ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಹಾಲುಹುಣ್ಣಿಮೆಯಲ್ಲಿ ಹೊಮ್ಮಿತು ಹತಭಾಗ್ಯೆಯ ಕಥನ

ಹೊಸಶಿಷ್ಯರ ತವಕವನ್ನು ಕಂಡು ಮತ್ತೊಮ್ಮೆ ತುಂಟನಗೆ ನಕ್ಕ ಅವಧೂತರು ಕಥೆಯನ್ನು ಮುಂದುವರಿಸಲು ಉತ್ಸುಕರಾಗುತ್ತಿದ್ದಂತೆ, ಮೊಬೈಲ್ ಫೋನನ್ನು ಹಿಡಿದುಕೊಂಡೇ ಮನೆಯ ಹಜಾರದಿಂದ ಓಡಿಬಂದ ಅವಧೂತರ ಆಪ್ತ ಸಹಾಯಕರು, “ಬುದ್ಧೀ, ‘ನಳಪಾಕ’ನ ಫೋನು ಬಂದಿದೆ, ನಿಮ್ಮೊಂದಿಗೆ ಮಾತನಾಡಬೇಕಂತೆ" ಎಂದರು. ಆ ಮಾತಿಗೆ ಅವಧೂತರು, “ಅವನಿಗೆ ನಾಳೆ ಸಂಜೆ ಫೋನು ಮಾಡುವಂತೆ ತಿಳಿಸಿ ಸ್ವಾಮೀ" ಎಂದುತ್ತರಿಸಿದರು.

ಹಾಲುಹುಣ್ಣಿಮೆಯಲ್ಲಿ ಹೊಮ್ಮಿತು ಹತಭಾಗ್ಯೆಯ ಕಥನ

ರಸದೌತಣ

ಭಾಗ-7

naadigru@gmail.com

ಮನೆಗೆ ಬಂದವರು ಯಾರೇ ಆಗಿರಲಿ, ಅವರು ಎಷ್ಟೇ ಹೊತ್ತಿನಲ್ಲಿ ಬಂದಿರಲಿ, ಅವರ ವಯಸ್ಸು-ಸ್ಥಾನಮಾನ ಇತ್ಯಾದಿಗಳನ್ನು ಲೆಕ್ಕಿಸದೆ ಸ್ವಾಗತಿಸಿ ಸತ್ಕರಿಸುವುದು ಅವಧೂತರು ಅನುಸರಿಸಿ ಕೊಂಡು ಬಂದಿದ್ದ ಪರಿಪಾಠ. ಅಂತೆಯೇ, ಸ್ವಾಮೀಜಿಯ ಮಠ ಇರೋ ಕ್ಷೇತ್ರದ ರಾಜಕಾರಣಿ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ಬಂದಿದ್ದಾರೆ ಎಂಬ ಮಾಹಿತಿಯನ್ನು ತಮ್ಮ ಆಪ್ತ ಸಹಾಯಕರು ನೀಡುತ್ತಿದ್ದಂತೆ ಅವರನ್ನು ಎದುರುಗೊಳ್ಳುವ ಉದ್ದೇಶದಿಂದ ಅವಧೂತರು ಹಿತ್ತಲಿನಿಂದ ಎದ್ದು ಮುಂಬಾಗಿಲಿನೆಡೆಗೆ ಹೊರಡಲು ಸಜ್ಜಾದರು. ಆದರೆ, ಅದಕ್ಕೆ ಆಸ್ಪದವನ್ನೇ ನೀಡದಂತೆ ಆ ರಾಜಕಾರಣಿ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಮನೆಯ ಹಿತ್ತಲಿಗೇ ಬಂದು ಅವಧೂತರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.

