Ranjith H Ashwath Column: ಬಿಜೆಪಿಗರ ದಿಲ್ಲಿ ದಂಡಯಾತ್ರೆಯ ಫಲವೇನು ?
ದೆಹಲಿಯ ಚುನಾವಣೆಯ ಪ್ರಮಾಣಕ್ಕಿಂತ ತುಸು ಹೆಚ್ಚೇ ಎನ್ನುವಷ್ಟು ‘ಕಾವು’ ಕರ್ನಾಟಕದ ರಾಜ ಕೀಯ ಪಡೆದುಕೊಳ್ಳುತ್ತಿದೆ. ಅದರಲ್ಲಿಯೂ ಪ್ರತಿಪಕ್ಷ ಬಿಜೆಪಿಯಲ್ಲಿನ ಗಲಾಟೆ ದೆಹಲಿ ಯಲ್ಲಿಯೂ ಪ್ರತಿ ಧ್ವನಿಸುತ್ತಿದೆ. ಸಾಮಾನ್ಯವಾಗಿ ಆಡಳಿತ ಪಕ್ಷಗಳಲ್ಲಿ ಈ ರೀತಿಯ ‘ಬಣ’ ಬಡಿದಾಟ ನೋಡುತ್ತೇವೆ. ಆದರೆ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ನ ಬಣ ಬಡಿದಾಟಕ್ಕಿಂತ ಹೆಚ್ಚಿನ ಬಣ ರಾಜಕೀಯ ಬಿಜೆಪಿ ಯಲ್ಲಿ ಕಾಣಿಸಿಕೊಂಡಿದೆ
ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ದೇಶದ ಅತಿ ಪ್ರಮುಖ ರಾಜ್ಯ ಎನಿಸಿರುವ ದೆಹಲಿ ಯಾವುದೇ ರಾಜಕೀಯ ಪಕ್ಷಕ್ಕೆ ಆಯಕಟ್ಟಿನ ರಾಜ್ಯ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ಕಳೆದ ಎರಡು ಅವಧಿಯಲ್ಲಿ ಆಮ್ ಆದ್ಮಿಯ ಹೊಡೆತಕ್ಕೆ ಸಿಲುಕಿ ಬಿಜೆಪಿ ಒಂದಕ್ಕಿಯನ್ನು ದಾಟಲು ಸಾಧ್ಯವಾಗಿಲ್ಲ. ಆದ್ದರಿಂದ ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆ ಬಿರುಸಿನಿಂದ ಕೂಡಿದೆ.
ದೆಹಲಿಯ ಚುನಾವಣೆಯ ಪ್ರಮಾಣಕ್ಕಿಂತ ತುಸು ಹೆಚ್ಚೇ ಎನ್ನುವಷ್ಟು ‘ಕಾವು’ ಕರ್ನಾಟಕದ ರಾಜ ಕೀಯ ಪಡೆದುಕೊಳ್ಳುತ್ತಿದೆ. ಅದರಲ್ಲಿಯೂ ಪ್ರತಿಪಕ್ಷ ಬಿಜೆಪಿಯಲ್ಲಿನ ಗಲಾಟೆ ದೆಹಲಿ ಯಲ್ಲಿಯೂ ಪ್ರತಿಧ್ವನಿಸುತ್ತಿದೆ. ಸಾಮಾನ್ಯವಾಗಿ ಆಡಳಿತ ಪಕ್ಷಗಳಲ್ಲಿ ಈ ರೀತಿಯ ‘ಬಣ’ ಬಡಿದಾಟ ನೋಡು ತ್ತೇವೆ. ಆದರೆ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ನ ಬಣ ಬಡಿದಾಟಕ್ಕಿಂತ ಹೆಚ್ಚಿನ ಬಣ ರಾಜಕೀಯ ಬಿಜೆಪಿಯಲ್ಲಿ ಕಾಣಿಸಿಕೊಂಡಿದೆ.
