Dr Vijay Darda Column: ಕುಂಟು ಕುದುರೆಗೆ ಕಡಲೆಕಾಳು ತಿನ್ನಿಸುತ್ತಿರೋದು ಯಾರು ?
ಕಾಂಗ್ರೆಸ್ ಪಕ್ಷದಲ್ಲಿ ಓಟದ ಕುದುರೆಯ ಲಗಾಮು ಯಾರು ಎಳೆಯುತ್ತಿದ್ದಾರೆ? ಮದುವೆಯ ಕುದುರೆ ಗಳು ಯಾರ ಆದೇಶಕ್ಕೆ ತಕ್ಕಂತೆ ಕುಣಿಯುತ್ತಿವೆ? ಕುದುರೆ ಯಾವುದಾದರೂ ಇರಲಿ, ಅದರ ಒದೆ ಮಾತ್ರ ಭಯಾನಕವಾಗಿರುತ್ತದೆ. ಮದುವೆಯ ಕುದುರೆ ತಾನೇ ಓಟದ ಕುದುರೆ ಎಂದು ಕನಸು ಕಾಣುತ್ತಾ ಒದೆಯ ತೊಡಗಿದರೆ ಏನು ಮಾಡುವುದು?


ಸಂಗತ
ಕತ್ತೆಗಳು ಗುಲಾಬ್ ಜಾಮೂನ್ ಮೆಲ್ಲುತ್ತಾ ಔತಣ ಮಾಡುತ್ತಿವೆ! ಎಂಬ ಹಳೆಯ ಮಾತೊಂದಿದೆ. ಯಾರು ಈ ಅದ್ಭುತ ಸಾಲು ಬರೆದವರೋ ನನಗೆ ಗೊತ್ತಿಲ್ಲ. ಏಕೆ, ಯಾವಾಗ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕತ್ತೆಗಳು ಏಕೆ ಗುಲಾಬ್ ಜಾಮೂನನ್ನೇ ಮೆಲ್ಲುತ್ತಿವೆ ಎಂಬುದೂ ಗೊತ್ತಿಲ್ಲ. ಇಷ್ಟಕ್ಕೂ ಒಂದು ಕತ್ತೆ ಎಷ್ಟು ಗುಲಾಬ್ ಜಾಮೂನ್ಗಳನ್ನು ತಿನ್ನಬಲ್ಲದು? ಏಕೆ ಕತ್ತೆ ಬೇರೆ ಸ್ವೀಟ್ ತಿನ್ನಬಾರದು? ಇಂತಹ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಏಳಬಹುದು.
ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನ ಮನಸ್ಸಿನಲ್ಲೂ ಇವೇ ಪ್ರಶ್ನೆಗಳು ಬಂದಿವೆ. ಆದರೆ ಇವುಗಳಿಗೆ ಉತ್ತರ ಹುಡುಕುವುದು ಬಹಳ ಕಷ್ಟ. ಹೀಗಾಗಿ ಸದ್ಯದ ಮಟ್ಟಿಗೆ ಕತ್ತೆಯ ಕತೆ ಇಲ್ಲಿಗೇ ಬಿಡೋಣ. ಅದರ ಬದಲು ಕುದುರೆಗಳ ಬಗ್ಗೆ ಮಾತಾಡೋಣ!
ಇತ್ತೀಚೆಗೆ ಒಂದು ಸುದ್ದಿ ಓದುತ್ತಿದ್ದಾಗ ಕತ್ತೆ ಗುಲಾಬ್ ಜಾಮೂನ್ ತಿನ್ನುವ ಸಂಗತಿ ನನ್ನ ತಲೆಗೆ ಬಂತು. ಭೋಪಾಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಮಾತನಾಡುವಾಗ ರೇಸ್ ಕುದುರೆಗಳು, ಮದುವೆಯಲ್ಲಿ ಬಳಸುವ ಕುದುರೆಗಳು ಮತ್ತು ಕುಂಟು ಕುದುರೆಗಳ ನಡುವಿನ ವ್ಯತ್ಯಾಸವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳ ಬೇಕಾದ ಸಮಯ ಬಂದಿದೆ ಎಂದು ಹೇಳಿದ್ದರು.
