತ ತಾರತಮ್ಯ ನಿವಾರಣೆಗೆ ಅನೇಕ ಕಾನೂನುಗಳು ಜಾರಿಗೆ ಬಂದವು. ಡಾ. ಅಂಬೇಡ್ಕರರಂಥ ಮಹನೀಯರ ಆಶಯ ಮತ್ತು ಒತ್ತಾಯದ ಫಲವಾಗಿ ಜಾತ್ಯಾಧಾರಿತ ತಾರತಮ್ಯ ಮತ್ತು ಅಸ್ಪೃಶ್ಯತೆಗಳನ್ನು ಸ್ಪಷ್ಟವಾಗಿ ನಿಷೇಧಿಸುವ 15 ಮತ್ತು 17ನೇ ವಿಧಿಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದ 16, 46, 342(1),366 ವಿಧಿಗಳನ್ನು ಸಂವಿಧಾನದಲ್ಲಿ ಸೇರಿಸಲಾಯಿತು.

1955ರ ಅಸ್ಪೃಶ್ಯತಾ (ಅಪರಾಧ) ಕಾಯಿದೆಯು ಅಸ್ಪೃಶ್ಯತೆಯ ನಿರ್ಮೂಲನೆ ಕುರಿತಾದ ಮೊದಲ ಕಾನೂನು. 1976ರಲ್ಲಿ ಈ ಕಾಯಿದೆಗೆ ಕೆಲವು ತಿದ್ದುಪಡಿಗಳನ್ನು ಮಾಡಿ ಇದರ ಹೆಸರನ್ನು ‘ನಾಗರಿಕ ಹಕ್ಕುಗಳ ರಕ್ಷಣೆ ಕಾಯಿದೆ’ಯೆಂದು ಬದಲಾಯಿಸಲಾಯಿತು. ಆದರೆ ಈ ಪಿಡುಗನ್ನು ತೊಲಗಿಸಲು ಸಮಗ್ರವಾದ ಹಾಗೂ ಪ್ರತ್ಯೇಕವಾದ ಹೆಚ್ಚು ಪರಿಣಾಮಕಾರಿ ಕಾಯಿದೆಯ ಅವಶ್ಯಕತೆ ಇದೆಯೆಂದು ಭಾರತ ಸರಕಾರ ಮನಗಂಡಿದ್ದರಿಂದ “1989ರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯಿದೆ"ಯನ್ನು (SC ST - Prevention of Attrocity Act) ಹಾಗೂ 1995ರ ನಿಯಮಾ‌ವಳಿಗಳನ್ನೂ ಜಾರಿಗೆ ತರಲಾಯಿತು.

ಈ ಕಾಯಿದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಅನೇಕ ತಿದ್ದುಪಡಿಗಳನ್ನು ಮಾಡಲಾ ಯಿತು. 2018ರಲ್ಲಿ ‘ಸುಭಾಸ ಮಹಾಜನ್ ವರ್ಸಸ್ ಭಾರತ ಸರಕಾರ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ಈ ಕಾಯಿದೆಯಡಿ ಅನಗತ್ಯ ಬಂಧನ ಮತ್ತು ನಿರೀಕ್ಷಣಾ ಜಾಮೀನು ನಿರಾಕರಣೆಯನ್ನು ತಡೆಗಟ್ಟಲು ಕೆಲವು ನಿಯಮಗಳನ್ನು ವಿಧಿಸಿ ಆದೇಶಿಸಿತು.

ಆದರೆ ಆನಂತರ ನಡೆದ ವ್ಯಾಪಕ ಪ್ರತಿಭಟನೆಯ ಕಾರಣದಿಂದ 2019ರಲ್ಲಿ ಈ ಕಾಯಿದೆಗೆ ತರಲಾದ ತಿದ್ದುಪಡಿಯು ಸುಪ್ರೀಂ ಕೋರ್ಟಿನ ಆದೇಶವನ್ನು ಅನೂರ್ಜಿತಗೊಳಿಸಿತು ಮತ್ತು ಸುಪ್ರೀಂ ಕೋರ್ಟು ತನ್ನ ಆದೇಶವನ್ನು ಭಾಗಶಃ ಹಿಂಪಡೆಯಬೇಕಾಗಿ ಬಂತು. ಈ ಕಾಯಿದೆಯು ಎಸ್‌ಸಿ/ಎಸ್‌ಟಿ ಸಮುದಾಯದ ಜನರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆದು ಅವರಿಗೆ ಸಮಾಜ ದಲ್ಲಿ ಗೌರವದಿಂದ ಬದುಕುವ ಹಕ್ಕನ್ನು ಒದಗಿಸುವುದೇ ಮುಂತಾದ ಉದ್ದೇಶಗಳನ್ನು ಹೊಂದಿದೆ.