ಇದನ್ನೂ ಓದಿ: Ranjith H Ashwath Column: ಅದು ಬಟ್ಟೆ ಬದಲಿಸಿದಷ್ಟು ಸುಲಭವಲ್ಲ
ಅಷ್ಟಾದರೂ, ದೇಶದ ‘ಬಲಿಷ್ಠ’ ವರಿಷ್ಠ ಪಡೆ ಹೊಂದಿರುವ ರಾಷ್ಟ್ರೀಯ ಬಿಜೆಪಿ ನಾಯಕರು ಕರ್ನಾಟಕದ ಈ ಗಲಾಟೆಯನ್ನು ತಣ್ಣಗಾಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಹೌದು, ಸಾಮಾ ನ್ಯವಾಗಿ ಯಾವುದೇ ರಾಜ್ಯದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿರುವ ಪಕ್ಷದವರು ‘ಜೇನಿನ ಗೂಡು ನಾವೆಲ್ಲ’ ಎನ್ನುವ ಮಾತನ್ನು ಹೇಳಿಕೊಂಡು ಓಡಾಡುತ್ತಿರುತ್ತಾರೆ.
ಕೈಯಲ್ಲಿ ಅಧಿಕಾರವಿಲ್ಲದಿರುವಾಗ ಗಲಾಟೆ ಮಾಡಿಕೊಂಡರೆ ಪ್ರಯೋಜನವೇನು? ಅಧಿಕಾರದ ಗದ್ದುಗೆ ಹಿಡಿಯುವುದು ನಿಶ್ಚಿತವಾದಾಗ ಸ್ಥಾನಮಾನದ ಲೆಕ್ಕಾಚಾರಗಳನ್ನು ನಾಯಕರು ಮಾಡು ತ್ತಾರೆ. ಆದರೆ ಕರ್ನಾಟಕದಲ್ಲಿ ಸದ್ಯದ ಮಟ್ಟಿಗೆ ಈ ಮಾತಿಗೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ಬಿಜೆಪಿ ನಾಯಕರು ಒಬ್ಬರ ಮೇಲೊಬ್ಬರು ದೂರು -ಪ್ರತಿದೂರು ಸಲ್ಲಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಇದರೊಂದಿಗೆ ಬಹಿರಂಗವಾಗಿಯೇ ವಾಕ್ಸಮರ ಮಾಡಿಕೊಳ್ಳುತ್ತಿರುವ ನಾಯಕರಿಗೆ ‘ಬ್ರೇಕ್’ ಹಾಕ ಲೆಂದು ರಾಜ್ಯಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ರಾಧಮೋಹನ್ ಅಗರ್ವಾಲ್ ವಿರುದ್ಧವೇ ‘ಬಂಡಾಯ’ ಸಾರಿ, ವರಿಷ್ಠರ ಬಳಿ ಸರಣಿ ದೂರುಗಳನ್ನು ನೀಡುತ್ತಿರುವುದು, ಕರ್ನಾಟಕ ಬಿಜೆಪಿ ಯಲ್ಲಿ ಉದ್ಭವಿಸಿರುವ ಬಂಡಾಯದ ಮಟ್ಟ ಯಾವ ಹಂತದಲ್ಲಿದೆ ಎನ್ನುವುದಕ್ಕೆ ಸಾಕ್ಷಿ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪದೇ ಪದೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಆಪ್ತರು ಕೆಲವೊಂದಷ್ಟು ಹೇಳಿಕೆಗಳನ್ನು ಪರಸ್ಪರ ನೀಡುತ್ತಿದ್ದಾರೆ. ಕಳೆದೊಂದು ತಿಂಗಳ ಹಿಂದೆ ಕಾಂಗ್ರೆಸ್ನಲ್ಲಿ ಶುರುವಾಗಿದ್ದ ಭಿನ್ನರಾಗವನ್ನು ತಣಿಸುವುದಕ್ಕೆ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಿಫಲವಾಗುತ್ತಿದ್ದಂತೆ, ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿ ದ್ದಾರೆ.