ವಾಡಿಕೆಯಂತೆ ಅವರನ್ನು ಹರಸಿದ ಅವಧೂತರು, ಬಂದ ಅತಿಥಿಗಳಿಗೆ ಕಾಫಿ ತರುವಂತೆ ಶಿಷ್ಯರಿಗೆ ಸಂಜ್ಞೆ ಮಾಡಿದರು. ಅದನ್ನು ಕಂಡ ರಾಜಕಾರಣಿ, “ಒಡೆಯಾ, ಅವೆಲ್ಲಾ ಏನೂ ಬ್ಯಾಡ್ರೀ... ನಿಮ್ ಹತ್ರ ಮಾತಾಡಕ್ಕೆ ರವಷ್ಟು ಅವಕಾಶ ಕೊಟ್ರೆ ಸಾಕು. ನಾವ್ ನಿಮಗ ಶಾನೆ ತ್ರಾಸು ಕೊಡಂಗಿಲ್ರೀ.." ಎಂದು ಅಂಗಲಾಚಿದರು. ಅವರ ಜತೆಗಿದ್ದ ಸರ್ಕಲ್ ಇನ್ಸ್ ಪೆಕ್ಟರ್ ಈ ವಿಷಯದಲ್ಲಿ ಮಾತನಾಡದಿದ್ದರೂ, ಅವರ ಮೌನಭಾಷೆಯು ಬಹುತೇಕ ಇದನ್ನೇ ಹೇಳುತ್ತಿತ್ತು. ಅವರಿಬ್ಬರೂ ಏನು ಹೇಳಲಿಕ್ಕೆ ಬಂದಿದ್ದಾರೆ ಎಂಬುದು ಅವಧೂತರಿಗೆ ಗೊತ್ತಿತ್ತು; ಆದರೂ ತಮಗೆ ಅದು ಗೊತ್ತು ಎಂಬುದನ್ನು ಅವರು ತೋರ್ಪಡಿಸಿಕೊಳ್ಳಲಿಲ್ಲ.

ಇಷ್ಟನ್ನೂ ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುತ್ತಿದ್ದ ಹೊಸ ಶಿಷ್ಯರಿಗೆ ಒಂದೆಡೆ ಬೆರಗೂ, ಮತ್ತೊಂದೆಡೆ ಸಂತಸವೂ ಆಗಿತ್ತು. ತಮ್ಮ ಮತಕ್ಷೇತ್ರವನ್ನು ಇನ್ನಿಲ್ಲದಂತೆ ಹಿಡಿತದಲ್ಲಿಟ್ಟು ಕೊಂಡಿರುವ ಓರ್ವ ಖಾದಿಧಾರಿ ರಾಜಕಾರಣಿ ಹಾಗೂ ‘ರಗಡು ಗತ್ತಿನ’ ದ್ಯೋತಕವಾಗಿರುವ ಖಾಕಿ ಯನ್ನು ಧರಿಸಿರುವ ಓರ್ವ ಸರ್ಕಲ್ ಇನ್ಸ್‌ಪೆಕ್ಟರ್‌ರಂಥ ಪ್ರಭಾವಿಗಳು ಹೀಗೆ ಅವಧೂತರನ್ನು ರಾತ್ರಿ ಹೊತ್ತಿನಲ್ಲಿ ಹುಡುಕಿಕೊಂಡು ಬಂದಿದ್ದು, ಸಾಷ್ಟಾಂಗ ನಮಸ್ಕಾರ ಮಾಡಿ ಏಕಾಂತದ ಮಾತಿಗೆ ಗೋಗರೆದಿದ್ದು ಆ ಹೊಸಶಿಷ್ಯರಲ್ಲಿ ಬೆರಗನ್ನು ಉಂಟು ಮಾಡಿದ್ದರೆ, ಇಷ್ಟು ವರ್ಷ ಕಾದಿದ್ದಕ್ಕೂ ಅವಧೂತರಂಥ ಓರ್ವ ನಿಜಸಾಧಕರ ಸಾಂಗತ್ಯ ತಮಗೆ ಸಿಕ್ಕಿತಲ್ಲಾ ಎಂಬ ಸಂಗತಿ ಅವರ ಸಂತಸಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: Yagati Raghu Naadig Column: ಹತಭಾಗ್ಯೆಯ ಹಸಿಮಾಂಸಕ್ಕೆ ಹಾತೊರೆದ ಹದ್ದು...!