ಈ ಕಾಯಿದೆಯಡಿಯಲ್ಲಿ ಅಪರಾಧಗಳೆಂದು ಪರಿಗಣಿಸಲ್ಪಡುವ ಕೃತ್ಯಗಳನ್ನು ಕಲಂ 3 (1)ರಲ್ಲಿ (a) ಇಂದ ( zc ) ವರೆಗಿನ 29 ಉಪಕಲಂಗಳು, 3(2)ರಲ್ಲಿ (i) ರಿಂದ ( vii )ರ ವರೆಗಿನ 7 ಉಪಕಲಂ ಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಈ ಕಾಯಿದೆಯಡಿ ಬರುವ ಅಪರಾಧ ಕೃತ್ಯಗಳನ್ನು ಈ ಮುಂದಿನಂತೆ ವರ್ಗೀಕರಿಸಬಹುದು: ಸಾರ್ವಜನಿಕ ಕೊಳ, ಬಾವಿ ಮತ್ತು ಜಲಾಶಯಗಳಿಂದ ನೀರು ಬಳಸಲು ನಿರ್ಬಂಧ, ದಾರಿ ಹಾಗೂ ಇತರ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರ್ಬಂಧದಂಥ ಸಾಮಾಜಿಕ ತಾರತಮ್ಯ.

ಅವಮಾನಿಸುವ ಉದ್ದೇಶದಿಂದ ಜಾತಿಯ ಹೆಸರು ಹೇಳಿ ಸಾರ್ವಜನಿಕವಾಗಿ ನಿಂದಿಸುವುದು. ಮಲ ಅಥವಾ ಇತರ ತ್ಯಾಜ್ಯಗಳನ್ನು ಒತ್ತಾಯಪೂರ್ವಕವಾಗಿ ತಿನ್ನಿಸುವುದು, ಬೆತ್ತಲೆ ಮಾಡಿ ಥಳಿಸು ವುದು, ತಲೆ ಬೋಳಿಸಿ, ಚಪ್ಪಲಿಹಾರ ತೊಡಿಸಿ ಮೆರವಣಿಗೆ ಅಥವಾ ಇನ್ನಿತರ ದೈಹಿಕ ಹಿಂಸೆ, ಅತ್ಯಾಚಾರದಂಥ ವೈಯಕ್ತಿಕ ಹಾನಿ.

ಆಸ್ತಿಗಳಿಗೆ ಸಂಬಂಧಿಸಿದ ಅನ್ಯಾಯ: ಒತ್ತಾಯಪೂರ್ವಕ ಆಸ್ತಿಗಳ ಮಾರಾಟ, ಅಸ್ತಿಗಳನ್ನು ನಾಶ ಪಡಿಸುವುದು ಇಲ್ಲವೇ ಆಸ್ತಿಯನ್ನು ಅನುಭವಿಸಲು ಅಡ್ಡಿಪಡಿಸುವದು ಇತ್ಯಾದಿ.

ದುರುದ್ದೇಶಪೂರಿತ ಕಾನೂನುಕ್ರಮ ಕೈಗೊಳ್ಳುವುದು: ಖೊಟ್ಟಿ ಪ್ರಕರಣ ಹಾಕಿ ಅವರ ಬಂಧನಕ್ಕೆ ಕಾರಣರಾಗುವುದು, ಅವರ ವಿರುದ್ಧ ಸುಳ್ಳು ಸಾಕ್ಷಿ ಮತ್ತು ಪುರಾವೆ ಸೃಷ್ಟಿಸುವುದು.