ಅಲ್ಲಿಂದ ಕಾಂಗ್ರೆಸ್ನ ಆಂತರಿಕ ಸಂಘರ್ಷ ‘ಬೂದಿಮುಚ್ಚಿದ ಕೆಂಡವಾಗಿದೆ’ ಹೊರತು, ಬಹಿರಂಗ ವಾಗಿಲ್ಲ. ಆದರೆ ಬಿಜೆಪಿಯಲ್ಲಿ ಮಾತ್ರ ದಿನದಿಂದ ದಿನಕ್ಕೆ ಸುಧಾರಿಸಬೇಕಿದ್ದ ಪರಿಸ್ಥಿತಿ, ಕೈಮೀರಿ ಹೋಗುತ್ತಿರುವುದು ಸ್ಪಷ್ಟ. ಹಾಗೇ ನೋಡಿದರೆ, ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ರುವ ಭಿನ್ನರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಹಿರಂಗ ಹೇಳಿಕೆ ನೀಡಲು ಶುರು ಮಾಡಿದ್ದು ಇಂದು-ನಿನ್ನೆಯಲ್ಲ. ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತಿದ್ದಂತೆ ಬಂಡಾ ಯದ ಬಾವುಟವನ್ನು ಯತ್ನಾಳ್ ಹಾರಿಸಿದ್ದರು.
ಅವರೊಂದಿಗೆ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಅವರೂ ಹಾರಿಸಿದರು. ಅದಾದ ಬಳಿಕ ಒಬ್ಬೊಬ್ಬರೇ ಸೇರಿಕೊಂಡರೂ, ತಂಡವಾಗಿ ಕಾಣಿಸಿಕೊಂಡಿದ್ದು ವಕ್ ಹೋರಾಟದ ಸಮಯ ದಲ್ಲಿಯೇ. ವಿಜಯೇಂದ್ರ ವಿರುದ್ಧದ ಬಣ ಇಷ್ಟೇ ಆಗಿದ್ದರೆ, ಬಿಜೆಪಿ ವರಿಷ್ಠರು ಹೆಚ್ಚು ತಲೆಕೆಡಿಸಿ ಕೊಳ್ಳುತ್ತಿರಲಿಲ್ಲ. ಆದರೆ ಕೆಲ ತಿಂಗಳಿನಿಂದ ಅದರಲ್ಲಿಯೂ ಸಂಘ-ಪರಿವಾರದ ಮಧ್ಯಸ್ಥಿಕೆಯಲ್ಲಿ ನಡೆದ ವಿಜಯೇಂದ್ರ ಹಾಗೂ ಭಿನ್ನರ ಸಭೆಯ ಬಳಿಕ ಪಕ್ಷದಲ್ಲಿ ವಿಜಯೇಂದ್ರ ವಿರುದ್ಧ ಭಿನ್ನಮತ ಸೋಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೊರತು, ಕಡಿಮೆಯಾಗಿಲ್ಲ.
ಆರಂಭದಲ್ಲಿ ಯತ್ನಾಳ್ ಬಣದಿಂದ ಮಾತ್ರ ಶುರುವಾಗಿದ್ದ ವಿಜಯೇಂದ್ರ ವಿರುದ್ಧದ ಭಿನ್ನರಾಗ ಇದೀಗ ಹತ್ತಾರು ಕವಲುಗಳಾಗಿ ಬೆಳೆದು ನಿಂತಿವೆ. ಮೇಲ್ನೋಟಕ್ಕೆ ಒಂದೆರಡು ಭಿನ್ನರ ತಂಡಗಳು ಬಹಿರಂಗವಾಗಿಯೇ ಕಂಡರೂ, ಆಂತರಿಕವಾಗಿ ಹತ್ತಾರು ತಂಡಗಳಿರುವುದು ಸ್ಪಷ್ಟ.