ಪ್ರಭಾವಿಗಳಿಬ್ಬರ ಕೋರಿಕೆಯನ್ನು ಪುರಸ್ಕರಿಸಿದ ಅವಧೂತರು, ತಮ್ಮ ಶಿಷ್ಯಪಡೆಗೆ ಹಾಗೇ ಒಮ್ಮೆ ಕಣ್ಣಿನಲ್ಲಿ ಇಶಾರೆ ಮಾಡಿದರು. ಅದನ್ನು ಅರಿತವರಂತೆ ಅವರೆಲ್ಲರೂ ಮನೆಯೊಳಗೆ ಸೇರಿಕೊಂಡರು. ಈಗ ಹಿತ್ತಲಲ್ಲಿ ಉಳಿದಿದ್ದು ಅವಧೂತರು, ಆ ರಾಜಕಾರಣಿ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಮಾತ್ರ. ಹಿತ್ತಲು ಬಾಗಿಲು ಹಾಕಿಕೊಂಡು ಒಳಸೇರಿದ್ದ ಶಿಷ್ಯರಿಗೆ ಅಲ್ಲಿಂದ ಒಂದಿಷ್ಟು ಪಿಸುದನಿ ಕೇಳುತ್ತಿತ್ತು, ಅಷ್ಟೇ. ಮಧ್ಯದಲ್ಲೊಮ್ಮೆ “ಓಹೋ... ನಿಮಗೆ ಇಷ್ಟೊಂದು ಧಾರ್ಷ್ಟ್ಯವೇ?" ಎಂಬ ಸಿಂಹಗರ್ಜನೆ ಕೇಳಿತು. ಮಿಕ್ಕ ಸಂದರ್ಭಗಳಲ್ಲಾಗಿದ್ದರೆ ಆ ದನಿಯು ಆ ಖಾಕಿಧಾರಿಯದು ಎಂದು ಕೇಳಿಸಿಕೊಂಡವರು ಭಾವಿಸುತ್ತಿದ್ದರೇನೋ? ಆದರೆ ಹಾಗೆ ಗರ್ಜಿಸಿದ್ದು ಸಾಕ್ಷಾತ್ ಅವಧೂತರು!!

ಸುಮಾರು 15-20 ನಿಮಿಷದ ಏಕಾಂತದ ಮಾತುಕತೆಯ ನಂತರ ಆ ಪ್ರಭಾವಿಗಳಿಬ್ಬರೂ ಅವಧೂತರಿಗೆ ನಮಸ್ಕರಿಸಿ ಹೊರಡಲು ಅನುವಾದರು. ತಾವು ತಂದಿದ್ದ ಹಣ್ಣು-ಹೂವು, ಸಿಹಿತಿನಿಸಿನ ಪೊಟ್ಟಣಗಳನ್ನು ಅವಧೂತರಿಗೆ ಸಮರ್ಪಿಸಲು ಮುಂದಾದರು. ಆದರೆ ಅವನ್ನು ಸ್ವೀಕರಿಸಲು ಅವಧೂತರು ಬಿಲ್‌ಕುಲ್ ಒಪ್ಪಲಿಲ್ಲ. “ಅವನ್ನು ಹೇಗೆ ತಂದಿದ್ದಿರೋ, ಹಾಗೇ ನಿಮ್ಮ ಕಾರಿನಲ್ಲಿ ವಾಪಸ್ ತೆಗೆದುಕೊಂಡು ಹೋಗಿಬಿಡಿ" ಎಂದು ಕಟ್ಟಾಜ್ಞೆ ಮಾಡಿದರು.

