Roopa Gururaj Column: ಕರೆದ ಕೂಡಲೇ ಕಾಪಾಡುವ ತುಳಜಾ ಭವಾನಿ
ಶಿವಾಜಿಯ ಭಕ್ತಿಗೆ ಮೆಚ್ಚಿ ದೇವಿ ಪ್ರತ್ಯಕ್ಷಳಾಗಿ ಅಧರ್ಮದ ವಿರುದ್ಧ ಹೋರಾಡಿ ಧರ್ಮದ ಮೇಲೆ ಜಯ ಸಾಧಿಸು ಎಂದು ಹರಸಿ ಸ್ವತ: ಶಿವಾಜಿಗೆ ಖಡ್ಗವನ್ನು ಕೊಟ್ಟಿದ್ದಾಳೆ ಎಂಬ ನಂಬಿಕೆ ಇದೆ. ತುಳಜಾ ಭವಾನಿ ವಿಗ್ರಹ ಸಾಲಿಗ್ರಾಮದಿಂದ ಮಾಡಲ್ಪಟ್ಟ ಸ್ವಯಂಭೂ ವಿಗ್ರಹ. ಶಿವಾಜಿ ಯಾವುದೇ ಯುದ್ಧಕ್ಕೆ ಹೊರಟಾ ಗಲೂ ದೇವಿಗೆ ನಮಸ್ಕರಿಸಿ ಯುದ್ಧವನ್ನು ಮಾಡಿ ಜಯಿಸಿಕೊಂಡು ಬರುತ್ತಿದ್ದನು.


ಒಂದೊಳ್ಳೆ ಮಾತು
rgururaj628@gmail.com
ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಯ ಯಮುನಾಚಲ ಪರ್ವತದ ಮಧ್ಯ ಭಾಗದಲ್ಲಿ ಇರುವ ತುಳಜಾಪುರದಲ್ಲಿ ನೆಲೆಸಿರುವ ತಾಯಿ ತುಳಜಾ ಭವಾನಿ. ತುಳಜಾಪುರ ಬಹಳ ಹಿಂದೆ ಸುತ್ತಮುತ್ತ ದಟ್ಟಾರಣ್ಯದಿಂದ ತುಂಬಿತ್ತು. ಸ್ಕಂದ ಪುರಾಣದ ಪ್ರಕಾರ ಈ ಅರಣ್ಯದಲ್ಲಿ ‘ಕದ್ರಮ’ ಮಹರ್ಷಿಗಳು ತಪಸ್ಸು ಆಚರಿಸುತ್ತಾ ನೆಲೆಸಿದ್ದರು. ಇವರ ಪತ್ನಿ ಅನುಭೂತಿ ಪಾರ್ವತಿಯ ಅಂಶದವಳು.
ಕದ್ರುಮರು ತಪಸ್ಸಿನಲ್ಲಿ ನಿರತರಾಗಿದ್ದ ಸಮಯದಲ್ಲೇ ಅವರಿಗೆ ಅಕಾಲ ಮರಣ ಸಂಭವಿಸುತ್ತದೆ. ಆಗ ಅವರ ಪತ್ನಿ ಅನುಭೂತಿ ಗರ್ಭವತಿ. ಸತಿ ಧರ್ಮದಂತೆ, ಸತಿ ಸಹಗಮನ ಮಾಡಿಕೊಳ್ಳಲು ಅವಳು, ಕರ್ದ್ರಮ ಮಹರ್ಷಿಗಳ ಚಿತೆಯಲ್ಲಿ ಧುಮುಕಲು ಹೊರಟಿದ್ದಳು. ಆ ಸಮಯಕ್ಕೆ ಪಾರ್ವತಿ ದೇವಿ ಪ್ರತ್ಯಕ್ಷಳಾಗಿ, ಗರ್ಭವತಿಯಾದ ನೀನು ಸಹಗಮನ ಮಾಡುವುದು ತಪ್ಪು ನಾನು ನಿನ್ನನ್ನು ರಕ್ಷಿಸುತ್ತೇನೆ.