ಅವರ ಪ್ರಕಾರ ಕುದುರೆಗಳಲ್ಲಿ ಮೂರು ವಿಧವಿದೆ. ಮದುವೆಯ ಕುದುರೆ, ಓಟದ ಕುದುರೆ ಮತ್ತು ಕುಂಟು ಕುದುರೆ. ಮದುವೆಯ ಕುದುರೆ ಮದುವೆಯಲ್ಲಿ ಮಾತ್ರ ಬಳಕೆಯಾಗುವಂತೆ, ರೇಸ್ನ ಕುದುರೆ ರೇಸ್ನಲ್ಲಿ ಪಾಲ್ಗೊಳ್ಳುವಂತೆ ಮತ್ತು ಕುಂಟು ಕುದುರೆ ನಿವೃತ್ತಿಯಾಗುವಂತೆ ನಾವು ನೋಡಿಕೊಳ್ಳ ಬೇಕಿದೆ ಎಂದು ಅವರು ಹೇಳಿದ್ದರು. ಕುಂಟು ಕುದುರೆಗಳು ಬೇರೆ ಕುದುರೆಗಳಿಗೆ ಅಡ್ಡ ಬರಬಾರದು.
ಅಡ್ಡ ಬಂದರೆ ಅವುಗಳ ವಿರುದ್ಧ ಕಾಂಗ್ರೆಸ್ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದೂ ಅವರು ಎಚ್ಚರಿಕೆ ನೀಡಿದ್ದರು. ನಿಜ ಹೇಳಬೇಕೆಂದರೆ, ರಾಹುಲ್ ಗಾಂಧಿ ನೀಡಿದ ಈ ಉದಾಹರಣೆಯನ್ನೂ, ಅವರ ಅದ್ಭುತ ಯೋಜನೆಯನ್ನೂ ನಾನು ತುಂಬಾ ಎಂಜಾಯ್ ಮಾಡಿದೆ. ಕನಿಷ್ಠ ಪಕ್ಷ ಕಾಂಗ್ರೆಸ್ನ ಲಾಯದಲ್ಲಿ ಕುಂಟು ಕುದುರೆಗಳೂ ಇವೆ ಎಂದು ಒಬ್ಬರಾದರೂ ಸಾರ್ವಜನಿಕವಾಗಿ ಒಪ್ಪಿಕೊಳ್ಳುವ ಧೈರ್ಯ ತೋರಿದ್ದಾರಲ್ಲ! ಅದನ್ನು ಮೆಚ್ಚಿಕೊಳ್ಳಬೇಕು.
ಈಗ ನನಗೆ ಇನ್ನೊಂದು ಮಾತು ನೆನಪಾಗುತ್ತಿದೆ. ಕೊಳದಲ್ಲಿ ವಾಸಿಸುವ ಮೊಸಳೆಯ ಜೊತೆ ನೀವು ಕುಸ್ತಿಯಾಡಿ ಗೆಲ್ಲಬಲ್ಲಿರಾ? ಈ ವಾಕ್ಯವನ್ನು ತುಂಬಾ ವಿಶ್ಲೇಷಣೆಗೆ ಒಳಪಡಿಸಿ ಏನೇನೋ ಅರ್ಥ ಕಲ್ಪಿಸಿಕೊಳ್ಳಬೇಡಿ. ಅತ್ತಿತ್ತ ಅಲೆದಾಡುವ ನನ್ನ ಮೆದುಳಿಗೆ ದಿಢೀರ್ ಹೊಳೆದ ಮಾತಿದು, ಅಷ್ಟೆ. ನೇರ ವಾಗಿ ಹೇಳಬೇಕೆಂದರೆ ಇದರ ಅರ್ಥ, ನೀವು ಮೊಸಳೆಗಳಿಂದ ತುಂಬಿದ ಕೊಳದಲ್ಲಿ ಈಜಲು ಹೋದರೆ ಬದುಕಿ ಬರಲು ಸಾಧ್ಯವೇ? ಮೊಸಳೆ ಜೊತೆಗೆ ಮನುಷ್ಯ ಯುದ್ಧ ಮಾಡಲು ಸಾಧ್ಯವೇ? ಇದನ್ನು ಇನ್ನೊಂದು ದೃಷ್ಟಿಯಿಂದಲೂ ನೋಡಬಹುದು.