ಅದರಲ್ಲಿಯೂ ಸಂಸದರ ಗುಂಪು, ಮಾಜಿ ಮುಖ್ಯಮಂತ್ರಿಗಳ ಗುಂಪು, ಸಂಘ ಪರಿವಾರದ ಗುಂಪು, ತಟಸ್ಥರ ಗುಂಪು ಹೀಗೆ ಲೆಕ್ಕಾ ಹಾಕುತ್ತಾ ಹೋದರೆ, ಕನಿಷ್ಠ 20 ಗುಂಪುಗಳು ರಾಜ್ಯ ಬಿಜೆಪಿಯಲ್ಲಿ ಕಾಣಿಸುತ್ತಿದೆ. ಈ ಎಲ್ಲ ಬಣದವರೂ ಅವರದ್ದೇ ಕಾರಣ ಹಾಗೂ ಉದ್ದೇಶಗಳಿಗೆ ಗುಂಪು ಕಟ್ಟಿ ಕೊಂಡಿದ್ದಾರೆ. ಆದರೆ ಈ ಎಲ್ಲರ ‘ಕಾಮನ್ ಅಜೆಂಡಾ’ ವಿಜಯೇಂದ್ರ ಅವರನ್ನು ವಿರೋಧಿಸುವು ದಾಗಿದೆ ಎನ್ನುವುದು ಸ್ಪಷ್ಟ. ಈವರೆಗೆ ವಿಜಯೇಂದ್ರ ಅವರನ್ನು ಬದಲಾಯಿಸಲಾಗುವುದು ಎನ್ನುವ ಮಾತನ್ನು ಪಕ್ಷದ ವರಿಷ್ಠರು ಬಹಿರಂಗವಾಗಿ ಎಲ್ಲಿಯೂ ಹೇಳದಿದ್ದರೂ, ಪಕ್ಷದಲ್ಲಿ ನಡೆಯುತ್ತಿರುವ ಆಗು-ಹೋಗುಗಳು, ವಿಜಯೇಂದ್ರ ವಿರುದ್ಧದ ಬಣಗಳು ಒಂದಾಗುತ್ತಿರುವ ರೀತಿ ನೋಡಿದರೆ ‘ಮುಂದುವರೆಯುವುದರಲ್ಲಿ ಸುಖವಿಲ್ಲ’ ಎನ್ನುವುದರಲ್ಲಿ ತಪ್ಪಿಲ್ಲ.
ಸದ್ಯ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ಕಾಣಿಸಿಕೊಂಡಿರುವ ನಾಯಕರಲ್ಲಿ ಬಹುತೇಕರು ತಮ್ಮ ಕ್ಷೇತ್ರದಲ್ಲಿಯೇ ಅಸ್ತಿತ್ವದ ಹುಡುಕಾಟದಲ್ಲಿರುವವರು. ಈ ಹಿಂದೆ ಯಡಿ ಯೂರಪ್ಪ ಅವರೊಂದಿಗೆ ಅತ್ಯಾಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದ ಅದೆಷ್ಟೋ ಮಂದಿ ವಿಜ ಯೇಂದ್ರ ಬಣದಿಂದ ದೂರಾಗುತ್ತಿದ್ದಾರೆ. ಆದರೆ ಈಗಲೂ ವಿಜಯೇಂದ್ರ ಅವರಿಗೆ ಇರುವ ಏಕ ಮಾತ್ರ ಶಕ್ತಿ ಎಂದರೆ ಅದು ‘ಯಡಿಯೂರಪ್ಪ’ ಎಂದರೆ ತಪ್ಪಾಗುವುದಿಲ್ಲ.