ಅವಧೂತರನ್ನು ಹೆಚ್ಚು ಒತ್ತಾಯಿಸುವ ಸ್ಥಿತಿಯಲ್ಲಿ ಆ ಪ್ರಭಾವಿಗಳೂ ಇರಲಿಲ್ಲ, ಏಕೆಂದರೆ ಅವರಿಬ್ಬರ ಮನದಲ್ಲಿ ಮಡುಗಟ್ಟಿದ್ದ ತಪ್ಪಿತಸ್ಥ ಭಾವನೆಯ ಮೂಟೆ ಅಷ್ಟೊಂದು ಭಾರವಾಗಿತ್ತು. ವಿಧಿಯಿಲ್ಲದೆ ಮತ್ತು ‘ಬಂದ ದಾರಿಗೆ ಸುಂಕವಿಲ್ಲ’ ಎಂಬಂತೆ ಅವರಿಬ್ಬರೂ ಅಲ್ಲಿಂದ ಹೊರಡಲು ಅನುವಾದರು. ಸಾಮಾನ್ಯವಾಗಿ, ಮನೆಗೆ ಬಂದ ಅತಿಥಿಯನ್ನು, ಬೀದಿಯ ಬಾಗಿಲವರೆಗೆ ಬಂದು ಬೀಳ್ಕೊಡುವುದು ಅವಧೂತರ ಪರಿಪಾಠವಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಎಂಬಂತೆ ಅವಧೂತರು ಆ ಅತಿಥಿಗಳೊಂದಿಗೆ ಹಾಗೆ ಹೆಜ್ಜೆ ಹಾಕಲಿಲ್ಲ. ಬಂದ ಪ್ರಭಾವಿಗಳು ಕೂಡ ‘ದುರ್ದಾನ ತೆಗೆದುಕೊಂಡವರಂತೆ’ ಮುಖಮಾಡಿಕೊಂಡು ಮನೆಯಿಂದ ನಿರ್ಗಮಿಸಿ ಕಾರನ್ನೇರಿದರು.

