40 ನಿಗಮಗಳಿಗೆ ನೇಮಕ ಇನ್ನೂ ಗ್ಯಾರಂಟಿ ಸಿಕ್ಕಿಲ್ಲ
ಜೂನ್ 30ರಿಂದ ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಅವರ ಗಮನಕ್ಕೇ ಮತ್ತೆ ತಂದು ಶೀಘ್ರ ನೇಮಕ ಮಾಡುವಂತೆ ಒತ್ತಾಯಿಸುತ್ತೇವೆ ಎಂದು ನಿಗಮ, ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಾಸಕರು ಮತ್ತು ಪಕ್ಷದ ಹಿರಿಯ ಮುಖಂಡರು ತಿಳಿಸಿದ್ದಾರೆ.


ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ನಿರ್ಲಕ್ಷಿತ ನಿಗಮಗಳಲ್ಲಿ ಅಧಿಕಾರಿಗಳದ್ದೇ ದರ್ಬಾರು
ಕಳೆದೆರಡು ವರ್ಷಗಳಿಂದ ಅಭಿವೃದ್ಧಿಯೇ ಇಲ್ಲ
ರಾಜ್ಯದಲ್ಲಿ ನಿಗಮ, ಮಂಡಳಿಗಳಿಗೆ ಸದಸ್ಯರು, ನಿರ್ದೇಶಕರನ್ನು ನೇಮಿಸದಿರುವುದು ಒಂದು ಬೇಸರವಾದರೆ, ಇನ್ನೂ ಖಾಲಿ ಇರುವ 40 ಹೆಚ್ಚು ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನೇ ನೇಮಿಸ ದಿರುವುದು ಆಕಾಂಕ್ಷಿಗಳಲ್ಲಿ ಅಕ್ರೋಶ ತಂದಿದೆ. ರಾಜ್ಯ ಸರಕಾರ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಎರಡು ವರ್ಷಗಳೇ ಸಮೀಪಿಸುತ್ತಿವೆ.
ಆದರೂ ಅವುಗಳ ಕಾರ್ಯ ಚಟುವಟಿಕೆ, ನೀತಿ, ನಿರ್ದೇಶನ ಸಮಗ್ರ ರಚನೆ ಮತ್ತು ಅನುಷ್ಠಾನಕ್ಕೆ ಅಗತ್ಯವಾದ ಸದಸ್ಯರ ಮಂಡಳಿ ರಚನೆ ಮಾಡದಿರುವುದು ಈಗಾಗಲೇ ಕಾರ್ಯಕರ್ತರಲ್ಲಿ ಬೇಸರ ತಂದಿದೆ. ಇದೆಲ್ಲಕ್ಕಿಂತ ಇನ್ನೂ ಖಾಲಿಯಾಗಿಯೇ ಉಳಿದಿರುವ ಸುಮಾರು 40ಕ್ಕೂ ಹೆಚ್ಚು ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನೇ ನೇಮಿಸದಿರುವುದು ಆಕಾಂಕ್ಷಿ ಶಾಸಕರು, ಹಿರಿಯ ಮುಖಂಡರಲ್ಲಿ ತೀವ್ರ ಬೇಸರ ತಂದಿದೆ.
ಅದರಲ್ಲೂ ವಿಶೇಷವಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ, ಕರ್ನಾಟಕ ಹಣಕಾಸು ಮತ್ತು ಕೈಗಾರಿಕಾ ಮೂಲಸೌಕರ್ಯ ನಿಗಮ, ಮಾನವಹಕ್ಕುಗಳ ಆಯೋಗ, ಕೇಂದ್ರ ಪರಿಹಾರ ಸಮಿತಿ ಹಾಗೂ ಹಿಂದುಳಿದ ವರ್ಗಳ ಅಭಿವೃದ್ಧಿ ನಿಗಮ ಸೇರಿದಂತೆ ಹಲವಾರು ಸಂಸ್ಥೆಗಳು ಅಧ್ಯಕ್ಷರಿಲ್ಲದೆ ಬರೀ ಅಧಿಕಾರಿಗಳಿಂದಲೇ ನಡೆಯುತ್ತಿದ್ದು, ಇದರಿಂದ ಆ ಸಂಸ್ಥೆಗಳಿಗೆ ಸಂಬಂಧಿಸಿದ ಫಲಾನುಭವಿಗಳು, ಬೇಡಿಕೆಗಳನ್ನು ಹೊಂದಿರುವವರಿಗೆ ಯಾವುದೇ ಅನುಕೂಲವಾಗುತ್ತಿಲ್ಲ ಎಂದು ಕಾಂಗ್ರೆಸ್ ನ ಹಿರಿಯ ನಾಯಕರು ಹೇಳಿದ್ದಾರೆ.