ಈ ನಡುವೆ ವಿಜಯೇಂದ್ರ ಅವರನ್ನು ಬದಲಾಯಿಸಬೇಕು ಎನ್ನುವ ಕಾರಣಕ್ಕೆ ಬಿಜೆಪಿಯಲ್ಲಿ ದಿನಕ್ಕೊಂದು ಸಭೆಗಳು ನಡೆಯುತ್ತಿವೆ. ಸುದ್ದಿಯಾಗುತ್ತಿರುವುದು ಕೆಲವೇ ಕೆಲ ಸಭೆಗಳಾದರೂ, ಗುಪ್ತ ಸಭೆಗಳ ಲೆಕ್ಕ ಪಕ್ಷದ ವರಿಷ್ಠರಿಗೆ ಮಾತ್ರ ಸಿಗುತ್ತಿದೆ. ಪ್ರತಿಯೊಂದು ಸಭೆಯ ಬಳಿಕವೂ ಕೈಗೊಳ್ಳುವ ಕಾಮನ್ ನಿರ್ಣಯವೆಂದರೆ ವಿಜಯೇಂದ್ರ ಅವರನ್ನು ಬದಲಾಯಿಸಲು ವರಿಷ್ಠರ ಮೇಲೆ ಒತ್ತಡ ಹೇರಬೇಕು ಎನ್ನುವುದಾಗಿದೆ. ಈ ಕಾರಣಕ್ಕಾಗಿಯೇ ರಾಜ್ಯ ಬಿಜೆಪಿಯ ಅನೇಕರು ದೆಹಲಿ ಪರೇಡ್ ನಡೆಸುತ್ತಿದ್ದಾರೆ.
ಈ ರೀತಿ ದೆಹಲಿ ಪರೇಡ್ ನಡೆಸುವ ಬಹುತೇಕರಿಗೆ ರಾಷ್ಟ್ರೀಯ ಅಧ್ಯಕ್ಷರಾಗಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ‘ಸಮಯ’ ಸಿಗುವುದಿಲ್ಲ. ಆದರೆ ದಿಲ್ಲಿಯಲ್ಲಿರುವ ತಮ್ಮ ಆಪ್ತರ ಮೂಲಕ ನಾಯಕರಿಗೆ ತಮ್ಮ ಸಂದೇಶವನ್ನು ರವಾನಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ರೀತಿ ವಿರೋಧಿ ಬಣದವರು ದೆಹಲಿ ವಿಮಾನವೇರುತ್ತಿದ್ದಂತೆ, ಇನ್ನೊಂದು ಫ್ಲೈಟ್ಗೆ ವಿಜಯೇಂದ್ರ ದೆಹಲಿ ನಾಯಕರನ್ನು ಕಾಣಲು ಹೋಗುತ್ತಿರುವುದು ಬಿಜೆಪಿಯಲ್ಲಿನ ಗೊಂದಲವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ ಎಂದರೆ ತಪ್ಪಾಗುವುದಿಲ್ಲ.
ಹಾಗೇ ನೋಡಿದರೆ, ಯತ್ನಾಳ್ ಬಣದ ನಾಯಕರು ತಮ್ಮ ವಾದವನ್ನು ಸೂಕ್ತ ವೇದಿಕೆಯಲ್ಲಿ ಮಂಡಿಸುತ್ತಿದ್ದಾರೆ. ವಕ್ ವರದಿಯನ್ನು ಸಲ್ಲಿಸುವ ನೆಪದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಿರಣ್ ರಿಜೂಜು, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್.ಸಂತೋಷ್, ವಿನೋದ್ ಥಾವ್ಡೆ ಮುಂದೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ದಿಲ್ಲಿ ಮೂಲಗಳ ಪ್ರಕಾರ ಅಮಿತ್ ಶಾ ಅವರಿಗೂ ರಾಜ್ಯ ರಾಜಕೀಯದಲ್ಲಿನ ಪ್ರಸ್ತುತ ಸನ್ನಿವೇಶ ವನ್ನು ‘ಮನದಟ್ಟು’ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬ್ಯುಸಿಯಾಗಿದ್ದರೂ, ಅರವಿಂದ ಲಿಂಬಾ ವಳಿ ನಡ್ಡಾ ಭೇಟಿಯಾಗಿ ಸುದೀರ್ಘ ವರದಿ ಮಂಡಿಸುವಲ್ಲಿ ಯಶಕಂಡಿದ್ದಾರೆ ಎನ್ನುವುದು ಈಗಿನ ಸುದ್ದಿ.