ಮನೆಯ ಹಜಾರದಲ್ಲಿ ಜಮೆಯಾಗಿದ್ದ ಶಿಷ್ಯರು ಇದನ್ನು ಕಂಡು ಏನೇನೋ ಲೆಕ್ಕಾಚಾರ ಹಾಕತೊಡಗಿದರು, ಅದು ಸಹಜವೇ ಆಗಿತ್ತು. ಏಕೆಂದರೆ, ದೂರದ ಪಟ್ಟಣದ ಸಮಾಜ ಸೇವಾ ಸಂಸ್ಥೆಯ ಆಶ್ರಯದಲ್ಲಿ ಶಿವರಾತ್ರಿಯಂದು ಆಯೋಜಿಸಲಾಗಿದ್ದ ಅಖಂಡ ಭಜನೆ ಮತ್ತು ಸ್ವಾಮೀಜಿಯ ಉಪನ್ಯಾಸದ ಕಾರ್ಯಕ್ರಮದಲ್ಲಿ ಅವಧೂತರ ಜತೆಗೆ ಪಾಲ್ಗೊಂಡಿದ್ದ ಆ ಶಿಷ್ಯರೆಲ್ಲರೂ ತರುವಾಯದಲ್ಲಿ ನಡೆದ ಒಂದೊಂದು ಬೆಳವಣಿಗೆಯಿಂದಲೂ ಗೊಂದಲ ಗೊಂಡಿದ್ದರು, ಅದಕ್ಕೆ ಸಂಬಂಧಿಸಿದಂತೆ ಅವಧೂತರಿಂದ ವಿವರಣೆಗಳು ಸಿಗುತ್ತಾ ಹೋದಂತೆ ನಿಬ್ಬೆರಗಾಗಿದ್ದರು. ‘ಹೊರಗೆ ಕಾಣುವ ಪ್ರಪಂಚವೇ ಬೇರೆ, ಒಳಗೆ ನಡೆಯುವ ಜಗನ್ನಾಟಕವೇ ಬೇರೆ!’ ಎಂಬ ಗ್ರಹಿಕೆ ಅವರ ಮನದಲ್ಲಿ ಹೆಪ್ಪುಗಟ್ಟುವುದಕ್ಕೆ ಇಂಥ ಸಾಕಷ್ಟು ಬೆಳವಣಿಗೆಗಳು ಕಾರಣವಾಗಿದ್ದವು. ಆದರೆ, ಇಷ್ಟು ಸಾಲದೆಂಬಂತೆ ಅವಧೂತರು ಹೇಳಿಕೊಂಡು ಹೋಗುತ್ತಿದ್ದ ಕಥೆಯು ‘ಸಾಮಾಜಿಕ’ ಅಥವಾ ‘ಧಾರ್ಮಿಕ’ ಆಯಾಮವನ್ನಷ್ಟೇ ಹೊಂದಿರದೆ ‘ಪತ್ತೇದಾರಿ’ ಶೈಲಿಯ ಅಂಶಗಳನ್ನೂ ಹದವಾಗಿ ಮಿಳಿತಗೊಳಿಸಿಕೊಂಡಿದ್ದು ಆ ಶಿಷ್ಯರ ಬೆರಗಿಗೆ ಮತ್ತಷ್ಟು ಕಾರಣವಾಗಿತ್ತು. ಅವರ ಗೊಂದಲಕ್ಕೆ/ಲೆಕ್ಕಾಚಾರಕ್ಕೆ ಪುಷ್ಟಿ ನೀಡುವಂತೆ ಸಂಸ್ಥೆಯ ಮ್ಯಾನೇಜರ್ ತಪ್ಪೊಪ್ಪಿಕೊಳ್ಳುವ ರೀತಿಯಲ್ಲಿ ಅವಧೂತರೊಂದಿಗೆ ಮೊಬೈಲ್ ಫೋನಿನಲ್ಲೇ ಸಂವಹಿಸಿ ಬಿಕ್ಕಳಿಸಿ ನಡುಬಗ್ಗಿಸಿದ್ದು, ಅವಧೂತರ ಸೂಚನೆಯಂತೆ ಉನ್ನತ ವ್ಯಾಸಂಗಕ್ಕೆಂದು ವಾರಾಣಸಿಗೆ ತೆರಳಬೇಕಿದ್ದ ಮಠದ ಸ್ವಾಮೀಜಿ ಅವಧೂತರನ್ನು ಹುಡುಕಿಕೊಂಡು ಅವರ ಮನೆಗೇ ಬಂದಿದ್ದು ಮುಂತಾದ ಬೆಳವಣಿಗೆಗಳಾಗಿದ್ದವು. ಸಾಲದೆಂಬಂತೆ, ಶಾರದೆಯ ಮುಂದುವರಿದ ಕಥನವನ್ನು ಕೇಳುವ ಉಮೇದಿನೊಂದಿಗೆ ಹಿತ್ತಲಲ್ಲಿ ಅವಧೂತರ ಸುತ್ತ ನಿರಾಳವಾಗಿ ಕೂತಿದ್ದಾಗ, ಹೊಸ ಪಾತ್ರ ಪ್ರವೇಶ ಎಂಬಂತೆ ರಾಜಕಾರಣಿ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ರಾತ್ರೋರಾತ್ರಿ ಅಲ್ಲಿಗೆ ಧಾವಿಸಿ ಬಂದು ಅವಧೂತರ ಅವಕೃಪೆಗೆ ಪಾತ್ರರಾದ ಟನೆಗೂ ಶಿಷ್ಯರು ಪ್ರತ್ಯಕ್ಷ ಸಾಕ್ಷಿಯಾಗಿಬಿಟ್ಟಿದ್ದರು...