ರಾಹುಲ್ ಗಾಂಧಿಯವರು ಯಾರನ್ನು ಕುಂಟು ಕುದುರೆಯೆಂದು ಕರೆದಿದ್ದಾರೋ ಅವರಿಗೆ ಇನ್ನೂ ಒದೆ ಯುವ ಶಕ್ತಿ ಇದೆಯೇ? ಇದೆ ಅಂತಾದರೆ ಅವರು ಯಾರಿಗೆ ಒದೆಯುತ್ತಾರೆ? ಅವರ ಅಶ್ವ ಶಕ್ತಿ ರೇಸ್ನ ಕುದುರೆಗಿಂತ ಹೆಚ್ಚಿರಲು ಸಾಧ್ಯವಿದೆಯೇ? ವೈಜ್ಞಾನಿಕವಾಗಿ ನೋಡುವುದಾದರೆ, ಒಂದು ಆರೋಗ್ಯ ವಂತ ಕುದುರೆ 2000 ಪೌಂಡ್ನ ತಾಕತ್ತಿನಲ್ಲಿ ಒದೆಯಬಲ್ಲದು.
ಅದು ಎಂಥಾ ತೀವ್ರತರ ಒದೆತ ವೆಂದರೆ, ಒದೆ ತಿಂದವರ ಮೂಳೆ ಮುರಿದೇ ಹೋಗುತ್ತದೆ. ಅಥವಾ ವ್ಯಕ್ತಿಗೆ ಹೃದಯಾಘಾತವಾಗಬಹುದು. ಅದೃಷ್ಟ ಕೆಟ್ಟಿದ್ದರೆ ಅಂತಹ ಒದೆ ತಿಂದ ವ್ಯಕ್ತಿ ಸಾಯಲೂ ಬಹುದು. ಇಲ್ಲಿರುವ ಪ್ರಶ್ನೆಯೇನೆಂದರೆ, ಕುಂಟು ಕುದುರೆಗೆ ಓಡಲು ಸಾಧ್ಯವಿಲ್ಲದಿದ್ದರೂ ಅದು ಇನ್ನುಳಿದ ಓಟದ ಕುದುರೆಗಳಿಗೆ ಒದೆಯುವ ಶಕ್ತಿಯನ್ನು ಇನ್ನೂ ಹೊಂದಿರಬಹುದಲ್ಲ?
ಪೂರ್ಣ ಪ್ರಮಾಣದಲ್ಲಿ ಒದೆಯಲು ಸಾಧ್ಯವಿಲ್ಲದಿದ್ದರೂ ಒಂದಷ್ಟು ಶಕ್ತಿಯನ್ನಾದರೂ ಹಾಕಿ ಆಘಾತ ನೀಡಬಹುದಲ್ಲ? ಇದನ್ನು ಬೇಕಾದರೆ ಚಮಕ್ ನೀಡುವ ಒದೆತವೆಂದು ಕರೆಯೋಣ! ಹೀಗೆ ಹೇಳುವಾಗ ನನಗೆ ಬಾಲ್ಯದ ಆಟೋಟಗಳು ನೆನಪಾಗುತ್ತವೆ. ಒಂದಷ್ಟು ಮಕ್ಕಳು ಓಟದ ಪಂದ್ಯ ದಲ್ಲಿ ಓಡುತ್ತಿರುವಾಗ ತುಂಟ ಹುಡುಗನೊಬ್ಬನಿಗೆ ತಾನು ಖಂಡಿತ ಗೆಲ್ಲುವುದಿಲ್ಲ ಎಂಬುದು ಖಾತ್ರಿಯಾದರೆ ಅಕ್ಕಪಕ್ಕ ಇರುವವರಿಗೆ ಅವನು ಅಡ್ಡಗಾಲು ಹಾಕುವುದಿಲ್ಲವೇ? ಆಗ ಸಹಜವಾಗಿ ಯೇ ವೇಗವಾಗಿ ಓಡುತ್ತಿರುವ ಮಗು ಮುಗ್ಗರಿಸಿ ಬೀಳುತ್ತದೆ.