ದೆಹಲಿ ನಾಯಕರನ್ನು ಭೇಟಿಯಾಗಿರುವ ಕೆಲವೇ ಕೆಲವು ನಾಯಕರು ರಾಜ್ಯ ಬಿಜೆಪಿಯಲ್ಲಿ ಸಂಘ ಟನೆಯ ವಿಷಯದಲ್ಲಿ ಆಗಿರುವ ಸಮಸ್ಯೆ, ಯಡಿಯೂರಪ್ಪ ಕುಟುಂಬದಿಂದ ಪಕ್ಷದ ಮೇಲಾ ಗುತ್ತಿರುವ ಸಮಸ್ಯೆ, ಹೊಂದಾಣಿಕೆ ರಾಜಕೀಯ ಸೇರಿದಂತೆ ಹಲವು ವಿಷಯಗಳನ್ನು ರಾಷ್ಟ್ರೀಯ ನಾಯಕರಿಗೆ ಮನದಟ್ಟು ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಎಲ್ಲ ಭೇಟಿಯ ವೇಳೆ ‘ರಾಜ್ಯಾಧ್ಯಕ್ಷರ ವಿರುದ್ಧ ದೂರುಗಳನ್ನು ಆಲಿಸಿದ್ದಾರೆ ಹೊರತು ಮುಂದೇನಾಗಲಿದೆ?’ ಎನ್ನುವ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.
ವಿಜಯೇಂದ್ರ ವಿರುದ್ಧವಾಗಲಿ ಯಡಿಯೂರಪ್ಪ ವಿರುದ್ಧವಾಗಲಿ ನಾಯಕರು ಮಾಡಿರುವ ಆರೋಪಗಳಿಗೆ ಸಕಾರಾತ್ಮಕವಾಗಿಯೇ ದೆಹಲಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ಆದರೆ ಬದಲಾ ವಣೆಯ ಬಗ್ಗೆ ಯಾರೊಬ್ಬರೂ ಮಾತನಾಡಿಲ್ಲ ಏಕೆ ಎನ್ನುವುದು ಬಹುತೇಕರಿಗೆ ಇರುವ ಯಕ್ಷಪ್ರಶ್ನೆ. ಹಾಗೆಂದ ಮಾತ್ರಕ್ಕೆ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸಬೇಕು ಎನ್ನುವ ಗಟ್ಟಿ ತೀರ್ಮಾನವನ್ನೂ ದೆಹಲಿ ನಾಯಕರು ತೆಗೆದುಕೊಳ್ಳುತ್ತಿಲ್ಲ.
ಭೇಟಿಯಾಗುವ ನಾಯಕರಿಗೆ ದೆಹಲಿ ವಿಧಾನಸಭಾ ಚುನಾವಣೆಯನ್ನು ತೋರಿಸಿ, ಇದಾದ ಬಳಿಕ ಮುಂದಿನ ತೀರ್ಮಾನವೆನ್ನುತ್ತಿದ್ದಾರೆ ಹೊರತು, ಯಾವ ರೀತಿಯ ತೀರ್ಮಾನ? ಒಂದು ವೇಳೆ ಬದ ಲಾವಣೆ ಮಾಡಬೇಕು ಎನ್ನುವದೇ ನಿಜವಾದರೂ ವಿಜಯೇಂದ್ರ ಸ್ಥಾನಕ್ಕೆ ಯಾರನ್ನು ಕೂರಿಸಬೇಕು ಎನ್ನುವ ಬಗ್ಗೆ ಚರ್ಚೆಗೆ ಆಸ್ಪದ ನೀಡುತ್ತಿಲ್ಲ. ಇದರಿಂದಾಗಿ, ದೂರು ನೀಡುತ್ತಿರುವ ನಾಯಕರಿಗೂ ಈ ವಿಷಯದಲ್ಲಿ ಸ್ಪಷ್ಟನೆ ಸಿಗುತ್ತಿಲ್ಲ.