ಹಾಗಂತ, “ಮುಂದಿನ ಕಥೆಯೇನು?" ಎಂದು ಕೇಳುವುದಕ್ಕೆ ಅವರಾರಲ್ಲೂ ಧೈರ್ಯ ಉಳಿದಿರಲಿಲ್ಲ. ಕಾರಣ, ಆಗಷ್ಟೇ ಬಂದು ಹೋದ ‘ಪ್ರಭಾವಿ’ ಅತಿಥಿಗಳು ಎಬ್ಬಿಸಿರಬಹುದಾದ ರಾಡಿಯಿಂದ ಅವಧೂತರಲ್ಲಿ ಮತ್ತೊಮ್ಮೆ ‘ಸ್ವಾತ್ವಿಕ ಕೋಪ’ ಭುಗಿಲೆದ್ದಿದ್ದರೆ? ಎಂಬ ಊಹೆಯು ಶಿಷ್ಯರೆಲ್ಲರ ಮನದಲ್ಲೂ ಏಕಪ್ರಕಾರವಾಗಿ ಸುಳಿದಾಡುತ್ತಿತ್ತು. ಹೀಗಾಗಿ, ಅವಧೂತರು ಒಬ್ಬರೇ ಕುಳಿತಿರುವ ಹಿತ್ತಲಿಗೇ ತೆರಳುವುದೋ ಅಥವಾ ಅವರ ಕರೆ ಬರುವವರೆಗೆ ಮನೆಯ ಹಜಾರದಲ್ಲೇ ಇರುವುದೋ ಎಂಬ ದ್ವಂದ್ವದಲ್ಲೇ ಆ ಶಿಷ್ಯರು ಕ್ಷಣಗಳನ್ನು ದೂಡುತ್ತಿದ್ದರು. ಅದು ಕೆಲ ಗಳಿಗೆಯಷ್ಟೇ. ಹಿತ್ತಲು ಬಾಗಿಲನ್ನು ತಾವೇ ತಳ್ಳಿಕೊಂಡು ಒಳಬಂದ ಅವಧೂತರು ಸೀದಾ ಹಜಾರದ ಮೂಲೆಗೆ ಹೋಗಿ, ಅಲ್ಲಿ ಗೋಣಿಚೀಲದಲ್ಲಿ ತುಂಬಿಟ್ಟಿದ್ದ ಹಸಿ ಕಡಲೇಕಾಯಿಗಳನ್ನು ನಾಲ್ಕಾರು ಸಲ ಬೊಗಸೆಯಲ್ಲಿ ಎತ್ತಿ ತೆಗೆದು, ಅಲ್ಲೇ ಇಟ್ಟಿದ್ದ ರಾಗಿಯನ್ನು ಕೇರುವ ಮೊರದಲ್ಲಿ ಹಾಕಿಕೊಂಡರು. ಅಡುಗೆ ಮನೆಗೆ ತೆರಳಿ ಒಂದಿಷ್ಟು ಪುಟ್ಟ ಪುಟ್ಟ ಬೆಲ್ಲದುಂಡೆಗಳನ್ನು ಹೆಗಲ ಮೇಲಿನ ವಲ್ಲಿಯಲ್ಲಿ ಕಟ್ಟಿ ಹಜಾರಕ್ಕೆ ತಂದು, ಹಸಿ ಕಡಲೇಕಾಯಿಯನ್ನು ತುಂಬಿಕೊಂಡಿದ್ದ ಕೇರುವ ಮೊರವನ್ನೂ ಎತ್ತಿಕೊಂಡು, ಗೊಂದಲದ ಗುಬ್ಬಚ್ಚಿಗಳಾಗಿ ಮುದುರಿ ಕುಳಿತಿದ್ದ ತಮ್ಮ ಶಿಷ್ಯರ ಕಡೆಗೊಮ್ಮೆ ತಮ್ಮ ಎಂದಿನ ತುಂಟನಗೆಯನ್ನು ಬೀರಿದರು. ಅಷ್ಟೇ! ಏಕಕಾಲಕ್ಕೆ ಸಾವಿರ ಕ್ಯಾಂಡಲ್‌ನಷ್ಟು ದೀಪ ಬೆಳಗುವಂತೆ ಶಿಷ್ಯರ ಮುಖವೂ ಬೆಳಗಿತು! “ಬನ್ರಯ್ಯಾ, ಹಿತ್ತಲಿಗೆ ಹೋಗೋಣ. ನಿಮ್ಮನ್ನು ಇನ್ನು ಸತಾಯಿಸೋಲ್ಲ. ಬೆಳದಿಂಗಳ ರಾತ್ರಿಯಲ್ಲಿ ಇನ್ನೊಂದು ಜಾಗರಣೆ ಆದ್ರೂ ಪರವಾಗಿಲ್ಲ, ಈ ಹಸಿ ಕಡಲೇಕಾಯಿ ಮತ್ತು ಬೆಲ್ಲವನ್ನು ಮೆಲ್ಲುತ್ತಾ ಶಾರದೆಯ ಮುಂದಿನ ಕಥೆಯನ್ನೂ ಮೆಲುಕು ಹಾಕೋಣ" ಎಂದರು, ಮತ್ತದೇ ಲೋಕಾಭಿರಾಮದ ದನಿಯಲ್ಲಿ!