ರಾಜಕೀಯ ತಾರತಮ್ಯ: ಉದಾಹರಣೆಗೆ ಮತದಾನ ಅಥವಾ ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವುದು. ಮತದಾನ/ಫಲಿತಾಂಶದ ನಂತರ ನಡೆಯುವ ಹಿಂಸೆ.

ಆರ್ಥಿಕ ಶೋಷಣೆ

ಇದಲ್ಲದೆ ಈ ಕಾಯಿದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅನೇಕ ಮುನ್ನೆಚ್ಚರಿಕೆ ಕ್ರಮಗಳು, ಸ್ವಯಂ ಪ್ರೇರಿತ ಪ್ರಕರಣ ದಾಖಲು, ವಿಶೇಷ ನ್ಯಾಯಾಲಯಗಳ ಸ್ಥಾಪನೆ, ಪ್ರತ್ಯೇಕ ತನಿಖಾ ವ್ಯವಸ್ಥೆ, ಸಂತ್ರಸ್ತರಿಗೆ ಆರ್ಥಿಕ ಸಹಾಯ ಮತ್ತು ಪುನರ್ವಸತಿ ಮುಂತಾದ ಕ್ರಮಗಳನ್ನು ಅಳವಡಿಸ ಲಾಗಿದೆ.

ಕಾಲಕಾಲಕ್ಕೆ ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೂ ಅನುಷ್ಠಾನ ಸಮಿತಿಗಳು, ದೌರ್ಜನ್ಯ ತಡೆಗೆ ಕೈಗೊಳ್ಳಲಾದ ಕ್ರಮಗಳ ಪರಾಮರ್ಶೆ ನಡೆಸಿ ಸರಕಾರಕ್ಕೆ ಕ್ರಮ ಕೈಗೊಂಡ ವರದಿ ಸಲ್ಲಿಸ ಬೇಕು. ಈ ಕಾಯಿದೆಯಡಿ ವ್ಯಾಖ್ಯಾನಿಸಲಾದ ಎಲ್ಲಾ ಅಪರಾಧಗಳೂ ಗುರುತಿಸಲ್ಪಡುವ ( cognizable) ಮತ್ತು ಜಾಮೀನುರಹಿತ ( non-bailable) ವಾಗಿರುವುದರಿಂದ ದೂರು ಬಂದಾಗ ಆರೋಪಿಯನ್ನು ಬಂಧಿಸಲಾಗುತ್ತದೆ ಮತ್ತು ಶೀಘ್ರ ತನಿಖೆ ನಡೆಸಿ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳ ಲಾಗುತ್ತದೆ.

ಸರಕಾರಿ ನೌಕರರು ಆರೋಪಿಗಳಾದಾಗ ಅವರ ಬಂಧನವಾದರೆ ಅಮಾನತಿಗೆ ಒಳಪಡುವುದರಿಂದ ಈ ಕಾಯಿದೆಯ ಪರಿಣಾಮ ಹೆಚ್ಚು ಕಠಿಣವೆನಿಸುತ್ತದೆ. ಈ ಕಾರಣಕ್ಕೆ ಅಂಥ ಯಾವುದೇ ಅಪರಾಧ ಮಾಡಲು ಜನರು ಹೆದರುವುದರಿಂದ ಇದೊಂದು ಅಪರಾಧ ಪ್ರತಿಬಂಧಕ ಕಾಯಿದೆ ಎನ್ನಬಹುದು.

೩ನೇ ಕಲಮಿನಲ್ಲಿ ಹೆಸರಿಸಲಾದ ಬಹುತೇಕ ಎಲ್ಲ ಕೃತ್ಯಗಳು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿಯೂ ಶಿಕ್ಷಾರ್ಹ ಅಪರಾಧಗಳೇ ಆಗಿರುತ್ತವೆ. ಆದರೆ attrocity ಕಾಯಿದೆಯಡಿ ಪ್ರಕರಣ ದಾಖಲಿಸಲು ಅಂಥ ಕೃತ್ಯಗಳು ಎಸ್.ಸಿ.ಗಳ ವಿರುದ್ಧ ಎಸ್.ಸಿ.ಯೇತರ ವ್ಯಕ್ತಿಗಳಿಂದ ಹಾಗೂ ಎಸ್.ಟಿ.ಗಳ ವಿರುದ್ಧ ಎಸ್.ಟಿ.ಯೇತರ ವ್ಯಕ್ತಿಗಳಿಂದ ಮಾಡಲ್ಪಟ್ಟಿರಬೇಕು.