ಇದನ್ನೂ ಓದಿ: Yagati Raghu Naadig Column: ಹಾಲುಹುಣ್ಣಿಮೆಯಲ್ಲಿ ಹೊಮ್ಮಿತು ಹತಭಾಗ್ಯೆಯ ಕಥನ
ಈ ಸಂಸ್ಥೆಗಳಿಗೆ ಅಧ್ಯಕ್ಷರನ್ನು ನೇಮಿಸದೆ ಅಲಕ್ಷ್ಯ ಮಾಡಿರುವ ಬಗ್ಗೆ ಈಗಾಗಲೇ ಪಕ್ಷದ ಹೈಕಮಾಂಡ್ ಗಮನಕ್ಕೂ ತರಲಾಗಿದೆ. ಇದೀಗ ಜೂನ್ 30ರಿಂದ ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಅವರ ಗಮನಕ್ಕೇ ಮತ್ತೆ ತಂದು ಶೀಘ್ರ ನೇಮಕ ಮಾಡುವಂತೆ ಒತ್ತಾಯಿಸುತ್ತೇವೆ ಎಂದು ನಿಗಮ, ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಾಸಕರು ಮತ್ತು ಪಕ್ಷದ ಹಿರಿಯ ಮುಖಂಡರು ತಿಳಿಸಿದ್ದಾರೆ.
ಇದರೊಂದಿಗೆ ಸುರ್ಜೇವಾಲ ಅವರು ರಾಜ್ಯ ಪ್ರವಾಸ ಸಂದರ್ಭದಲ್ಲಿ ಪಕ್ಷ ಸಂಘಟನೆ, ಶಾಸಕರ ಬಿ.ಆರ್. ಪಾಟೀಲೇ ಸೇರಿದಂತೆ ಕೆಲವು ಶಾಸಕರ ಹೇಳಿಕೆಗಳ ಗೊಂದಲದ ಜತೆಗೆ ನಿಗಮ, ಮಂಡಳಿ ಆಕ್ಷಾಂಕ್ಷಿಗಳ ಬೇಡಿಕೆಗಳನ್ನೂ ಪರಿಹರಿಸಬೇಕಾದ ಅನಿವಾರ್ಯ ಎದುರಾಗಿದೆ ಎಂದು ಪಕ್ಷದ ಹಿರಿಯ ಮುಖಂಡರು ಹೇಳಿದ್ದಾರೆ.
ಸರಕಾರಕ್ಕೆ ವೆಚ್ಚದ ಭೀತಿ
ಸರಕಾರ ಈಗಾಗಲೇ ನೇಮಕ ಆಗಿರುವ ನಿಗಮ, ಮಂಡಳಿಗಳಿಗೇ ಅನುದಾನ ನೀಡಲು ಕಷ್ಟ ಸಾಧ್ಯವಾಗುತ್ತಿದೆ. ಅಂದರೆ ಸದ್ಯ ಅಧ್ಯಕ್ಷರಿರುವ ನಿಗಮ, ಮಂಡಳಿಗಳಿಗೆ ಅಲ್ಪ ಅನುದಾನ, ಅಧ್ಯಕ್ಷರ ವೇತನ, ಭತ್ಯ ಹಾಗೂ ಕಚೇರಿ ವೆಚ್ಚಕ್ಕೆ ಅನುದಾನ ಒದಗಿಸಲಾಗುತ್ತಿದೆ. ಅದೂ ತೀರಾ ವಿಳಂಬವಾಗುತ್ತಿದ್ದು, ಅನೇಕ ನಿಗಮಗಳು ಇನ್ನು ಕ್ರಿಯಾ ಯೋಜನೆಗಳನ್ನೇ ಮಾಡಲು ಹಿಂದೇಟು ಹಾಕುತ್ತಿವೆ. ಇಂಥ ಸಂದರ್ಭದಲ್ಲಿ ಇರುವ ನಿಗಮ, ಮಂಡಳಿಗಳಿಗೆ ಸದಸ್ಯರು ಹಾಗೂ ನಿರ್ದೇಶಕ ರನ್ನು ನೇಮಿಸಿದರೆ, ಅವರ ವೆಚ್ಚ ಮತ್ತು ಅದರಿಂದ ಹೆಚ್ಚಾಗುವ ಫಲಾನುಭವಿಗಳ ಬೇಡಿಕೆ ಪ್ರಮಾಣ ಹೆಚ್ಚಾಗಿ ಅದನ್ನು ಸರಿಪಡಿಸುವುದು ಕಷ್ಟ ಎನ್ನುವ ಚಿಂತೆ ಸರಕಾರದ್ದಾಗಿದೆ.