ತುಂಟ ಹುಡುಗನಿಗೆ ಗೆಲ್ಲುವ ಚಾನ್ಸ್ ಸಿಗುತ್ತದೆ. ಇಂತಹ ಕುಚೋದ್ಯಗಳನ್ನು ಬಾಲ್ಯದಲ್ಲಿ ನಾವೂ ಮಾಡಿದ್ದೇವೆ ಅಥವಾ ನೋಡಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಈಗ ಆಗುತ್ತಿರುವುದು ಕೂಡ ಇದೇ ಅಲ್ಲವೇ? ಪಕ್ಷದಲ್ಲಿರುವ ಕುಂಟು ಕುದುರೆಗಳು ನಿವೃತ್ತಿಯಾಗುವುದರ ಬದಲು ಓಟದ ಕುದುರೆಗಳಿಗೆ ಅಡ್ಡಗಾಲು ಹಾಕುತ್ತಿವೆ. ಓಟದ ಕುದುರೆಗಳನ್ನು ಗೌರವಿಸಿ, ಅವುಗಳ ಅಗತ್ಯವನ್ನು ಈಡೇರಿಸಿ, ಅವುಗಳ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಂಡಿದ್ದರೆ ಕಾಂಗ್ರೆಸ್ ಪಕ್ಷ ಚುನಾವಣೆಯ ರೇಸ್ನಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.
ಇದೇ ಪಕ್ಷ ಹಿಂದೆ ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿತ್ತು. ಆಗ ಈ ಪಕ್ಷದಲ್ಲಿದ್ದ ಪ್ರತಿಯೊಬ್ಬರೂ ಒಂದ ಒಂದು ರೀತಿಯಲ್ಲಿ ರಣರಂಗಕ್ಕೆ ಧುಮುಕಿ ಕೆಚ್ಚೆದೆಯಿಂದ ಹೋರಾ ಡಿದ್ದರು. ಆದರೆ ಈಗೇನಾಗಿದೆ? ಬೇರೆ ಬೇರೆ ರಾಜ್ಯಗಳಲ್ಲಿ ಪಕ್ಷದ ಸ್ಥಿತಿ ಏನಾಗಿದೆ ನೋಡಿ. ಅಯ್ಯೋ ಅನ್ನಿಸುತ್ತದೆ. ಎಷ್ಟು ರಾಜ್ಯಗಳಲ್ಲಿ ದೊಡ್ಡ ಮಟ್ಟದ ಕಾಂಗ್ರೆಸ್ ನಾಯಕರಿದ್ದಾರೆ? ಇರುವ ಕೆಲವೇ ಕೆಲವು ದೊಡ್ಡ ನಾಯಕರಿಗೂ ಇನ್ನುಳಿದ ಕುಂಟು ಕುದುರೆಗಳು ಅಡ್ಡಗಾಲು ಹಾಕುತ್ತಿವೆ.
ಹೀಗಾಗಿ ಅವರೂ ಮುಗ್ಗರಿಸುತ್ತಿದ್ದಾರೆ. ಒಂದು ಮಾತು ಸ್ಪಷ್ಟವಾಗಿ ಹೇಳುತ್ತೇನೆ, ನಾನಿಲ್ಲಿ ಮದು ವೆಯ ಮೆರವಣಿಗೆಯಲ್ಲಿ ಸಾಗುವ ಅಲಂಕಾರದ ಕುದುರೆ ಬಗ್ಗೆ ಮಾತೇ ಆಡುತ್ತಿಲ್ಲ. ನಾನು ಹೇಳುತ್ತಿರುವುದು ಕುಂಟು ಕುದುರೆಗಳ ಬಗ್ಗೆ ಮಾತ್ರ. ಹೀಗಾಗಿ ಸಹಜವಾಗಿಯೇ ಇಂದು ಪ್ರಶ್ನೆ ಏಳುತ್ತದೆ.
ಲಾಯದಲ್ಲಿ ಇತರ ಕುದುರೆಗಳಿಗಿಂತ ಕುಂಟು ಕುದರೆಗಳ ಸಂಖ್ಯೆಯೇ ಜಾಸ್ತಿಯಾದರೆ ಅವು ಇಡೀ ಲಾಯವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತವೆ. ಅದನ್ನು ತಪ್ಪಿಸುವುದು ಹೇಗೆ? ಇಲ್ಲಿ ನೋಡಿ. ನಾನು ರಾಹುಲ್ ಗಾಂಧಿಯವರಿಗೆ ಯಾವುದೇ ಸಲಹೆ ನೀಡುತ್ತಿಲ್ಲ. ಆದರೆ ಒಂದು ಮಾತು ಹೇಳಬೇಕಿದೆ: ರಾಹುಲ್ಜೀ, ನಿಮ್ಮ ಲಾಯದಲ್ಲಿ ಕುಂಟು ಕುದುರೆಗಳೇ ತುಂಬಿ ತುಳುಕುತ್ತಿವೆ.