ಈಗ ನೀನು ಹಿಮಾಲಯದ ಮೇರು ಪರ್ವತಕ್ಕೆ ಹೋಗಿ ಅಲ್ಲಿ ತಪಸ್ಸು ಮಾಡು. ನನ್ನ ಶಕ್ತಿಯನ್ನು ನಿನಗೆ ಧಾರೆ ಎರೆಯುತ್ತೇನೆ ಎಂದು ಹೇಳಿದ ಮೇಲೆ ಅನುಭೂತಿ ತಪಸ್ಸು ಮಾಡಲು ಮೇರು ಪರ್ವತಕ್ಕೆ ಹೋಗುತ್ತಾಳೆ. ತಪಸ್ಸಿನಲ್ಲಿ ನಿರತಳಾದಾಗ ಆ ಪ್ರದೇಶದ ಸಮೀಪ ವಿದ್ದ ‘ಕುಕುರ’ ಎಂಬ ರಾಕ್ಷಸ ಅವಳ ಸೌಂದರ್ಯಕ್ಕೆ ಮಾರುಹೋಗಿ ಅವನನ್ನು ವರಿಸಲು ಪೀಡಿಸುತ್ತಾನೆ.
ಇದನ್ನೂ ಓದಿ: Roopa Gururaj Column: ಸಂಡೂರು ಕ್ಷೇತ್ರದ ʼಕುಮಾರಸ್ವಾಮಿʼ
ಈ ರಾಕ್ಷಸ ಯಾರಿಂದಲೂ ತನಗೆ ಸಾವು ಬರಬಾರದೆಂದು ಬ್ರಹ್ಮನಿಂದಲೇ ವರ ಪಡೆದವನು. ಇಂತಹ ರಾಕ್ಷಸನನ್ನು ಸಂಹಾರ ಮಾಡಲು ಅನುಭೂತಿ, ತಾಯಿ ಪಾರ್ವತಿಯ ಮೊರೆ ಹೋಗುತ್ತಾಳೆ. ಪಾರ್ವತಿ ಕೊಟ್ಟ ಮಾತಿನಂತೆ 10 ಕೈಗಳನ್ನು ಹೊತ್ತು ‘ಅಂಬಾ ಭವಾನಿ’ ರೂಪದಲ್ಲಿ ಸಿಂಹವನ್ನೇರಿ ಪ್ರತ್ಯಕ್ಷಳಾದಳಾಗಿ ರಾಕ್ಷಸನನ್ನು ಸಂಹರಿಸಿ ‘ತುಳಜಾ ಭವಾನಿ’ ರೂಪದಲ್ಲಿ ಅಲ್ಲೇ ನೆಲೆಸಿದಳು.
ಹೀಗೆ ಭಕ್ತಳ ಕರೆಗೆ ತಕ್ಷಣ ಓಗೊಟ್ಟು ಬಂದ ದೇವಿಗೆ ತುಳಜಾಭವಾನಿ ಎಂಬ ಹೆಸರು ಬಂದಿತು. ‘ತುಳಜಾ’ ಎಂದರೆ ತ್ವರಿತವಾಗಿ ಎಂದು ಅರ್ಥ. ತುಳಜಾ ಭವಾನಿ ಮಹಾರಾಷ್ಟ್ರದ ಹಲವಾರು ರಾಜವಂಶದವರೆಗೆ ಮನೆ ದೇವತೆಯಾಗಿದ್ದಾಳೆ. ಅದೇ ರೀತಿ ಛತ್ರಪತಿ ಶಿವಾಜಿ ಮಹಾರಾಜನ ಮನೆ ದೇವರು ತುಳಜಾಭವಾನಿಯಾಗಿದ್ದು, ಶಿವಾಜಿಯು ದೇವಿಯ ಪರಮ ಭಕ್ತನಾಗಿದ್ದನು.
ಶಿವಾಜಿಯ ಭಕ್ತಿಗೆ ಮೆಚ್ಚಿ ದೇವಿ ಪ್ರತ್ಯಕ್ಷಳಾಗಿ ಅಧರ್ಮದ ವಿರುದ್ಧ ಹೋರಾಡಿ ಧರ್ಮದ ಮೇಲೆ ಜಯ ಸಾಧಿಸು ಎಂದು ಹರಸಿ ಸ್ವತ: ಶಿವಾಜಿಗೆ ಖಡ್ಗವನ್ನು ಕೊಟ್ಟಿದ್ದಾಳೆ ಎಂಬ ನಂಬಿಕೆ ಇದೆ. ತುಳಜಾ ಭವಾನಿ ವಿಗ್ರಹ ಸಾಲಿಗ್ರಾಮದಿಂದ ಮಾಡಲ್ಪಟ್ಟ ಸ್ವಯಂಭೂ ವಿಗ್ರಹ. ಶಿವಾಜಿ ಯಾವುದೇ ಯುದ್ಧಕ್ಕೆ ಹೊರಟಾಗಲೂ ದೇವಿಗೆ ನಮಸ್ಕರಿಸಿ ಯುದ್ಧವನ್ನು ಮಾಡಿ ಜಯಿಸಿಕೊಂಡು ಬರುತ್ತಿದ್ದನು.