ಜಾತಿ ನಿಂದನೆಯ ಪ್ರಕರಣಗಳಲ್ಲಿ ಅವರನ್ನು ಆ ಮೂಲಕ ಅಪಮಾನಿಸುವುದು ಮುಖ್ಯ ಉದ್ದೇಶ ವಾಗಿರಬೇಕು. ಬಿಎನ್‌ಎಸ್ ಅಡಿಯಲ್ಲಿ ಅಂಥ ಕೆಲವು ಅಪರಾಧಗಳು ಸಾಮಾನ್ಯವೆಂದು ಪರಿಗಣಿತ ವಾದರೂ, ಈ ಕಾಯಿದೆಯಡಿ ಅದು ಗುರುತಿಸಲ್ಪಡುವ ಮತ್ತು ಜಾಮೀನುರಹಿತ ಪ್ರಕರಣ ವಾಗುತ್ತದೆ. ದೌರ್ಜನ್ಯ ನಡೆದ ಸುದ್ದಿ ತಿಳಿದ ತಕ್ಷಣ ಉಪ-ಪೋಲೀಸ್ ವರಿಷ್ಠಾಧಿಕಾರಿ ಅಥವಾ ಉಪವಿಭಾಗೀಯ ದಂಡಾಧಿಕಾರಿ ಸ್ಥಳಕ್ಕೆ ಭೇಟಿ ಕೊಟ್ಟು ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಮತ್ತು ಅಂಥ ಘಟನೆ ನಡೆದದ್ದು ನಿಜವೆಂದು ವರದಿಯಾದರೆ ಜಿಲ್ಲಾ ದಂಡಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಮತ್ತು ಅಪರಾಧಿಗಳನ್ನು ಗುರುತಿಸಿ ಮುಂದಿನ ಕ್ರಮ ಕೈಗೊಳ್ಳಬೇಕು.

DSP ನೇತೃತ್ವದಲ್ಲಿ ಕೂಡಲೇ ತನಿಖೆ ನಡೆಸಿ 60 ದಿನಗಳ ಒಳಗೆ ಸರಕಾರಕ್ಕೆ ವರದಿ ಸಲ್ಲಿಸಬೇಕು. ಇದಕ್ಕೆ ತಪ್ಪಿದಲ್ಲಿ ಸಂಬಂಧಿತ DSP ಕಾನೂನು ಕ್ರಮಕ್ಕೆ ಬಾಧ್ಯಸ್ಥರಾಗುತ್ತಾರೆ. ಎಫ್ಐಆರ್ ದಾಖಲಾದ 60 ದಿನಗಳಲ್ಲಿ ಸಂಬಂಧಿತ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಈ ಕಾಯಿದೆಯಡಿ ಸ್ಥಾಪಿತವಾಗುವ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‌ ಶೀಟ್ ಸಲ್ಲಿಸಬೇಕು.

ದೌರ್ಜನ್ಯದ ಕೃತ್ಯಗಳ ಸಂತ್ರಸ್ತರಿಗೆ ತುರ್ತು ಪರಿಹಾರ ಮತ್ತು ಕೊಲೆ, ಅತ್ಯಾಚಾರದಂಥ ಪ್ರಕರಣ ಗಳಲ್ಲಿ ಹೆಚ್ಚಿನ ಪರಿಹಾರ ನೀಡುವ ಮತ್ತು ಸಂತ್ರಸ್ತ ಕುಟುಂಬಲ್ಲಿ ಕನಿಷ್ಠ ಒಬ್ಬರಿಗೆ ಸರಕಾರಿ ಉದ್ಯೋಗ ನೀಡುವ ನಿಯಮ ಕೂಡಾ ಈ ಕಾಯಿದೆಯಲ್ಲಿದೆ.