ಅವುಗಳಿಂದ ಹೇಗೆ ಕಾಂಗ್ರೆಸ್ ಪಕ್ಷಕ್ಕೆ ಮುಕ್ತಿ ಕೊಡಿಸುತ್ತೀರಿ ಎಂಬುದೇ ನಿಮ್ಮ ಮುಂದಿರುವ ಸವಾಲು. ಇಲ್ಲವಾದರೆ ನಿಮ್ಮಲ್ಲಿರುವ ಓಟದ ಕುದುರೆಗಳೂ ಬೇರೆಡೆಗೆ ಓಡಿಹೋಗಬಹುದು! ಚೆನ್ನಾಗಿ ಓಡುವ ಕುದುರೆಗೆ ಎಡೆಯಿಂದಲೂ ಸ್ವಾಗತ ಸಿಗುತ್ತದೆ. ಕುಂಟು ಕುದುರೆಗಳು ಇನ್ನಿತರ ಓಟದ ಕುದುರೆಗಳಿಗೆ ಅಡ್ಡಿಯಾಗಬಾರದು, ಅಡ್ಡಿಯಾದರೆ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ರಾಹುಲ್ ಗಾಂಧಿಯವರು ಎಚ್ಚರಿಕೆ ನೀಡಿರುವುದು ಸರಿಯಾಗಿದೆ. ಆದರೆ ಏಕೆ ಬರೀ ಎಚ್ಚರಿಕೆ ನೀಡುತ್ತೀರಿ? ಕುಂಟು ಕುದುರೆಗಳನ್ನು ಈಗಾಗಲೇ ಗುರುತಿಸಿದ್ದರೆ ಏಕೆ ಅವುಗಳನ್ನು ಒದ್ದು ಹೊರಗೆ ಹಾಕುವುದಿಲ್ಲ? ಅದನ್ನು ಮಾಡುವುದಕ್ಕೆ ಒಳ್ಳೆಯ ಮುಹೂರ್ತ ಬರಲಿ ಎಂದು ಕಾಯುತ್ತಿದ್ದೀರಾ? ತಡ ಮಾಡಿದಷ್ಟೂ ಈ ಕುಂಟು ಕುದುರೆಗಳು ನಿಮ್ಮ ರೇಸ್ಗೆ ಹೆಚ್ಚು ಹಾನಿ ಮಾಡುತ್ತವೆ. ಮತ್ತೆ ನಾನಿಲ್ಲಿ ಉಪದೇಶ ಮಾಡುತ್ತಿದ್ದೇನೆ ಎಂದು ನಿಮಗೆ ಅನ್ನಿಸಬಹುದು!
ರಾಹುಲ್ ಗಾಂಧಿ ಬುದ್ಧಿವಂತ ನಾಯಕ. ಕುಂಟು ಕುದುರೆಗಳಿಗೆ ಒಂದು ಗತಿ ಕಾಣಿಸಲು ಅವರಲ್ಲಿ ಏನಾದರೂ ಪ್ಲಾನ್ ಇದ್ದೇ ಇರುತ್ತದೆ. ನಾನು ಇನ್ನೊಂದು ಮಾತು ಹೇಳಬೇಕು. ಕಾಂಗ್ರೆಸ್ನಲ್ಲಿರುವ ಕುಂಟು ಕುದುರೆಗಳು ವಂಚಕ ಕುದುರೆಗಳೂ ಹೌದು. ಹೀಗಾಗಿ ಅವು ಅಷ್ಟು ಸುಲಭಕ್ಕೆ ತಮ್ಮ ಹಿಡಿತ ಬಿಟ್ಟುಕೊಡುವುದಿಲ್ಲ. ಈಗ ಮದುವೆ ಮೆರವಣಿಗೆಯ ಬಾರಾತ್ನಲ್ಲಿ ಹೆಜ್ಜೆ ಹಾಕುವ ಕುದುರೆಗಳ ಬಗ್ಗೆ ಮಾತಾಡೋಣ. ಅವುಗಳಿಗೊಂದು ಗತಿ ಕಾಣಿಸದೆ ಈ ಕುದುರೆ ಪುರಾಣ ಮುಗಿಯುವುದಿಲ್ಲ!