ದೇವಾಲಯದ ಹೊರಗಿನ ಗೋಡೆಗಳನ್ನು ಕೋಟೆಯಂತೆ ಕಟ್ಟಲಾಗಿದೆ. ಸಮೀಪವೆ ಕಲ್ಲೋಲ ತೀರ್ಥ, ವಿಷ್ಣುತೀರ್ಥ, ಗೋಮುಖ ತೀರ್ಥ ಎಂಬ ಮೂರು ತೀರ್ಥಗಳ ಸರೋವರವಿದೆ. ಈ ತೀರ್ಥ ದಲ್ಲಿ ಸ್ನಾನ ಮಾಡಿದರೆ ಸಕಲ ಚರ್ಮ ವ್ಯಾಧಿಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ತುಳಜಾ ಭವಾನಿ ದೇವಸ್ಥಾನದ ಹಿಂಭಾಗದಲ್ಲಿ ದುಂಡನೆಯ ಕಲ್ಲನ್ನು ಇರಿಸಲಾಗಿದೆ. ಇದಕ್ಕೆ ‘ಚಿಂತಾಮಣಿ’ ಕಲ್ಲು ಎಂದು ಹೇಳುತ್ತಾರೆ ಇಷ್ಟಾರ್ಥಗಳನ್ನು ಮನಸಿನಲ್ಲಿ ಬೇಡಿಕೊಂಡು ಆ ಕಲ್ಲ ಮೇಲೆ ಕೈ ಇಟ್ಟರೆ, ಕೈ ಇಟ್ಟ ಕಲ್ಲು ಬಲಭಾಗಕ್ಕೆ ತಿರುಗಿದರೆ ಹಿಡಿದ ಕೆಲಸಕ್ಕೆ ಜಯ ದೊರೆಯುತ್ತದೆ ಎಂದೂ, ಎಡಭಾಗಕ್ಕೆ ತಿರುಗಿದರೆ ಆಗದೆಂದು ನಂಬಿಕೆ.
ಛತ್ರಪತಿ ಶಿವಾಜಿ ಮಹಾರಾಜ ಯಾವುದೇ ಮುಖ್ಯ ಕೆಲಸ ಕಾರ್ಯಗಳು ಅಥವಾ ಯುದ್ಧಕ್ಕೆ ಹೊರಟಾಗ, ಈ ಕಲ್ಲಿನ ಮೂಲಕ ಪ್ರಶ್ನೆಯನ್ನು ಕೇಳಿಕೊಂಡೆ ಹೋಗುತ್ತಿದ್ದನಂತೆ. ದೇವಸ್ಥಾನದ ಮುಂಭಾಗದಲ್ಲಿ ಕಲ್ಲಿನ ಮಂಚವಿದೆ ಅಲ್ಲಿ ದೇವಿ ಮಲಗುತ್ತಿದ್ದಳು ಎನ್ನುತ್ತಾರೆ. ವಿಜಯದಶಮಿ ದಿನ ರಾಕ್ಷಸರನ್ನು ಸಂಹಾರ ಮಾಡಿ ಈ ಮಂಚದಲ್ಲಿ ಮಲಗುತ್ತಾಳೆ, ನಂತರ ಶೀಗೆ ಹುಣ್ಣಿಮೆಗೆ ದೇವಿ ಎಚ್ಚರಗೊಳ್ಳುತ್ತಾಳೆ. ಎಂಬ ನಂಬಿಕೆ ಇದ್ದು, ವಿಜಯದಶಮಿ ದಿನ ದೇವಾಲಯದ ಬಾಗಿಲು ಹಾಕಿದರೆ ಸೀಗೆ ಹುಣ್ಣಿಮೆ ದಿನ ತೆಗೆಯಲಾಗುತ್ತದೆ. ಆ ದಿನ ದೇವಿಯ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ತಮ್ಮ ಊರುಗಳಿಂದಲೇ ಪಾದಯಾತ್ರೆ ಮಾಡುತ್ತಾ ಬಂದು ದೇವಿಯ ದರ್ಶನ ಪಡೆಯು ತ್ತಾರೆ.
ದೇವಾಲಯಕ್ಕೆ ಬರುವ ಭಕ್ತರು ಮೊದಲು ದೇವಿ ಮಲಗುವ ಪಲ್ಲಂಗವನ್ನು ನೋಡಿ ನಮಸ್ಕರಿಸಿ, ನಂತರ ದೇವಿಯ ದರ್ಶನ ಮಾಡುವುದು ಇಲ್ಲಿಯ ಪದ್ಧತಿ. ಈ ತಾಯಿ ಸಕಲರನ್ನೂ ಪೊರೆಯಲಿ.