ಶಿಷ್ಯರಿಗೋ ಹಿಗ್ಗೋ ಹಿಗ್ಗು! ಸಿಪ್ಪೆಗೆ ಮಣ್ಣು ಮೆತ್ತಿಕೊಂಡಿರುವ ಹಸಿ ಕಡಲೇಕಾಯಿಯನ್ನು ಬಿಡಿಸಿ, 8-10 ಕಾಳುಗಳನ್ನು ಒಟ್ಟು ಮಾಡಿ, ಬೆಲ್ಲದ ತುಣುಕಿನೊಂದಿಗೆ ಅವನ್ನು ಸವಿಯುವ ರುಚಿಯನ್ನು ಬಲ್ಲವರೇ ಬಲ್ಲರು. ಆ ‘ರುಚಿ’ಗೆ, ಮತ್ತಷ್ಟು ‘ರುಚಿಕಟ್ಟಾಗಿರುವ’ ಶಾರದೆಯ ಕಥನವೂ ಸೇರಿಕೊಂಡರೆ ಕೇಳಬೇಕೇ? ಈ ‘ಜಿಹ್ವಾಸುಖ’ವನ್ನೂ, ಕಥೆಯ ‘ಶ್ರಾವ್ಯಸುಖ’ವನ್ನೂ ಕಲ್ಪಿಸಿಕೊಂಡೇ ಒಮ್ಮೆ ಬಾಯಿ ಚಪ್ಪರಿಸಿದ ಶಿಷ್ಯರೆಲ್ಲರೂ ಅದೇ ಉತ್ಸಾಹದಲ್ಲಿ ಅವಧೂತರನ್ನು ಹಿಂಬಾಲಿಸಿ ಹಿತ್ತಲಿಗೆ ತೆರಳಿದರು. ಜಮಖಾನದ ಮಧ್ಯಭಾಗದಲ್ಲಿ ಹಸಿ ಕಡಲೇಕಾಯಿಯ ಮೊರವನ್ನು ಹಾಗೂ ಬೆಲ್ಲದ ತುಣಕು ಗಳಿದ್ದ ವಲ್ಲಿಯನ್ನು ಇರಿಸಿದ ಅವಧೂತರು, ಅದರ ಸುತ್ತಲೂ ಕೂರುವಂತೆ ಶಿಷ್ಯರೆಲ್ಲರಿಗೂ ಸೂಚಿಸಿದರು. ನಂತರ ಶುರುವಾಗಿದ್ದೇ ಹಸಿ ಕಡಲೇಕಾಯಿ ಮತ್ತು ಬೆಲ್ಲದ ಸಮಾರಾಧನೆ...