ಇವು ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಮಾಲಿಕನ ತಾಳಕ್ಕೆ ತಕ್ಕಂತೆ ಕುಣಿಯುವ ಅಲಂಕಾರದ ಕುದುರೆಗಳು. ಇವು ಮದುಮಗನನ್ನು ಮದುಮಗಳ ಮನೆಯ ಬಾಗಿಲಿಗೆ ದಿಬ್ಬಣದಲ್ಲಿ ಕೊಂಡೊ ಯ್ಯುತ್ತವೆ. ಈ ಕುದುರೆ ಇಲ್ಲದಿದ್ದರೆ ಮದುವೆಗೆ ಕಳೆಯೇ ಇರುವುದಿಲ್ಲ. ನೆನಪಿಡಿ, ಈ ಕುದುರೆಗೂ ಅದರದೇ ಆದ ಮೂಡ್ ಇರುತ್ತದೆ. ಕೆಣಕಿದರೆ ಅದೂ ಚೆನ್ನಾಗಿ ಒದೆಯುತ್ತದೆ.
ಆದರೆ ಆ ಒದೆ ಅಕ್ಕಪಕ್ಕದಲ್ಲಿ ನಿಂತ ಜನಸಾಮಾನ್ಯರಿಗೆ ಬೀಳುತ್ತದೆಯೇ ಹೊರತು ಅದರ ಮಾಲಿಕ ನಿಗಲ್ಲ. ಅಲಂಕಾರಿಕ ಕುದುರೆಗಳು ಹಾಯಾಗಿ ಹುಲ್ಲು, ಹಿಂಡಿ ತಿನ್ನುತ್ತಾ, ಮಾಲಿಕ ಹೇಳಿದಂತೆ ಕೇಳಿಕೊಂಡು ಬದುಕು ನಡೆಸುತ್ತವೆ. ಸಾಮಾನ್ಯವಾಗಿ ಇವು ಮಾಲಿಕನಿಗೆ ಅಚ್ಚು ಮೆಚ್ಚಿನ ಕುದುರೆ ಗಳಾಗಿರುತ್ತವೆ. ಆದರೆ ಒಮ್ಮೊಮ್ಮೆ ಕೆಲ ಕುದುರೆಗಳು ಬೇರೆಯವರ ಬಾರಾತ್ಗೂ ಹೋಗಿ ಕುಣಿಯು ತ್ತವೆ. ಆಗ ಮೊದಲ ಮಾಲಿಕ ಸುಮ್ಮನೆ ನಿಂತು ಅಸಹಾಯಕನಾಗಿ ನೋಡುತ್ತಾನೆ!
ಆದರೂ ರಾಹುಲ್ ಗಾಂಧಿ ಹೇಳಿದ್ದು ಸರಿಯಿದೆ: ಮದುವೆಯ ಕುದುರೆಗಳು ಮದುವೆಯ ಇರಬೇಕು. ಆದರೆ ಅವುಗಳಲ್ಲಿ ಕೆಲ ಕುದುರೆಗಳು ಏನೇನೋ ಕನಸು ಕಾಣುತ್ತಾ, ಇನ್ನೇನೋ ಕಲ್ಪಿಸಿಕೊಳ್ಳುತ್ತಾ ನಾನೂ ಓಟದ ಕುದುರೆ ಎಂದು ಹೇಳಿಕೊಂಡು ತಿರುಗತೊಡಗಿದರೆ ಏನು ಮಾಡಬೇಕು? ಕೊನೆಗೂ ನನ್ನ ಮನಸ್ಸಿನಲ್ಲಿ ಉಳಿಯುವ ಪ್ರಶ್ನೆ ಇದು: ಕಾಂಗ್ರೆಸ್ ಪಕ್ಷದಲ್ಲಿ ಓಟದ ಕುದುರೆಯ ಲಗಾಮು ಎಳೆಯು ತ್ತಿರುವವರು ಯಾರು? ಕುಂಟು ಕುದುರೆಗೆ ಕಡಲೆಕಾಳು ತಿನ್ನಿಸುತ್ತಿರುವವರು ಯಾರು? ಮತ್ತು ಯಾರ ಆದೇಶದ ಮೇಲೆ ಮದುವೆಯ ಕುದುರೆಗಳು ಕುಣಿಯುತ್ತಿವೆ?
ಎಂಬಲ್ಲಿಗೆ ಕುದುರೆ ಪುರಾಣಂ ಸಂಪನ್ನಂ.