ಈ ಗೊಂದಲವನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಪದಾಧಿಕಾರಿಗಳು ಪ್ರಯತ್ನಿಸಬಹು ದಾಗಿತ್ತು. ಕೊಟ್ಟಿರುವ ಕೆಲಸವನ್ನು ಮಾಡಿಕೊಂಡು ಹೋಗುತ್ತೇವೆ ಎನ್ನುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರೆ ಈಗ ಎದುರಾಗಿರುವಷ್ಟು ಪ್ರಮಾಣದ ಗೊಂದಲ ಸೃಷ್ಟಿ ಯಾಗುತ್ತಿರಲಿಲ್ಲ. ಆದರೆ ಪದಾಧಿಕಾರಿ ಸ್ಥಾನ ಪಡೆದಿರುವ ಬಹುತೇಕರೂ ರಾಜ್ಯ ಬಿಜೆಪಿ ಕಡೆಗೆ ಮುಖ ಹಾಕುತ್ತಿಲ್ಲ.
ಇನ್ನು ಈಗಿರುವ ಗೊಂದಲಗಳಿಗೆ ತುಪ್ಪ ಸುರಿಯುವಂತೆ ಜಿಲ್ಲಾಧ್ಯಕ್ಷರ ನೇಮಕದ ಅಸಮಾಧಾನದ ಹೊಗೆ ಪಕ್ಷದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುವಂತಾಗಿದೆ. ಒಂದೆಡೆ ಪಕ್ಷ ಸಂಘಟನೆ ಯಲ್ಲಿ ಪದಾಧಿಕಾರಿಗಳ ನಿರಾಸಕ್ತಿ, ಇನ್ನೊಂದೆಡೆ ವರಿಷ್ಠರ ದ್ವಂದ್ವ ಅಥವಾ ಗೊಂದಲದ ನಡೆ ಯಿಂದ ಕರ್ನಾಟಕ ಬಿಜೆಪಿಯಲ್ಲಿ ಮುಂದೇನು ಎನ್ನುವ ಪ್ರಶ್ನೆ ಹೆಜ್ಜೆಹೆಜ್ಜೆಗೂ ಎದುರಾ ಗುತ್ತಿದೆ.
ಬಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಯಾರ ನೇತೃತ್ವದಲ್ಲಿ ಸಂಘಟನೆ ಎನ್ನುವ ಬಗ್ಗೆಯೂ ತಳಮಟ್ಟದಲ್ಲಿ ಗೊಂದಲಗಳಿವೆ. ದೆಹಲಿ ಚುನಾವಣೆಯ ಬಳಿಕ ರಾಷ್ಟ್ರ ಬಿಜೆಪಿ ಸಂಘಟನೆಯಲ್ಲಿ ‘ಆಮೂಲಾಗ್ರ’ ಬದಲಾವಣೆಯು ನಿರೀಕ್ಷೆಯಿದ್ದು, ಅದೇ ಸಮಯದಲ್ಲಿ ಕರ್ನಾ ಟಕ ಬಿಜೆಪಿಗೂ ದೊಡ್ಡ ಮಟ್ಟದಲ್ಲಿ ಚಿಕಿತ್ಸೆ ನೀಡಿದರೆ ಅಳಿದು-ಉಳಿದಿರುವ ಸಂಘಟನೆ ಯನ್ನು ಬಳಸಿಕೊಂಡು ಪಕ್ಷವನ್ನು ಮತ್ತೆ ಕಟ್ಟಬಹುದು. ಒಂದು ವೇಳೆ ಚಿಕಿತ್ಸೆ ನೀಡದೇ ಮುಂದೇ ನಾಗು ತ್ತದೆ ಎಂದು ಕಾದು ನೋಡುವ ತಂತ್ರಕ್ಕೆ ದಿಲ್ಲಿ ನಾಯಕರು ಮೋರೆ ಹೋದರೆ, ‘ಬಿಜೆಪಿ ಪಾಲಿನ ದಕ್ಷಿಣ ಭಾರತದ ಹೆಬ್ಬಾಗಿಲು ಎನಿಸಿಕೊಂಡಿರುವ ಕರ್ನಾಟಕ’ದ ಬಾಗಿಲು ಬಿಜೆಪಿ ಪಾಲಿಗೆ ಬಂದ್ ಆಗುವುದರಲ್ಲಿ ಅನುಮಾನವಿಲ್ಲ.