ಇಂಥ ದೌರ್ಜನ್ಯ ಪ್ರಕರಣಗಳ ತನಿಖೆ, ವಿಚಾರಣೆ ಹಾಗೂ ಎಸ್‌ಸಿ/ಎಸ್‌ಟಿ ಜನರ ಕಲ್ಯಾಣಕ್ಕಾಗಿ ರಾಷ್ಟ್ರೀಯ ಎಸ್ ಸಿ-ಎಸ್‌ಟಿ ಆಯೋಗವನ್ನು ರಚಿಸಲಾಗಿದ್ದು, ಸದರಿ ಆಯೋಗಕ್ಕೆ ಯಾವುದೇ ದೌರ್ಜನ್ಯದ ಪ್ರಕರಣಗಳ ಕುರಿತು ಲಿಖಿತವಾಗಿ ಇಲ್ಲವೆ ಆನ್‌ಲೈನ್ ಮೂಲಕ ದೂರು ಸಲ್ಲಿಸಬಹು ದಾಗಿದೆ.

ಆಯೋಗದ ವಿಳಾಸ: National Commission For Scheduled Castes 5th Floor, Lok Nayak Bhawan, Khan Market, New Delhi-110003. ಅಲ್ಲದೆ ಆಯೋಗದ ನಿಶ್ಶುಲ್ಕ ದೂರವಾಣಿ ಸಂಖ್ಯೆ: 1800 11 8888ಕ್ಕೆ ಕರೆಮಾಡಿ ಕೂಡಾ ದೂರು ನೀಡಬಹುದು.

ಇಷ್ಟು ಕಟ್ಟುನಿಟ್ಟಾದ ಕಾಯಿದೆ ಇದ್ದಾಗಲೂ ದೌರ್ಜನ್ಯದ ಪ್ರಕರಣಗಳು ನಡೆಯುತ್ತಲೇ ಇವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಟಿಸಿದ ಅಂಕಿ-ಅಂಶಗಳ ಪ್ರಕಾರ, 2022ರ ವರ್ಷವೊಂದರಲ್ಲೇ 4703 ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 1735 ಪ್ರಕರಣಗಳು ಉದ್ದೇಶ ಪೂರ್ವಕ ಅಪಮಾನ ಹಾಗೂ ಬೆದರಿಸುವಿಕೆಗೆ ಸಂಬಂಧಿಸಿದ್ದಾಗಿವೆ.

ಇದು ಅತ್ಯಂತ ಗಂಭೀರ ವಿಷಯ ಮತ್ತು ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ವಿಚಾರ. ಇತ್ತೀಚೆಗೆ ಅಂದರೆ 29-10-2021ರಂದು ಸುಪ್ರೀಂ ಕೋರ್ಟು ‘ಹರಿರಾಮ್ ಭಾಂಬಿ ವರ್ಸಸ್ ಸತ್ಯನಾರಾಯಣ’ ಪ್ರಕರಣದಲ್ಲಿ “ಎಸ್.ಸಿ.-ಎಸ್.ಟಿ. ಜನರ ವಿರುದ್ಧದ ದೌರ್ಜನ್ಯ ಎನ್ನುವುದು ಹಳೆಯ ಮಾತಲ್ಲ. ಈಗಲೂ ನಮ್ಮ ಸಮಾಜದಲ್ಲಿ ಇದು ವಾಸ್ತವಿಕವಾಗಿ ನಡೆಯುತ್ತಿದೆ.

ಆದ್ದರಿಂದ ಅವರ ಹಕ್ಕುಗಳ ರಕ್ಷಣೆಗಾಗಿ ಜಾರಿಮಾಡಲಾದ ಕಾನೂನು ಕ್ರಮಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಬೇಕು" ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಈ ಕಾಯಿದೆ ಪ್ರಾಮಾಣಿಕವಾಗಿ ಅನುಷ್ಠಾನಗೊಳ್ಳಬೇಕೇ ಹೊರತು ಸಂತ್ರಸ್ತರೆಂಬ ಸೋಗಿನಲ್ಲಿ ಮುಗ್ಧರ ಶೋಷಣೆಗೆ ಬಳಕೆಯಾಗ ಬಾರದು ಎಂಬುದೂ ಅಷ್ಟೇ ಸತ್ಯ. ಈ ಕಾಯಿದೆಯ ದುರ್ಬಳಕೆಯ ಪ್ರಕರಣಗಳನ್ನು ಮುಂದಿನ ಭಾಗದಲ್ಲಿ ಚರ್ಚಿಸೋಣ.

(ಮುಂದುವರಿಯುವುದು)

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)