ಅವಧೂತರು ಇನ್ನೇನು ಕಥೆಯ ಮುಂದುವರಿಕೆಗೆ ನಾಂದಿ ಹಾಡಬೇಕು ಎನ್ನುವಷ್ಟರಲ್ಲಿ ಹೊಸ ಶಿಷ್ಯರೊಬ್ಬರು, “ಗುರುಗಳೇ, ಅಂತೂ ಕಥೆಯನ್ನು ನಿರ್ಣಾಯಕ ಹಂತಕ್ಕೆ ತಂದು ನಿಲ್ಲಿಸಿಬಿಟ್ಟಿರಿ. ಶಾರದೆಯ ಬಾಳಿನಲ್ಲಿ ಸಂಕಷ್ಟ ಎರಗಿದ್ದು, ಅದರಿಂದಾಗಿ ಅವಳು ಮರುಗಿದ್ದು ಇದೆಲ್ಲವೂ ನಮಗೆ ಸೂಚ್ಯವಾಗಿ ಗೊತ್ತಾಗಿದೆ. ಅದಕ್ಕೆ ಕಾರಣರಾಗಿರಬಹುದಾದವರ ಪಟ್ಟಿಯಲ್ಲಿ ಈಗಾಗಲೇ ನಾಲ್ವರು ಮಹಾಪುರುಷರನ್ನು ಕಂಡಾಯಿತು. ಇವರ ಪೈಕಿ, ಕಥಾನಾಯಕಿ ಶಾರದೆಗೆ ಖಳನಾಯಕನಾಗಿ ಒದಗಿದ್ದು ಯಾರು? ಎಂಬುದನ್ನು ಮೊದಲು ನಮಗೆ ಹೇಳಿ ಬಿಡಿ. ನಂತರ ನೀವು ಕಥೆಯ ಒಂದೊಂದು ಹಂತವನ್ನೂ ಸವಿಸ್ತಾರವಾಗಿ ಹೇಳಿಕೊಂಡು ಹೋಗಿ ಎಂಬುದು ನಮ್ಮ ಪ್ರಾರ್ಥನೆ" ಎಂದರು ಕಡಲೇಕಾಯಿ-ಬೆಲ್ಲವನ್ನು ಮೆಲ್ಲುತ್ತಲೇ.

ಹೊಸಶಿಷ್ಯರ ತವಕವನ್ನು ಕಂಡು ಮತ್ತೊಮ್ಮೆ ತುಂಟನಗೆ ನಕ್ಕ ಅವಧೂತರು ಕಥೆಯನ್ನು ಮುಂದುವರಿಸಲು ಉತ್ಸುಕರಾಗುತ್ತಿದ್ದಂತೆ, ಮೊಬೈಲ್ ಫೋನನ್ನು ಹಿಡಿದುಕೊಂಡೇ ಮನೆಯ ಹಜಾರದಿಂದ ಓಡಿಬಂದ ಅವಧೂತರ ಆಪ್ತ ಸಹಾಯಕರು, “ಬುದ್ಧೀ, ‘ನಳಪಾಕ’ನ ಫೋನು ಬಂದಿದೆ, ನಿಮ್ಮೊಂದಿಗೆ ಮಾತನಾಡಬೇಕಂತೆ" ಎಂದರು. ಆ ಮಾತಿಗೆ ಅವಧೂತರು, “ಅವನಿಗೆ ನಾಳೆ ಸಂಜೆ ಫೋನು ಮಾಡುವಂತೆ ತಿಳಿಸಿ ಸ್ವಾಮೀ" ಎಂದುತ್ತರಿಸಿದರು.

ಈ ಸಂಭಾಷಣೆ ಕೇಳಿಸಿಕೊಂಡ ಹೊಸಶಿಷ್ಯರು, “ಗುರುಗಳೇ, ಇದೆಂಥಾ ವಿಚಿತ್ರ? ‘ನಳಪಾಕ’ ಅಂದ್ರೆ ಯಾರು?" ಎಂದು ಕುತೂಹಲದಿಂದ ಕೇಳಿದರು.

“ಆತ ಆ ಸಮಾಜಸೇವಾ ಸಂಸ್ಥೆಯ ಆಶ್ರಯದಲ್ಲಿರುವ ವಿದ್ಯಾರ್ಥಿ ನಿಲಯದ ಅಡುಗೆಯವನು" ಎಂದು ಹೇಳಿ ಗಡ್ಡವನ್ನೊಮ್ಮೆ ನೀವಿಕೊಂಡು ನಿಗೂಢವಾಗಿ ನಕ್ಕರು ಅವಧೂತರು...!

(ಮುಂದುವರಿಯುವುದು)