ಇದರ ಮಧ್ಯೆ, ಖಾಲಿ ಇರುವ 40ಕ್ಕೂ ಹೆಚ್ಚು ನಿಗಮ, ಮಂಡಳಿಗಳಲ್ಲಿ ಸದ್ಯ ಅಧಿಕಾರಿಗಳು ಮತ್ತು ಬೆರಳೆಣಿಕೆ ಸಿಬ್ಬಂದಿಯಿಂದ ನಿರ್ವಹಣೆಯಾಗುತ್ತಿದ್ದು, ಇವುಗಳ ವೆಚ್ಚವನ್ನು ಕಡಿವೆ ಅನುದಾನದ ನಡೆಯುತ್ತಿದೆ. ಒಂದೊಮ್ಮೆ ಇವುಗಳಿಗೂ ಅಧ್ಯಕ್ಷರನ್ನು ನೇಮಕ ಮಾಡಿದರೆ ಮತ್ತೆ ಅವುಗಳ ವೆಚ್ಚ ಮೂರ್ನಾಲ್ಕು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಹೀಗಾಗಿ ಸರಕಾರ ಖಾಲಿ ಇರುವ ನಿಗಮಗಳಿಗೆ ಅಧ್ಯಕ್ಷರ ನೇಮಕ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಿದೆ ಎಂದು ಹಣಕಾಸು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.
ತೆರವಾದ ನಿಗಮ, ಮಂಡಳಿಗಳು
ಮೈಸೂರು ಅಭಿವೃದ್ಧಿ ಪ್ರಾಧಿಕಾರ, ಪಶ್ಚಿಮಘಟ್ಟಗಳ ಅಭಿವೃದ್ಧಿ ನಿಗಮ, ಪರಿಸರ ಪ್ರವಾಸೋ ದ್ಯಮ , ಮೈಸೂರು ಮೃಗಾಲಯ ಪ್ರಾಧಿಕಾರ, ಗೊಬ್ಬರ ಅಭಿವೃದ್ಧಿ ನಿಗಮ, ಕರ್ನಾಟಕ ಹಣಕಾಸು ಮತ್ತು ಕೈಗಾರಿಕಾ ಮೂಲಸೌಕರ್ಯ ನಿಗಮ, ದೇವರಾಜ ಟ್ರಕ್ ಟರ್ಮಿನಲ್, ಬೆಂಗಳೂರು ಮಹಾನಗರ ಸಾರಿಗೆ ಅಭಿವೃದ್ಧಿ ನಿಗಮ , ಉಪಾಧ್ಯಕ್ಷ ಮತ್ತು ಅಧ್ಯಕ್ಷ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಉಗ್ರಾಣ ಅಭಿವೃದ್ಧಿ ನಿಗಮ, ಮೈಸೂರು ಬಣ್ಣ ಮತ್ತು ಅರಗು ನಿಗಮ, ಮಾನವಹಕ್ಕುಗಳ ಆಯೋಗ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ ರೇಷ್ಮೆ ಮಾರಾಟ ಮಂಡಳಿ, ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ, ಹಿಂದುಳಿದ ವರ್ಗಳ ಅಭಿವೃದ್ಧಿ ನಿಗಮ, ಮೆಸ್ಕಾಂ (ಮಂಗಳೂರು ವಿದ್ಯುತ್ ಸರಬರಾಜು ನಿಗಮ, ಮದ್ಯಪಾನ ಸಂಯಮ ಮಂಡಳಿ, ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ, ಜವಳಿ ಅಭಿವೃದ್ಧಿ ನಿಗಮ, ಕೇಂದ್ರ ಪರಿಹಾರ ಸಮಿತಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಕೈ ಮಗ್ಗ ಅಭಿವೃದ್ಧಿ ನಿಗಮ, ಹಾಗೆಯೇ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಗೆ ಬರುವ ಮಾರಾಠಿ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ಸವಿತಾ ಸಮಾಜ ಅಭಿವೃದ್ಧಿ ನಿಗಮ, ಮಡಿವಾಳ ಅಭಿವೃದ್ಧಿ ನಿಗಮ, ಅಲೆಮಾರಿ-ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಕಾಡುಗೊಲ್ಲ ಅಭಿವೃದ್ಧಿ ನಿಗಮ, ಗಾಣಿಗರ ಅಭಿವೃದ್ಧಿ ನಿಗಮ, ಕುಂಬಾರ ಅಭಿವೃದ್ಧಿ ನಿಗಮ, ನಾರಾಯಣಗುರು ಅಭಿವೃದ್ಧಿ ನಿಗಮ ಹಾಗೂ ವಿವಿಧ ಜಿ ಅಭಿವೃದ್ಧಿ ಪ್ರಾಧಿಕಾರಗಳು ತೆರವಾಗಿವೆ.